ಅಣ್ಣಯ್ಯ: ಗೋಡಂಬಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆತಂದ ಶಿವಣ್ಣ; ಪಿಂಕಿಗೆ ತಾಳಿ ಕಟ್ಟಲು ನಿರಾಕರಿಸಿದ ಜಿಮ್ ಸೀನ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 192ನೇ ಎಪಿಸೋಡ್ನಲ್ಲಿ ಪಿಂಕಿಗೆ ತಾಳಿ ಕಟ್ಟಲು ಸೀನ ನಿರಾಕರಿಸುತ್ತಾನೆ. ಮತ್ತೊಂದೆಡೆ, ಗೋಡಂಬಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 192ನೇ ಎಪಿಸೋಡ್ ಕಥೆ ಹೀಗಿದೆ. ಯಾರೂ ಇಲ್ಲದೆ ಸಮಯ ನೋಡಿಕೊಂಡು ಪಿಂಕಿಯನ್ನು ಲೀಲಾ ಮನೆಗೆ ಕರೆತರುತ್ತಾಳೆ. ರಶ್ಮಿ ಬಟ್ಟೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ಸೀನನನ್ನು ಲೀಲಾ ತಡೆಯುತ್ತಾಳೆ. ನನಗೆ ಈಗಲೇ ತಾಳಿ ಕಟ್ಟುವಂತೆ ಪಿಂಕಿ ಹಟ ಹಿಡಿಯುತ್ತಾಳೆ. ಇತ್ತ ರಶ್ಮಿ ತಾನು ಅತ್ತೆ ಮನೆಯಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಗೋಡಂಬಿ ಬಳಿ ಹೇಳಿಕೊಂಡು ಅಳುತ್ತಾಳೆ. ನಾಗೇಗೌಡನ ಹೆಂಡತಿ ಇಂದ್ರಾಣಿ ಆರೋಗ್ಯ ಸರಿಯಿಲ್ಲ ಎಂದು ನೆಪ ಹೇಳಿಕೊಂಡು ಶಿವಣ್ಣನ ಮನೆಗೆ ಬಂದು ಇಲ್ಲದ ಕಥೆ ಕಟ್ಟಿ ಅನುಕಂಪ ಗಿಟ್ಟಿಸಿಕೊಳ್ಳುತ್ತಾಳೆ.
ಗೋಡಂಬಿ ಬಳಿ ರಶ್ಮಿ ಮಾತನಾಡುವಾಗ ಶಿವಣ್ಣ ಬರುತ್ತಾನೆ. ಏನವ್ವಾ ಇದು ರಶ್ಮಿ ಎಂದು ಶಿವಣ್ಣ ಕೇಳುತ್ತಾನೆ. ಅಣ್ಣನನ್ನು ನೋಡುತ್ತಿದ್ದಂತೆ ರಶ್ಮಿ ಗಾಬರಿಯಾಗುತ್ತಾಳೆ. ಶಿವಣ್ಣ ನನ್ನ ಮಾತನ್ನು ಕೇಳಿಸಿಕೊಂಡನಾ ಎಂದು ಭಯಪಡುತ್ತಾಳೆ. ಏನಣ್ಣ ಎಂದು ರಶ್ಮಿ ಕೇಳುತ್ತಾಳೆ. ಅಲ್ಲಿ ನೋಡು ಗೋಡಂಬಿ ಕೈ ಅಲುಗಾಡಿಸುತ್ತಿದ್ದಾನೆ ನೋಡಿಕೊಳ್ಳಬಾರದಾ ಎನ್ನುತ್ತಾನೆ. ಸದ್ಯ ಅಣ್ಣ ಏನೂ ಕೇಳಿಸಿಕೊಂಡಿಲ್ಲ ಎಂದು ರಶ್ಮಿ ಸಮಾಧಾನಗೊಳ್ಳುತ್ತಾಳೆ. ಗೋಡಂಬಿಯನ್ನು ನೋಡಿ ಶಿವಣ್ಣ ಖುಷಿಯಾಗಿ ಡಾಕ್ಟರ್ ಕರೆಯುತ್ತಾನೆ. ಇದು ಮಾಮೂಲು, ಅವರ ಬಳಿ ಖುಷಿಯಾದ ವಿಚಾರ ಮಾತನಾಡಿ ಎಂದು ಅದಕ್ಕೆ ನಾನು ಹೇಳಿದ್ದು, ಆದರೆ ಅವರಿಗೆ ಹೆಚ್ಚು ಒತ್ತಡ ಹೇರಬೇಡಿ. ಪಾರ್ವತಿಯಂಥ ಡಾಕ್ಟರ್ ಮನೆಯಲ್ಲೇ ಇರುವಾಗ ಇವರು ಇಲ್ಲಿ ಇರುವುದು ಬೇಡ, ಇವತ್ತು ಡಿಸ್ಚಾರ್ಜ್ ಮಾಡುತ್ತೇನೆ, ಮನೆಗೆ ಕರೆದುಕೊಂಡು ಹೋಗಿ ಎಂದು ಡಾಕ್ಟರ್ ಹೇಳುತ್ತಾರೆ.
ಸೀನನನ್ನು ತಮ್ಮ ದಾರಿಗೆ ಕರೆತರಲು ಲೀಲಾ, ಪಿಂಕಿ ಹೊಸ ಪ್ಲ್ಯಾನ್
ಇತ್ತ ಪಿಂಕಿ ಹಾಗೂ ತಾಯಿಯ ಬಲವಂತಕ್ಕೆ ಸೀನ ತಾಳಿ ಕಟ್ಟಲು ಹೋಗುತ್ತಾನೆ. ಆದರೆ ರಶ್ಮಿ ನೆನಪಾಗಿ ಇಲ್ಲ ನನ್ನ ಕೈಲಿ ಸಾಧ್ಯವಿಲ್ಲ. ನಾನು ಪಿಂಕಿಗೆ ಕದ್ದು ಮುಚ್ಚಿ ಏಕೆ ತಾಳಿ ಕಟ್ಟಬೇಕು. ಅವಳನ್ನು ನಾನು ಪ್ರೀತಿಸಿದ್ದೇನೆ, ಅಪ್ಪ ಬರಲಿ ಅವರ ಬಳಿ ಎಲ್ಲವನ್ನೂ ಹೇಳಿ ಎಲ್ಲರ ಎದುರೇ ತಾಳಿ ಕಟ್ಟುತ್ತೇನೆ. ಗೋಡಂಬಿ ನೋಡಲು ಆಸ್ಪತ್ರೆಗೆ ಹೋಗಬೇಕು ಎಂದು ಸೀನ ತಾಳಿಯನ್ನು ಪಿಂಕಿ ಕೈಗೆ ಕೊಟ್ಟು ಅಲ್ಲಿಂದ ಹೋಗುತ್ತಾನೆ. ಅಪ್ಪನ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಿದ್ದಾನೆ. ಹಾಗೇನಾದರೂ ಹೇಳಿದರೆ ನನ್ನ ಗಂಡ ಇವನ ಎದೆ ಸೀಳಿಬಿಡುತ್ತಾನೆ. ನಂತರ ಶಿವಣ್ಣ, ನಂತರ ಊರಿನವರು. ಈಗ ಏನು ಮಾಡುವುದು? ಟಿವಿಯಲ್ಲಿ, ಪೇಪರ್ನಲ್ಲಿ ಮಾಟ, ಮಂತ್ರ ವಶೀಕರಣದ ಬಗ್ಗೆ ತೋರಿಸುತ್ತಲೇ ಇರುತ್ತಾರೆ. ಸೀನನಿಗೂ ವಶೀಕರಣ ಮಾಡಿಸೋಣ ಎಂದು ಲೀಲಾ ಹೇಳುತ್ತಾಳೆ. ನನಗೆ ಅದೆಲ್ಲಾ ಗೊತ್ತಿಲ್ಲ ನನಗೆ ಸೀನ ಬೇಕು ಅಷ್ಟೇ ಎಂದು ಪಿಂಕಿ ಹೇಳುತ್ತಾಳೆ.
ಗೋಡಂಬಿಯನ್ನು ಶಿವಣ್ಣ ಮನೆಗೆ ಕರೆತಂದು ಹಾಲ್ನಲ್ಲಿ ಮಂಚ ಹಾಕಿಸಿ ಮಲಗಿಸುತ್ತಾನೆ. ಗೋಡಂಬಿ ಅಣ್ಣನನ್ನು ಯಾವುದಾದರೂ ರೂಮ್ನಲ್ಲಿ ಮಲಗಿಸೋಣ ಎಂದು ಪಾರ್ವತಿ ಹೇಳುತ್ತಾಳೆ. ಬೇಡ ಪಾರು ರೂಮ್ನಲ್ಲಿ ಅವನು ಒಬ್ಬನೇ ಇರುತ್ತಾನೆ, ಇಲ್ಲಾದರೆ ಒಬ್ಬರಲ್ಲಾ ಒಬ್ಬರು ಅವನನ್ನು ನೋಡಿಕೊಳ್ಳುತ್ತಾರೆ. ಆಗ ಗೋಡಂಬಿ ಬೇಗ ಗುಣಮುಖನಾಗುತ್ತಾನೆ ಎಂದು ಶಿವಣ್ಣ ಹೇಳುತ್ತಾನೆ. ಸೀನನಿಗೆ ಕಣ್ಣಿನ ಬಳಿ ಪೆಟ್ಟಾಗಿದ್ದರ ಬಗ್ಗೆ ಪಾರ್ವತಿ ವಿಚಾರಿಸುತ್ತಾಳೆ. ಅಂದು ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತಾಳೆ. ನಾನು ಅವನ ಮುಖ ನೋಡಲು ಸಾಧ್ಯವಾಗದಿದ್ರೂ ಸರಿಯಾಗಿ ಗಾಯ ಮಾಡಿದ್ದೇನೆ ಎಂದು ರಶ್ಮಿ ಹೇಳುತ್ತಾಳೆ. ನೀನು ಇಂಥ ವಿಚಾರದಲ್ಲಿ ಯಾವಾಗಲೂ ಜಾಣೆ ಗುಂಡು ಎಂದು ಪಾರ್ವತಿ ಹೊಗಳುತ್ತಾಳೆ, ಆದರೆ ಪಿಯುಸಿ ಪಾಸ್ ಆಗುವುದರಲ್ಲಿ ಮಾತ್ರ ಹಿಂದೆ ಎಂದು ಶಿವಣ್ಣ, ತಂಗಿ ಕಾಲೆಳೆಯುತ್ತಾನೆ. ಆ ಮಾತು ಕೇಳಿ ಎಲ್ಲರೂ ನಗುತ್ತಾರೆ.
ಚಿಕ್ಕಮನಿಗೆ ಡ್ರಾಪ್ ಮಾಡುವ ನೆಪದಲ್ಲಿ ಶಿವಣ್ಣನ ಮನೆಗೆ ಬಂದ ಪರಶು
ಗೋಡಂಬಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ವಿಚಾರ ವೀರಭದ್ರನಿಗೆ ತಿಳಿಯುತ್ತದೆ. ಅವನು ಸಾಯುವವರೆಗೂ ನಮಗೆ ಉಳಿಗಾಲವಿಲ್ಲ, ಆದಷ್ಟು ಬೇಗ ಏನಾದರೂ ಮಾಡಬೇಕು ಎಂದುಕೊಳ್ಳುತ್ತಾನೆ. ಅಷ್ಟರಲ್ಲಿ ಸುಶೀಲಾ ಅಲ್ಲಿಗೆ ಬಂದು ನಾನು ಗೋಡಂಬಿಯನ್ನು ನೋಡಲು ಶಿವಣ್ಣನ ಮನೆಗೆ ಹೋಗುತ್ತಿದ್ದೇನೆ ಎನ್ನುತ್ತಾಳೆ. ಅವನನ್ನು ಈ ಪರಿಸ್ಥಿತಿಯಲ್ಲಿ ನೋಡುವುದು ನನಗೆ ಇಷ್ಟವಿಲ್ಲ. ನಾನು ಬರುವುದಿಲ್ಲ, ನೀನೂ ಹೋಗಬೇಡ ಎನ್ನುತ್ತಾನೆ. ನಿಮ್ಮ ಮಾತು ಕೇಳಲು ನನಗೆ ಇಷ್ಟವಿಲ್ಲದಿದ್ದರೂ ಊರಿನವರು ಪ್ರಶ್ನೆ ಕೇಳಬಾರದು ಎಂಬ ಕಾರಣಕ್ಕೆ ಸುಮ್ಮನಾಗುತ್ತಿದ್ದೇನೆ ಎಂದು ಸುಶೀಲಾ ಸುಮ್ಮನಾಗುತ್ತಾಳೆ. ಅವಳು ಒಬ್ಬಳೇ ಕುಳಿತಿದ್ದಾಗ ಪರಶು ಬಂದು ಚಿಕ್ಕಮ್ಮ ಅಪ್ಪನಿಗೆ ಗೊತ್ತಿಲ್ಲದೆ ಹಾಗೆ ಶಿವಣ್ಣನ ಮನೆಗೆ ಕರೆದೊಯ್ಯುತ್ತೇನೆ ಬನ್ನಿ ಎಂದು ಕರೆದೊಯ್ಯುತ್ತಾನೆ. ಶಿವಣ್ಣನ ಮನೆಯರವರ ಬಳಿ ಸುಶೀಲಾ ಮಾತನಾಡುತ್ತಿದ್ದರೆ ಪರಶು ಮಾತ್ರ ಗೋಡಂಬಿ ಬಳಿ ಹೋಗುತ್ತಾನೆ.
ಶಿವಣ್ಣನ ಮನೆಯಲ್ಲೇ ಪರಶು ಗೋಡಂಬಿಯನ್ನು ಕೊಲ್ಲುತ್ತಾನಾ? ಸೀನನನ್ನು ಪಡೆಯಲು ಪಿಂಕಿ ಮತ್ತೇನು ಪ್ಲ್ಯಾನ್ ಮಾಡುತ್ತಾಳೆ? ಅಣ್ಣಯ್ಯ ಸೀರಿಯಲ್ನ ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ