ಅಣ್ಣಯ್ಯ ಧಾರಾವಾಹಿ: ದಿಗ್ಬಂಧನ ಮುರಿದು ಶಿವು ಮೈ ಮೇಲೆ ಬಂದೇ ಬಿಟ್ಲು ಮಾಕಾಳವ್ವ; ಪಾರ್ವತಿ ಬಳಿ ಗುಟ್ಟಾಗಿ ರಹಸ್ಯ ಹೇಳಿದ ದೇವಿ
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 181ನೇ ಎಪಿಸೋಡ್ನಲ್ಲಿ ವೀರಭದ್ರ ಹಾಕಿಸಿದ್ದ ದಿಗ್ಬಂಧನ ಒಡೆದು ಮಾಕಾಳವ್ವ ಶಿವು ಮೈ ಮೇಲೆ ಬರುತ್ತಾಳೆ. ಊರ ಜನರ ಪ್ರಶ್ನೆಗಳಿಗೆ ಉತ್ತರಿಸುವ ದೇವಿ ಕೊನೆಗೆ ಪಾರ್ವತಿ ಕಿವಿಯಲ್ಲಿ ರಹಸ್ಯವೊಂದನ್ನು ಹೇಳುತ್ತಾಳೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 181ನೇ ಎಪಿಸೋಡ್ ಕಥೆ ಹೀಗಿದೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಅಪಶಕುನಗಳ ಬಗ್ಗೆ ಅರ್ಚಕರು ಹಾಗೂ ಊರ ಹಿರಿಯರು ಶಿವು ಬಳಿ ಹೇಳುತ್ತಾರೆ. ದೇವಿ ಕರೆಸಲು ನಾನು ಸಿದ್ಧನಿದ್ದೇನೆ ಎಂದು ಶಿವು ಹೇಳುತ್ತಾನೆ. ಅಡುಗೆ ಮಾಡಿಕೊಳ್ಳಲು ಬೇಕಾದ ಎಲ್ಲಾ ಸಾಮಗ್ರಿಗಳನ್ನು ಬ್ಯಾಗ್ನಲ್ಲಿಟ್ಟುಕೊಂಡು ಪಾರ್ವತಿ ಹಾಗೂ ತಂಗಿಯರಿಗೆ ಹೇಳಿ ಶಿವು ದೇವಸ್ಥಾನಕ್ಕೆ ಹೋಗುತ್ತಾನೆ. ಪೂಜೆ ಸಮಯದಲ್ಲಿ ಮಾಕಾಳವ್ವನ ಪಲ್ಲಕ್ಕಿಯನ್ನು ಎತ್ತಿಕೊಳ್ಳಲು ಶಿವುಗೆ ಸಾಧ್ಯವಾಗುವುದಿಲ್ಲ.
ಅಂತೂ ಶಿವು ಮೈ ಮೇಲೆ ಬಂದಳು ಮಾಕಾಳವ್ವ
ಇದುವರೆಗೂ ಯಾವತ್ತೂ ಈ ರೀತಿ ಆಗಿರಲಿಲ್ಲ, ಆದರೆ ಈಗೇಕೆ ಈ ರೀತಿ ಆಗುತ್ತಿದೆ ಎಂದು ಎಲ್ಲರೂ ಭಯಭೀತರಾಗುತ್ತಾರೆ. ಶಿವು ಕೂಡಾ ಆತಂಕಕ್ಕೆ ಒಳಗಾಗುತ್ತಾನೆ. ಮಾಕಾಳವ್ವ ಯಾಕವ್ವ ನಾನು ಏನು ತಪ್ಪು ಮಾಡಿದ್ದೇನೆಂದು ಹೇಳಿಬಿಡು, ಶಿಕ್ಷೆನೂ ಕೊಡು. ಇಷ್ಟು ವರ್ಷ ನಿನ್ನನ್ನು ಸುಲಭವಾಗಿ ಎತ್ತಿಕೊಳ್ಳುತ್ತಿದ್ದೆ, ಆದರೆ ಇವತ್ತು ಮುಟ್ಟೋಕೂ ಆಗುತ್ತಿಲ್ಲ. ಆ ಶಿಕ್ಷೆ ಏನಿದ್ದರೂ ನನಗೆ ಕೊಡು, ನನ್ನ ಊರಿನ ಜನರಿಗೆ ಬೇಡ. ಬುದ್ಧಿ ಬಂದಾಗಿನಿಂದ ನನ್ನ ಜೊತೆ ನಡೆದುಕೊಂಡು ಬಂದವಳು ನೀನು, ಇವತ್ತು ಏನಾಯ್ತು, ನನ್ನ ನಿನ್ನ ಮಧ್ಯೆ ನಿಂತಿರೋ ಆ ಶಕ್ತಿ ಯಾವುದು? ಊರಿನ ಜನರು ಆತಂಕಗೊಂಡಿದ್ದಾರೆ. ಹಟ ಮಾಡಬೇಡ, ಬಂದುಬಿಡು. ನಾನೇ ನಿನ್ನ ಮಗ ಅನ್ನುವುದಾದರೆ ನೀನೇ ನನ್ನ ತಾಯಿ ಅನ್ನೋದಾದ್ರೆ ಒಂದೇ ಉಸಿರಲ್ಲಿ ನಿನ್ನ ಎತ್ತುಕೊಳ್ಳುವೆ, ಹೂವ ಬಂದಂಗೆ ಬರಬೇಕು ಎಂದು ಶಿವು ಬೇಡಿಕೊಳ್ಳುತ್ತಾನೆ.
ತಮಟೆ, ಕಹಳೆ ಸದ್ದಿಗೆ ಆವೇಶಗೊಂಡ ಶಿವು ಕೊನೆಗೂ ದೇವಿಯನ್ನು ಎತ್ತಿಕೊಳ್ಳುತ್ತಾನೆ. ದೇವಿಯನ್ನು ಎತ್ತಿಕೊಂಡರೇನಂತೆ ಅವಳು ಮೈ ಮೇಲೆ ಬರುವುದು ಮುಖ್ಯ ಎಂದುಕೊಂಡಿದ್ದ ವೀರಭದ್ರನಿಗೆ ಶಾಕ್ ಎನಿಸುವಂತೆ ದಿಗ್ಬಂಧನ ಮುರಿದು ಶಿವು ಮೈ ಮೇಲೆ ಮಾಕಾಳವ್ವ ಬರುತ್ತಾಳೆ. ಅಮ್ಮ ಬಂದ್ಲು ಎಂದು ಅರ್ಚಕರು ಹೇಳುತ್ತಿದ್ದಂತೆ ವೀರಭದ್ರ ಹೆದರಿ ನಡುಗುತ್ತಾನೆ. ವೀರಭದ್ರನ ಕಡೆ ನೋಡುವ ದೇವಿ ತಾಯಿಯನ್ನೇ ಕಟ್ಟಿಹಾಕ್ತೀರೇನೋ ಮಕ್ಕಳಾ ಎಂದು ಅರಚುತ್ತಾಳೆ. ಅದನ್ನು ಕಂಡು ವೀರಭದ್ರ ಭಯದಿಂದ ಪಕ್ಕಕ್ಕೆ ಸರಿಯುತ್ತಾನೆ. ನೀನು ಏನು ಹೇಳಬೇಕು ಎಂದುಕೊಂಡಿರುವ ಎಲ್ಲರಿಗೂ ಹೇಳು ಎಂದು ಅರ್ಚಕರು ಕೇಳುತ್ತಾರೆ. ಊರಿಗೆ ಒಳ್ಳೆ ಮಳೆ ಬೆಳೆ ಆಗುತ್ತೆ ಎಂದು ದೇವಿ ಹೇಳುತ್ತಾಳೆ.
ವೀರಭದ್ರ, ಪರಶು, ಲೀಲಾಗೆ ಪರೋಕ್ಷವಾಗಿ ಬುದ್ಧಿ ಹೇಳಿದ ದೇವಿ
ತಾಯಿ ಮಕ್ಕಳ ಮಧ್ಯೆ ಅದ್ಯಾವ ಶಕ್ತಿ ಬಂದರೂ ರಕ್ತ ಚೆಲ್ಲುತ್ತೆ, ಗುಂಡಿಗೆ ಒಡೆಯುತ್ತೆ. ಅಮ್ಮ ಬರ್ತಾಳೆ, ತಬ್ಬಿ ಹಿಡಿಯುತ್ತಾಳೆ. ಮಕ್ಕಳು ತಬ್ಬಲಿ ಆಗಲು ಬಿಡುವುದಿಲ್ಲ. ಕಪಟ ಕಳಚುತ್ತೆ ಮುಖವಾಡ ಬೀಳುತ್ತೆ ಎಂದು ತಾಯಿ ಹೇಳಿದಾಗ ವೀರಭದ್ರ, ಪರಶು, ಛತ್ರಿ ಭಯಗೊಳ್ಳುತ್ತಾರೆ. ತುತ್ತಿಗೆ ಕನ್ನ ಹಾಕಿದರೆ ಕತ್ತು ಹಿಸುಕಿಹೋಗುತ್ತದೆ ಎಂದಾಗ ಸೊಸೆ ರಶ್ಮಿಗೆ ಊಟ ಕೊಡದಿದ್ದನ್ನು ಲೀಲಾ ನೆನಪಿಸಿಕೊಳ್ಳುತ್ತಾಳೆ. ವಜ್ರ ಸಿಕ್ಕಾಗ ತಲೆಗೆ ಇಟ್ಟವನು ರಾಜ ಆಗುತ್ತಾನೆ, ನಂತರ ಹುಡುಕಿದರೆ ಪ್ರಯೋಜನ ಇಲ್ಲ ಎಂದು ದೇವಿ ಹೇಳಿದಾಗ ಜಿಮ್ ಸೀನ, ತಾನು ರಶ್ಮಿಯನ್ನು ನಿರ್ಲಕ್ಷಿಸುತ್ತಿರುವುದನ್ನು ನೆನಪಿಸಿಕೊಳ್ಳುತ್ತಾನೆ.
ಊರ ಜನರು ಏನಾದರೂ ಪ್ರಶ್ನೆ ಕೇಳಬಹುದು ಎಂದಾಗ ನಾನು ಪ್ರಶ್ನೆ ಕೇಳುತ್ತೇನೆಂದು ಪಾರ್ವತಿ ಮುಂದೆ ಬರುತ್ತಾಳೆ. ತನ್ನ ಬಂಡವಾಳ ಬಯಲಿಗೆ ಬರುತ್ತದೆ ಎಂದು ಹೆದರಿ ವೀರಭದ್ರ, ದೇವಿಯನ್ನು ಹೊರುವವರ ಮನೆಯವರು ಪ್ರಶ್ನೆ ಕೇಳಬಾರದು ಎನ್ನುತ್ತಾನೆ. ರಶ್ಮಿ ಮದುವೆ ಆಗಿದ್ದಾಳೆ. ಅವಳು ಈಗ ನಮ್ಮ ಮನೆಯವಳಲ್ಲ ಅವಳೇ ಪ್ರಶ್ನೆ ಕೇಳುತ್ತಾಳೆ ಎಂದು ತಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ಅವಳ ಬಳಿ ಕೇಳಿಸುತ್ತಾಳೆ. ನನ್ನ ಅಮ್ಮ ಎಲ್ಲಿ ಹೋದಳು ಎಂದು ರಶ್ಮಿ ಕೇಳುತ್ತಾಳೆ. ನಿನ್ನ ತಾಯಿ ಇಲ್ಲದೆ ಮದುವೆ ನಡೆಯಿತಾ, ನಿನ್ನ ತಾಯಿ ಮುಂದೆಯೇ ಮದುವೆ ಆಯ್ತು ಮಗಾ? ಎಂದು ದೇವಿ ಹೇಳುತ್ತಾಳೆ. ಇನ್ನೊಂದು ಪ್ರಶ್ನೆ ಕೇಳುವಂತೆ ರಶ್ಮಿ ಕಿವಿಯಲ್ಲಿ ಪಾರ್ವತಿ ಏನೋ ಹೇಳುವಾಗ ದೇವಿಯನ್ನು ಹೊತ್ತಿದ್ದ ಶಿವು ಅವಳ ಬಳಿ ಬಂದು ಪ್ರಶ್ನೆಯೇ ಜೀವನವಲ್ಲ, ಉತ್ತರ ಹುಡುಕು, ಬೆಳಕು ಬರುತ್ತೆ, ದರ್ಶನ ಆಗುತ್ತೆ, ಅಮ್ಮ ಸಿಗ್ತಾಳೆ, ಹುಡುಕು ಎಂದು ಹೇಳಿ ದೇವಿ ಶಿವು ಬಿಟ್ಟು ಹೋಗುತ್ತಾಳೆ.
ಮಾಕಾಳವ್ವ ಪಾರ್ವತಿಗೆ ಹೇಳಿದ ರಹಸ್ಯ ಏನೆಂದು ಗೊತ್ತಾಗದೆ ಕೋಪಗೊಂಡ ವೀರಭದ್ರ
ಪಾರ್ವತಿ ಕಿವಿಯಲ್ಲಿ ದೇವಿ ಹೇಳಿದ್ದನ್ನು ತಿಳಿದುಕೊಳ್ಳಲು ವೀರಭದ್ರ ವರಸೆ ಬದಲಿಸುತ್ತಾನೆ. ದೇವಿ ನಿನ್ನ ಬಳಿ ಏನು ಹೇಳಿದಳು ಎಲ್ಲರ ಮುಂದೆ ಹೇಳು ಎನ್ನುತ್ತಾನೆ. ನಾನು ಹೇಳುವುದಿಲ್ಲ ಎಂದು ಪಾರ್ವತಿ ಕಡ್ಡಿ ತುಂಡಾಗುವಂತೆ ಹೇಳುತ್ತಾಳೆ. ಊರ ಜನರಿಗೆ ಒಳ್ಳೆಯದಾಗಲಿ ಎಂದು ದೇವಿ ಬಂದಳು. ಪಾರ್ವತಿ ಕಿವಿಯಲ್ಲಿ ಹೇಳಿದ್ದನ್ನು ಅವಳು ಎಲ್ಲರ ಮುಂದೆ ಹೇಳಬೇಕಲ್ಲವೇ ಏನಂತೀರಿ ಎನ್ನುತ್ತಾನೆ. ಹೌದು ಹೇಳಬೇಕು ಎಂದು ಊರ ಜನರು ಹೇಳುತ್ತಾರೆ. ನಾನು ಖಂಡಿತ ಹೇಳುವುದಿಲ್ಲ. ಊರ ಜನರ ಮುಂದೆ ಏನು ಹೇಳಬೇಕೋ ಅದನ್ನು ದೇವಿ ಎಲ್ಲರ ಮುಂದೆ ಹೇಳಿದಳು, ನನ್ನ ಬಳಿ ಏನು ಹೇಳಬೇಕು ಎಂದುಕೊಂಡಿದ್ದಳೋ ಅದನ್ನು ಕಿವಿಯಲ್ಲಿ ಹೇಳಿದ್ದಾಳೆ. ಅದು ನನ್ನ ಮನೆಯ ರಹಸ್ಯ ಎಂದು ಪಾರ್ವತಿ ಹೇಳುತ್ತಾಳೆ. ಆ ರಹಸ್ಯ ಏನು ಎಂದು ತಿಳಿಯದೆ ವೀರಭದ್ರ ಸಿಟ್ಟಾಗುತ್ತಾನೆ.
ದೇವಿ ಹೇಳಿದಂತೆ ಪಾರ್ವತಿ ತನ್ನ ಅತ್ತೆಯನ್ನು ಹುಡುಕಲು ಆರಂಭಿಸುತ್ತಾಳಾ? ಕಣ್ಮರೆಯಾಗಿರುವ ಶಾರದಾ ಸಿಗುತ್ತಾಳಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಶ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್