ಅಣ್ಣಯ್ಯ ಧಾರಾವಾಹಿ: ಹಲ್ಲೆ ವಿಚಾರವಾಗಿ ಪೊಲೀಸರಿಗೆ ದೂರು ಕೊಟ್ಟ ಪಾರ್ವತಿ; ಗೋಡಂಬಿ ಸ್ಥಿತಿಗೆ ಕಾರಣರಾದವರ ಎದೆ ಬಗೆಯುತ್ತೇನೆಂದ ಶಿವಣ್ಣ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 190ನೇ ಎಪಿಸೋಡ್ನಲ್ಲಿ ಗೋಡಂಬಿ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ, ಅವರ ಎದೆ ಸೀಳುತ್ತೇನೆ ಎಂದು ಶಿವಣ್ಣ ಕೋಪಗೊಳ್ಳುತ್ತಾನೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 190ನೇ ಎಪಿಸೋಡ್ ಕಥೆ ಹೀಗಿದೆ. ಗೋಡಂಬಿ ಮೇಲೆ ಹಲ್ಲೆ ಮಾಡಲು ಬಂದ ಪರಶುವನ್ನು ಜಿಮ್ ಸೀನ ಹಾಗೂ ರಶ್ಮಿ ಹೊಡೆದು ಓಡಿಸುತ್ತಾರೆ. ಶಿವಣ್ಣನಿಗೆ ಈ ವಿಚಾರ ಗೊತ್ತಾದರೆ ಅವನು ಬೇಸರ ಮಾಡಿಕೊಳ್ಳುತ್ತಾನೆ ಎಂದು ಸೀನ ಆ ವಿಚಾರವನ್ನು ಮುಚ್ಚಿಡುತ್ತಾನೆ. ರಾಣಿ ಮಾಡಿ ಕಳಿಸಿದ ತಿಂಡಿಯನ್ನು ರಶ್ಮಿ ತಿಂದು ಖುಷಿ ಪಡುತ್ತಾಳೆ.
ಸೀನನ ಕಣ್ಣಿಗೆ ಆದ ಗಾಯದ ಬಗ್ಗೆ ವಿಚಾರಿಸಿದ ಕಾನ್ಸ್ಟೆಬಲ್
ಡಾಕ್ಟರ್ ಬಳಿ ಮಾತನಾಡಿಕೊಂಡು ಶಿವಣ್ಣ ಮತ್ತೆ ವಾರ್ಡ್ ಬಳಿ ಬರುತ್ತಾನೆ. ಗೋಡಂಬಿಯನ್ನು ಮಾತನಾಡಿಸಿ ಎದ್ದೇಳು ಗೋಡಂಬಿ, ಅಂಗಡಿ ಬಾಗಿಲು ತೆಗೆಯಬೇಕು ತಡವಾಯ್ತು ಎನ್ನುತ್ತಾನೆ. ಈ ರೀತಿ ಏಕೆ ಮಾತನಾಡುತ್ತೀಯ ಶಿವಣ್ಣ ಎಂದು ಸೀನ ಕೇಳುತ್ತಾನೆ, ಗೋಡಂಬಿಯನ್ನು ಆಗ್ಗಾಗ್ಗೆ ಈ ರೀತಿ ಮಾತನಾಡಿಸಿದರೆ ಅವನು ಬೇಗ ಗುಣಮುಖನಾಗುತ್ತಾನೆ ಎಂದು ಡಾಕ್ಟರ್ ಹೇಳಿರುವುದಾಗಿ ಶಿವಣ್ಣ ಹೇಳುತ್ತಾನೆ. ಅಷ್ಟರಲ್ಲಿ ಶಿವಣ್ಣನನ್ನು ಹುಡುಕಿಕೊಂಡು ಕಾನ್ಸ್ಟೆಬಲ್ ಬರುತ್ತಾರೆ. ಅದೇ ಸಮಯಕ್ಕೆ ಪಾರು ಕರೆ ಮಾಡುತ್ತಾಳೆ. ಗೋಡಂಬಿ ವಿಚಾರವಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೆ, ಅಲ್ಲಿಗೆ ಪೊಲೀಸ್ ಬಂದಿದ್ದರೆ ನೀನು ಸ್ಟೇಟ್ಮೆಂಟ್ ಕೊಡು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ ಎನ್ನುತ್ತಾಳೆ.
ಪಾರ್ವತಿ ಹೇಳಿದಂತೆ ಶಿವಣ್ಣ ಪೊಲೀಸರ ಬಳಿ ನಡೆದ ಘಟನೆಯನ್ನೆಲ್ಲಾ ಹೇಳುತ್ತಾನೆ. ಕಾನ್ಸ್ಟೆಬಲ್ ಸ್ಟೇಟ್ಮೆಂಟ್ ಪಡೆದ ನಂತರ ಶಿವಣ್ಣನ ಸಹಿ ಪಡೆಯುತ್ತಾರೆ. ಸೀನನ ಮುಖ ನೋಡಿ, ಯಾರು ಹಲ್ಲೆ ಮಾಡಿದ್ದು ಎಂದು ಕೇಳುತ್ತಾರೆ. ಯಾರೂ ಹಲ್ಲೆ ಮಾಡಿಲ್ಲ, ಜಾರಿ ಬಿದ್ದುಬಿಟ್ಟೆ ಎಂದು ಸೀನ ಸುಳ್ಳು ಹೇಳುತ್ತಾನೆ. ನಾನೇನು ನಿನ್ನ ಕಣ್ಣಿಗೆ ಮೂರ್ಖನಂತೆ ಕಾಣುತ್ತಿದ್ದೀನ, ನನಗೆ ಹಲ್ಲೆ ಯಾವುದು? ಅಪಘಾತ ಯಾವುದು ಎಂದು ಚೆನ್ನಾಗಿ ಗೊತ್ತಾಗುತ್ತದೆ, ಹಾಗೆಲ್ಲಾ ಗಲಾಟೆ ಮಾಡಿಕೊಳ್ಳಬಾರದು, ಪೊಲೀಸ್ ಕೇಸ್ ಆದರೆ ಕಷ್ಟವಾಗುತ್ತದೆ ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ. ಕಾನ್ಸ್ಟೆಬಲ್ ಹೇಳಿದ ಮಾತು ಕೇಳಿ ಶಿವಣ್ಣನಿಗೆ ಅನುಮಾನ ಉಂಟಾಗುತ್ತದೆ.
ಶಿವಣ್ಣ-ಸೀನನ ಮಾತುಕತೆ ಕೇಳಿ ಕಣ್ಣುಬಿಟ್ಟ ಗೋಡಂಬಿ
ನನ್ನ ಬಳಿ ಯಾವ ವಿಚಾರವನ್ನೂ ಮುಚ್ಚಿಡಬೇಡ ಸೀನ, ಏನಾಯ್ತು ಎಂದು ಹೇಳು ಎಂದು ಶಿವಣ್ಣ ಕೇಳುತ್ತಾನೆ. ಸೀನ ಹಿಂದಿನ ರಾತ್ರಿ ನಡೆದ ಘಟನೆಯನ್ನು ಶಿವಣ್ಣನ ಬಳಿ ವಿವರಿಸುತ್ತಾನೆ. ಆ ಮಾತು ಕೇಳಿ ಶಿವಣ್ಣ ಗಾಬರಿಯಾಗುತ್ತಾನೆ. ಈ ವಿಚಾರವನ್ನು ಪೊಲೀಸರಿಗೆ ಹೇಳಿ ಬರುತ್ತೇನೆ ಎಂದು ಹೋಗುತ್ತಾನೆ. ಈ ವಿಚಾರವನ್ನು ಶಿವಣ್ಣನ ಬಳಿ ಹೇಳಬಾರದಿತ್ತು. ಈಗ ಅವನು ಅದರ ಬಗ್ಗೆಯೇ ಯೋಚನೆ ಮಾಡುತ್ತಾನೆ ಎಂದು ರಶ್ಮಿ ಬಳಿ ಸೀನ ಹೇಳುತ್ತಾನೆ. ಪೊಲೀಸರಿಗೆ ಎಲ್ಲಾ ವಿಚಾರವನ್ನು ತಿಳಿಸಿ ಶಿವಣ್ಣ ಮತ್ತೆ ವಾರ್ಡ್ಗೆ ಬರುತ್ತಾನೆ. ಪಾರು ಹೇಳಿದಾಗ ನಾನು ನಂಬಲಿಲ್ಲ, ಆದರೆ ಗೋಡಂಬಿಗೆ ಯಾರೋ ಬೇಕೆಂತಲೇ ಹೀಗೆ ಮಾಡಿದ್ದಾರೆ ಎಂದು ಈಗ ಅನುಮಾನ ಬರುತ್ತಿದೆ, ಅದು ಯಾರು ಎಂದು ಗೊತ್ತಾದರೆ ಅವರನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ, ಅವರ ಎದೆ ಸೀಳಿಬಿಡುತ್ತೇನೆ ಎಂದು ಶಿವಣ್ಣ ಕೋಪಗೊಳ್ಳುತ್ತಾನೆ.
ಹಿಂದಿನ ದಿನ ಸೀನ ತನ್ನನ್ನು ಭಾವ ಎಂದು ಕರೆದಿದ್ದನ್ನು ಶಿವಣ್ಣ ನೆನಪಿಸಿಕೊಳ್ಳುತ್ತಾನೆ. ಮತ್ತೊಮ್ಮೆ ನನ್ನನ್ನು ಹಾಗೇ ಕರೆಯುವಂತೆ ಸೀನನ ಬಳಿ ಮನವಿ ಮಾಡುತ್ತಾನೆ. ಆ ವಿಚಾರ ಕೇಳಿ ರಶ್ಮಿಯೂ ಖುಷಿಯಾಗುತ್ತಾಳೆ. ಶಿವಣ್ಣನ ಬೇಡಿಕೆ ಮೇರೆಗೆ ಅವನನ್ನು ಸೀನ ಭಾವ ಎಂದು ಕರೆಯುತ್ತಾನೆ. ಅಷ್ಟರಲ್ಲಿ ಗೋಡಂಬಿ, ಕೈ ಬೆರಳುಗಳನ್ನು ಅಲುಗಾಡಿಸುತ್ತಾನೆ. ಮತ್ತೊಮ್ಮೆ ಭಾವ ಎಂದು ಕರೆಯುವುದಾಗಿ ರಶ್ಮಿ ಹೇಳುತ್ತಾಳೆ. ಸೀನ ಮುಜುಗರದಿಂದಲೇ ಭಾವ ಎನ್ನುತ್ತಾನೆ. ಪ್ರತಿ ಸಾರಿ ಅವನು ಭಾವ ಎಂದು ಕರೆದಾಗಲೆಲ್ಲಾ ಗೋಡಂಬಿ ಪ್ರತಿಕ್ರಿಯಿಸುತ್ತಾನೆ. ಅವನು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾನೆ. ನಾವು ಸಂತೋಷವಾಗಿದ್ದರೆ ಗೋಡಂಬಿ ಕೂಡಾ ಪ್ರತಿಕ್ರಿಯಿಸುತ್ತಾನೆ, ಅವನು ಬೇಗ ಗುಣಮುಖನಾಗುತ್ತಾನೆ ಅನ್ನೋದು ಶಿವಣ್ಣನಿಗೆ ಅರ್ಥವಾಗುತ್ತದೆ, ಮತ್ತೊಮ್ಮೆ ಇಬ್ಬರೂ ಭಾವ, ಬಾಮೈದ ಎಂದು ಹೇಳಿಕೊಂಡು ಅಪ್ಪಿಕೊಳ್ಳುತ್ತಾರೆ. ಆಗ ಗೋಡಂಬಿ ಕಣ್ಣುಬಿಡುತ್ತಾನೆ. ಆಸ್ಪತ್ರೆಗೆಯಿಂದ ಮನೆಗೆ ಬರುವ ಶಿವಣ್ಣ ಪಾರು ಬಳಿ ಗೋಡಂಬಿ ಪ್ರತಿಕ್ರಿಯಿಸಿದ್ದು, ಸೀನನ ಮೇಲೆ ಹಲ್ಲೆ ನಡೆದ ವಿಚಾರವನ್ನು ಪಾರ್ವತಿ ಬಳಿ ಹೇಳುತ್ತಾನೆ.
ಗೋಡಂಬಿ ಗುಣಮುಖನಾಗುತ್ತಾನಾ? ಅವನನ್ನು ಕೊಲ್ಲಲು ವೀರಭದ್ರ ಮಾಡುತ್ತಿರುವ ಹೊಸ ಕುತಂತ್ರ ಯಶಸ್ವಿಯಾಗುತ್ತಾ? ಸೋಮವಾರದ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ