Kalki 2898 AD: ಕಣ್ಣಲ್ಲೇ ಕಿಡಿ ಹೊತ್ತಿಸಿ ಈಗ ನನ್ನ ಸಮಯ ಬಂತೆಂದ ಅಮಿತಾಬ್ ಬಚ್ಚನ್; ‘ಕಲ್ಕಿ’ ಅಂಗಳದಿಂದ ‘ಅಶ್ವತ್ಥಾಮ’ ಗ್ಲಿಂಪ್ಸ್
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದ Kalki 2898 AD ಸಿನಿಮಾ, ಈಗಾಗಲೇ ಶೂಟಿಂಗ್ನಲ್ಲಿ ಬಿಜಿಯಾಗಿದೆ. ಈ ನಡುವೆ ಅಮಿತಾಬ್ ಬಚ್ಚನ್ ಅವರ ಹೊಸ ಲುಕ್ ಸಹ ಬಿಡುಗಡೆಯಾಗಿದ್ದು, ಅಶ್ವತ್ಥಾಮನಾಗಿ ಎದುರಾಗಿದ್ದಾರೆ.

Kalki 2898 AD: ಪ್ರಭಾಸ್ ನಾಯಕನಾಗಿ ನಟಿಸಿರುವ ಕಲ್ಕಿ 2898 AD ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ಕಲ್ಕಿ ಚಿತ್ರತಂಡ ಶನಿವಾರ (ಏಪ್ರಿಲ್ 21) ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ಅವರ ಪಾತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಿದೆ. ಈ ಮೂಲಕ ಅಭಿಮಾನಿ ಬಳಗದಲ್ಲಿದ್ದ ಕುತೂಹಲಕ್ಕೂ ಒಗ್ಗರಣೆ ಹಾಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್. ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾ, ಈಗಾಗಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುವ ಈ ಸಿನಿಮಾ, ಈಗ ಫ್ಯಾನ್ಸ್ಗೆ ಸರ್ಪ್ರೈಸ್ ನೀಡಿದೆ. ಅಮಿತಾಬ್ ಬಚ್ಚನ್ ಅವರ ಹೊಸ ಲುಕ್ ಹೊರತಂದಿದೆ. ಕಳೆದ ವರ್ಷ ಅಮಿತಾಬ್ ಬಚ್ಚನ್ ಬರ್ತ್ಡೇ ದಿನ ಕಲ್ಕಿ ಚಿತ್ರದಲ್ಲಿನ ಅವರ ಲುಕ್ನ ಸಣ್ಣ ಝಲಕ್ ರಿಲೀಸ್ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಬ್ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕಕ್ಕೆ ಬ್ರೇಕ್ ಬಿದ್ದಿದೆ.
ಟೀಸರ್ನಲ್ಲಿ ಪುಟಾಣಿಯೊಬ್ಬ "ನೀನು ಸತ್ತಿಲ್ಲ.. ನೀನು ದೇವರಾ? ನೀನು ಯಾರು?" ಎಂದು ಕೇಳುವುದರೊಂದಿಗೆ ಟೀಸರ್ ಶುರುವಾಗುತ್ತದೆ. ಆಗ ಅಮಿತಾಬ್ ಬಚ್ಚನ್ ಹೇಳುತ್ತಾರೆ, "ನಾನು ದ್ವಾಪರ ಯುಗದಿಂದ ದಶಾವತಾರಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣಾಚಾರ್ಯರ ಮಗ ಅಶ್ವತ್ಥಾಮ" ಎಂದು ಅಲ್ಲಿಂದ ನಡೆದಿದ್ದಾನೆ. ಪ್ರಾಚೀನ ದೇವಾಲಯವೂ ಟೀಸರ್ನ ಹೈಲೈಟ್. ಅಂದಹಾಗೆ, ಕಲ್ಕಿ ಚಿತ್ರದಲ್ಲಿ ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಒಂದು ನಿಮಿಷದ ಝಲಕ್ನಲ್ಲಿ ಎಲ್ಲ ಭಾಷೆಯನ್ನೂ ಬೆರೆಸಿ ಟೀಸರ್ ಬಿಡುಗಡೆ ಮಾಡಲಾಗಿದೆ.
ಡಿ ಏಜಿಂಗ್ ತಂತ್ರಜ್ಞಾನ
ಚಿತ್ರ ವಿಚಿತ್ರ ಉಡುಪಿನಲ್ಲಿ ಎದುರಾಗಿರುವ ಅಶ್ವತ್ಥಾಮ, ಟೀಸರ್ನಲ್ಲಿ ಎಲ್ಲಿಯೂ ಪೂರ್ತಿ ಮುಖವನ್ನು ತೋರಿಸಿಲ್ಲ. ಮಾಸಿದ ಬಟ್ಟೆಯನ್ನೇ ಧರಿಸಿ, ಕಣ್ಣಲ್ಲೇ ಕಿಡಿ ಹೊತ್ತಿಸಿದ್ದಾನೆ. ಸದ್ಯ ಅಮಿತಾಬ್ ಅವರ ಡಿ ಏಜಿಂಗ್ ಅವತಾರಕ್ಕೆ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಈ ವರೆಗೂ ನೋಡಿರದ ಲುಕ್ನಲ್ಲಿ ಅವರನ್ನು ಕಂಡು ಚಿತ್ರದ ಮೇಲಿನ ನಿರೀಕ್ಷೆಯೂ ಜೋರಾಗಿದೆ.
ಬಿಡುಗಡೆ ದಿನಾಂಕದಲ್ಲಿ ಗೊಂದಲ
ಕಲ್ಕಿ 2898 AD ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಆದರೆ, ಚುನಾವಣೆ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ. ಈ ನಡುವೆ ಅಮಿತಾಬ್ ಅವರ ಗ್ಲಿಂಪ್ಸ್ ಮೂಲಕವಾದರೂ, ಬಿಡುಗಡೆ ಯಾವಾಗ ಎಂಬುದಕ್ಕೆ ಉತ್ತರ ಸಿಗಲಿದೆ ಎಂದೇ ಕಾದಿದ್ದರು. ಆದರೆ, ಸಿನಿಮಾ ರಿಲೀಸ್ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಇದು ಅಭಿಮಾನಿ ವಲಯದಲ್ಲೂ ಬೇಸರಕ್ಕೆ ಕಾರಣವಾಗಿದೆ.
600 ಕೋಟಿ ಬಜೆಟ್ನ ಸಿನಿಮಾ
ವೈಜಯಂತಿ ಮೂವೀಸ್ ಬರೋಬ್ಬರಿ 600 ಕೋಟಿ ರೂ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಲ್ಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದಾರೆ.
