Naresh Krishna: ನೋವು ಅನುಭವಿಸಿದ ನಂತರ ಅದ್ಭುತ ಜೋಡಿ ಸಿಕ್ಕಿದೆ ಎಂದರೆ ಏಕೆ ಬಿಡಬೇಕು; ಪವಿತ್ರಾ ಲೋಕೇಶ್ ನರೇಶ್ ವಿಜಯ್ ಕೃಷ್ಣ
ಸಾಕಷ್ಟು ನೋವು ಅನುಭವಿಸಿದ್ದೇನೆ. ಈ ಸಮಯದಲ್ಲಿ ನಮಗೆ ಅದ್ಭುತವಾದ ಜೋಡಿ ಸಿಕ್ಕಿದೆ ಎಂದರೆ ನಾವು ಸಮಾಜಕ್ಕೆ ಏಕೆ ಹೆದರಬೇಕು? ನಮ್ಮನ್ನು ನೋಡಿ ನಗುವ ಜನರು ನಮಗೆ ಬೇಕಿಲ್ಲ.
ಸ್ಯಾಂಡಲ್ವುಡ್ ನಟಿ ಪವಿತ್ರಾ ಲೋಕೇಶ್ ಹಾಗೂ ಟಾಲಿವುಡ್ ನಟ ನರೇಶ್ ವಿಜಯ್ ಕೃಷ್ಣ ತಮ್ಮ ನಡುವಿನ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಾವಿಬ್ಬರೂ ಫ್ರೆಂಡ್ಸ್ ಎಂದು ಹೇಳಿಕೊಂಡು ತಿರುಗುತ್ತಿದ್ದವರು ಈಗ ನಾವಿಬ್ಬರೂ ಇಷ್ಟಪಟ್ಟಿದ್ದೇವೆ, ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದೇವೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ.
ತಾವು ನಟಿಸಿರುವ 'ಮತ್ತೆ ಮದುವೆ' ಸಿನಿಮಾ ಪ್ರಮೋಷನ್ಗೆ ಸಂಬಂಧಿಸಿದಂತೆ ತೆಲುಗು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನರೇಶ್ ಹಾಗೂ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ''ಯಾರಾದರೂ ಪ್ರೀತಿಸುತ್ತಿದ್ದಾರೆ ಎಂದರೆ ಅವರನ್ನು ದೂರ ಮಾಡಲು ಎಲ್ಲರೂ ಕಾಯುತ್ತಿರುತ್ತಾರೆ. ನಮ್ಮಂತೆಯೇ ಅನೇಕ ಜನರು ಇದ್ದಾರೆ. ನಮ್ಮ ಕಥೆಯಂತೆ ಪ್ರತಿ ಮನೆಯಲ್ಲೂ ನಡೆಯುತ್ತದೆ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ನನ್ನ ಜೀವನ ಈ ರೀತಿ ಆಯ್ತಲ್ಲಾ ಎಂದು ಅಳುತ್ತಾ ಕೂರುವವರು ಇದ್ದಾರೆ. ಆದರೆ ಅದೆಲ್ಲಾ ಏಕೆ? ಇರುವ ಒಂದು ಸುಂದರ ಜೀವನವನ್ನು ಏಕೆ ಹಾಳು ಮಾಡಿಕೊಳ್ಳಬೇಕು?''
''ಅಮ್ಮನ ರಕ್ತ ನನ್ನಲ್ಲಿ ಹರಿಯುತ್ತಿದೆ. ನನಗೆ ಧೈರ್ಯ ಇದೆ. ಉಳಿದಿರುವುದು ಸ್ವಲ್ಪ ಸಮಯ ಮಾತ್ರ. ಸಾಕಷ್ಟು ನೋವು ಅನುಭವಿಸಿದ್ದೇನೆ. ಈ ಸಮಯದಲ್ಲಿ ನಮಗೆ ಅದ್ಭುತವಾದ ಜೋಡಿ ಸಿಕ್ಕಿದೆ ಎಂದರೆ ನಾವು ಸಮಾಜಕ್ಕೆ ಏಕೆ ಹೆದರಬೇಕು? ನಮ್ಮನ್ನು ನೋಡಿ ನಗುವ ಜನರು ನಮಗೆ ಬೇಕಿಲ್ಲ. ಅವರಿಗೆ ಉತ್ತರ ಕೊಡುವ ಅವಶ್ಯಕತೆ ಕೂಡಾ ಇಲ್ಲ. ನಮ್ಮ ಯುದ್ಧ ನಮ್ಮದು, ನಾವು ಗೆಲ್ಲುತ್ತೇವೆ'' ಎಂದು ನರೇಶ್ ಉತ್ತರಿಸಿದ್ದಾರೆ.
ಇಬ್ಬರಿಗೂ ಆಗಲೇ 2 ಮದುವೆಯಲ್ಲಿ ಬಹಳ ನೋವಾಗಿದೆ. ಇಷ್ಟೆಲ್ಲಾ ಅನುಭವ ಆಗಿದ್ದರೂ ಮತ್ತೆ ಇಬ್ಬರೂ ಜೊತೆಯಾಗಿರಲು ಹೇಗೆ ಧೈರ್ಯ ಮಾಡಿದಿರಿ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ''ಯಾರ ಜೀವನದಲ್ಲೂ ಪರಿಪೂರ್ಣತೆ ಇರುವುದಿಲ್ಲ. ನಾವಿಬ್ಬರೂ ಆದರ್ಶ ದಂಪತಿಗಳು ಎಂದು ಹೇಳಿಕೊಂಡು ತಿರುಗುವವರ ನಡುವೆ ಸ್ವಲ್ಪವಾದರೂ ಸಮಸ್ಯೆ ಇರುತ್ತದೆ. ನಾನು ಬಡತನದಲ್ಲಿ ಹುಟ್ಟಿ, ಈಗ ಹಣ ಸಂಪಾದಿಸಿದ್ದೇನೆ. ಸಾಕಷ್ಟು ನೋವು ಅನುಭವಿಸಿದ್ದೇನೆ'' ಎಂದರು.
ನರೇಶ್ಗೆ 2 ಮದುವೆ ಆಗಿ ಬ್ರೇಕಪ್ ಆಗಿದೆ, ಬಹಳ ದುಡ್ಡು ಇರುವ ವ್ಯಕ್ತಿ. ಅಂತದ್ದರಲ್ಲಿ ಆತ ಮಿಸ್ಟರ್ ಫರ್ಫೆಕ್ಟ್ ಅಂತ ಹೇಗೆ ನಂಬಿದಿರಿ ಎಂಬ ಪ್ರಶ್ನೆಗೆ, 'ನಾನು ನರೇಶ್ ಪಾಸ್ಟ್ ಲೈಫ್ ಬಗ್ಗೆ ಅವರ ಬಳಿ ಏನೂ ಕೇಳಿಲ್ಲ. ನರೇಶ್ ನನಗೆ ಎಲ್ಲವೂ ಹೇಳಿದ್ದಾರೆ. ಆದರೆ ನನಗೆ ಅವರ ಜೀವನದಲ್ಲಿ ನಡೆದ ಹಳೆಯ ವಿಚಾರಗಳ ಬಗ್ಗೆ ಯೋಚಿಸುವ ಅವಶ್ಯಕತೆ ಇಲ್ಲ. ಹಳೆಯದನ್ನು ಯೋಚಿಸುತ್ತಾ ಕುಳಿತರೆ, ಭವಿಷ್ಯ ಇರುವುದಿಲ್ಲ. ಎಲ್ಲವನ್ನೂ ಕೆದಕುತ್ತಾ ಹೋದರೆ ಅದು ನನಗೆ ಕೂಡಾ ಸಮಸ್ಯೆ'' ಎಂದು ಪವಿತ್ರಾ ಲೋಕೇಶ್ ತಮ್ಮ ಹಾಗೂ ನರೇಶ್ ನಡುವಿನ ರಿಲೇಶನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ.
ಮತ್ತೆ ಮದುವೆ ಸಿನಿಮಾವನ್ನು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ನರೇಶ್, ಪವಿತ್ರಾ ಲೋಕೇಶ್, ಜಯಸುಧ, ಶರತ್ ಬಾಬು, ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ನಟಿಸಿದ್ದಾರೆ. ಮೇ 26ರಂದು ಸಿನಿಮಾ ತೆರೆ ಕಂಡಿದೆ.