‘ಭಾರ್ಗವ’ನಾದ ಉಪೇಂದ್ರ; ನಾಗಣ್ಣ ನಿರ್ದೇಶನದ, ‘ಸೂರಪ್ಪ’ ಬಾಬು ನಿರ್ಮಾಣದ ಚಿತ್ರದ ಹೆಸರು ಅನಾವರಣ
ಅಕ್ಷಯ ತೃತೀಯಾ ದಿನದಂದು ನಾಗಣ್ಣ ನಿರ್ದೇಶನದ, ‘ಸೂರಪ್ಪ’ ಬಾಬು ನಿರ್ಮಾಣದ ಚಿತ್ರದ ಹೆಸರು ಅನಾವರಣವಾಗಿದೆ. ಚಿತ್ರಕ್ಕೆ ‘ಭಾರ್ಗವ’ ಎಂದು ಹೆಸರಿಡಲಾಗಿದೆ. ‘ಭಾರ್ಗವ’ ಎಂದರೆ, ವಿಷ್ಣುವಿನ ಆರನೇ ಅವತಾರ, ಪರಶುರಾಮನೆಂದು ನಂಬಲಾಗುತ್ತದೆ. (ವರದಿ: ಚೇತನ್ ನಾಡಿಗೇರ್)

ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ ಒಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಯುಗಾದಿ ಹಬ್ಬದಂದು ಕೇಳಿಬಂದಿತ್ತು. ‘ಸೂರಪ್ಪ’ ಬಾಬು ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಅನಾವರಣ, ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಆಗಲಿದೆ ಎಂದು ಬಾಬು ಹೇಳಿದ್ದರು.
ಈಗ ಕೊನೆಗೂ ಶೀರ್ಷಿಕೆ ಅನಾವರಣವಾಗಿದ್ದು, ಚಿತ್ರಕ್ಕೆ ‘ಭಾರ್ಗವ’ ಎಂದು ಹೆಸರಿಡಲಾಗಿದೆ. ‘ಭಾರ್ಗವ’ ಎಂದರೆ, ವಿಷ್ಣುವಿನ ಆರನೇ ಅವತಾರ, ಪರಶುರಾಮನೆಂದು ನಂಬಲಾಗುತ್ತದೆ. ಈ ಅವತಾರಕ್ಕೂ, ಉಪೇಂದ್ರ ಅವರ ಪಾತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
ಉಪೇಂದ್ರ ಮತ್ತು ನಾಗಣ್ಣ ಇದಕ್ಕೂ ಮೊದಲು ‘ಕುಟುಂಬ’, ‘ಗೋಕರ್ಣ’, ‘ಗೌರಮ್ಮ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಜೊತೆಯಾಗಿ ಮಾಡಿದ್ದರು. ‘ದುಬೈ ಬಾಬು’ ನಂತರ ಉಪೇಂದ್ರ ಅಭಿನಯದಲ್ಲಿ ನಾಗಣ್ಣ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರನ್ನೂ ಜೊತೆಯಾಗಿಸುತ್ತಿದ್ದಾರೆ ನಿರ್ಮಾಪಕ ‘ಸೂರಪ್ಪ’ ಬಾಬು.
ಉಪೇಂದ್ರ ನಿರ್ದೇಶಕರಾಗುವುದಕ್ಕೂ ಮೊದಲು ಸಹಾಯಕ ನಿರ್ದೇಶಕರಾಗಿದ್ದಾಗ, ‘ತರ್ಲೆ ನನ್ಮಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಬ್ರೇಕ್ ನೀಡಿದ್ದು ಬಾಬು. ಇನ್ನು, ನಾಗಣ್ಣ ನಿರ್ದೇಶನದಲ್ಲಿ ಅವರು ‘ಸೂರಪ್ಪ’, ‘ಕೋಟಿಗೊಬ್ಬ’ ಮತ್ತು ‘ಬಂಧು-ಬಳಗ’ ಚಿತ್ರಗಳನ್ನು ನಿರ್ಮಿಸಿದ್ದರು. ಈಗ ಉಪೇಂದ್ರ ಮತ್ತು ನಾಗಣ್ಣ ಜೊತೆಯಾಟದಲ್ಲಿ ‘ಭಾರ್ಗವ’ ಚಿತ್ರವನ್ನು ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.
‘ಭಾರ್ಗವ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದ್ದು, ಚಿತ್ರಕ್ಕೆ A Violent Family Man ಎಂಬ ಅಡಿಬರಹವಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
‘UI’ ಚಿತ್ರದ ನಂತರ ಉಪೇಂದ್ರ ಯಾವೊಂದು ಹೊಸ ಚಿತ್ರವೊಂದನ್ನೂ ಒಪ್ಪಿಕೊಂಡಿರಲಿಲ್ಲ. ‘ಭಾರ್ಗವ’ ಚಿತ್ರದ ಮೂಲಕ ಕೊನೆಗೂ ಉಪೇಂದ್ರ ಅವರ ಮುಂದಿನ ಹೆಜ್ಜೆ ಏನು ಎಂದು ಸ್ಪಷ್ಟವಾಗಿದೆ. (ವರದಿ: ಚೇತನ್ ನಾಡಿಗೇರ್)