ಮುದ್ದು ಸೊಸೆ: ಅಕ್ಕ-ತಂಗಿ ಮಾಡಿದ ಅವಾಂತರದಿಂದ ಭದ್ರೇಗೌಡನಿಗೆ ಶುರುವಾಯ್ತು ಶೀತ; ಪ್ರಾಯಶ್ಚಿತ್ತವಾಗಿ ನಾಟಿ ಔಷಧಿ ತಂದುಕೊಟ್ಟ ವಿದ್ಯಾ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಅಕ್ಕ-ತಂಗಿ ಮಾಡಿದ ಅವಾಂತರದಿಂದ ಭದ್ರೇಗೌಡನಿಗೆ ಶುರುವಾಯ್ತು ಶೀತ; ಪ್ರಾಯಶ್ಚಿತ್ತವಾಗಿ ನಾಟಿ ಔಷಧಿ ತಂದುಕೊಟ್ಟ ವಿದ್ಯಾ

ಮುದ್ದು ಸೊಸೆ: ಅಕ್ಕ-ತಂಗಿ ಮಾಡಿದ ಅವಾಂತರದಿಂದ ಭದ್ರೇಗೌಡನಿಗೆ ಶುರುವಾಯ್ತು ಶೀತ; ಪ್ರಾಯಶ್ಚಿತ್ತವಾಗಿ ನಾಟಿ ಔಷಧಿ ತಂದುಕೊಟ್ಟ ವಿದ್ಯಾ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಎಪಿಸೋಡ್‌ 4ರಲ್ಲಿ ವಿದ್ಯಾ ತನ್ನ ತಂಗಿಯೊಂದಿಗೆ ಸೇರಿ ಮಾಡಿದ ಎಡವಟ್ಟಿನಿಂದ ಭದ್ರೇಗೌಡನಿಗೆ ವಿಪರೀತ ಶೀತ ಶುರುವಾಗುತ್ತದೆ. ತನ್ನ ತಪ್ಪು ಅರಿವಾದ ನಂತರ ವಿದ್ಯಾ, ಭದ್ರನಿಗಾಗಿ ನಾಟಿ ಔಷಧ ತಂದುಕೊಡುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ ಧಾರಾವಾಹಿ ಏಪ್ರಿಲ್ 17ರ ಸಂಚಿಕೆ
ಮುದ್ದು ಸೊಸೆ ಧಾರಾವಾಹಿ ಏಪ್ರಿಲ್ 17ರ ಸಂಚಿಕೆ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 4ನೇ ಎಪಿಸೋಡ್‌ ಕಥೆ ಹೀಗಿದೆ. ಶಿವರಾಮೇಗೌಡ, ಮನೆದೇವರ ಪೂಜೆಗಾಗಿ ಎಲ್ಲಾ ತಯಾರಿ ನಡೆಸುತ್ತಿದ್ದರೆ ತಮ್ಮನ ಹೆಂಡತಿ ಈಶ್ವರಿ ತನ್ನ ಗಂಡ, ಮಕ್ಕಳಿಗೆ ಅಧಿಕಾರ ಕೊಡಿಸಬೇಕೆಂದು ಕುತಂತ್ರ ಮಾಡುತ್ತಿದ್ದಾಳೆ. ಶಿವರಾಮೇಗೌಡನ ತಂಗಿ ಸಾವಿತ್ರಿ ತನ್ನ ಮಗಳು ವಿನಂತಿಯನ್ನು ಭದ್ರೇಗೌಡನಿಗೆ ಕೊಟ್ಟು ಮದುವೆ ಮಾಡಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾಳೆ.

ವಿನಂತಿ ನಿನ್ನ ಅತ್ತೆ ಮಗಳು, ಅವಳಿಗೂ ನೀನು ಎಂದರೆ ಇಷ್ಟ ನೀನೇಕೆ ಅವಳನ್ನು ಮದುವೆ ಆಗಬಾರದು ಎಂದು ಭದ್ರೇಗೌಡನ ಬಳಿ ಕ್ವಾಟ್ಲೆ ಕೇಳುತ್ತಾನೆ. ಮದುವೆ ಆಗಲು ಅತ್ತೆ ಮಗಳೇ ಆಗಬೇಕು ಅಂತೇನಿಲ್ಲ, ಮನಸ್ಸಿಗೆ ಇಷ್ಟವಾಗುವ ಹುಡುಗಿ ಸಿಗಬೇಕು ಎಂದು ಭದ್ರ ಹೇಳುತ್ತಾನೆ. ವಿದ್ಯಾ ಕಾಲ್ಗೆಜ್ಜೆಯನ್ನು ಹಿಡಿದು ಅವಳನ್ನೇ ನೆನಪಿಸಿಕೊಳ್ಳುತ್ತಾನೆ. ಅವಳ ಮಾತು, ಅವಳ ನಗುವೇ ಅವನ ಮುಂದೆ ಸುಳಿದಾಡಿದಂತೆ ಆಗುತ್ತದೆ. ನೀನು ಯಾರು? ಎಲ್ಲಿದ್ದೀಯ? ಮತ್ತೆ ನನ್ನ ಕಣ್ಣ ಮುಂದೆ ಬರುತ್ತೀಯ ಎಂದು ತನ್ನಷ್ಟಕ್ಕೆ ತಾನೇ ಭದ್ರ ಮಾತನಾಡಿಕೊಳ್ಳುತ್ತಾನೆ. ಮರುದಿನ ಭದ್ರ ಹಾಗೂ ಕ್ವಾಟ್ಲೆ ಗದ್ದೆ ಬಳಿ ತಿರುಗಾಡುವಾಗ ವಿದ್ಯಾ ಹಾಗೂ ಅವಳ ತಂಗಿ ಸರೂ ಅದೇ ದಾರಿಯಲ್ಲಿ ಬರುತ್ತಾರೆ.

ತಣ್ಣೀರಿನಲ್ಲಿ ಸ್ನಾನ ಮಾಡಿದ ಭದ್ರನಿಗೆ ಶುರುವಾಯ್ತು ಶೀತ

ಭದ್ರ ಹಾಗೂ ಕ್ವಾಟ್ಲೆಯನ್ನು ನೋಡುವ ಅಕ್ಕ ತಂಗಿಯರು ನಿನ್ನೆ ಹಾವು ಹಿಡಿದೆ, ಹುಡುಗಿಯನ್ನು ಕಾಪಾಡಿದೆ ಎಂದು ಬಿಲ್ಡಪ್‌ ಕೊಟ್ಟಿದ್ದು ನೆನಪು ಮಾಡಿಕೊಳ್ಳುತ್ತಾರೆ. ಇವರಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಮರೆಯಲ್ಲೇ ನಿಂತು ಹಾವು ಹಾವು ಎಂದು ಜೋರಾಗಿ ಅರಚುತ್ತಾರೆ. ಹಾವು ಎಂಬ ಹೆಸರು ಕೇಳಿದೊಡನೆ ಭದ್ರ ಹಾಗೂ ಕ್ವಾಟ್ಲೆ ಹೆದರಿ ನಡುಗುತ್ತಾರೆ. ಭಯದಿಂದಲೇ ಇಬ್ಬರೂ ಕೆಸರಿನೊಳಗೆ ಬೀಳುತ್ತಾರೆ. ಅವರು ನಮ್ಮನ್ನು ನೋಡಿದರೆ ಕಷ್ಟ ಎಂದು ಸರೂ, ವಿದ್ಯಾ ಅಲ್ಲಿಂದ ಓಡಿ ಹೋಗುತ್ತಾರೆ. ಅವರನ್ನು ಭದ್ರ ನೋಡುತ್ತಾನೆ. ಕ್ವಾಟ್ಲೆ ಇಲ್ಲಿ ಯಾವ ಯಾವೂ ಇಲ್ಲ, ಅಲ್ಲಿ ನೋಡು ಅದೇ ಹುಡುಗಿಯರು ಎಂದು ತೋರಿಸುತ್ತಾನೆ. ಅವರನ್ನು ನೋಡಿ ಕ್ವಾಟ್ಲೆ ಸಿಟ್ಟಾಗುತ್ತಾನೆ. ಹರಿವ ನೀರಿನಲ್ಲಿ ಭದ್ರ, ಕ್ವಾಟ್ಲೆ ಇಬ್ಬರೂ ಸ್ನಾನ ಮಾಡಿಕೊಂಡು ಬರುತ್ತಾರೆ. ಆ ಸಮಯದಲ್ಲೂ ಭದ್ರ ತನ್ನ ಮನಸ್ಸು ಕದ್ದ ವಿದ್ಯಾಳನ್ನೇ ನೆನಪಿಸಿಕೊಳ್ಳುತ್ತಾನೆ.

ಸ್ಕೂಲ್‌ನಿಂದ ಮನೆಗೆ ಬಂದ ಸರೂ ಹಾಗೂ ವಿದ್ಯಾ ಇಬ್ಬರನ್ನೂ ಊಟ ಕೊಟ್ಟು ಬರಲು ರತ್ನ ಜೊತೆಗೆ ಕರೆಯುತ್ತಾಳೆ. ಆದರೆ ಗೌಡರ ಮನೆಗೆ ಹೋದಾಗ ಅವರಿಬ್ಬರೂ ನಮ್ಮನ್ನು ನೋಡಿದರೆ ಕಷ್ಟ ಎಂದು ಹೆದರಿ ನಾವು ಬರುವುದಿಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ನನಗೆ ನಾಳೆ ಗಣಿತ ಟೆಸ್ಟ್‌ ಇದೆ ಬರುವುದಿಲ್ಲ ಎಂದು ಸರೂ ತಪ್ಪಿಸಿಕೊಳ್ಳುತ್ತಾಳೆ. ಬೇರೆ ದಾರಿ ಇಲ್ಲದೆ ವಿದ್ಯಾ ತನ್ನ ಅಮ್ಮನ ಜೊತೆ ಊಟ ಕೊಡಲು ಹೋಗುತ್ತಾಳೆ. ಅವರನ್ನು ನೋಡುತ್ತಲೇ ಶಿವರಾಮೇಗೌಡನ ತಾಯಿ ನಿಮಗಾಗಿ ಕಾಯುತ್ತಿದ್ದೆ ಬನ್ನಿ, ನೀವು ಮಾಡಿದ ಅಡುಗೆ ತುಂಬಾ ಚೆನ್ನಾಗಿತ್ತು ಎನ್ನುತ್ತಾಳೆ. ಅವರು ಮಾಡುವ ಅಡುಗೆಯಲ್ಲಿ ಉಪ್ಪು, ಖಾರ ಹೆಚ್ಚಿಗೆ ಇರುವುದಿಲ್ಲ ಎಂದು ಸಾವಿತ್ರಿ ಕೊಂಕು ಮಾತನಾಡುತ್ತಾಳೆ. ಉಪ್ಪು, ಖಾರ ಕಡಿಮೆ ಹಾಕುವಂತೆ ನಾನೇ ರತ್ನನಿಗೆ ಹೇಳಿದ್ದು ಎಂದು ಮೋನಾ ಹೇಳುತ್ತಾಳೆ.

ಭದ್ರೆಗೌಡನಿಗಾಗಿ ನಾಟಿ ಸೊಪ್ಪು ತಂದುಕೊಟ್ಟ ವಿದ್ಯಾ

ಒಂದೇ ಸಮ ಭದ್ರ ಸೀನುವುದನ್ನು ಕೇಳಿಸಿಕೊಂಡ ಅಜ್ಜಿ, ಭದ್ರನಿಗೆ ಆರೋಗ್ಯ ತಪ್ಪಿದಂತೆ ಇದೆ. ಗುಣವಾಗದಿದ್ದರೆ ನಾಳೆ ಪೂಜೆಗೆ ಸಮಸ್ಯೆ ಆಗುತ್ತದೆ, ಅವನಿಗೆ ಏನಾಯ್ತು ಎನ್ನುತ್ತಾಳೆ. ದಾರಿಯಲ್ಲಿ ಬರುವಾಗ ಜಾರಿ ಕೆಸರಿಗೆ ಬಿದ್ದಿದ್ದಾನೆ, ಅದಕ್ಕೆ ಹರಿವ ನೀರಿನಲ್ಲಿ ಸ್ನಾನ ಮಾಡಿ ಬಂದಿದ್ದಾನೆ ಎಂದು ಮೋನಾ ಹೇಳುತ್ತಾಳೆ. ತಣ್ಣೀರು ಸ್ನಾನ ಆಗದಿದ್ದರೂ ಅವನು ಏಕೆ ಮಾಡಬೇಕಿತ್ತು ಎಂದು ಆತಂಕ ವ್ಯಕ್ತಪಡಿಸುತ್ತಾಳೆ. ಭದ್ರನ ಈ ಪರಿಸ್ಥಿತಿಗೆ ನಾನೇ ಕಾರಣ ಎಂದು ವಿದ್ಯಾಗೆ ಬೇಸರವಾಗುತ್ತದೆ. ಪರಿಸ್ಥಿತಿ ಲಾಭ ಪಡೆಯಲು ಸಾವಿತ್ರಿ ಕಷಾಯ ಮಾಡಿಕೊಟ್ಟು ಅದನ್ನು ನಾನೇ ಮಾಡಿದೆ ಎಂದು ಹೇಳುವಂತೆ ತಿಳಿಸಿ ಮಗಳು ವಿನಂತಿ ಕೈಲಿ ಕೊಟ್ಟು ಕಳಿಸುತ್ತಾಳೆ. ಆದರೆ ಅದನ್ನು ಕುಡಿಯುವ ಭದ್ರ ಕಷಾಯ ಸ್ವಲ್ಪವೂ ಚೆನ್ನಾಗಿಲ್ಲ ಎನ್ನುತ್ತಾನೆ. ಕ್ವಾಟ್ಲೆ ಬಳಿ ಭದ್ರೇಗೌಡ, ನನಗೆ ಹಿಂಸೆ ಆಗುತ್ತಿದೆ, ಈ ನೆಗಡಿ ವಾಸಿಯಾಗಲು ಏನಾದರೂ ಮಾಡು ಎಂದು ಮನವಿ ಮಾಡಿಕೊಳ್ಳುತ್ತಾನೆ.

ರತ್ನ ಊಟ ಕೊಟ್ಟು ಹೊರಗೆ ಬಂದು ಮಗಳನ್ನು ಕರೆಯುತ್ತಾಳೆ. ನಾನು ಫ್ರೆಂಡ್‌ ಮನೆಗೆ ಹೋಗಿ ಬರುವೆ ನೀನು ಹೋಗು ಎಂದು ವಿದ್ಯಾ ಸುಳ್ಳು ಹೇಳಿ ಅಮ್ಮನನ್ನು ಮುಂದೆ ಕಳಿಸುತ್ತಾಳೆ. ಹೇಗಾದರೂ ಮಾಡಿ ಭದ್ರನ ಶೀತ ಹೋಗಲಾಡಿಸಬೇಕು ಎಂದು ವಿದ್ಯಾ, ಒಂದು ಸೊಪ್ಪನ್ನು ಹಿಡಿದು ತರುತ್ತಾಳೆ. ಅವಳನ್ನು ನೋಡುವ ಕ್ವಾಟ್ಲೆ ನಿನ್ನಿಂದ ಭದ್ರ ಆರೋಗ್ಯ ತಪ್ಪಿದ್ಧಾನೆ. ಏನಾದರೂ ಹೆಚ್ಚು ಕಡಿಮೆ ಆದರೆ ಏನು ಮಾಡುವುದು ಎಂದು ಕೋಪದಿಂದ ಕೇಳುತ್ತಾನೆ. ಹಾಗೆಲ್ಲಾ ಹೇಳಬೇಡಿ, ಯಾರಿಗೇ ನೆಗಡಿ ಅದರೆ ಈ ಸೊಪ್ಪನ್ನು ಬಿಸಿ ನೀರಿನಲ್ಲಿ ಹಾಕಿ ಆವಿ ತೆಗೆದುಕೊಂಡರೆ ಕೂಡಲೇ ಕಡಿಮೆ ಆಗುತ್ತದೆ, ದಯವಿಟ್ಟು ಇದನ್ನು ಅವರಿಗೆ ಕೊಡಿ, ಹಾಗೇ ನಿಮ್ಮನ್ನು ಕೆಸರಿನಲ್ಲಿ ಬೀಳಿಸಿದ್ದಕ್ಕೆ ಕ್ಷಮಿಸಿಬಿಡಿ ಎನ್ನುತ್ತಾಳೆ. ಕ್ವಾಟ್ಲೆಗೆ ಅವಳ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೂ ವಿದ್ಯಾ ಅಷ್ಟು ಮನವಿ ಮಾಡುವುದನ್ನು ಕಂಡು ಸರಿ, ಕೊಡು ಎಂದು ಅ ಸೊಪ್ಪನ್ನು ತೆಗೆದುಕೊಳ್ಳುತ್ತಾನೆ.

ವಿದ್ಯಾ ಕೊಟ್ಟ ನಾಟಿ ಸೊಪ್ಪಿನಿಂದ ಭದ್ರನ ಶೀತ ವಾಸಿ ಆಗುವುದಾ? ಆ ನಾಟಿ ಔಷಧ ಕೊಟ್ಟಿದ್ದು ವಿದ್ಯಾ ಎಂಬ ವಿಚಾರ ಅವನಿಗೆ ಗೊತ್ತಾಗುತ್ತಾ? ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.