ಅಣ್ಣಯ್ಯ: ಪಾರ್ವತಿ ಬೇಸರ ದೂರ ಮಾಡಲು ಡಾಕ್ಟರ್‌ ಆದ ಶಿವು; ಮಗ ಸೊಸೆ ಒಟ್ಟಿಗೆ ಮಲಗಿದ್ದನ್ನು ನೋಡಿ ಸಿಟ್ಟಾದ ಲೀಲಾ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಪಾರ್ವತಿ ಬೇಸರ ದೂರ ಮಾಡಲು ಡಾಕ್ಟರ್‌ ಆದ ಶಿವು; ಮಗ ಸೊಸೆ ಒಟ್ಟಿಗೆ ಮಲಗಿದ್ದನ್ನು ನೋಡಿ ಸಿಟ್ಟಾದ ಲೀಲಾ

ಅಣ್ಣಯ್ಯ: ಪಾರ್ವತಿ ಬೇಸರ ದೂರ ಮಾಡಲು ಡಾಕ್ಟರ್‌ ಆದ ಶಿವು; ಮಗ ಸೊಸೆ ಒಟ್ಟಿಗೆ ಮಲಗಿದ್ದನ್ನು ನೋಡಿ ಸಿಟ್ಟಾದ ಲೀಲಾ

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 203ನೇ ಎಪಿಸೋಡ್‌ನಲ್ಲಿ ಹೆಂಡತಿ ಬೇಸರವನ್ನು ದೂರ ಮಾಡಲು ಶಿವು ಡಾಕ್ಟರ್‌ನಂತೆ ಸ್ಟೆತಸ್ಕೋಪ್‌ನಿಂದ ಪಾರ್ವತಿಗೆ ಟೆಸ್ಟ್‌ ಮಾಡುವಂತೆ ತಮಾಷೆ ಮಾಡುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ: ಮಗ ಸೊಸೆ ಒಟ್ಟಿಗೆ ಮಲಗಿದ್ದನ್ನು ನೋಡಿ ಸಿಟ್ಟಾದ ಲೀಲಾ
ಅಣ್ಣಯ್ಯ: ಮಗ ಸೊಸೆ ಒಟ್ಟಿಗೆ ಮಲಗಿದ್ದನ್ನು ನೋಡಿ ಸಿಟ್ಟಾದ ಲೀಲಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 203ನೇ ಎಪಿಸೋಡ್‌ ಕಥೆ ಹೀಗಿದೆ. ಛತ್ರಿ ತನ್ನ ಲೈಸನ್ಸ್‌ ಹರಿದ ವಿಚಾರ ಕೇಳಿ ಪಾರ್ವತಿ ಬೇಸರಗೊಳ್ಳುತ್ತಾಳೆ. ಆದರೆ ತಾನು ಹೀಗೆ ಬೇಸರ ಮಾಡಿಕೊಂಡಿದ್ದರೆ ನನಗೆ ಆಸ್ಪತ್ರೆ ಕಟ್ಟಿಸಿಕೊಡಬೇಕೆಂದುಕೊಂಡಿದ್ದ ಶಿವು ಕೂಡಾ ಖುಷಿಯಿಂದ ಇರುವುದಿಲ್ಲ ಎಂದು ತಿಳಿದು ನಾನು ಲೈಸನ್ಸ್‌ ಕಳೆದುಕೊಂಡಿರಬಹುದು, ಆದರೆ ವಿದ್ಯೆಯನ್ನಲ್ಲ ಈ ವಿಚಾರವಾಗಿ ಯಾರೂ ಯೋಚನೆ ಮಾಡಬೇಡಿ ಎಂದು ಸಮಾಧಾನ ಹೇಳಿ ರೂಮ್‌ಗೆ ಹೋಗುತ್ತಾಳೆ. ಪಾರ್ವತಿ ಮನಸ್ಸನ್ನು ಅರಿತ ಶಿವು, ಅವಳನ್ನು ಸಮಾಧಾನ ಮಾಡಲು ರೂಮ್‌ಗೆ ಬರುತ್ತಾನೆ.

ಪಾರ್ವತಿಗಾಗಿ ಡಾಕ್ಟರ್‌ ಆದ ಮಾರಿಗುಡಿ ಶಿವು

ಪಾರ್ವತಿ, ರೂಮ್‌ಗೆ ಬಂದು ಕಣ್ಣೀರಿಡುತ್ತಾಳೆ. ಶಿವು ಒಳಗೆ ಹೋದಾಗ ಕಣ್ಣೀರು ಒರೆಸಿಕೊಂಡು ತನಗೆ ಏನೂ ಆಗಿಲ್ಲವೆನ್ನುವಂತೆ ನಾಟಕ ಮಾಡುತ್ತಾಳೆ. ನೀನು ಈಗ ನನ್ನ ಹೆಂಡತಿ. ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಮನಸ್ಸಿನಲ್ಲಿ ಇಷ್ಟು ನೋವನ್ನು ಬಚ್ಚಿಟ್ಟುಕೊಂಡು ಹೇಗಿರುತ್ತೀಯ ಪಾರು. ನನ್ನ ಬಳಿ ಸುಳ್ಳು ಹೇಳಬೇಡ ಎಂದು ಶಿವು ಹೇಳುತ್ತಾನೆ. ಇಷ್ಟೆಲ್ಲಾ ಓದಿ ಜನಸೇವೆ ಮಾಡುವ ಕನಸು ಹಾಗೇ ಉಳಿಯಿತಲ್ಲ ಎಂದು ಸ್ವಲ್ಪ ಬೇಸರವಿದೆ ಅಷ್ಟೇ ಎಂದು ಪಾರ್ವತಿ ಹೇಳುತ್ತಾಳೆ. ಸರಿ ಹಾಗಾದರೆ ಊಟಕ್ಕೆ ಬಾ ಎಂದು ಶಿವು ಕರೆಯುತ್ತಾನೆ. ಇಲ್ಲ ನನಗೆ ಹಸಿವಿಲ್ಲ ಎಂದು ಪಾರು ಹೇಳುತ್ತಾಳೆ. ಆಗ ಶಿವು ಸ್ಟೆತೊಸ್ಕೋಪ್‌ ಹಿಡಿದು ಪಾರ್ವತಿಯನ್ನು ಚೆಕ್‌ ಮಾಡುವಂತೆ ತಮಾಷೆ ಮಾಡುತ್ತಾನೆ.

ಮನಸ್ಸಿನಲ್ಲಿ ಬಹಳ ನೋವಿದೆ. ಈ ನೋವಿಂದ ಹೊಟ್ಟೆ ತುಂಬಿಕೊಂಡಿದೆ, ಅದಕ್ಕೆ ನಿಮಗೆ ಹಸಿವಾಗುತ್ತಿಲ್ಲ. ಈ ಡಾಕ್ಟರ್‌ ಶಿವುಗೆ ಎಲ್ಲಾ ಗೊತ್ತಾಗುತ್ತದೆ, ನಾನು ಈಗ ಟೆಸ್ಟ್‌ ಮಾಡಿದ್ದರಿಂದ ಎಲ್ಲಾ ಗೊತ್ತಾಗಿದೆ ಎನ್ನುತ್ತಾನೆ. ಇದು ಟೆಸ್ಟಾ, ಮಕ್ಕಳು ಆಟವಾಡುವ ಸ್ಟೆತೊಸ್ಕೋಪ್‌ ಹಿಡಿದಿದ್ದೀಯಲ್ಲ ಎಂದು ಪಾರು ಹೇಳುತ್ತಾಳೆ. ಇದು ಮಕ್ಕಳು ಆಟುವ ಆಟಿಕೆ ಅಲ್ಲ ಪಾರು, ನೀನು ಚಿಕ್ಕವಳಾಗಿದ್ದಾಗ ಡಾಕ್ಟರ್‌ ಆಗಬೇಕೆಂಬ ಕನಸು ಹೊತ್ತು ಹಿಡಿದುಕೊಂಡಿದ್ದ ಸ್ಟೆತೊಸ್ಕೋಪ್‌ ಎನ್ನುತ್ತಾನೆ. ಶಿವು ಮಾತನ್ನು ಕೇಳಿ ಪಾರ್ವತಿ ಆಶ್ಚರ್ಯಗೊಳ್ಳುತ್ತಾಳೆ. ನಾನು ಬಾಲ್ಯದಲ್ಲಿದ್ದಾಗ ಬಳಸುತ್ತಿದ್ದ ವಸ್ತುಗಳನ್ನು ನೀನು ಇಷ್ಟು ಜೋಪಾನ ಮಾಡಿದ್ದೀಯ ಅದಕ್ಕೆ ನನಗೆ ಖುಷಿಯಾಗುತ್ತಿದೆ ಎನ್ನುತ್ತಾಳೆ. ಸರಿ ಈಗ ನೀನು ಊಟಕ್ಕೆ ಬಾ ನೀನು ಊಟ ಮಾಡದಿದ್ದರೆ ನಿನ್ನಿಂದ ನಾಲ್ವರು ಊಟ ಮಾಡದಂತೆ ಆಗುತ್ತದೆ ಎಂದು ಹೊರಗೆ ಕರೆತರುತ್ತಾನೆ. ರತ್ನ, ರಮ್ಯ, ರಾಣಿ ಮೂವರೂ ಹೊರಗೆ ತಟ್ಟೆ ಹಿಡಿದು ನಿಂತಿರುತ್ತಾರೆ. ನನ್ನಿಂದ ನೀವು ಉಪವಾಸ ಇರಬಾರದು, ಬನ್ನಿ ಎಲ್ಲರೂ ಊಟ ಮಾಡೋಣ ಎಂದು ಪಾರ್ವತಿ ಊಟಕ್ಕೆ ಹೊರಡುತ್ತಾಳೆ.

ಒಟ್ಟಿಗೆ ಮಲಗಿದ್ದ ರಶ್ಮಿ-ಸೀನನನ್ನು ನೋಡಿ ಸಿಟ್ಟಾದ ಲೀಲಾ

ಇತ್ತ ರಶ್ಮಿ ಮಲಗಲು ಹಾಸಿಗೆ ಕ್ಲೀನ್‌ ಮಾಡಿ ಮುಗಿಸಿ ತನ್ನ ಹಾಗೂ ಸೀನನ ಮಧ್ಯೆ ಇಡಲು ಡಂಬಲ್ಸ್‌ ಕೇಳುತ್ತಾಳೆ. ಇವತ್ತು ಅದೇನು ಬೇಡ ಎಂದು ಸೀನ ಹೇಳುತ್ತಾನೆ. ಅವನ ಮಾತು ಕೇಳಿ ರಶ್ಮಿ ಖುಷಿಯಾಗುತ್ತಾಳೆ. ನೀನು ಏನೇನೋ ಕಲ್ಪನೆ ಮಾಡಿಕೊಳ್ಳಬೇಡ, ನಾನು ಇವತ್ತು ಇಲ್ಲಿ ಮಲಗುತ್ತಿಲ್ಲ, ತೋಟಕ್ಕೆ ಹೋಗುತ್ತಿದ್ದೇನೆ, ಅಪ್ಪ ಮನೆಯಲ್ಲಿ ಇಲ್ಲ, ನನ್ನನ್ನು ಕೇಳಲು ಯಾರೂ ಇಲ್ಲ, ನೀನು ಒಬ್ಬಳೇ ಮಲಗು, ಮನೆ ಹೊರಗಿನ ಮರದಲ್ಲಿರುವ ದೆವ್ವ ಖಂಡಿತ ನಿನ್ನನ್ನು ಹಿಡಿದುಕೊಳ್ಳುತ್ತದೆ ಎಂದು ಹೆದರಿಸುತ್ತಾನೆ. ರಶ್ಮಿ ಭಯದಿಂದ ನನ್ನ ಬಿಟ್ಟು ಹೋಗಬೇಡ ಎಂದು ಮನವಿ ಮಾಡುತ್ತಾಳೆ. ಆದರೆ ಸೀನ ಅವಳ ಮಾತಿಗೆ ಸೊಪ್ಪು ಹಾಕದೆ ಹೊರಗೆ ಬರುತ್ತಾನೆ. ಹೊರಗೆ ಲೀಲಾ ನಿಂತಿರುತ್ತಾಳೆ. ಮಗ ತೋಟಕ್ಕೆ ಮಲಗಲು ಹೋಗುತ್ತಿದ್ದಾನೆ ಎಂದು ತಿಳಿದು ಖುಷಿಯಾಗುತ್ತಾಳೆ. ನೀನು ಈ ಸಮಯದಲ್ಲಿ ಹೊರಗೆ ಹೋಗುವುದು ಬೇಡ, ಇಲ್ಲೇ ರೂಮ್‌ ಹೊರಗೆ ಮಲಗು ಎಂದು ಹೇಳುತ್ತಾಳೆ.

ತಾಯಿ ಹೇಳಿದಂತೆ ಸೀನ ರೂಮ್‌ ಹೊರಗೆ ಮಲಗುತ್ತಾನೆ. ಬೆಳಗ್ಗೆ ಎದ್ದು ನೋಡಿದರೆ ರಶ್ಮಿ ಕೂಡಾ ಸೀನನ ಪಕ್ಕದಲ್ಲಿ ಮಲಗಿರುತ್ತಾಳೆ. ಅಷ್ಟೇ ಅಲ್ಲ ರಶ್ಮಿ, ತನ್ನ ಗಂಡನ ಕೈ ಮೇಲೆ ಮಲಗಿದ್ದನ್ನು ನೋಡಿ ಲೀಲಾ ಶಾಕ್‌ ಆಗುತ್ತಾಳೆ. ಆಗಬಾರದ್ದು ಆಗಿ ಹೋಯ್ತು ಎನ್ನುವಂತೆ ಜೋರಾಗಿ ಅರಚುತ್ತಾಳೆ. ಸೀನ ಎಚ್ಚರಗೊಂಡು ತನ್ನ ಪಕ್ಕದಲ್ಲಿ ರಶ್ಮಿ ಮಲಗಿರುವುದನ್ನು ನೋಡಿ ಗಾಬರಿ ಆಗುತ್ತಾನೆ, ಇವಳು ಯಾವಾಗ ನನ್ನ ಪಕ್ಕ ಬಂದು ಮಲಗಿದಳು ಗೊತ್ತಾಗಲಿಲ್ಲ ಎನ್ನುತ್ತಾಳೆ. ನೀವಿಬ್ಬರೂ ಸೇರಿ ನಾಟಕ ಮಾಡುತ್ತಿದ್ದೀರ ಎಂದು ಲೀಲಾ ಆರೋಪಿಸುತ್ತಾಳೆ. ಇವರದ್ದು ಏನೂ ತಪ್ಪಿಲ್ಲ ಅತ್ತೆ, ಒಬ್ಬಳೇ ಮಲಗಲು ಭಯವಾಯ್ತು ಅದಕ್ಕೆ ಇಲ್ಲಿ ಬಂದೆ, ಅಷ್ಟಕ್ಕೂ ನನ್ನ ಗಂಡನ ಪಕ್ಕ ಮಲಗಿದರೆ ಏನು ತಪ್ಪು ಎಂದು ಪ್ರಶ್ನಿಸುತ್ತಾಳೆ. ಪಿಂಕಿಗೆ ಹೇಳುತ್ತೇನೆಂದು ನಿನ್ನೆ ನನ್ನನ್ನು ಹೆದರಿಸುತ್ತಿದ್ದೆ ಈಗ ಈ ವಿಚಾರವನ್ನು ನಾನು ಪಿಂಕಿಗೆ ಹೇಳುತ್ತೇನೆ ಎಂದು ಸೀನನ ಬಳಿ ಲೀಲಾ ಮೆಲ್ಲಗೆ ಉಸುರುತ್ತಾಳೆ.

ಪಾರ್ವತಿ ತಾನು ಡಾಕ್ಟರ್‌ ಆಗಬೇಕೆಂಬ ಆಸೆಯನ್ನು ತ್ಯಾಗ ಮಾಡುತ್ತಾಳಾ? ಲೀಲಾ-ಸೀನನ ಗುಟ್ಟು ಬಯಲಾಗುವುದು ಯಾವಾಗ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in