ಅಣ್ಣಯ್ಯ ಧಾರಾವಾಹಿ: ಮಾಕಾಳವ್ವನಿಗೆ ದಿಗ್ಬಂಧನ; ತಪ್ಪನ್ನು ಶಿವು ಮೇಲೆ ಹೊರಿಸುವ ವೀರಭದ್ರನ ಪ್ಲ್ಯಾನ್ ಯಶಸ್ವಿ ಆಗುತ್ತಾ?
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 180ನೇ ಎಪಿಸೋಡ್ನಲ್ಲಿ ಶಿವು ಎಲ್ಲಿ ಹೋದರೂ ಅವನ ಕಿವಿಯಲ್ಲಿ ಯಾರೋ ಹೆಸರು ಪಿಸುಗುಟ್ಟಿದಂತೆ ಆಗುತ್ತದೆ. ಅದರಿಂದ ಶಿವುಗೆ ಕಸಿವಿಸಿಯಾಗುತ್ತದೆ. ವೀರಭದ್ರ ಶಿವು ಮೈ ಮೇಲೆ ದೇವಿ ಬರಬಾರದು ಎಂದು ಕುತಂತ್ರ ಮಾಡುತ್ತಾನೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 180ನೇ ಎಪಿಸೋಡ್ ಕಥೆ ಹೀಗಿದೆ. ಶಿವು ಎಲ್ಲಿ ಹೋದರೂ ಅವನ ಕಿವಿಯಲ್ಲಿ ಯಾರೋ ಅವನ ಹೆಸರನ್ನು ಪಿಸುಗುಟ್ಟಿದಂತೆ ಆಗುತ್ತದೆ. ಇದರಿಂದ ಶಿವು ಗಾಬರಿ ಆಗುತ್ತಾನೆ. ವಿಚಾರ ತಿಳಿದ ಪಾರು ಕೂಡಾ ಗಾಬರಿಯಾಗುತ್ತಾಳೆ. ಶಿವುನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾಳೆ. ಆದರೆ ಅಷ್ಟರಲ್ಲಿ ಊರ ಹಿರಿಯರು ಹಾಗೂ ಅರ್ಚಕರು ಶಿವುನನ್ನು ಹುಡುಕಿಕೊಂಡು ಮನೆಗೆ ಬರುತ್ತಾರೆ.
ಮಾಕಾಳವ್ವನಿಗೆ ದಿಗ್ಬಂಧನ ಹಾಕಿಸಿದ ವೀರಭದ್ರ
ಏನು ಎಲ್ಲರೂ ಒಟ್ಟಿಗೆ ಬಂದಿದ್ದೀರ ಎಂದು ಶಿವು ಕೇಳುತ್ತಾನೆ. ದೇವಿ ಮುಂದೆ ದೀಪ ಆರಿ ಹೋಗಿದೆ, ಮಾಕಾಳವ್ವ ಯಾರಿಗೂ ಪ್ರಸಾದವೂ ಕೊಡುತ್ತಿಲ್ಲ, ತಾಯಿ ನಮಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಾಳೆ ಎನಿಸುತ್ತಿದೆ. ಆದ್ದರಿಂದ ನೀನು ಮಾಕಾಳವ್ವನನ್ನು ಕರೆಸಬೇಕು ಎಂದು ಮನವಿ ಮಾಡುತ್ತಾರೆ. ನಾನು ಸಿದ್ಧನಿದ್ದೇನೆ ಎಂದು ಶಿವು ಹೇಳುತ್ತಾನೆ. ಎಲ್ಲಾ ತಯಾರಿ ಮಾಡಿಕೊಳ್ಳುತ್ತೇವೆ ನೀನೂ ಒಂದು ದಿನದ ಬ್ರಹ್ಮಚರ್ಯ ಪಾಲಿಸಲು ದೇವಸ್ಥಾನಕ್ಕೆ ಹೊರಡು ಎಂದು ಹೇಳಿ ಎಲ್ಲರೂ ಅಲ್ಲಿಂದ ಹೊರಡುತ್ತಾರೆ. ಶಿವು ಕೂಡಾ ದೇವಸ್ಥಾನಕ್ಕೆ ಹೊರಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಾನೆ. ತನ್ನ ಅಡುಗೆ ತಾನೇ ಮಾಡಿಕೊಳ್ಳಲು ಬೇಕಾದ ಪಾತ್ರೆಗಳನ್ನೆಲ್ಲಾ ಶಿವು, ಬ್ಯಾಗಿನಲ್ಲಿಟ್ಟುಕೊಳ್ಳುತ್ತಾನೆ. ಮಾವ ಕೊಡು ಅದನ್ನೆಲ್ಲಾ ನಾನು ರೆಡಿ ಮಾಡಿಕೊಡುತ್ತೇನೆ ಎಂದು ಪಾರ್ವತಿ ಕೇಳುತ್ತಾಳೆ. ಮುಟ್ಟಬೇಡ ಪಾರ್ವತಿ ಎಂದು ಶಿವು ಜೋರಾಗಿ ಹೇಳುತ್ತಾನೆ. ಮಾವ ಎಂದಿಗೂ ಹೀಗೆ ಮಾತನಾಡಿದವರಲ್ಲ, ಇಂದು ಈ ರೀತಿ ಏಕೆ ಮಾತನಾಡುತ್ತಿದ್ದಾರೆ ಎಂದು ಪಾರು ಬೇಸರಗೊಳ್ಳುತ್ತಾಳೆ.
ಅತ್ತಿಗೆ ಇದೆಲ್ಲಾ ನಿಮಗೆ ಹೊಸತು. ಜಾತ್ರೆ ಸಮಯದಲ್ಲಿ ಅಣ್ಣ ನಾವು ಯಾರೂ ಮಾಡಿದ ಅಡುಗೆಯನ್ನು ತಿನ್ನುವುದಿಲ್ಲ. ಅವನು ದೇವಸ್ಥಾನದಲ್ಲಿ ಉಳಿದುಕೊಂಡು ಅವನ ಅಡುಗೆಯನ್ನು ಅವನೇ ಮಾಡಿಕೊಳ್ಳುತ್ತಾನೆ. ನಾಳೆ ದೇವಿ ಅವನ ಮೈ ಮೇಲೆ ಬರುತ್ತಾಳೆ. ನೀವೇ ನೋಡುತ್ತೀರಿ ಎಂದು ರಾಣಿ ಹೇಳುತ್ತಾಳೆ. ದೇವಿ ವಿಚಾರ ಯಾವಾಗ ನನ್ನ ಕಿವಿಯಲ್ಲಿ ಬಿತ್ತೋ ಆಗಿನಿಂದಲೇ ವ್ರತ ಶುರು ಆದಂತೆ, ನಾನು ಹೇಳಿದ ಮಾತಿಗೆ ಬೇಸರ ಮಾಡಿಕೊಳ್ಳಬೇಡ ಪಾರು ಎಂದು ಶಿವು ತನ್ನ ಹೆಂಡತಿಯನ್ನು ಸಮಾಧಾನ ಮಾಡುತ್ತಾನೆ. ಮನೆ ಕಡೆ ಜೋಪಾನ ಎಂದು ತಂಗಿಯರಿಗೆ ಹೇಳಿ ಶಿವು ದೇವಸ್ಥಾನಕ್ಕೆ ಹೊರಡುತ್ತಾನೆ. ಇತ್ತ ವೀರಭದ್ರ ಶಿವು ಮೈ ಮೇಲೆ ದೇವಿ ಬರಬಾರದು ಎಂದು ಮಾಂತ್ರಿಕನಿಗೆ ಹೇಳಿ ಮಾಕಾಳವ್ವನಿಗೆ ದಿಗ್ಬಂಧನ ಮಾಡಿಸುತ್ತಾನೆ.
ದೇವಿ ಪಲ್ಲಕ್ಕಿಯನ್ನು ಭುಜದ ಮೇಲೆ ಹೊತ್ತುಕೊಂಡ ಶಿವು
ದೇವಸ್ಥಾನಕ್ಕೆ ಬರುವ ಶಿವು ಮಡಿಯುಟ್ಟು ತಾನೇ ಅಡುಗೆ ಮಾಡಿ ಊಟ ಮಾಡುತ್ತಾನೆ. ದೇವಿ ಬಗ್ಗೆ ಶಿವುಗೆ ಇರುವ ಭಕ್ತಿಯನ್ನು ನೋಡುವ ಊರಿನ ಹಿರಿಯರು, ಏನೇ ಆದರೂ ಆ ದೇವಿ, ಶಿವುಗೆ ಒಲಿದಷ್ಟು ಬೇರೆ ಯಾರಿಗೂ ಒಲಿಯುವುದಿಲ್ಲ ನೋಡಿ, ಒಂದು ವೇಳೆ ಒಲಿದರೂ ಅದು ಶಿವು ಮಗನಿಗೆ ಮಾತ್ರ ಎಂದು ಮಾತನಾಡಿಕೊಳ್ಳುತ್ತಾರೆ. ಪೂಜೆ ಸಮಯ ಹತ್ತಿರ ಬರುತ್ತದೆ. ಶಿವು ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ದೇವಿ ಬಳಿ ಬರುತ್ತಾನೆ. ವೀರಭದ್ರ ಕೂಡಾ ದೇವಿಗೆ ಪೂಜೆ ಮಾಡಿ ತೆಂಗಿನಕಾಯಿ ಒಡೆಯುತ್ತಾನೆ. ದೇವಿಗೆ ಕೈ ಮುಗಿಯುವ ಶಿವು, ಪಲ್ಲಕ್ಕಿಯನ್ನು ಮುಟ್ಟಲು ಹೋಗುತ್ತಾನೆ. ಆದರೆ ಶಾಕ್ ಹೊಡೆದಂತೆ ಆಗಿ ದೂರ ಹೋಗಿ ಬೀಳುತ್ತಾನೆ. ಅದನ್ನು ನೋಡಿ ಎಲ್ಲರೂ ಗಾಬರಿ ಆಗುತ್ತಾರೆ. ಶಿವು ಕೂಡಾ ಹೀಗೇಕೆ ಆಗುತ್ತಿದೆ ಎಂದು ಆಶ್ಚರ್ಯಗೊಳ್ಳುತ್ತಾನೆ.
ಇದೇ ಸಮಯವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ವೀರಭದ್ರ, ತಾಯಿ ಏಕೆ ಹೀಗೆ ಮಾಡುತ್ತಿರುವೆ ನಮ್ಮಿಂದ ಏನು ತಪ್ಪಾಯ್ತು ಹೇಳು ಎನ್ನುತ್ತಾನೆ. ಅವನಿಗೆ ಸಾಥ್ ಕೊಡುವ ಛತ್ರಿ, ಶಿವುನಿಂದ ಏನಾದರೂ ಅಪಚಾರವಾಯ್ತಾ ಎಂದು ಕೇಳುತ್ತಾನೆ. ದೇವಿ ಮುಂದೆ ಬರುವ ಶಿವು, ಏಕೆ ತಾಯಿ ಹೀಗೆ ಮಾಡುತ್ತಿರುವೆ? ನನ್ನಿಂದ ಏನು ತಪ್ಪಾಯ್ತು ಹೇಳು, ನಾನು ನಿನ್ನ ಮಗನೇ ಆಗಿದ್ದರೆ, ನೀನು ನನ್ನ ಅವ್ವನೇ ಆಗಿದ್ದರೆ ಈಗ ನೀನು ಹೂವಿನಂತೆ ನನ್ನ ಕೈಗೆ ಬರಬೇಕು ಎನ್ನುತ್ತಾನೆ. ತಮಟೆ ಹೊಡೆಯಿರಿ, ಕಹಳೆ ಊದಿರಿ ಎನ್ನುತ್ತಾ ದೇವಿ ಪಲ್ಲಕ್ಕಿಯನ್ನು ಎತ್ತಿ ಭುಜದ ಮೇಲೆ ಇಟ್ಟುಕೊಳ್ಳುತ್ತಾನೆ. ಪಲ್ಲಕ್ಕಿಯನ್ನು ಎತ್ತಿದರೆ ಏನಾಯ್ತು? ದೇವಿ ಮೈ ಮೇಲೆ ಬರಬೇಕು ತಾನೇ, ಖಂಡಿತ ಬರುವುದಿಲ್ಲ ಎಂದು ವೀರಭದ್ರ ಸಮಾಧಾನಗೊಳ್ಳುತ್ತಾನೆ.
ಶಿವು ಮೈ ಮೇಲೆ ಮಾಕಾಳವ್ವ ಬರಬಾರದು ಎಂಬ ವೀರಭದ್ರನ ಪ್ಲ್ಯಾನ್ ಯಶಸ್ವಿಯಾಗುವುದಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ