ಮುದ್ದು ಸೊಸೆ: ಮನಸ್ಸಿನ ಆಸೆಗಳನ್ನು ಹಾಳೆಯಲ್ಲಿ ಬರೆದು ತಂಗಿ ಮೂಲಕ ಭದ್ರನಿಗೆ ತಲುಪಿಸಿದ ವಿದ್ಯಾ; ಈಶ್ವರಿ ಕೈ ಸೇರಿದ ಪತ್ರ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 21 ನೇ ಸಂಚಿಕೆಯಲ್ಲಿ ತನ್ನ ಮನಸ್ಸಿನ ಅಸೆಗಳನ್ನು ವಿದ್ಯಾ ಪತ್ರದಲ್ಲಿ ಬರೆದು ಅದನ್ನು ಭದ್ರನಿಗೆ ತಲುಪಿಸುತ್ತಾಳೆ. ಆದರೆ ಅದು ಈಶ್ವರಿ ಕೈ ಸೇರುತ್ತದೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 21ನೇ ಎಪಿಸೋಡ್ ಕಥೆ ಹೀಗಿದೆ. ವಿದ್ಯಾ ಮದುವೆ ಭದ್ರೇಗೌಡನ ಜೊತೆ ಫಿಕ್ಸ್ ಆಗಿದೆ. ವಿದ್ಯಾ ಕಾಲೇಜಿಗೆ ಹೋಗಬಾರದು ಎಂಬ ಕಾರಣಕ್ಕೆ ಚೆಲುವ, ಅವಳ ಯೂನಿಫಾರ್ಮ್ ಸುಟ್ಟಿದ್ದಾನೆ. ಓಂದೆಡೆ ಓದುವ ಕನಸು ಕಾಣುತ್ತಾ ವಿದ್ಯಾ ಅಳುತ್ತಿದ್ದರೆ, ಇಷ್ಟಪಟ್ಟ ಹುಡುಗಿಯ ಕೈ ಹಿಡಿಯುತ್ತಿರುವುದಕ್ಕೆ ಭದ್ರ ಖುಷಿಯಾಗಿದ್ದಾನೆ. ಶಿವರಾಮೇಗೌಡ ತನ್ನ ಸೊಸೆಯಾಗಿ ದುಬಾರಿ ಬೆಲೆಯ ಸೀರೆ, ಒಡವೆಯನ್ನು ಖರೀದಿಸಿದ್ದಾನೆ. ಹೇಗಾದರೂ ಮಾಡಿ ಮದುವೆ ನಿಲ್ಲಿಸುವುದಕ್ಕೆ ವಿದ್ಯಾ ಶತಪ್ರಯತ್ನ ಮಾಡುತ್ತಿದ್ದಾಳೆ. ತನ್ನ ಆಸೆಯನ್ನು ಈಶ್ವರಿ ಬಳಿಯೂ ಹೇಳಿಕೊಂಡಿದ್ದಾಳೆ.
ಸೊಸೆಗಾಗಿ ತಾಳಿ ತರಿಸಿದ ಶಿವರಾಮೇಗೌಡ
ಶಿವರಾಮೇಗೌಡ ಹಾಗೂ ಭದ್ರ ಮಾತನಾಡುವಾಗ ಚಿನ್ನದ ಅಂಗಡಿಯವರು ಮನೆಗೆ ಬರುತ್ತಾರೆ. ಮದುವೆ ಹೆಣ್ಣಿಗಾಗಿ ಮಾಂಗಲ್ಯ ಹಾಗೂ ಮಾಂಗಲ್ಯ ಸರ ತಂದಿದ್ದಾರೆ ಎಂದು ಮೋಹನ ಹೇಳುತ್ತಾಳೆ. ಹಾಗಾದರೆ ನೀನು ಅದನ್ನು ಒಮ್ಮೆ ನೋಡು ಎಂದು ಶಿವರಾಮೇಗೌಡ ಹೇಳುತ್ತಾನೆ. ಮೋಹನ ಅದನ್ನು ನೋಡಿ ಖುಷಿಪಡುತ್ತಾಳೆ. ಈಶ್ವರಿ ಕೂಡಾ ಮಾಂಗಲ್ಯ ನೋಡಿ ಚೆನ್ನಾಗಿದೆ ಎಂದು ಹೇಳುತ್ತಾಳೆ. ಸರಿ ಹಾಗಾದರೆ ನೀವೆಲ್ಲ ಒಪ್ಪಿದ ನಂತರ ಮುಗಿಯಿತು. ಅದನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ಎಂದು ಶಿವರಾಮೇಗೌಡ ಹೇಳುತ್ತಾನೆ. ಭದ್ರ ಕೂಡಾ ವಿದ್ಯಾಗೆ ಕಟ್ಟಬೇಕೆಂದುಕೊಂಡಿರುವ ತಾಳಿಯನ್ನು ನೋಡಿ ಖುಷಿಯಾಗುತ್ತಾನೆ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಮದುವೆ ಹತ್ತಿರ ಬಂದೇ ಬಿಡ್ತು ನೋಡು ಎಂದು ಶಿವರಾಮೇಗೌಡ ತನ್ನ ತಮ್ಮನಿಗೆ ಹೇಳುತ್ತಾನೆ.
ಇತ್ತ ರತ್ನ ಅಡುಗೆ ಮಾಡುವಾಗ ಅವಳ ಮೊಬೈಲ್ ರಿಂಗ್ ಆಗುತ್ತದೆ. ಯಾರು ಫೋನ್ ಮಾಡಿರುವುದು ನೋಡು ಎಂದು ರತ್ನ ಎಷ್ಟು ಬಾರಿ ಹೇಳಿದರೂ ವಿದ್ಯಾ ಅತ್ತ ಗಮನ ನೀಡುವುದೇ ಇಲ್ಲ. ಆಗ ರತ್ನಳೇ ಫೋನ್ ರಿಸೀವ್ ಮಾಡುತ್ತಾಳೆ. ಆ ಕಡೆಯಿಂದ ಮೋಹನ ಕರೆ ಮಾಡಿರುತ್ತಾಳೆ. ರತ್ನ ಹಾಗೂ ಮೋಹನ ಒಬ್ಬರಿಗೊಬ್ಬರು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಮೈಸೂರಿನಿಂದ ತಾಳಿ ಹಾಗೂ ತಾಳಿ ಸರ ತಂದುಕೊಟ್ಟಿದ್ದಾರೆ. ನೋಡೋಕೆ ಬಹಳ ಚೆನ್ನಾಗಿದೆ. ನನ್ನ ಸೊಸೆ ವಿದ್ಯಾಗೆ ಅದು ಬಹಳ ಚೆನ್ನಾಗಿ ಒಪ್ಪುತ್ತದೆ ಎಂದು ಮೋಹನ ಸಂತೋಷ ವ್ಯಕ್ತಪಡಿಸುತ್ತಾಳೆ. ಅದೆಲ್ಲವನ್ನೂ ನಾವು ಮಾಡಬೇಕು, ಆದರೆ ನೀವೇ ಮಾಡುತ್ತಿದ್ದೀರಿ, ನಮಗೆ ಬಹಳ ಮುಜುಗರವಾಗುತ್ತಿದೆ ಎಂದು ರತ್ನ ಹೇಳುತ್ತಾಳೆ. ನಾವು ಮಾಡುತ್ತಿರುವುದು ನಮ್ಮ ಸೊಸೆಗೆ ತಾನೇ ಎಂದು ಮೋಹನ ಹೇಳುತ್ತಾಳೆ. ನಿಮ್ಮ ಮನೆ ಸೇರಲು ನಮ್ಮ ವಿದ್ಯಾ ಬಹಳ ಪುಣ್ಯ ಮಾಡಿದ್ದಳು ಎಂದು ರತ್ನ ಕೂಡಾ ಖುಷಿಯಾಗುತ್ತಾಳೆ.
ಈಶ್ವರಿ ಕೈ ಸೇರಿದ ವಿದ್ಯಾ ಪತ್ರ
ನಿಮ್ಮ ಅತ್ತೆ ಮನೆಯವರು ನಿನಗಾಗಿ ತಾಳಿ ತಂದಿದ್ದಾರೆ ಎಂದು ರತ್ನ ಮಗಳ ಬಳಿ ಹೇಳುತ್ತಾಳೆ. ನನಗೆ ಚಿನ್ನ ಕೊಡಿಸಲು ಆಗುವುದಿಲ್ಲ, ಆದ್ದರಿಂದ ವಿದ್ಯೆ ಕೊಡಿಸುತ್ತೇನೆ ಎಂದು ಹೇಳಿದ್ದೆ ತಾನೆ, ಆದರೆ ಈಗ ನೀನೇ ನನ್ನ ಮದುವೆ ಮಾಡಲು ಹೊರಟಿದ್ದೀಯ, ನಾನು ಇನ್ಮುಂದೆ ನಿನಗೆ ಪುಸ್ತಕ,ಪೆನ್ ಏನೂ ಕೇಳುವುದಿಲ್ಲ, ನನಗೆ ಸ್ಕಾಲರ್ಶಿಪ್ ಬರುತ್ತದೆ ಅದರಲ್ಲೇ ಎಲ್ಲವನ್ನೂ ಖರೀದಿಸಿ ಕಷ್ಟಪಟ್ಟು ಓದುತ್ತೇನೆ, ಒಡವೆ ದೊರೆಯುತ್ತಿದೆ ಎಂದು ಪೆನ್, ಪುಸ್ತಕ ಬಿಡಲು ಆಗುವುದಾ ಎಂದು ವಿದ್ಯಾ ಅಮ್ಮನ ಬಳಿ ದುಃಖ ಹೇಳಿಕೊಳ್ಳುತ್ತಾಳೆ. ಹಿರಿಯರೆಲ್ಲಾ ಸೇರಿ ಮದುವೆ ನಿಶ್ಚಯಿಸಿದ್ದಾರೆ. ಪರಿಸ್ಥಿತಿ ಗೊತ್ತಿದ್ದೂ ನೀನು ಹೀಗೆ ಹೇಳುವುದು ಸರಿಯಲ್ಲ. ನನ್ನ ಜೀವ ಉಳಿಯಬೇಕು ಎಂದರೆ ನೀನು ನಿನ್ನ ಆಸೆ, ಕನಸುಗಳನ್ನು ತ್ಯಾಗ ಮಾಡಬೇಕು ಎಂದು ರತ್ನ ಹೇಳುತ್ತಾಳೆ.
ತಾಯಿ ಈಗ ನನ್ನ ಪರವಾಗಿಲ್ಲ ಎಂದು ಅರಿತ ವಿದ್ಯಾ ತಂಗಿ ಬಳಿ ತನ್ನ ಕಷ್ಟ ಹೇಳಿಕೊಳ್ಳುತ್ತಾಳೆ. ನಿನ್ನ ಮದುವೆ ನಿಶ್ಚಯವಾಗಿರುವವರೇ ಈ ಮದುವೆ ನಿಲ್ಲಿಸಲು ಸಾಧ್ಯ. ನೀನು ಏನು ಹೇಳಬೇಕು ಎಂದುಕೊಂಡಿದ್ದೀಯೋ ಅದನ್ನು ಒಂದು ಪತ್ರದಲ್ಲಿ ಬರೆದುಕೊಡು, ಅದನ್ನು ನಾನು ಭದ್ರನಿಗೆ ಕೊಟ್ಟುಬರುತ್ತೇನೆ ಎಂದು ಸರಸ್ವತಿ ಹೇಳುತ್ತಾಳೆ. ತಂಗಿ ಮಾತು ಸರಿ ಎನಿಸಿ ವಿದ್ಯಾ, ಬಿಳಿ ಹಾಳೆಯಲ್ಲಿ ತನ್ನ ಕನಸುಗಳನ್ನು ಬರೆಯುತ್ತಾಳೆ. ಅದನ್ನು ಭದ್ರನಿಗೆ ಕೊಡಲು ಸರೂ, ಗೌಡರ ಮನೆ ಬರುತ್ತಾಳೆ. ಆದರೆ ಸರಸ್ವತಿಯನ್ನು ನೋಡುವ ಈಶ್ವರಿ ಬಲವಂತವಾಗಿ ಆ ಪತ್ರವನ್ನು ಪಡೆಯುತ್ತಾಳೆ. ವಿದ್ಯಾ ಬರೆದಿರುವುದುನ್ನು ನೋಡಿ ಶಾಕ್ ಆಗುತ್ತಾಳೆ. ನಿನ್ನೆಯೇ ನಿನ್ನ ಅಕ್ಕ ಈ ಮಾತನ್ನು ನನ್ನ ಬಳಿ ಹೇಳಿದ್ದಳು, ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ, ಅಷ್ಟರಲ್ಲಿ ನೀನು ಈ ಪತ್ರ ತೆಗೆದುಕೊಂಡು ಬಂದಿದ್ದೀಯ, ನೀನು ಮನೆಗೆ ಹೋಗು ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಈಶ್ವರಿ ಹೇಳುತ್ತಾಳೆ.
ಭದ್ರನಿಗೆ ವಿಷಯ ಮುಟ್ಟಿಸಲು ವಿದ್ಯಾ ಮತ್ತೇನು ಪ್ರಯತ್ನ ಮಾಡುತ್ತಾಳೆ? ವಿದ್ಯಾ ಆಸೆ, ಕನಸುಗಳು ಭದ್ರನಿಗೆ ಗೊತ್ತಾಗುವುದು ಯಾವಾಗ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ