ಅಣ್ಣಯ್ಯ: ಡಾಕ್ಟರ್ ವೇಷದಲ್ಲಿ ಗೋಡಂಬಿಯನ್ನು ಕೊಲ್ಲಲು ಬಂದ ಪರಶು ಯತ್ನ ವಿಫಲ; ಶಿವಣ್ಣನ ಬಳಿ ವಿಚಾರ ಹೇಳದೆ ಮುಚ್ಚಿಟ್ಟ ಜಿಮ್ ಸೀನ
ಅಣ್ಣಯ್ಯ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 189ನೇ ಎಪಿಸೋಡ್ನಲ್ಲಿ ಗೋಡಂಬಿಯನ್ನು ಕೊಲ್ಲಲು ಬಂದ ಪರಶುವನ್ನು ಜಿಮ್ ಸೀನ, ರಶ್ಮಿ ತಡೆಯುತ್ತಾರೆ. ಈ ವಿಚಾರವನ್ನು ಶಿವಣ್ಣನಿಂದ ಸೀನ ಮುಚ್ಚಿಡುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 189ನೇ ಎಪಿಸೋಡ್ ಕಥೆ ಹೀಗಿದೆ. ಗೋಡಂಬಿ ಬದುಕಿ ವಾಪಸ್ ಬಂದರೆ ನಮಗೆ ಅಪಾಯ ತಪ್ಪಿದ್ದಲ್ಲ, ನಿನ್ನ ಜೊತೆ ನಾನು ಕಟ್ಟಿದ ಕೋಟೆಯೂ ಒಡೆಯುತ್ತದೆ, ಹೇಗಾದರೂ ಮಾಡಿ ಅವನನ್ನು ಮುಗಿಸಿಬಿಡು ಎಂದು ವೀರಭದ್ರ, ಮಗನಿಗೆ ಕುಮ್ಮಕ್ಕು ಕೊಡುತ್ತಾನೆ. ಗೋಡಂಬಿ ವಿಚಾರ ತಿಳಿದ ಜಿಮ್ ಸೀನ ಆಸ್ಪತ್ರೆಗೆ ಬರುತ್ತಾನೆ, ನಾನು ಇಲ್ಲೇ ಇರುತ್ತೇನೆ, ನೀವೆಲ್ಲಾ ಮನೆಗೆ ಹೋಗಿ ಎಂದು ಶಿವು, ಪಾರ್ವತಿಯನ್ನು ಕಳಿಸುತ್ತಾನೆ.
ಪರಶುನಿಂದ ಸೀನನನ್ನು ಕಾಪಾಡಿದ ರಶ್ಮಿ
ಗೋಡಂಬಿಯನ್ನು ಕೊಲ್ಲಲು ಪರಶು ಡಾಕ್ಟರ್ ವೇಷದಲ್ಲಿ ಬರುತ್ತಾನೆ, ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್ ಹಾಕಿರುತ್ತಾನೆ, ಅವನು ಗೋಡಂಬಿ ಮೇಲೆ ಹಲ್ಲೆ ಮಾಡಬೇಕು ಎನ್ನುವಷ್ಟರಲ್ಲಿ ಮಲಗಿದ್ದ ಸೀನ ಎಚ್ಚರವಾಗುತ್ತಾನೆ, ಯಾರು ನೀವು ಎಂದು ಕೇಳುತ್ತಾನೆ, ಅವನು ಎಚ್ಚರವಾಗಿದ್ದನ್ನು ನೋಡಿ ಪರಶು ಗಾಬರಿಯಾಗುತ್ತಾನೆ, ಚೆಕಪ್ ಮಾಡಲು ಬಂದೆ ಎಂದು ಪರಶು ಹೇಳುತ್ತಾನೆ, ಸರಿ ಮಾಡಿ ಎಂದು ಸೀನ ಪ್ರತಿಕ್ರಿಯಿಸುತ್ತಾನೆ, ಸ್ಕೆತಸ್ಕೋಪ್ ಇಲ್ಲದೆ ಗೋಡಂಬಿ ದೇಹವನ್ನು ಮುಟ್ಟಿ ಪರೀಕ್ಷಿಸುವುದನ್ನು ನೋಡಿ ಸೀನನಿಗೆ ಅನುಮಾನ ಉಂಟಾಗುತ್ತದೆ, ಅವನು ನನ್ನ ಕಡೆ ಗಮನ ನೀಡಬಾರದು ಎಂಬ ಕಾರಣಕ್ಕೆ ಪರಶು, ಆಸ್ಪತ್ರೆ ರಿಪೋರ್ಟ್ ಕಾರ್ಡ್ ನೋಡುತ್ತಾ ನಿಲ್ಲುತ್ತಾನೆ, ಆದರೆ ಅದನ್ನು ಉಲ್ಟಾ ಹಿಡಿದಿರುವುದನ್ನು ನೋಡಿ ಸೀನನಿಗೆ ಅನುಮಾನ ಹೆಚ್ಚಾಗುತ್ತದೆ.
ನೀವು ನಿಜವಾಗಲೂ ಡಾಕ್ಟರೇನಾ? ರಿಪೋರ್ಟನ್ನು ಉಲ್ಟಾ ಹಿಡಿದಿದ್ದೀರಲ್ಲ ಯಾರು ನೀವು ಎಂದು ಕೇಳುತ್ತಾನೆ, ಡಾಕ್ಟರ್ ಬಳಿ ಹೀಗೆಲ್ಲಾ ಮಾತನಾಡಬೇಡಿ ಎಂದು ಪರಶು ಏರುದನಿಯಲ್ಲಿ ಕೇಳುತ್ತಾನೆ. ಒಮ್ಮೆ ನಿಮ್ಮ ಮಾಸ್ಕ್ ತೆಗೆಯಿರಿ ಎಂದು ಸೀನ, ಅವನ ಮಾಸ್ಕ್ ತೆಗೆಯಲು ಪ್ರಯತ್ನಿಸುತ್ತಾನೆ. ಪರಶುಗೆ ಕೋಪ ಬಂದು ಅವನನ್ನು ತಳ್ಳಿ ಹಲ್ಲೆ ಮಾಡಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ರಶ್ಮಿ ಅಲ್ಲಿಗೆ ಬಂದು ಪರಶುನನ್ನು ತಡೆಯುತ್ತಾಳೆ. ನನ್ನ ಗಂಡನ ಮೇಲೆ ಕೈ ಮಾಡಲು ನಿನಗೆ ಎಷ್ಟು ಧೈರ್ಯ ಎಂದು ಹೇಳಿ ಅವನನ್ನು ತಳ್ಳುತ್ತಾಳೆ. ಇಬ್ಬರೂ ಸೇರಿ ಪರಶು ಮಾಸ್ಕ್ ತೆಗೆಯಬೇಕು ಎನ್ನುವಷ್ಟರಲ್ಲಿ ಪರಶು ಅವರಿಬ್ಬರನ್ನೂ ತಳ್ಳಿ ಅಲ್ಲಿಂದ ಓಡಿ ಹೋಗುತ್ತಾನೆ. ನನ್ನಿಂದ ನೀನು ಬಚಾವ್ ಆದೆ, ನೀನು ಹೆದರಬೇಡ, ಇನ್ಮುಂದೆ ನಾನು ನಿನಗೆ ಯಾವುದೇ ಸಮಸ್ಯೆ ಬಂದರೂ ಕಾಪಾಡುತ್ತೇನೆ ಎಂದು ರಶ್ಮಿ ಹೇಳುತ್ತಾಳೆ. ಆ ಸಮಯದಲ್ಲೂ ಇಬ್ಬರೂ ಮತ್ತೆ ಜಗಳ ಮಾಡುತ್ತಾರೆ.
ಶಿವು ಬಳಿ ಹಲ್ಲೆ ವಿಚಾರ ಮುಚ್ಚಿಟ್ಟ ಜಿಮ್ ಸೀನ
ಗೋಡಂಬಿಯನ್ನು ಸಾಯಿಸಲು ಸಾಧ್ಯವಾಗಲಿಲ್ಲ ಎಂದು ಪರಶು ತನ್ನ ತಂದೆ ವೀರಭದ್ರನ ಬಳಿ ಹೇಳುತ್ತಾನೆ. ಮಗನ ಕೈಯ್ಯಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ವೀರಭದ್ರ ಸಿಟ್ಟಾಗುತ್ತಾನೆ, ಗೋಡಂಬಿ ಸಾಯುವವರೆಗೂ ನಮಗೆ ಸಮಾಧಾನ ಇಲ್ಲ, ಇಷ್ಟು ದಿನ ಶಿವಣ್ಣ ಒಬ್ಬನೇ ಇದ್ದ ಈಗ ಅವನ ಜೊತೆ ಪಾರ್ವತಿ, ಸೀನನ ಮನೆಯವರು ಇದ್ದಾರೆ, ನಮ್ಮ ಶತ್ರು ಬಳಗ ದೊಡ್ಡದಾಗುತ್ತಿದೆ, ಬಹಳ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾನೆ, ಅಪ್ಪ ಇದೊಂದು ಅವಕಾಶ ಕೊಡು ಹೇಗಾದರೂ ಅವನನ್ನು ಕೊಲ್ಲುತ್ತೇನೆ ಎಂದು ಪರಶು ಅಪ್ಪನ ಬಳಿ ಮನವಿ ಮಾಡುತ್ತಾನೆ, ಪರಶು, ವೀರಭದ್ರ ಹಾಗೂ ಛತ್ರಿ ಮನೆಯಿಂದ ಹೊರ ಹೋಗುವಾಗ ಸುಶೀಲ ಅವರಿಗೆ ಎದುರಾಗುತ್ತಾಳೆ. ನಿಜ ಹೇಳಿ ಈ ಸಮಯದಲ್ಲಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುತ್ತಾಳೆ. ಅವಳ ಮಾತಿಗೆ ವೀರಭದ್ರ ಗಾಬರಿಯಾದರೂ ಅದನ್ನು ತೋರಿಸಿಕೊಡದೆ, ಅವಳ ಮಾತಿಗೆ ಸರಿಯಾದ ಉತ್ತರವನ್ನೂ ನೀಡದೆ ಅಲ್ಲಿಂದ ಹೋಗುತ್ತಾರೆ. ಎಲ್ಲರೂ ಸೇರಿ ಏನೋ ಪಿತೂರಿ ಮಾಡುತ್ತಿದ್ದಾರೆ ಎಂದು ಸುಶೀಲಾಗೆ ಅನುಮಾನ ಉಂಟಾಗುತ್ತದೆ.
ಮರುದಿನ ರಾಣಿ ಮುಂಜಾನೆ ಎದ್ದು ಆಸ್ಪತ್ರೆಯಲ್ಲಿರುವ ಸೀನನಿಗೆ ತಿಂಡಿ ಮಾಡಿಕೊಡುತ್ತಾಳೆ. ತಿಂಡಿ ತೆಗೆದುಕೊಂಡು ಶಿವಣ್ಣ ಆಸ್ಪತ್ರೆಗೆ ಬರುತ್ತಾನೆ. ಅಲ್ಲಿ ಸೀನನ ಕಣ್ಣಿಗೆ ರಶ್ಮಿ ತನ್ನ ಸೀರೆಯಿಂದ ಶಾಖ ಕೊಡುತ್ತಿರುತ್ತಾಳೆ. ಅದನ್ನು ನೋಡಿ ಶಿವಣ್ಣ ನಾಚಿಕೊಳ್ಳುತ್ತಾನೆ, ಇಲ್ಲಿ ನೀವು ಅಂದುಕೊಂಡಂತೆ ನಡೆಯುತ್ತಿಲ್ಲ ಶಿವಣ್ಣ, ನೀವು ತಪ್ಪು ತಿಳಿಯಬೇಡಿ ಎಂದು ಸೀನ ಹೇಳುತ್ತಾನೆ. ಗೋಡಂಬಿ ಮೇಲೆ ಹಲ್ಲೆ ನಡೆದಿದ್ದನ್ನು ರಶ್ಮಿ ಹೇಳಲು ಮುಂದಾಗುತ್ತಾಳೆ. ಆದರೆ ಸೀನ ತಡೆಯುತ್ತಾನೆ, ನಿನ್ನೆ ಬಿದ್ದುಬಿಟ್ಟೆ ಅದಕ್ಕೆ ಕಣ್ಣಿಗೆ ಪೆಟ್ಟಾಗಿದೆ ಅಷ್ಟೇ ಎನ್ನುತ್ತಾನೆ, ಸರಿ ನೀವು ತಿಂಡಿ ಮಾಡಿ, ನಾನು ಡಾಕ್ಟರ್ ನೋಡಿ ಬರುವೆ ಎಂದು ಶಿವಣ್ಣ ಅಲ್ಲಿಂದ ಹೋಗುತ್ತಾನೆ. ಗೋಡಂಬಿ ಮೇಲೆ ಹಲ್ಲೆ ಆದ ವಿಚಾರವನ್ನು ಏಕೆ ಹೇಳಲಿಲ್ಲ ಎಂದು ರಶ್ಮಿ ಕೇಳುತ್ತಾಳೆ. ಶಿವಣ್ಣನಿಗೆ ಗೋಡಂಬಿ ಎಂದರೆ ಬಹಳ ಇಷ್ಟ. ಅಂತದರಲ್ಲಿ ಹೀಗೆಲ್ಲಾ ನಡೆದಿದೆ ಎಂದು ಗೊತ್ತಾದರೆ ಅವನು ಗಾಬರಿಯಾಗುತ್ತಾನೆ, ನೀನೂ ಕೂಡಾ ಹೇಳಬೇಡ ಎಂದು ಹೇಳುತ್ತಾನೆ.
ಗೋಡಂಬಿ ವಿಚಾರವಾಗಿ ಪಾರ್ವತಿ ಪೊಲೀಸರಿಗೆ ದೂರು ನೀಡುತ್ತಾಳಾ? ಅವನ ಮೇಲೆ ಪರಶು ಹಲ್ಲೆ ಮಾಡಿದ ವಿಚಾರವನ್ನು ಸೀನ ಗುಟ್ಟಾಗೇ ಇರಿಸುತ್ತಾನಾ? ಅಣ್ಣಯ್ಯ ಧಾರಾವಾಹಿಯ ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ