Amruthadhaare: ಜಾತಕದೋಷ ಷಡ್ಯಂತ್ರದ ಮಾತು ಮಲ್ಲಿ ಕಿವಿಗೆ ಬಿತ್ತು; ಶಕುಂತಲಾದೇವಿಯ ಚಳಿ ಬಿಡಿಸಲಿದ್ದಾರೆ ಭೂಮಿಕಾ
Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಮುಂದಿನ ಎಪಿಸೋಡ್ ಕುರಿತು ಝೀ5 ಒಟಿಟಿಯಲ್ಲಿ ಪ್ರಮೋ ಹಂಚಿಕೊಳ್ಳಲಾಗಿದೆ. ಇಲ್ಲಿ ಶಕುಂತಲಾದೇವಿ ಮತ್ತು ಅಶ್ಚಿನಿ ಮಾತನಾಡುತ್ತ ಇರುವಾಗ ಮಲ್ಲಿ ಕಿವಿಗೆ ಷಡ್ಯಂತ್ರದ ಮಾತುಗಳು ಕೇಳಿಸಿವೆ.

Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ಅಂದರೆ ಮಂಗಳವಾರದ ಸಂಚಿಕೆಯಲ್ಲಿ ರೋಚಕ ಸಂಗತಿಯೊಂದು ಪ್ರೇಕ್ಷಕರಿಗೆ ಕಾದಿದೆ. ಇಲ್ಲಿಯವರೆಗೆ ಶಕುಂತಲಾದೇವಿಯ ಅನಾರೋಗ್ಯ ಮತ್ತು ಜಾತಕದ ನಾಟಕ ಅರಿಯದ ಭೂಮಿಕಾಳಿಗೆ ಸದ್ಯದಲ್ಲಿಯೇ ಸತ್ಯ ಸಂಗತಿ ತಿಳಿಯಲಿದೆ. ಏಕೆಂದರೆ, ಶಕುಂತಲಾದೇವಿಯ ಕಪಟ ನಾಟಕದ ವಿಷಯ ಮಲ್ಲಿ ಕಿವಿಗೆ ಬಿದ್ದಿರುತ್ತದೆ.
ಒಂದೆಡೆ ಉರುಳು ಸೇವೆ, ನೆಲದ ಮೇಲೆ ಊಟ ಮಾಡಿದ ಗೌತಮ್ನ ಕಷ್ಟ ನೋಡಿ ಭೂಮಿಕಾ ಅಳುತ್ತಾಳೆ. ಯಾಕೆ ಇಷ್ಟು ಕಷ್ಟ ಪಡುವಿರಿ ಎಂದು ಹೇಳುತ್ತಾಳೆ. ಭೂಮಿಕಾಳಿಗೆ ಇರುವ ಜಾತಕ ದೋಷದಿಂದ ಪಾರಾಗಲು ಗೆಳೆಯ ಆನಂದನ ಸಲಹೆಯಂತೆ ಗೌತಮ್ ದೇವಾಲಯದಲ್ಲಿ ಹರಕೆ ಹೊತ್ತಿರುತ್ತಾನೆ. ಆ ಹರಕೆಯನ್ನು ಈಡೇರಿಸುತ್ತಾನೆ. ರಾಜನಂತೆ ಇದ್ದ ಗೌತಮ್ ದೀವಾನ್ ನೆಲದ ಮೇಲೆ ಉರುಳು ಸೇವೆ ಮಾಡುವುದನ್ನು ನೋಡಿ ಭೂಮಿಕಾ ಕಣ್ಣೀರಿಟ್ಟಿದ್ದಾರೆ. ಇದೇ ಸಮಯದಲ್ಲಿ ಖಾಲಿ ನೆಲದ ಮೇಲೆ ಅನ್ನ ತಿನ್ನುವ ಹರಕೆಯನ್ನು ನೋಡಿ ಇವರ ದುಃಖ ಮೇರೆಮೀರಿದೆ.
ಆದರೆ, ಈ ಎಲ್ಲಾ ಹರಕೆ ತನ್ನ ಒಳಿತಿಗಾಗಿ ಎಂದು ಭೂಮಿಕಾಳಿಗೆ ತಿಳಿದಿಲ್ಲ. ಜತೆಗೆ, ಈ ರೀತಿ ಜಾತಕ ದೋಷವೇ ಇಲ್ಲ. ಈ ರೀತಿ ದೋಷ ಇರುವುದಾಗಿ ಶಕುಂತಲಾದೇವಿಯು ಗುರುಗಳ ಬಾಯಲ್ಲಿ ಹೇಳಿಸಿರುತ್ತಾರೆ ಎಂದು ಗೌತಮ್ಗೆ ತಿಳಿದಿಲ್ಲ. ಗೌತಮ್ ಮತ್ತು ಭೂಮಿಕಾ ಒಬ್ಬರಿಗೊಬ್ಬರು ತಮ್ಮದೇ ರೀತಿಯಲ್ಲಿ ಪ್ರಪೋಸ್ ಮಾಡಲು ಕಾಯುತ್ತಿರುವಾಗ ಅದನ್ನು ಸಹಿಸದ ಶಕುಂತಲಾದೇವಿ ಅನಾರೋಗ್ಯದ ನಾಟಕವಾಡಿರುತ್ತಾರೆ. ಜತೆಗೆ ಜ್ಯೋತಿಷಿಯ ಮುಖಾಂತರ ಸುಳ್ಳು ಹೇಳಿಸಿರುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಮಲ್ಲಿಗೆ ತಿಳಿಯಿತು ಸತ್ಯ
ಮಲ್ಲಿಗೆ ಮನೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಇಲ್ಲಿವರೆಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಜೈದೇವ್ನ ಪ್ರೀತಿಯನ್ನು ನಿಜವೆಂದುಕೊಂಡಿದ್ದಾಳೆ. ಹೀಗಿದ್ದರೂ ತನ್ನ ಎಚ್ಚರದಲ್ಲಿ ತಾನಿದ್ದಾಳೆ. ಜೈದೇವ್ ಜ್ಯೂಸ್ ಮಾಡಿಕೊಟ್ಟರೂ ಈಕೆ ಕುಡಿಯುವುದಿಲ್ಲ. ಅಕ್ಕಾ ಹೇಳಿದ ಮಾತನ್ನು ಚಾಚುತಪ್ಪದೇ ಪಾಲಿಸ್ತಾರೆ. ಈ ವಿಷಯ ಜೈದೇವ್ನ ಕೋಪ ಹೆಚ್ಚಿಸಿದೆ. ಆದರೆ, ಮಲ್ಲಿ ಎದುರಲ್ಲಿ ಪ್ರೀತಿಯ ನಾಟಕವಾಡುತ್ತ ಇದ್ದಾನೆ.
ಇನ್ನೊಂದೆಡೆ ಶಕುಂತಲಾದೇವಿ ಮತ್ತು ಅಶ್ವಿನಿ ಮಾತನಾಡುತ್ತ ಇರುತ್ತಾರೆ. ತಾನು ಹುಷಾರಿಲ್ಲದಂತೆ ಮಾಡಿದ ನಾಟಕ, ಗುರುಗಳಿಗೆ ತಿಳಿಸಿ ಜಾತಕದ ಕುರಿತು ತಪ್ಪು ಮಾಹಿತಿ ನೀಡಿರುವ ಕುರಿತು ಮಾತನಾಡುತ್ತಾರೆ. ಯಾವುದೇ ಕಾರಣಕ್ಕೆ ಭೂಮಿಕಾ ಮತ್ತು ಗೌತಮ್ ಒಂದಾಗಬಾರದು. ನನ್ನ ಪ್ಲ್ಯಾನ್ ಸರಿಯಾಗಿ ವರ್ಕ್ ಆಗಿದೆ ಎಂದು ಶಕುಂತಲಾದೇವಿ ಮಾತನಾಡುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿ ಸಾಗುತ್ತಿದ್ದ ಮಲ್ಲಿಗೆ ಶಕುಂತಲಾದೇವಿ ಮಾತುಗಳು ಕೇಳಿಸುತ್ತವೆ. ಇವೆಲ್ಲ ಷಡ್ಯಂತ್ರ ಎಂಬ ವಿವರ ತಿಳಿಯುತ್ತದೆ.
ಈ ಸತ್ಯ ಕೇಳಿ ಮಲ್ಲಿ ಗಾಬರಿಗೊಳ್ಳುತ್ತಾಳೆ. ಈ ವಿಷ್ಯನ ಅಕ್ಕನಿಗೆ ತಿಳಿಸಬೇಕು ಎಂದು ಮಲ್ಲಿ ಯೋಚಿಸುತ್ತಾಳೆ. ಮಲ್ಲಿಗೆ ಈ ವಿಚಾರವನ್ನು ತಕ್ಷಣಕ್ಕೆ ಭೂಮಿಕಾಳಿಗೆ ತಿಳಿಸಲು ಆಗುತ್ತದೆಯೇ? ಅಥವಾ ಈ ರೀತಿ ವಿಷಯ ತಿಳಿಸಲು ಏನಾದರೂ ಅಡ್ಡಿ ಆತಂಕ ಉಂಟಾಗುವುದೇ ಎನ್ನುವ ಕೌತುಕ ಉಂಟಾಗಿದೆ. ಒಟ್ಟಾರೆ, ಭೂಮಿಕಾ ಮತ್ತು ಗೌತಮ್ ಒಂದಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಶಕುಂತಲಾದೇವಿ ಪ್ರಯತ್ನ ಸದ್ಯದಲ್ಲಿಯೇ ಪ್ಲಾಪ್ ಆಗುವ ಎಲ್ಲಾ ಸೂಚನೆಗಳು ಇವೆ. ಜತೆಗೆ ಭೂಮಿಕಾ ಶಕುಂತಲಾದೇವಿಯ ಚಳಿ ಬಿಡಿಸುವ ಎಲ್ಲಾ ಸೂಚನೆಗಳು ದೊರಕಿವೆ. ಭೂಮಿಕಾ-ಗೌತಮ್ರನ್ನು ದೂರವಿರಿಸಲು ಮಾಡಿದ ಪ್ರಯತ್ನವು ಇವರಿಬ್ಬರನ್ನು ಮತ್ತಷ್ಟು ಹತ್ತಿರಕ್ಕೆ ತರುವ ಸೂಚನೆಯಿದೆ.
