ಅಣ್ಣಯ್ಯ: ಆಸ್ಪತ್ರೆಗೆ ಕೆಲಸಕ್ಕೆ ಹೋಗುವಂತೆ ಹೆಂಡತಿಯನ್ನು ಪ್ರೋತ್ಸಾಹಿಸಿದ ಶಿವು; ಅಂಗಡಿಯಲ್ಲಿ ಪೊಟ್ಟಣ ಕಟ್ಟಲು ನಿಂತ ಪಾರ್ವತಿ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 194ನೇ ಎಪಿಸೋಡ್ನಲ್ಲಿ ಆಸ್ಪತ್ರೆಗೆ ಡಾಕ್ಟರ್ ಕೆಲಸಕ್ಕೆ ಹೋಗುವಂತೆ ಹೆಂಡತಿಗೆ ಶಿವು ಪ್ರೋತ್ಸಾಹಿಸುತ್ತಾನೆ. ಆದರೆ ಪಾರ್ವತಿ ನಿರಾಕರಿಸುತ್ತಾಳೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 194ನೇ ಎಪಿಸೋಡ್ ಕಥೆ ಹೀಗಿದೆ. ಚಿಕ್ಕಮ್ಮನನ್ನು ಡ್ರಾಪ್ ಮಾಡುವ ನೆಪದಲ್ಲಿ ಶಿವಣ್ಣನ ಮನೆಗೆ ಬರುವ ಪರಶು ಅಲ್ಲಿಯೂ ಕೊಲೆ ಮಾಡಲು ಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ದೇವರ ಪ್ರಸಾದ ಪಡೆಯಲು ಪರಶು ಕೈ ಚಾಚಿದಾಗ, ರಶ್ಮಿ ತನ್ನ ಕೈಗೆ ಮಾಡಿದ್ದ ಗಾಯ ನೋಡಿ ಕೈ ಹಿಂದಕ್ಕೆ ತೆಗೆದುಕೊಳ್ಳುತ್ತಾನೆ. ಬೆಳಗ್ಗೆ ನಾನ್ ವೆಜ್ ತಿಂದಿದ್ದೆ ಆದ್ದರಿಂದ ಪ್ರಸಾದ ಬೇಡ ಎನ್ನುತ್ತಾನೆ. ಪರಶುನಲ್ಲಾದ ಬದಲಾವಣೆ ಕಂಡು ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ.
ಪರಶುನಲ್ಲಾದ ಬದಲಾವಣೆಯನ್ನು ಗಮನಿಸಿದ ರತ್ನ
ಮನೆಯಲ್ಲಿ ಹೆಂಡತಿಯರು ಇಲ್ಲದ್ದನ್ನು ನೋಡಿದಾಗ ನನಗೆ ಹೇಳದೆ ಎಲ್ಲರೂ ಶಿವು ಮನೆಗೆ ಹೋಗಿರಬಹುದು, ಮತ್ತೊಂದೆಡೆ ಪರಶು ಕೂಡಾ ಕಾಣುತ್ತಿಲ್ಲ ಅವನಿಗೆ ಫೋನ್ ಮಾಡು ಎಂದು ಛತ್ರಿಗೆ ಹೇಳುತ್ತಾನೆ. ಇತ್ತ ಶಿವಣ್ಣನ ಮನೆಯಲ್ಲಿ ಎಲ್ಲರೂ ಊಟ ಮುಗಿಸಿ ಮಾತನಾಡುತ್ತಾರೆ. ಅಪ್ಪನ ಫೋನ್ ರಿಸೀವ್ ಮಾಡಿದ ಪರಶು ನಾನು ಕಲ್ಲು ಕ್ವಾರಿಯಲ್ಲಿದ್ದೇನೆ, ಅಮ್ಮ ಬಹುಶ: ದೇವಸ್ಥಾನಕ್ಕೆ ಹೋಗಿರಬಹುದು, ಬರುವಾಗ ಅವರನ್ನು ನಾನೇ ಕರೆದುತರುತ್ತೇನೆ ಎನ್ನುತ್ತಾನೆ. ಅವನ ಮಾತನ್ನು ಕೇಳಿಸಿಕೊಳ್ಳುವ ಪಾರ್ವತಿ ಅಮ್ಮಂದಿರು ನನ್ನ ಮನೆಗೆ ಬರಬಾರದಾ ಎಂದು ಕೇಳುತ್ತಾಳೆ. ಹಾಗೆಲ್ಲ ಇಲ್ಲ, ನಿಮ್ಮ ತಂದೆ ಕೂಡಾ ಇಲ್ಲಿಗೆ ಬರಬೇಕು ಎಂದುಕೊಂಡಿದ್ದರು. ಅಷ್ಟರಲ್ಲಿ ಅವರಿಗೆ ಬೇರೆ ಕೆಲಸ ಬಂತು, ತಡವಾಗುತ್ತದೆ ಎಂದು ನಾನು ಇಲ್ಲಿಗೆ ಬಂದುಬಿಟ್ಟೆ, ಅದಕ್ಕೆ ಪರಶು ಹಾಗೆ ಹೇಳುತ್ತಿದ್ದಾನೆ ಎನ್ನುತ್ತಾಳೆ.
ಸುಶೀಲಾ ಹಾಗೂ ಪರಶು ಇಬ್ಬರೂ ಶಿವಣ್ಣನ ಮನೆಯಿಂದ ಹೊರಡುತ್ತಾರೆ. ಅವನನ್ನು ಗಮನಿಸುವ ರತ್ನ, ಇತ್ತೀಚೆಗೆ ಪರಶು ಬಹಳ ಬದಲಾಗಿದ್ದಾನೆ, ಇದಕ್ಕೆಲ್ಲಾ ಏನು ಕಾರಣ ಇರಬಹುದು ಎಂದು ಮನಸ್ಸಿನಲ್ಲಿ ಯೋಚಿಸುತ್ತಾಳೆ. ಮನೆಗೆ ಬರುವ ಸುಶೀಲಾ ಮಗ ಪರಶುನನ್ನು ಕರೆದು ನಿನ್ನ ಬಳಿ ನೇರವಾಗಿ ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರ ಹೇಳು ಎನ್ನುತ್ತಾಳೆ. ಮನೆಯಲ್ಲಿದ್ದಾಗಲೂ ನಮ್ಮ ಮೊಬೈಲ್ ಫೋನ್ ಕಸಿದುಕೊಂಡು ನಮಗೆ ಹೊರಗೆ ಎಲ್ಲೂ ಹೋಗಲು ಬಿಡದಿದ್ದ ನೀನು ಈಗ ಇಷ್ಟು ಬದಲಾಗಲು ಕಾರಣ ಏನು ಎನ್ನುತ್ತಾಳೆ. ಚಿಕ್ಕಮ್ಮ ನಾನು ಮೊದಲಿನಂತೆ ಅಲ್ಲ, ನೀವು ಎಲ್ಲೇ ಹೋಗುವುದಿದ್ದರೂ ನನಗೆ ಹೇಳಿ, ನಾನೇ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಪರಶು ಕೊಟ್ಟ ಉತ್ತರದಿಂದ ಸುಶೀಲಾಗೆ ಅನುಮಾನ ಪರಿಹಾರವಾಗುವುದಿಲ್ಲ.
ಪಾರ್ವತಿಗಾಗಿ ಆಸ್ಪತ್ರೆ ಕಟ್ಟಿಸುವ ಆಸೆ ವ್ಯಕ್ತಪಡಿಸಿದ ಶಿವಣ್ಣ
ಸಂಜೆ ಗೋಡಂಬಿಯನ್ನು ಚೆಕಪ್ ಮಾಡುವ ಪಾರ್ವತಿ ಅವನಿಗೆ ಇಂಜೆಕ್ಷನ್ ಕೊಡುತ್ತಾಳೆ. ಆಸ್ಪತ್ರೆಯಲ್ಲಿ ಡಾಕ್ಟರ್ ನಿನ್ನ ಕೈಗುಣವನ್ನು ಬಹಳ ಹೊಗಳುತ್ತಿದ್ದರು. ಪಾರು ನೀನು ಇಷ್ಟು ಓದಿ ಸುಮ್ಮನೆ ಮನೆಯಲ್ಲಿ ಇರುವುದು ನನಗೆ ಇಷ್ಟವಿಲ್ಲ. ನೀನು ಆಸ್ಪತ್ರೆ ಕೆಲಸಕ್ಕೆ ಹೋಗು ಎನ್ನುತ್ತಾನೆ. ಆದರೆ ಪಾರು ಅದನ್ನು ನಿರಾಕರಿಸುತ್ತಾಳೆ. ಸದ್ಯಕ್ಕೆ ಈ ಮನೆಯೇ ನನ್ನ ಪ್ರಪಂಚ, ಆಗ ಮದುವೆ ಆಗಿರಲಿಲ್ಲ, ಈಗ ಮದುವೆ ಆಗಿದೆ. ನಾನು ಕೆಲಸಕ್ಕೂ ಹೋಗಿ ಅಲ್ಲಿಂದ ಮನೆಗೆ ಬಂದು ನನ್ನ ನಾದಿನಿಯರನ್ನು, ಮಾವನನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಮುಂದೆ ಮಕ್ಕಳಾದರೆ ಕಷ್ಟ ಆಗುತ್ತೆ ಎನ್ನುತ್ತಾಳೆ. ಆ ಮಾತು ಕೇಳಿ ಎಲ್ಲರೂ ಖುಷಿ ಆಗುತ್ತಾರೆ. ನೀವು ಅಂದುಕೊಂಡಂತೆ ಏನೂ ಆಗಿಲ್ಲ. ಮುಂದೆ ನೋಡೋಣ ಎಂದು ಶಿವು ಹೇಳುತ್ತಾನೆ.
ಮರುದಿನ ಪಾರ್ವತಿ ಅಂಗಡಿಗೆ ಬರುತ್ತಾಳೆ. ಶಿವು ಮಾತ್ರ ಪುಟ್ಟ ಮಕ್ಕಳಂತೆ ಕೋಪ ಮಾಡಿಕೊಂಡು ಕೂರುತ್ತಾನೆ. ಏನಾಯ್ತು ಮಾವ ಎಂದು ಪಾರು ಕೇಳುತ್ತಾಳೆ. ನೀನು ಕೆಲಸಕ್ಕೆ ಹೋಗಲು ಒಪ್ಪುತ್ತಿಲ್ಲವಲ್ಲ ಅದಕ್ಕೆ ಬೇಜಾರು ಎಂದು ಶಿವು ಹೇಳುತ್ತಾನೆ. ನಾನು ನಿನಗೆ ಸಹಾಯ ಮಾಡಬೇಕು. ಗೋಡಂಬಿ ಅಣ್ಣಗೆ ಆರೋಗ್ಯ ಸರಿ ಇಲ್ಲ, ಅವರು ಚೇತರಿಕೆ ಕಂಡು ಈ ಅಂಗಡಿಗೆ ಬರುವವರೆಗೂ ನಾನು ಇಲ್ಲಿ ಪೊಟ್ಟಣ ಕಟ್ಟುತ್ತೇನೆ ಎನ್ನುತ್ತಾಳೆ. ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ, ನಿನಗಾಗಿ ಒಂದು ಆಸ್ಪತ್ರೆ ಕಟ್ಟಿಸಿಕೊಡುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ. ಮಾವ ಅದೆಲ್ಲಾ ಅಂದುಕೊಂಡಷ್ಟು ಸುಲಭವಲ್ಲ, ಆಸ್ಪತ್ರೆ ಕಟ್ಟುವುದು ಬಹಳ ಕಷ್ಟ, ಅದಕ್ಕೆ ಬಹಳ ಹಣ ಬೇಕು ಎಂದು ಪಾರು ಹೇಳುತ್ತಾಳೆ. ನನ್ನ ಕಿಡ್ನಿ ಮಾರಿಯಾದರೂ ಹಣ ಹೊಂದಿಸುತ್ತೇನೆ ಎಂದು ಶಿವಣ್ಣ ಹೇಳಿದ ಮಾತಿಗೆ ಪಾರ್ವತಿ ಬೇಸರಕೊಳ್ಳುತ್ತಾಳೆ. ಶಿವಣ್ಣ ಆಸ್ಪತ್ರೆ ಕಟ್ಟಿಸಲು ಪಾರ್ವತಿ ಒಪ್ಪುತ್ತಾಳಾ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ