ಅಕ್ರಮ ಹಣ ವರ್ಗಾವಣೆ ಆರೋಪ; ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಅಕ್ರಮ ಹಣ ವರ್ಗಾವಣೆ ಆರೋಪ; ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್‌

ಅಕ್ರಮ ಹಣ ವರ್ಗಾವಣೆ ಆರೋಪ; ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್‌

ಟಾಲಿವುಡ್‌ ನಟ ಮಹೇಶ್ ಬಾಬುಗೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದೆ. ರಿಯಲ್ ಎಸ್ಟೇಟ್ ಕಂಪನಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪ; ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್‌
ಅಕ್ರಮ ಹಣ ವರ್ಗಾವಣೆ ಆರೋಪ; ಟಾಲಿವುಡ್‌ ನಟ ಮಹೇಶ್‌ ಬಾಬುಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್‌

ಟಾಲಿವುಡ್‌ನ ಸ್ಟಾರ್ ನಟ, ಸೂಪರ್‌ಸ್ಟಾರ್ ಮಹೇಶ್ ಬಾಬು ‌ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಯಿ ಸೂರ್ಯ ಡೆವಲಪರ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟೀಸ್ ಜಾರಿ ಮಾಡಿದೆ. ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುಹಾನಾ ಗ್ರೂಪ್‌ಗಳ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ದಾಖಲಿಸಿದೆ. ಹೀಗಾಗಿ ಆ ಕಂಪನಿಯ ಪ್ರಚಾರಕರಾಗಿರುವ ಮಹೇಶ್ ಬಾಬು ಅವರಿಗೂ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.

ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶ

ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಟಾಲಿವುಡ್ ನಟ ಮಹೇಶ್ ಬಾಬು ಅವರು ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ನೀಡುವಂತೆಯೂ ಸೂಚಿಸಿದೆ. ಆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯಿಂದ ಮಹೇಶ್ ಬಾಬು ರೂ. 5.9 ಕೋಟಿ ಪಡೆದಿದ್ದಾರೆ ಎಂದು ಇಡಿ ಹೇಳಿದೆ. ಇದರಲ್ಲಿ ರೂ.3.4 ಕೋಟಿ ಚೆಕ್ ಮೂಲಕ ಮತ್ತು ರೂ. 2.5 ಕೋಟಿ ನಗದು ರೂಪದಲ್ಲಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟು ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಪಡೆದಿರುವುದರ ಬಗ್ಗೆ ಇಡಿ ಮಹೇಶ್ ಅವರನ್ನು ಪ್ರಶ್ನಿಸುವ ಸಾಧ್ಯತೆಯಿದೆ.

ರಾಜಮೌಳಿ ಜೊತೆ ಗ್ಲೋಬಲ್ ರೇಂಜ್ ಸಿನಿಮಾ

ಖ್ಯಾತ ನಿರ್ದೇಶಕ ರಾಜಮೌಳಿ ಅವರೊಂದಿಗೆ ಪ್ರಸ್ತುತ ಗ್ಲೋಬಲ್ ರೇಂಜ್‌ನ ದೊಡ್ಡ ಬಜೆಟ್ ಚಿತ್ರ (SSMB29) ದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಚಿತ್ರದ ಮೊದಲ ಶೆಡ್ಯೂಲ್ ಈಗಾಗಲೇ ಮುಗಿದಿದೆ. ಇತ್ತೀಚೆಗೆ ವಿದೇಶ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ ಮಹೇಶ್. ಶೀಘ್ರದಲ್ಲೇ ಮತ್ತೆ ಚಿತ್ರೀಕರಣಕ್ಕೆ ಹೋಗಲಿದ್ದಾರೆ.

ಎಸ್‌ಎಸ್‌ಎಂಬಿ29 ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ಮಲಯಾಳಿ ನಟ ಪೃಥ್ವಿರಾಜ್ ಸುಕುಮಾರನ್, ಪ್ರಿಯಾಂಕಾ ಚೋಪ್ರಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಈ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರ ಮೂಡಿಬರಲಿದೆ. ಈ ಚಿತ್ರದಲ್ಲಿ ಪೌರಾಣಿಕ ಅಂಶಗಳೂ ಇರಲಿವೆ ಎಂದು ಹೇಳಲಾಗುತ್ತಿದೆ. ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಸುಮಾರು ರೂ.1000 ಕೋಟಿ ಬಜೆಟ್ ಎಂದು ಅಂದಾಜಿಸಲಾಗಿದೆ. 2027ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.

ರಾಜಮೌಳಿ ಅವರ ಚಿತ್ರಕ್ಕಾಗಿ ಮಹೇಶ್ ಬಾಬು ತಮ್ಮ ಲುಕ್ ಅನ್ನು ಬಹಳಷ್ಟು ಬದಲಾಯಿಸಿದ್ದಾರೆ. ಉದ್ದ ಕೂದಲು, ಗಡ್ಡದ ಜೊತೆಗೆ ದೈಹಿಕವಾಗಿಯೂ ಮಹೇಶ್‌ ಬಾಬು ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಆರ್‌ಆರ್‌ಆರ್ ಚಿತ್ರದಿಂದ ರಾಜಮೌಳಿ ಅವರಿಗೆ ಗ್ಲೋಬಲ್ ರೇಂಜ್‌ನಲ್ಲಿ ಖ್ಯಾತಿ ಬಂದಿದೆ. ಹೀಗಾಗಿ ಮಹೇಶ್ ಜೊತೆ ಅವರು ಮಾಡುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರಕ್ಕೂ ಆಸ್ಕರ್ ವಿಜೇತ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.