ಪುಷ್ಪ 2 ಪ್ರೀಮಿಯರ್ ವೇಳೆ ಕಾಲ್ತುಳಿತ; ಹೈದರಾಬಾದ್ನಲ್ಲಿ ಮಹಿಳೆ ಸಾವು, ಮಗನ ಸ್ಥಿತಿ ಚಿಂತಾಜನಕ
ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಚಿತ್ರದ ಪ್ರೀಮಿಯರ್ ವೇಳೆ ಕಾಲ್ತುಳಿತ ಸಂಭವಿಸಿದೆ. ಹೈದರಾಬಾದ್ನಲ್ಲಿ ನಡೆದ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗನ ಸ್ಥಿತಿ ಚಿಂತಾಜನಕವಾಗಿದೆ.
ಹೈದರಾಬಾದ್: ಬಹುನಿರೀಕ್ಷೆಯ ಪುಷ್ಪ 2 ಚಿತ್ರ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಹಲವು ವಿಘ್ನಗಳು ಎದುರಾಗುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಇದರ ನಡುವೆ, ಟಾಲಿವುಡ್ ತವರು ಹೈದರಾಬಾದ್ನಲ್ಲಿ ಭಾರಿ ಅವಘಡವೊಂದು ಸಂಭವಿಸಿದೆ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್ಪಲ್ಲಿಯ ಥಿಯೇಟರ್ನಲ್ಲಿ ಬುಧವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 12 ವರ್ಷದ ಮಗ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪುಷ್ಪ 2; ದಿ ರೂಲ್ ಚಿತ್ರ ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋ ನೋಡಲು ಹೈದರಾಬಾದ್ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿದೆ. ಅವರ ಒಂಬತ್ತು ವರ್ಷದ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ತೇಜಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.
ದಿಲ್ಸುಖ್ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್ಟಿಸಿ ಕ್ರಾಸ್ ರೋಡ್ನಲ್ಲಿರುವ ಸಂಧ್ಯಾ ಥಿಯೇಟರ್ಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸಿನಿಮಾ ವೀಕ್ಷಿಸಲು ಕೆಲ ಸ್ಟಾರ್ಗಳು ಥಿಯೇಟರ್ಗೆ ಆಗಮಿಸಿದ್ದರು. ಈ ವೇಳೆ ಸಿನಿಮಾ ನೋಡಿ ಚಿತ್ರಮಂದಿರದಿಂದ ಜನರು ಹೊರಬರುತ್ತಿದ್ದಾಗ ತಳ್ಳಾಟ ನಡೆದಿದೆ. ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಲುವಾಗಿ ಅಭಿಮಾನಿಗಳು ಒಳಗೆ ನುಗ್ಗಿದ್ದಾರೆ. ಆಗ ರೇವತಿ ಕೆಳಕ್ಕೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪೊಲೀಸರಿಂದ ಲಾಠಿ ಚಾರ್ಜ್
ಜನಸಂದಣಿಯಿಂದ ಕಾಲ್ತುಳಿತ ಹಾಗೂ ಗದ್ದಲ ಸಂಭವಿಸಿದೆ. ಅಸ್ವಸ್ಥನಾಗಿದ್ದ ಬಾಲಕನನ್ನು ಸ್ಥಳದಲ್ಲಿದ್ದ ಪೊಲೀಸರು ಸಿಪಿಆರ್ ಮೂಲಕ ಪ್ರಜ್ಞೆ ಬರುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಬಳಿಕ ಅವರನ್ನು ಬೇಗಂಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದ್ದಾರೆ. ಥಿಯೇಟರ್ಗೆ ಹೋಗುವ ರಸ್ತೆಗಳು ಮಧ್ಯರಾತ್ರಿಯವರೆಗೂ ಸಾವಿರ ಅಭಿಮಾನಿಗಳಿಂದ ಗಿಜಿಗುಡುತ್ತಿದ್ದವು. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಕೂಡಾ ಉಂಟಾಗಿದೆ. ಕಾಲ್ತುಳಿತ ಸಂಭವಿಸಿದಾಗ ಅಲ್ಲು ಅರ್ಜುನ್ ಥಿಯೇಟರ್ ಒಳಗೆ ಚಿತ್ರ ವೀಕ್ಷಿಸುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಬಹುನಿರೀಕ್ಷಿತ ಚಿತ್ರ ಥಿಯೇಟರ್ನಲ್ಲಿ ಬಿಡುಗಡೆಯಾಗಿದ್ದು, ಟ್ವೀಟರ್ನಲ್ಲಿ ವಿಮರ್ಶೆಗಳು ಹರಿದು ಬಂದಿದೆ. ಸಿನಿಮಾ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.