ಅಣ್ಣಯ್ಯ: ಪರಶುನಲ್ಲಾದ ಬದಲಾವಣೆ ಕಂಡು ಆಶ್ಚರ್ಯಗೊಂಡ ಮನೆ ಮಂದಿ; ಮನುಗೆ ರಾಣಿಯೇ ತಕ್ಕ ಜೋಡಿ ಎಂದು ನಿರ್ಧರಿಸಿದ ಇಂದ್ರಾಣಿ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 193ನೇ ಎಪಿಸೋಡ್ನಲ್ಲಿ ಚಿಕ್ಕಮ್ಮನನ್ನು ಕರೆದುಕೊಂಡು ಶಿವಣ್ಣನ ಮನೆಗೆ ಪರಶು ಬರುತ್ತಾನೆ. ಮತ್ತೆ ಅಲ್ಲಿ ಗೋಡಂಬಿಯನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 193ನೇ ಎಪಿಸೋಡ್ ಕಥೆ ಹೀಗಿದೆ. ಪಿಂಕಿಗೆ ತಾಳಿ ಕಟ್ಟಲು ಜಿಮ್ ಸೀನ ನಿರಾಕರಿಸುತ್ತಾನೆ. ಶಿವಣ್ಣನ ಮನೆಗೆ ಬರುವ ಇಂದ್ರಾಣಿ, ಮೊಸಳೆ ಕಣ್ಣೀರು ಸುರಿಸಿ ಪಾರ್ವತಿ ಬಳಿ ಒಳ್ಳೆಯವಳಂತೆ ನಟಿಸುತ್ತಾಳೆ. ಚಿಕ್ಕಮ್ಮನನ್ನು ಡ್ರಾಪ್ ಮಾಡುವ ನೆಪದಲ್ಲಿ ಪರಶು ಕೂಡಾ ಶಿವು ಮನೆಗೆ ಬರುತ್ತಾನೆ. ಎಲ್ಲರೂ ಕಷ್ಟ ಸುಖ ಮಾತನಾಡುತ್ತಿದ್ದರೆ ಪರಶು ಮಾತ್ರ ಗೋಡಂಬಿಯನ್ನು ಹುಡುಕಿ ಬಂದು ಅವನ ಬಳಿ ಕೂರುತ್ತಾನೆ.
ಈ ಬಾರಿಯೂ ಶಿವಣ್ಣನಿಂದ ತಪ್ಪಿಸಿಕೊಂಡ ಪರಶು
ಮನೆಗೆ ಚಿಕ್ಕಮ್ಮ ಬಂದಿದ್ದನ್ನು ನೋಡಿ ಪಾರ್ವತಿ ಖುಷಿಯಾಗುತ್ತಾಳೆ. ಎಲ್ಲರೂ ಮಾತನಾಡುವಾಗ ರಾಣಿ ಕೂಡಾ ಅಲ್ಲಿಗೆ ಬರುತ್ತಾಳೆ. ಆದರೆ ಪರಶು ಮಾತ್ರ ಗೋಡಂಬಿ ಬಳಿ ಹೋಗಿ, ಯಮ ಕರೆದರೂ ನೀನು ಹೋಗುತ್ತಿಲ್ಲ, ಆದರೆ ಈಗ ಆ ರೀತಿ ಅಲ್ಲ ನಿನಗಾಗಿ ನಾನು ಟಾನಿಕ್ ತಂದಿದ್ದೇನೆ, ಇದನ್ನು ಕುಡಿದುಬಿಡು, ಒಂದೇ ಸಲ ಪ್ರಾಣ ಹೋಗುತ್ತದೆ ಎಂದು ತಾನು ತಂದ ಔಷಧಿಯನ್ನು ಗೋಡಂಬಿಗೆ ಕುಡಿಸಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಗೋಡಂಬಿ ಎಚ್ಚರವಾಗಿ ಪರಶು ಕೈ ಹಿಡಿಯುತ್ತಾನೆ. ಪರಶು ಗಾಬರಿಯಿಂದ ಅವನಿಗೆ ಹೊಡೆಯುತ್ತಾನೆ. ಗೋಡಂಬಿ ಕೈ ಕಾಲು ಅಲುಗಾಡಿಸುವುದನ್ನು ಗಮನಿಸಿದ ಗೊರಕೆ ಆ ವಿಚಾರವನ್ನು ಶಿವಣ್ಣನಿಗೆ ಹೇಳುತ್ತಾನೆ. ಶಿವಣ್ಣ ಖುಷಿಯಿಂದ ಗೋಡಂಬಿ ಬಳಿ ಓಡೋಡಿ ಬರುತ್ತಾನೆ. ಗೋಡಂಬಿ ನನ್ನ ಜೊತೆ ಮಾತನಾಡುತ್ತಿದ್ದಾನೆ ನೋಡು ಶಿವಣ್ಣ ಎಂದು ಪರಶು ನಾಟಕವಾಡುತ್ತಾನೆ.
ಎಲ್ಲರೂ ಬಂದು ನೋಡುವಷ್ಟರಲ್ಲಿ ಗೋಡಂಬಿ ಮತ್ತೆ ಪ್ರಜ್ಞೆ ತಪ್ಪುತ್ತಾನೆ. ಗೋಡಂಬಿ ಮೇಲೆ ಹಲ್ಲೆ ಮಾಡಲು ಆಸ್ಪತ್ರೆಗೆ ಬಂದಿದ್ದು ಯಾರು ಅಂತ ಗೊತ್ತಾಯ್ತಾ ಎಂದು ಸುಶೀಲಾ ಕೇಳುತ್ತಾಳೆ. ಯಾರೋ ಅಲ್ಲ ಅದು ಪರಶುನೇ ಎಂದು ಸೀನ ಹೇಳುತ್ತಾನೆ. ರಶ್ಮಿ ಕೂಡಾ ಅದೇ ಮಾತು ಹೇಳುತ್ತಾಳೆ. ಅದನ್ನು ಕೇಳಿ ಪರಶುಗೆ ನಡುಕ ಶುರುವಾಗುತ್ತದೆ. ಉಳಿದವರು ಆಶ್ಚರ್ಯಗೊಳ್ಳುತ್ತಾರೆ. ಅವನನ್ನು ನಮ್ಮ ಪರಶು ಪಕ್ಕ ನಿಲ್ಲಿಸಿದರೆ ಇಬ್ಬರೂ ಅಣ್ಣ ತಮ್ಮಂದಿರಂತೆ ಕಾಣುತ್ತಾರೆ, ಇಬ್ಬರೂ ಒಂದೇ ಹೈಟ್, ಪರ್ಸನಾಲಿಟಿ ಎಂದು ರಶ್ಮಿ ಹಾಗೂ ಸೀನ ಹೇಳುತ್ತಾರೆ. ಅವನು ಬಂದಾಗ ನಮ್ಮ ಪರಶು ಇರಬೇಕಿತ್ತು, ಅವನನ್ನು ತುಳಿದುಬಿಡುತ್ತಿದ್ದ ಎಂದು ಶಿವಣ್ಣ ಹೇಳುತ್ತಾನೆ.
ರಾಣಿ ಬಗ್ಗೆ ನಾಗೇಗೌಡನ ಬಳಿ ಹೇಳಿಕೊಂಡು ಖುಷಿಪಟ್ಟ ಇಂದ್ರಾಣಿ
ಅಷ್ಟರಲ್ಲಿ ರಾಣಿ ಎಲ್ಲರಿಗೂ ಪ್ರಸಾದ ಹಂಚುತ್ತಾಳೆ. ಈ ಪ್ರಸಾದವನ್ನು ಕೈಯಲ್ಲಿ ಹಿಡಿದು ಒಂದು ಮಾತು ಹೇಳುತ್ತೇನೆ. ಗೋಡಂಬಿ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದವನು ಸಿಕ್ಕ ದಿನ ಅವನ ಕರುಳನ್ನು ಬಗೆದು ಹಾರ ಮಾಡಿಕೊಳ್ಳುತ್ತೇನೆ ಎಂದು ಶಿವಣ್ಣ ಆವೇಶದಿಂದ ಹೇಳುತ್ತಾನೆ. ಅವನ ಮಾತು ಕೇಳಿ ಪರಶು ಗಾಬರಿಯಾಗುತ್ತಾನೆ. ಅವನಿಗೆ ಹೊಡೆದು ನಾನು ಬಲಕೈಗೆ ಗಾಯ ಮಾಡಿದ್ದೇನೆ ಎಂದು ರಶ್ಮಿ ಹೇಳುತ್ತಾಳೆ. ಅದೇ ಸಮಯಕ್ಕೆ ಪರಶು ಪ್ರಸಾದ ಪಡೆಯಲು ಕೈ ಚಾಚುತ್ತಾನೆ, ರಶ್ಮಿ ಆ ಮಾತು ಹೇಳುತ್ತಿದ್ದಂತೆ ಕೈ ಮುಚ್ಚಿಕೊಳ್ಳುತ್ತಾನೆ. ಬೆಳಗ್ಗೆ ನಾನ್ ವೆಜ್ ತಿಂದಿದ್ದೆ ಅದಕ್ಕೆ ಪ್ರಸಾದ ಬೇಡ ಎಂದು ಹೇಳುತ್ತಾನೆ. ನೀನು ದೇವರನ್ನು ನಂಬುತ್ತೀಯ ಎಂದು ಪಾರು ಕೇಳುತ್ತಾಳೆ. ಹೌದು ಇತ್ತೀಚೆಗೆ ಇವನು ಬಹಳ ಬದಲಾಗಿದ್ದಾನೆ, ಇತ್ತೀಚೆಗೆ ಪಕ್ಕದ ಊರಿನಲ್ಲಿ ಸಾವಿರಾರು ಮಂದಿ ಜನರಿಗೆ ಅನ್ನದಾನ ಮಾಡಿಸಿದ್ದಾನೆ ಎಂದು ಸುಶೀಲಾ ಹೇಳುತ್ತಾಳೆ. ಅದನ್ನು ಕೇಳಿ ಪಾರ್ವತಿ, ರತ್ನ ಇಬ್ಬರೂ ಪರಶು ನಿಜಕ್ಕೂ ಇಷ್ಟು ಬದಲಾಗಿದ್ದಾನಾ ಎಂದುಕೊಳ್ಳುತ್ತಾರೆ.
ಮತ್ತೊಂದೆಡೆ ಇಂದ್ರಾಣಿ ತನ್ನ ಗಂಡ ನಾಗೇಗೌಡನ ಬಳಿ ಮನುಗೆ ತಕ್ಕ ಒಂದು ಹುಡುಗಿ ನೋಡಿದ್ದೇನೆ, ಅದು ಶಿವಣ್ಣನ ತಂಗಿ ರಾಣಿ, ಅವಳು ಶತದಡ್ಡಿ. ಒಂದು ವೇಳೆ ಅವಳೇನಾದರೂ ಮನು ಮದುವೆ ಆದರೆ ಆಸ್ತಿಯೆಲ್ಲಾ ಖಂಡಿತ ನಮಗೆ ಸಿಕ್ಕಂತೆ ಎಂದು ಹೇಳಿಕೊಂಡು ಖುಷಿಯಾಗುತ್ತಾಳೆ. ಸೋಮೇಗೌಡ , ನಾಗೇಗೌಡ ಕೂಡಾ ಇಂದ್ರಾಣಿ ಮಾತು ನಂಬುತ್ತಾರೆ. ಆ ಹುಡುಗಿಗೆ ಲೆಕ್ಕ ಬರುವುದಿಲ್ಲ, ಯಾರ ತಂಟೆಗೂ ಹೋಗುವುದಿಲ್ಲ, ಲೋಕಜ್ಞಾನವಂತೂ ಇಲ್ಲವೇ ಇಲ್ಲ ಎಂದು ಇಂದ್ರಾಣಿ ಹೇಳುತ್ತಾಳೆ. ಆದರೆ ರಾಣಿ ತಾನು ಅಂದುಕೊಂಡಂತೆ ಅಲ್ಲ ಅನ್ನೋದು ಇಂದ್ರಾಣಿಗೆ ಗೊತ್ತಾಗುವುದಿಲ್ಲ. ಮನು ಹಾಗೂ ಅವನ ತಾಯಿಯನ್ನು ಕರೆದು ಮನುವಿಗೆ ಮದುವೆ ವಯಸ್ಸಾಯ್ತು ಅವನಿಗೆ ಹೆಣ್ಣು ನೋಡುತ್ತಿದ್ದೇವೆ. ಆದಷ್ಟು ಬೇಗ ಮದುವೆ ಮಾಡಿಬಿಡೋಣ ಎಂದು ಇಂದ್ರಾಣಿ ಹೇಳುತ್ತಾಳೆ. ಅವರ ಕುತಂತ್ರ ತಿಳಿದಿರುವ ಮನು ತಾಯಿ, ದಯವಿಟ್ಟು ನನ್ನ ಮಗನಿಗೆ ಮದುವೆ ಬೇಡ ಎನ್ನುತ್ತಾಳೆ.
ಪರಶು ಅಸಲಿ ಮುಖ ಬಯಲಾಗುವುದು ಯಾವಾಗ? ಮನುಗೆ ಮದುವೆ ಮಾಡಲು ಅವನ ತಾಯಿ ಒಪ್ಪುತ್ತಾಳಾ? ನಾಗೇಗೌಡನ ಮನೆಗೆ ರಾಣಿ ಸೊಸೆಯಾಗಿ ಹೋಗುತ್ತಾಳಾ? ಎಲ್ಲಾ ಪ್ರಶ್ನೆಗಳಿಗೂ ಶೀಘ್ರದಲ್ಲೇ ಉತ್ತರ ದೊರೆಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ