ಅಣ್ಣಯ್ಯ ಧಾರಾವಾಹಿ: ಪಾರ್ವತಿಯನ್ನು ಪಡೆಯುವ ಆಸೆಗೆ ಬಿತ್ತು ಕಲ್ಲು; ಸೋಮೇಗೌಡನ ಕೈಯಲ್ಲಿ ಕಲ್ಯಾಣ ರೇಖೆಯೇ ಇಲ್ವಂತೆ
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 178ನೇ ಎಪಿಸೋಡ್ನಲ್ಲಿ ಗೋಡಂಬಿ, ಗೊರಕೆ ಸೇರಿ ಪಾರು ಹಾಗೂ ಶಿವು ಇಬ್ಬರನ್ನೂ ಇನ್ನಷ್ಟು ಹತ್ತಿರಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಜ್ಯೋತಿಷಿಗಳು, ಸೋಮೇಗೌಡನ ಕೈ ನೋಡಿ ನಿನಗೆ ಕಲ್ಯಾಣ ರೇಖೆಯೇ ಇಲ್ಲ ಎನ್ನುತ್ತಾರೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 178ನೇ ಎಪಿಸೋಡ್ ಕಥೆ ಹೀಗಿದೆ. ಅಂತೂ ಪಾರ್ವತಿ ಆಸೆ ನೆರವೇರಿದೆ. ಕನಸಿನಲ್ಲಿ ಮಾತ್ರ ಮಾವ ನನಗೆ ಮುತ್ತು ಕೊಡುತ್ತಾರೆ ಎಂದು ನಿರಾಶಳಾಗಿದ್ದ ಪಾರು ನಿಜವಾಗಿಯೂ ಶಿವು ಮಾವನಿಂದ ಮುತ್ತು ಪಡೆದು ಖುಷಿಯಾಗಿದ್ದಾಳೆ. ಈ ನಡುವೆ ಗೋಡಂಬಿ ಹಾಗೂ ಗೊರಕೆ ಇಬ್ಬರೂ ಸೇರಿ ಪಾರು ಹಾಗೂ ಶಿವು ಇಬ್ಬರನ್ನೂ ಇನ್ನಷ್ಟು ಹತ್ತಿರಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಾರೆ.
ಚಾಕೊಲೇಟ್ ಮೇಲೆ ಪಾರು ಐ ಲವ್ ಯೂ ಎಂದು ಬರೆಸಿದ ಗೋಡಂಬಿ
ಶಿವು ಬರುವ ಮುನ್ನವೇ ಅಂಗಡಿ ಬಾಗಿಲು ತೆಗೆಯುವ ಗೋಡಂಬಿ ಹಾಗೂ ಗೊರಕೆ ಇದೇನು ಇವತ್ತು ಇನ್ನೂ ಶಿವಣ್ಣ ಬಂದಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಶಿವು ಅಣ್ಣ ಈಗ ಪ್ರೇಮಲೋಕದಲ್ಲಿ ಕಳೆದುಹೋಗಿದ್ದಾರೆ. ನಮ್ಮ ಅಣ್ಣನಿಗೆ ಪ್ರೀತಿ ಹೇಳಿಕೊಳ್ಳಲು ಬರುವುದಿಲ್ಲ. ಅದರಿಂದ ಅತ್ತಿಗೆಗೆ ಬೇಸರವಾಗುತ್ತದೆ. ಹೇಗಾದರೂ ಮಾಡಿ ಇವರಿಬ್ಬರನ್ನೂ ಇನ್ನಷ್ಟು ಹತ್ತಿರ ತರಬೇಕು ಎಂದು ಗೋಡಂಬಿ ಹಾಗೂ ಗೊರಕೆ ಸೇರಿ ಒಂದು ಪ್ಲ್ಯಾನ್ ಮಾಡುತ್ತಾರೆ. ಚಾಕೊಲೇಟ್ನಲ್ಲಿ ಪಾರು ಐ ಲವ್ ಯೂ ಎಂದು ಬರೆಸಿ ಅದನ್ನು ಶಿವು ಜೇಬಿಗೆ ಹಾಕೋಣ, ಅದನ್ನು ಅತ್ತಿಗೆ ನೋಡಿ ಖುಷಿಯಾಗುತ್ತಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಶಿವು, ಅಂಗಡಿಗೆ ಬರುತ್ತಾನೆ. ದೇವರ ಪೂಜೆ ಮಾಡುವಾಗ ಅವನಿಗೆ ಗೊತ್ತಿಲ್ಲದಂತೆ ಜೇಬಿಗೆ ಗೋಡಂಬಿ ಚಾಕೊಲೇಟ್ ಹಾಕುತ್ತಾನೆ.
ಶಿವು ಸ್ಕೂಟರ್ ಸದ್ದು ಕೇಳುತ್ತಿದ್ದಂತೆ ನನ್ನ ಗಂಡ ಬಂದ ಎಂದು ಪಾರು ಖುಷಿಯಾಗುತ್ತಾಳೆ. ಅದು ನಿಮ್ಮ ಗಂಡ ಅಂತ ಹೇಗೆ ಹೇಳ್ತೀರಿ ನಮ್ಮ ಊರಿನಲ್ಲಿ ಇಂಥದ್ದೇ ಬೈಕ್ ಮತ್ತೊಬ್ಬರ ಬಳಿ ಇದೆ ಎಂದು ರತ್ನ ಹಾಗೂ ರಾಣಿ ಹೇಳುತ್ತಾರೆ. ನೂರು ಬೈಕ್ ಬಂದರೂ ನನ್ನ ಮಾವನ ಬೈಕ್ ಯಾವುದು ಅಂತ ಹೇಳ್ತೀನಿ ಎಂದು ಪಾರು ಹೇಳುತ್ತಾಳೆ. ಅಷ್ಟರಲ್ಲಿ ಶಿವು ಮನೆ ಒಳಗೆ ಬಂದು ಮನೆಗೆ ಬ್ಯಾಗ್ವೊಂದನ್ನು ಪಾರು ಕೈಗೆ ಕೊಡುತ್ತಾನೆ. ಅಷ್ಟರಲ್ಲಿ ಜೇಬಿನಿಂದ ಚಾಕೊಲೇಟ್ ಕೆಳಗೆ ಬೀಳುತ್ತದೆ. ಇದು ನನಗೇ ಗೊತ್ತಿಲ್ಲದೆ ನನ್ನ ಜೇಬಿನೊಳಗೆ ಹೇಗೆ ಬಂತು ಎಂದು ಶಿವು ಯೋಚಿಸುತ್ತಾನೆ. ಇದೇನಣ್ಣ ಚಾಕೊಲೇಟ್ ಎಂದು ತಂಗಿಯರು ಕೇಳುತ್ತಾರೆ. ರಮ್ಯಾಗಾಗಿ ತಂದೆ ಎಂದು ಶಿವು ಹೇಳುತ್ತಾನೆ. ರತ್ನ ಆ ಚಾಕೊಲೇಟ್ ನೋಡಿ ಅಣ್ಣ ಇದನ್ನು ರಮ್ಯಾಗೆ ತಂದೆ ಅಂತ ಹೇಳಿದೆ, ಆದರೆ ಇಲ್ಲಿ ಬೇರೆಯವರ ಹೆಸರು ಬರೆದಿದೆ ಎನ್ನುತ್ತಾಳೆ. ರಾಣಿ ಕೂಡಾ ಅದನ್ನು ನೋಡಿ ಪಾರು ಕೈಗೆ ಚಾಕೊಲೇಟ್ ಕೊಡುತ್ತಾಳೆ. ಅದರಲ್ಲಿ ಪಾರು ಐ ಲವ್ ಯೂ ಎಂದು ಬರೆದಿರುವುದನ್ನು ನೋಡಿ ಪಾರು ಖುಷಿಯಾಗುತ್ತಾಳೆ. ಅದರಲ್ಲಿ ಏನು ಬರೆದಿದೆ ಎಂದು ಗೊತ್ತಾಗದೆ ಶಿವು ಗೊಂದಲಕ್ಕೆ ಒಳಗಾಗುತ್ತಾನೆ. ಇದೆಲ್ಲಾ ಆ ಗೋಡಂಬಿ, ಗೊರಕೆ ಮಾಡಿರುವ ಕೆಲಸ ಎಂದು ಅವರನ್ನು ಬೈದುಕೊಳ್ಳುತ್ತಾನೆ. ಅಣ್ಣ ಅತ್ತಿಗೆ ಪ್ರೀತಿ ನೋಡಿ ರಾಣಿ, ರತ್ನ ಖುಷಿಯಾಗುತ್ತಾರೆ.
ಸೋಮೇಗೌಡನಿಗಿಲ್ಲ ಮದುವೆ ಭಾಗ್ಯ
ಮತ್ತೊಂದೆಡೆ ನಾಗೇಗೌಡ, ಮನೆಗೆ ಜ್ಯೋತಿಷಿಗಳನ್ನು ಕರೆಸುತ್ತಾನೆ. ಪ್ರತಿ ವರ್ಷ ನಮ್ಮ ಮನೆಗೆ ಬಂದು ನಮ್ಮೆಲ್ಲರ ಭವಿಷ್ಯ ಹೇಳುತ್ತಿದ್ದೀರಿ, ಈ ವರ್ಷ ನಮ್ಮ ಭವಿಷ್ಯ ಹೇಗಿದೆ ನೋಡಿ ಹೇಳಿ ಎನ್ನುತ್ತಾರೆ. ಸೋಮೇಗೌಡ ಜ್ಯೋತಿಷಿಗಳ ಬಳಿ ಕೈ ಚಾಚಿ, ನನಗೆ ಯಾವಾಗ ಮದುವೆ ಆಗುತ್ತೆ ಹೇಳಿ ಎನ್ನುತ್ತಾನೆ. ಅವನ ಕೈ ನೋಡಿದ ಜ್ಯೋತಿಷಿಗಳು ಇಲ್ಲಪ್ಪ ನಿನ್ನ ಕೈಯ್ಯಲಿ ಕಲ್ಯಾಣ ರೇಖೆಯೇ ಇಲ್ಲ. ಅಂದರೆ ನಿನಗೆ ಮದುವೆಯಾಗುವ ಭಾಗ್ಯವೇ ಇಲ್ಲ ಎನ್ನುತ್ತಾರೆ. ಆ ಮಾತು ಕೇಳಿ ಸೋಮ ಸಿಟ್ಟಾಗುತ್ತಾನೆ. ನಾನು ಪಾರ್ವತಿಯನ್ನು ನನ್ನವಳನ್ನಾಗಿ ಮಾಡಿಕೊಂಡೇ ತೀರುತ್ತೇನೆ ಎನ್ನುತ್ತಾನೆ. ನಂತರ ನಾಗೇಗೌಡ ತನ್ನ ಕೈ ತೋರಿಸಿ ನನಗೆ ಈ ವರ್ಷವಾದರೂ ಕೋಟಿ ಕೋಟಿ ಸಂಪಾದನೆ ಮಾಡುವ ಅದೃಷ್ಟ ಇದೆಯಾ ಹೇಳಿ ಎನ್ನುತ್ತಾನೆ. ಖಂಡಿತ ಈ ವರ್ಷ ನಿಮಗೆ ಕೋಟಿ ಕೋಟಿ ಹಣ ಸಿಗುತ್ತದೆ, ಆದರೆ ಅದಕ್ಕೆ ಬಹಳ ವಿಘ್ನಗಳಿವೆ ಎನ್ನುತ್ತಾರೆ. ಅವರ ಮಾತು ಕೇಳಿ ನಾಗೇಗೌಡ ಮಂಕಾಗುತ್ತಾನೆ.
ಆಸ್ತಿ ಗಳಿಸಲು ನಾಗೇಗೌಡನಿಗೆ ಇರುವ ವಿಘ್ನಗಳೇನು, ಜ್ಯೋತಿಷಿಗಳ ಮಾತನ್ನು ಸೋಮ ಗಂಭೀರವಾಗಿ ತೆಗೆದುಕೊಳ್ಳುತ್ತಾನಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್