ಮುದ್ದು ಸೊಸೆ: ಭದ್ರನಿಗೆ ವಿದ್ಯಾ ಬರೆದ ಪತ್ರವನ್ನು ತಂದೆ ಕೈಗೆ ಕೊಟ್ಟ ಈಶ್ವರಿ; ಸೀಮೆಎಣ್ಣೆ ಸುರಿದುಕೊಂಡು ಹೆಂಡತಿಗೂ ಸುರಿದ ಚೆಲುವ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 22 ನೇ ಸಂಚಿಕೆಯಲ್ಲಿ ಭದ್ರನಿಗೆ ವಿದ್ಯಾ ಬರೆದ ಪತ್ರವನ್ನು ಸರಸ್ವತಿ ಕೈಯಿಂದ ಕಸಿದುಕೊಂಡ ಈಶ್ವರಿ ಅದನ್ನು ಚೆಲುವನಿಗೆ ತಂದುಕೊಡುತ್ತಾಳೆ. (ಬರಹ: ರಕ್ಷಿತಾ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 22ನೇ ಎಪಿಸೋಡ್ ಕಥೆ ಹೀಗಿದೆ. ಮನೆ ಸೊಸೆಗಾಗಿ ಶಿವರಾಮೇಗೌಡ ಮಾಂಗಲ್ಯ ಹಾಗೂ ಮಾಂಗಲ್ಯ ಸರವನ್ನು ತರಿಸುತ್ತಾನೆ. ಅದನ್ನು ನೋಡಿ ಮೋಹನ ಖುಷಿಯಾಗಿ ಬೀಗತಿ ರತ್ನಳಿಗೆ ಕರೆ ಮಾಡಿ ಹೇಳುತ್ತಾಳೆ. ನಿಮ್ಮ ಮನೆ ಸೇರಲು ನಮ್ಮ ಮಗಳು ಬಹಳ ಪುಣ್ಯ ಮಾಡಿದ್ದಾಳೆ ಎಂದು ರತ್ನ ಖುಷಿಯಾಗುತ್ತಾಳೆ. ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕು ಎಂದು ವಿದ್ಯಾ ತನ್ನ ಮನಸ್ಸಿನ ಆಸೆಗಳನ್ನು ಪತ್ರದಲ್ಲಿ ಬರೆದು ಅದನ್ನು ಭದ್ರನಿಗೆ ತಲುಪಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅದು ಈಶ್ವರಿ ಕೈ ಸೇರುತ್ತದೆ.
ವಿದ್ಯಾಗಾಗಿ ಮನೆಗೆ ಬ್ಯೂಟಿಶಿಯನ್ ಕಳಿಸಿದ ಭದ್ರ
ವಿದ್ಯಾ, ಮದುವೆ ವಿಚಾರವನ್ನೇ ಯೋಚಿಸುತ್ತಾ ಕೂರುತ್ತಾಳೆ. ಅಷ್ಟರಲ್ಲಿ ರತ್ನ ಬಂದು ಭದ್ರ ನಿನಗಾಗಿ ಮನೆಗೆ ಬ್ಯೂಟಿಷಿಯನ್ ಕಳಿಸಿದ್ದಾರೆ ಬಾ ಎಂದು ಕರೆಯುತ್ತಾಳೆ. ನನಗೆ ಅದೆಲ್ಲಾ ಇಷ್ಟವಿಲ್ಲ ಅವರಿಗೆ ಹೇಳಿಬಿಡು ಎನ್ನುತ್ತಾಳೆ. ಅವರು ಅಷ್ಟು ಪ್ರೀತಿಯಿಂದ ಕಳಿಸಿರುವಾಗ ನಾನು ಹೇಗೆ ಬೇಡ ಎನ್ನಲಿ ಎಂದು ರತ್ನ ಮಗಳಿಗೆ ಕೇಳುತ್ತಾಳೆ. ನಿನಗೆ ಹೇಳಲು ಆಗದಿದ್ದರೆ ನಾನೇ ಹೇಳುತ್ತೇನೆ ಎಂದು ಬ್ಯೂಟಿಷಿಯನ್ ಬಳಿ ಬಂದು ನಿಮ್ಮನ್ನು ಇಲ್ಲಿಗೆ ಕಳಿಸಿದವರ ಬಳಿ ಹೋಗಿ ನನಗೆ ಇದೆಲ್ಲಾ ಇಷ್ಟವಿಲ್ಲವೆಂದು ಹೇಳಿ ಎಂದು ಏರು ದನಿಯಲ್ಲಿ ಹೇಳುತ್ತಾಳೆ. ನನ್ನ ಮಗಳು ಇದನ್ನೆಲ್ಲಾ ಯಾವತ್ತಿಗೂ ಮಾಡಿಸಿಕೊಂಡವಳಲ್ಲ. ಅದಕ್ಕೆ ಬೇಡ ಎನ್ನುತ್ತಿದ್ದಾಳೆ, ತಪ್ಪು ತಿಳಿಯಬೇಡಿ ಎಂದು ರತ್ನ ಹೇಳುತ್ತಾಳೆ. ಅವರಿಗೇ ಇಷ್ಟವಿಲ್ಲ ಎಂದರೆ ನಾನು ಬಲವಂತ ಮಾಡುವುದಿಲ್ಲ ಎಂದು ಆಕೆ ಅಲ್ಲಿಂದ ಹೊರಡುತ್ತಾಳೆ.
ಇತ್ತ ಭದ್ರ ಕೂಡಾ ಮನೆ ಹಿತ್ತಲಲ್ಲಿ ಕುಳಿತು ಫೇಶಿಯಲ್ ಮಾಡಿಸಿಕೊಳ್ಳುತ್ತಾನೆ. ಅದನ್ನು ನೋಡಿ ಕ್ವಾಟ್ಲೆ ಕೂಡಾ ನನಗೂ ಮಾಡಿಸು ಎನ್ನುತ್ತಾನೆ. ಸರಿ ಅವನಿಗೂ ಮಾಡಿ ಎಂದು ಭದ್ರ ಹೇಳುತ್ತಾನೆ. ಫೇಶಿಯಲ್ ಮುಗಿದ ನಂತರ ಇಬ್ಬರೂ ಕನ್ನಡಿಯಲ್ಲಿ ಮುಖ ನೋಡಿಕೊಂಡು ಖುಷಿಯಾಗುತ್ತಾರೆ. ಹೆಣ್ಣಿನ ಮನೆಗೂ ಬ್ಯೂಟಿಷಿಯನ್ ಕಳಿಸಿದ್ದೀರ ತಾನೇ ಎಂದು ಕ್ವಾಟ್ಲೆ ಕೇಳುತ್ತಾನೆ. ಒಂದು ಹುಡುಗಿಗೆ ಹೇಳಿದ್ದೆ ಅವರಿಗೆ ಕೇಳುತ್ತೇನೆ ಇರಿ ಎಂದು ಬ್ಯೂಟಿ ಪಾರ್ಲರ್ನವನು ವಿದ್ಯಾ ಮನೆಗೆ ಕಳಿಸಿದ ಹುಡುಗಿಗೆ ಕರೆ ಮಾಡುತ್ತಾನೆ. ಆಕೆ ನಡೆದ ವಿಚಾರವನ್ನು ಹೇಳುತ್ತಾಳೆ. ಅದನ್ನು ಕೇಳಿ ಭದ್ರ ಬೇಸರಗೊಳ್ಳುತ್ತಾನೆ. ಕೋಪದಿಂದ ಹೇಳಿದ್ದಾಳೆ ಎಂದರೆ ವಿದ್ಯಾಗೆ ಈ ಮದುವೆ ಇಷ್ಟವಿದೆಯೋ ಇಲ್ಲವೋ ಎಂದು ಯೋಚಿಸುತ್ತಾನೆ.
ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಚೆಲುವ
ಇತ್ತ ಈಶ್ವರಿ ಕೈಗೆ ಪತ್ರ ಕೊಟ್ಟು ಸರಸ್ವತಿ ಮನೆಗೆ ವಾಪಸ್ ಆಗುತ್ತಾಳೆ. ಭದ್ರನಿಗೆ ಲೆಟರ್ ಕೊಟ್ಟೆಯಾ ಎಂದು ವಿದ್ಯಾ ತನ್ನ ತಂಗಿಗೆ ಕೇಳುತ್ತಾಳೆ. ನನಗೆ ನೇರವಾಗಿ ಅವರಿಗೆ ಕೊಡಲು ಆಗಲಿಲ್ಲ, ಆದರೆ ಈಶ್ವರಿ ಅಕ್ಕನ ಕೈಗೆ ಕೊಟ್ಟಿದ್ದೇನೆ, ಅವರು ಬಹಳ ಒಳ್ಳೆಯವರು. ಈ ಮದುವೆ ನಿಲ್ಲಿಸಲು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾಗಿ ಸರೂ ಹೇಳುತ್ತಾಳೆ. ಆದರೆ ವಿದ್ಯಾ ಅಂದುಕೊಂಡಂತೆ ಈಶ್ವರಿ ಅದನ್ನು ಭದ್ರನ ಕೈಗೆ ಕೊಡುವುದಿಲ್ಲ. ಬದಲಿಗೆ ಚೆಲುವನನ್ನು ತೋಟದ ಬಳಿ ಬರಲು ಹೇಳುತ್ತಾಳೆ. ಲಕ್ಷ್ಮೀ ನಿಮ್ಮ ಮನೆ ಬಾಗಿಲಿಗೆ ಬಂದರೆ ಅವಳನ್ನು ನೀವೇ ಬೇಡ ಎನ್ನುತ್ತಿದ್ದೀರಿ. ಈ ಪತ್ರ ಓದಿ ಎಂದು ವಿದ್ಯಾ ಬರೆದ ಪತ್ರವನ್ನು ಅವನ ಕೈಗೆ ಕೊಡುತ್ತಾಳೆ. ಅದನ್ನು ಓದಿ ಚೆಲುವ ಸಿಟ್ಟಾಗುತ್ತಾನೆ. ನೀವು ನನ್ನ ಅಣ್ಣ ಇದ್ದಂತೆ ಅದಕ್ಕೆ ಈ ಪತ್ರವನ್ನು ನಿಮ್ಮ ಕೈಗೆ ಕೊಡುತ್ತಿದ್ದೇನೆ, ಒಂದು ವೇಳೆ ಈ ಪತ್ರ ಭದ್ರನ ಕೈಗೆ ಸಿಕ್ಕಿದ್ದರೆ ಇಷ್ಟೊತ್ತಿಗೆ ಈ ಮದುವೆ ನಿಲ್ಲುತ್ತಿತ್ತು ಎನ್ನುತ್ತಾಳೆ.
ಚೆಲುವ ಮನೆಗೆ ಬರುತ್ತಾನೆ. ಚಪ್ಪರ ಹಾಕುವವರಿಗೆ ಹೇಳಿ ಬಂದೆಯಾ ಎಂದು ಕಾಳವ್ವ ಕೇಳುತ್ತಾಳೆ. ಇಲ್ಲ ಚಟ್ಟದವರಿಗೆ ಹೇಳಿ ಬಂದಿದ್ದೇನೆ ಎನ್ನುತ್ತಾ ಸಿಟ್ಟಿನಿಂದ ಅಡುಗೆ ಮನೆಯಲ್ಲಿರುವ ಸೀಮೆ ಎಣ್ಣೆ ಕ್ಯಾನ್ ತೆಗೆದುಕೊಂಡು ಮೈಗೆ ಸುರಿದುಕೊಳ್ಳುತ್ತಾನೆ. ಎಲ್ಲರೂ ಅವನ ಬಳಿ ಓಡಿ ಬರುತ್ತಾರೆ. ಹೀಗೇಕೆ ಮಾಡಿಕೊಳ್ಳುತ್ತಿದ್ದೀಯ ಎಂದು ಕೇಳುತ್ತಾರೆ. ಆಗ ಚೆಲುವ ವಿದ್ಯಾ ಬರೆದ ಪತ್ರವನ್ನು ಅವಳ ಕೈಗೆ ಕೊಟ್ಟು ಓದುವಂತೆ ಹೇಳುತ್ತಾಳೆ. ಅದನ್ನು ಕೇಳಿ ರತ್ನ ಗಾಬರಿಯಾಗುತ್ತಾಳೆ. ಚೆಲುವ ತನ್ನ ಹೆಂಡತಿಗೂ ಸೀಮೆಎಣ್ಣೆ ಸುರಿಯುತ್ತಾನೆ. ನಾವಿಬ್ಬರೂ ಇರುವುದು ಬೇಡ, ನಾವು ಸತ್ತ ನಂತರ ಇವಳು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲಿ ಎನ್ನುತ್ತಾನೆ. ವಿದ್ಯಾ ತಂದೆಯ ಕಾಲಿಗೆ ಬಿದ್ದು ನೀನು ಹೇಳಿದಂತೆ ಕೇಳುತ್ತೇನೆ ಅಪ್ಪಯ್ಯ, ನಾನು ಈ ಮದುವೆ ಮಾಡಿಕೊಳ್ಳುತ್ತೇನೆ ಎನ್ನುತ್ತಾಳೆ.
ಮದುವೆ ನಿಲ್ಲಿಸಲು ವಿದ್ಯಾ ಮತ್ತೆ ಪ್ರಯತ್ನಿಸುತ್ತಾಳಾ? ಅಥವಾ ಅಪ್ಪನಿಗೆ ಹೆದರಿ ಭದ್ರನ ಬಳಿ ತಾಳಿ ಕಟ್ಟಿಸಿಕೊಳ್ಳುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ
ಭದ್ರೇಗೌಡ - ತ್ರಿವಿಕ್ರಮ್
ಶಿವರಾಮೇಗೌಡ - ಮುನಿ
ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ
ವಿದ್ಯಾ - ಪ್ರತಿಮಾ ಠಾಕೂರ್
ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್
ಸರೂ (ವಿದ್ಯಾ ತಂಗಿ) - ಗ್ರೀಷ್ಮಾ
ಸಾವಿತ್ರಿ - ಶಿಲ್ಪಾ ಅಯ್ಯರ್
ಕ್ವಾಟ್ಲೆ - ನಿಶಿತ್ ರಾಜ್ ಶೆಟ್ಟಿ