ನಾನು ಸಸ್ಯಾಹಾರಿ ಎಂದು ಹೆಮ್ಮೆಪಡುತ್ತೇನೆ ಎಂದ ಫುಡ್ಬ್ಲಾಗರ್ಗೆ ಸ್ವರ ಭಾಸ್ಕರ್ ಉತ್ತರ; ಕರುವಿನ ಹಾಲು ಕಸಿಯುವವರು ನೀವು ಎಂದ ನಟಿ
ಬಕ್ರೀದ್ ಹಬ್ಬದ ಸಮಯದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಆಹಾರ ಸಂಸ್ಕೃತಿ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಫುಡ್ ಬ್ಲಾಗರ್ ನಳಿನಿ ಉನಾಗರ್ ಅವರು "ನಾನು ಸಸ್ಯಹಾರಿ ಎಂದು ಹೆಮ್ಮೆ ಪಡುತ್ತೇನೆ" ಎಂಬ ಪೋಸ್ಟ್ಗೆ ಸ್ವರ ಭಾಸ್ಕರ್ "ಕರುವಿನ ಹಾಲು ಕದಿಯೋರು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಸಸ್ಯಹಾರಿ ಮತ್ತು ಮಾಂಸಹಾರಿಗಳ ಆಹಾರ ಸಂಸ್ಕೃತಿ ಕುರಿತು ಆಗಾಗ ವಾದ-ವಿವಾದಗಳು ನಡೆಯುತ್ತ ಇರುತ್ತದೆ. ಮಾಂಸಹಾರಿಗಳನ್ನು ಕ್ರೂರಿಗಳು, ಇವರ ತಟ್ಟೆಯಲ್ಲಿ ಪ್ರಾಣಿಗಳ ಕಣ್ಣೀರು, ಭಾವನೆ, ದುಃಖ ಇರುತ್ತದೆ ಎಂದು ಹೇಳುವವರಿದ್ದಾರೆ. ಇದೇ ಸಮಯದಲ್ಲಿ ಸಸ್ಯಹಾರಿಗಳ ಆಹಾರವೇನೂ ಸಾಚಾ ಅಲ್ಲ. ಅವರು ಕುಡಿಯೋ ಹಾಲಿನಲ್ಲಿ ಕರುವಿಗೆ ಸೇರಬೇಕಾದ ಹಾಲಿನ ನೋವಿರುತ್ತದೆ ಎಂದು ಉತ್ತರ ನೀಡಲಾಗುತ್ತದೆ. ಸಸ್ಯಗಳಿಗೂ ಜೀವ ಇರುತ್ತದೆ ಎಂದೂ ವಾದಿಸುವವರು ಇದ್ದಾರೆ. ಆಯಾ ದೇಶದ, ಆಯಾ ಜನಾಂಗದ, ಆಯಾ ಧರ್ಮದ, ಆಯಾಯ ಜಾತಿಯ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕೆಂದು ಹೇಳುವವರೂ ಇದ್ದಾರೆ. ಆದರೆ, ಆಗಾಗ ಸಸ್ಯಹಾರ ಮತ್ತು ಮಾಂಸಹಾರಿಗಳ ನಡುವೆ ಮೇಲು, ಕೀಳು ಎಂಬ ಚರ್ಚೆ ನಡೆಯುತ್ತಲೇ ಇದೆ.
ಫುಡ್ಬ್ಲಾಗರ್ ನಳಿನಿ ಉದಾಗರ್ ಪೋಸ್ಟ್
ಜನಪ್ರಿಯ ಫುಡ್ ಬ್ಲಾಗರ್ ನಳಿನಿ ಉದಾಗರ್ ಹೀಗೆ ಪೋಸ್ಟ್ ಮಾಡಿದ್ದರು. "ನಾನು ಸಸ್ಯಹಾರಿ ಎಂದು ಹೇಳಲು ಹೆಮ್ಮೆಪಡುತ್ತೇನೆ. ನನ್ನ ತಟ್ಟೆಯು ಕಣ್ಣೀರು, ಕೌರ್ಯ ಮತ್ತು ಅಪರಾಧದಿಂದ ಮುಕ್ತವಾಗಿದೆ" ಎಂದು ಅವರು ಪೋಸ್ಟ್ ಮಾಡಿದ್ದರು. ಜತೆಗೆ, ಸಸ್ಯಹಾರ ತಿನಿಸಿನ ಫೋಟೋ ಹಂಚಿಕೊಂಡಿದ್ದರು.
ನಟಿ ಸ್ವರ ಭಾಸ್ಕರ್ ಪ್ರತಿಕ್ರಿಯೆ
ನಳಿನಿ ಉದಾಗರ್ ಪೋಸ್ಟ್ ಅನ್ನು ಹಂಚಿಕೊಂಡು ನಟಿ ಸ್ವರ ಭಾಸ್ಕರ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. " ಪ್ರಾಮಾಣಿಕವಾಗಿ ಹೇಳಬೇಕಾದರೆ ನನಗೆ ಸಸ್ಯಹಾರಿಗಳ ಈ ಸ್ವಯಂ ನೀತಿ ಅರ್ಥವಾಗುತ್ತಿಲ್ಲ. ನಿಮ್ಮ ಸಂಪೂರ್ಣ ಆಹಾರ ಕ್ರಮ ಹೇಗಿದೆ ನೋಡಿ. ಕರುವಿಗೆ ಅದರ ತಾಯಿಯ ಹಾಲು ದೊರಕದಂತೆ ಮಾಡುವಿರಿ. ಬಲವಂತವಾಗಿ ಹಸು ಗರ್ಭಧರಿಸುವಂತೆ ಮಾಡುವಿರಿ. ನಂತರ ಅವುಗಳನ್ನು ಅವುಗಳ ಕರುಗಳಿಂದ ಬೇರ್ಪಡಿಸುವಿರಿ. ಅವುಗಳ ಹಾಲನ್ನು ಕದಿಯುವಿರಿ. ನೀವು ಬೇರು ತರಕಾರಿ, ಗೆಡ್ಡೆಗಳನ್ನು ತಿನ್ನುವಿರಿ. ಅದು ಇಡೀ ಸಸ್ಯವನ್ನೇ ಕೊಲ್ಲುತ್ತದೆ. ಇದು ಬಕ್ರೀದ್ ಹಬ್ಬದ ಸಮಯ. ಸದ್ಗುಣಗಳೊಂದಿಗೆ ವಿಶ್ರಾಂತಿ ಪಡೆಯಿರಿ" ಎಂದು ನಟಿ ಸ್ವರ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಈದ್ನಲ್ಲಿ ಭಾಗಿಯಾದ ಸ್ವರ
ಸ್ವರ ಭಾಸ್ಕರ್ ಕೆಲವು ತಿಂಗಳುಗಳ ಹಿಂದೆ ಈದ್ ಆಳ್ ಫಿತ್ತರ್ ಹಬ್ಬವನ್ನು ಆಚರಿಸಿಕೊಂಡಿದ್ದರು. ತನ್ನ ಪತಿ ಫಹಾದ್ ಅಹ್ಮದ್ ಮತ್ತು ಮಗಳು ರಾಭಿಯಾ ಜತೆ ಹಬ್ಬ ಆಚರಿಸಿದ್ದರು. ಈದ್ ಸಂಭ್ರಮದ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಸ್ವರ ಭಾಸ್ಕರ್ ಪೋಸ್ಟ್ಗೆ ನೆಟ್ಟಿಗರ ಪ್ರತಿಕ್ರಿಯೆ
ಸ್ವರ ಭಾಸ್ಕರ್ ಪೋಸ್ಟ್ಗೆ ಪರ ಮತ್ತು ವಿರೋಧ ಕಾಮೆಂಟ್ಗಳು ಬಂದಿವೆ. "ತಾಯಿ ಹಸುವಿನಿಂದ ಕರುವನ್ನು ದೂರ ಮಾಡಿ ಹಾಲು ಪಡೆಯವುದು ಕ್ರೌರ್ಯ ಎಂದು ನಾನು ಒಪ್ಪುವೆ. ಆದರೆ, ಜಗತ್ತಿನಲ್ಲಿ ಹಲವು ದಶಲಕ್ಷ ಹಸುಗಳನ್ನು ಕ್ರೂರವಾಗಿ ಸಾಯಿಸಿ ಮಾಂಸ ಪಡೆಯುವುದನ್ನು ನೀವು ಸಮ್ಮತಿಸುವಿರ" ಎಂದು ಅಮಿತಾಬ್ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ. "ಜಗತ್ತಿನ ಪ್ರಮುಖ ನ್ಯೂಟ್ರಿಷಿಯನ್ಗಳು ಸಸ್ಯಹಾರ ಡಯೆಟ್ಗೆ ಏಕೆ ಪ್ರೋತ್ಸಾಹ ನೀಡುತ್ತಿದ್ದಾರೆ? ಆರೋಗ್ಯ, ನಮ್ಮ ಗ್ರಹ, ನಮ್ಮ ಪರಿಸರ, ಜಾಗತಿಕ ತಾಪಮಾನಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗೊತ್ತೆ? ಹೀಗಿದ್ದರೂ ನೀವು ಈ ರೀತಿ ಪೋಸ್ಟ್ ಮಾಡುತ್ತಿದ್ದೀರಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ವರ ಭಾಸ್ಕರ್ ಪೋಸ್ಟ್ ಪರವೂ ಕಾಮೆಂಟ್ ಮಾಡಿದ್ದಾರೆ.