ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ
ಕನ್ನಡ ಸುದ್ದಿ  /  ಮನರಂಜನೆ  /  ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ

ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ

ಮಾನಸಿಕ ತೊಳಲಾಟದಲ್ಲಿ ಇರುವವರು ಎದುರಿಸುವ ಸವಾಲುಗಳನ್ನು ಸ್ವಲ್ಪ ಹಾಸ್ಯಮಯವಾಗಿ ಮತ್ತು ಸ್ವಲ್ಪ ಭಾವುಕರಾಗಿ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಈ ಕಥೆಯನ್ನು ಬಹಳ ಕಲಾತ್ಮಕವಾಗಿ ರೂಪಿಸಿರುವ ವಂಶಿ ತಮ್ಮ ನಿರೂಪಣಿ ಮತ್ತು ಮೇಕಿಂಗ್‍ ಶೈಲಿಯಿಂದ ಇಷ್ಟವಾಗುತ್ತಾರೆ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಶೈಲಿಯ ಸಿನಿಮಾ. ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ ಹೀಗಿದೆ.

ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ
ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ

ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ಅವರಿಗೆ ನಿರ್ಮಾಣ ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಅವರು ಧಾರಾವಾಹಿ ಮತ್ತು ವೆಬ್‍ ಸೀರೀಸ್‍ಗಳ ನಿರ್ಮಾಣ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ ‘ಫೈರ್ ಫ್ಲೈ’ ಮೂಲಕ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೊದಲ ಚಿತ್ರ ಹೇಗಿದೆ? ನೀವೇ ತಿಳಿದುಕೊಳ್ಳಿ

ಚಿತ್ರದ ಕಥೆ ಏನು?

ನಾಲ್ಕು ವರ್ಷಗಳ ಕಾಲ ಅಪ್ಪ-ಅಮ್ಮನಿಂದ ದೂರವಿದ್ದು ವಿದೇಶದಲ್ಲಿ ನೆಲೆಸಿದ್ದ ವಿವೇಕಾನಂದ ಅಲಿಯಾಸ್‍ ವಿಕ್ಕಿ (ವಂಶಿ), ತನ್ನ ದೊಡ್ಡಪ್ಪನ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬರುತ್ತಾನೆ. ನಾಲ್ಕು ವರ್ಷಗಳ ನಂತರ ಅಪ್ಪ-ಅಮ್ಮನನ್ನು ಭೇಟಿ ಮಾಡುತ್ತಿರುವ ಸಂತೋಷ ಹೆಚ್ಚು ಹೊತ್ತು ಉಳಿಯುವುದಿಲ್ಲ. ಭೇಟಿ ಆಗಿ ಕೆಲವೇ ನಿಮಿಷಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕಾರ್ ಅಪಘಾತದಲ್ಲಿ ನಿಧನರಾಗುತ್ತಾರೆ. ವಿಕ್ಕಿ ಮೂರು ತಿಂಗಳ ಕಾಲ ಕೋಮಾಗೆ ಜಾರುತ್ತಾನೆ. ಮೂರು ತಿಂಗಳ ನಂತರ ಪ್ರಜ್ಞೆ ಮರಳುತ್ತದಾದರೂ ಅವನು ಮೊದಲಿನಂತೆ ಇರುವುದಿಲ್ಲ. ದೊಡ್ಡ ಕುಟುಂಬವಿದ್ದರೂ ಒಬ್ಬಂಟಿಯಾಗಿರುವ ಆತ ಖಿನ್ನತೆ, ನಿದ್ರಾಹೀನತೆ, ಒಂಟಿತನ ಮತ್ತು ತನ್ನನ್ನು ಪ್ರೀತಿಸುವವರಿಲ್ಲದೆ ನರಳುತ್ತಾನೆ. ಜೀವನದಲ್ಲಿ ಉದ್ದೇಶವಿಲ್ಲದೆ, ಏನು ಮಾಡಬೇಕೆಂದು ಗೊತ್ತಿಲ್ಲದೆ ಕಷ್ಟಪಡುತ್ತಾನೆ. ಇದೆಲ್ಲವನ್ನೂ ಆತ ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥೆ.

ಹೇಗಿದೆ ಚಿತ್ರ?

ಪ್ರೀತಿ ವೈಫಲ್ಯದ ಕುರಿತು ಕನ್ನಡದಲ್ಲಿ ಹಲವು ಚಿತ್ರಗಳು ಬಂದಿವೆ. ಆದರೆ, ಖಿನ್ನತೆ ಮತ್ತು ಅದರಿಂದ ಹೊರಬರುವ ಕುರಿತು ಸಿನಿಮಮಾಗಳು ಅಷ್ಟು ಬಂದಿಲ್ಲ. ‘ಫೈರ್ ಫ್ಲೈ’ ಮೂಲಕ ಅಂಥದ್ದೊಂದು ಪ್ರಯತ್ನಕ್ಕೆ ವಂಶಿ ಕೈಹಾಕಿದ್ದಾರೆ. ಒಂದು ಸರಳ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು ಅವರು ಈ ಚಿತ್ರದ ಮೂಲಕ ಮಾಡಿದ್ದಾರೆ. ವಿಕ್ಕಿ ಅನುಭವಿಸುತ್ತಿರುವ ಮತ್ತು ಯಾರಿಗೂ ಹೇಳಿಕೊಳ್ಳಲಾಗದ ನೋವನ್ನು ಚಿತ್ರದಲ್ಲಿ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಕಮರ್ಷಿಯಲ್‍ ಅಂಶಗಳನ್ನು ಬಯಸುವವರಿಗೆ, ಹೊಡೆದಾಟ, ಮಾರಾಮಾರಿ ಇಷ್ಟಪಡುವವರಿಗೆ ಈ ಚಿತ್ರ ಖಂಡಿತ ಒಗ್ಗುವುದಿಲ್ಲ. ಯಾವುದೇ ಬಿಲ್ಡಪ್‍ ಇಲ್ಲದ ಒಬ್ಬ ಸಾಮಾನ್ಯ ಯುವಕನ ಕಥೆ ಇದು. ಇವತ್ತಿನ ತಲೆಮಾರಿನ ಯುವಕ- ಯುವತಿಯರು ಎದುರಿಸುವಂತಹ ಸಾಕಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ ವಂಶಿ. ಮಾನಸಿಕ ತೊಳಲಾಟದಲ್ಲಿ ಇರುವವರು ಎದುರಿಸುವ ಸವಾಲುಗಳನ್ನು ಸ್ವಲ್ಪ ಹಾಸ್ಯಮಯವಾಗಿ ಮತ್ತು ಸ್ವಲ್ಪ ಭಾವುಕರಾಗಿ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಈ ಕಥೆಯನ್ನು ಬಹಳ ಕಲಾತ್ಮಕವಾಗಿ ರೂಪಿಸಿರುವ ವಂಶಿ ತಮ್ಮ ನಿರೂಪಣಿ ಮತ್ತು ಮೇಕಿಂಗ್‍ ಶೈಲಿಯಿಂದ ಇಷ್ಟವಾಗುತ್ತಾರೆ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಶೈಲಿಯ ಮೇಕಿಂಗ್‌ ಇರುವ ಸಿನಿಮಾ. ಈ ತರಹದ ಮೇಕಿಂಗ್‍ ಬೇರೆ ಸಿನಿಮಾಗಳಲ್ಲಿ ನೋಡುವುದಕ್ಕೆ ಸಿಗುವುದಿಲ್ಲ.

ಕಲಾತ್ಮಕವಾಗಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ವಂಶಿ, ಚಿತ್ರಕಥೆ ವಿಷಯದಲ್ಲಿ ಇನ್ನಷ್ಟು ಗಮನಹರಿಸಬೇಕಿತ್ತು. ಕೆಲವು ವಿಷಯಗಳು ಮತ್ತು ದೃಶ್ಯಗಳು ಚಿತ್ರವನ್ನು ಸಾಕಷ್ಟು ಸುದೀರ್ಘವಾಗಿಸಿವೆ. ಮೊದಲಾರ್ಧ ಚಿತ್ರ ಸ್ವಲ್ಪ ನಿಧಾನವೆನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ವಿಪರೀತ ಎಳೆದಂತಾಗಿದೆ. ಮೇಕಿಂಗ್‍ ವಿಷಯದಲ್ಲಿ ಮೆಚ್ಚುಗೆ ಪಡೆಯುವ ವಂಶಿ, ಚಿತ್ರಕಥೆ ಮತ್ತು ನಿರೂಪಣೆಯಲ್ಲೂ ಇನ್ನಷ್ಟು ಗಮನಹರಿಸಿದ್ದರೆ ಇದೊಂದು ಮರೆಯಲಾಗದ ಚಿತ್ರವಾಗಿರುತ್ತಿತ್ತು.

ಚಿತ್ರದ ಪೂರಾ ಆವರಿಸಿಕೊಳ್ಳುವ ವಂಶಿ

ವಂಶಿ ಇಲ್ಲಿ ಕಥೆ, ಚಿತ್ರಕಥೆ, ನಟನೆ, ನಿರ್ದೇಶನ ಎಂದು ಹಲವು ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಇಡೀ ಚಿತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ತೆರೆಯ ಮೇಲೆ ಶೇ. 90ರಷ್ಟು ಅವರೇ ಇದ್ದಾರೆ. ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ಜೀವಿಸಿದ್ದಾರೆ. ಅಪ್ಪ-ಅಮ್ಮನಾಗಿ ಅಚ್ಯುತ್‍ ಕುಮಾರ್ ‍ಮತ್ತು ಸುಧಾರಾಣಿ ಜೋಡಿ ಇಷ್ಟವಾಗುತ್ತದೆ. ಅವರಿಗೆ ಹೆಚ್ಚು ಕೆಲಸವಿಲ್ಲದಿದ್ದರೂ, ತೆರೆಯ ಮೇಲೆ ಇದ್ದಷ್ಟು ಹೊತ್ತೂ ಈ ಜೋಡಿ ಖುಷಿಕೊಡುತ್ತದೆ. ಆನಂದ್‍ ನೀನಾಸಂ, ಚಿತ್ಕಲಾ ಬಿರಾದಾರ್, ಮೂಗು ಸುರೇಶ್‍ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ರಚನಾ ಇಂದರ್ ಒಂದು ಹಾಡು ಮತ್ತು ಎರಡು ದೃಶ್ಯಗಳಿಗೆ ಸೀಮಿತ. ಶಿವರಾಜಕುಮಾರ್ ಯಾಕೆ ಬರುತ್ತಾರೆ ಎಂದು ಗೊತ್ತಾಗುವುದಕ್ಕೆ ಕೊನೆಯಲ್ಲಿ ಉತ್ತರ ಸಿಗುತ್ತದೆ. ಚಿತ್ರದ ಹೈಲೈಟ್‍ ಎಂದರೆ ಅಭಿಲಾಷ್‍ ಕಲ್ಲತ್ತಿ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್‍ ಅವರ ಹಿನ್ನೆಲೆ ಸಂಗೀತ. ಅಭಿಲಾಶ್‍ ಇಡೀ ಚಿತ್ರವನ್ನು ಪೇಂಟಿಂಗ್ ತರಹ ಚಿತ್ರಿಸಿದ್ದಾರೆ. ಚರಣ್ ರಾಜ್‍ ಅವರ ಹಿನ್ನೆಲೆ ಸಂಗೀತದಲ್ಲಿ ಬರುವ ಆರ್ಕೆಸ್ಟ್ರಾ ಆಹ್ಲಾದಕರವಾಗಿದೆ. ಪ್ರೊಡಕ್ಷನ್‍ ಡಿಸೈನರ್ ಆಗಿ ಕಾರ್ಯನಿರ್ವಹಿಸಿರುವ ವರದರಾಜ್ ಕಾಮತ್‍ ಸಹ ತಮ್ಮ ಕೆಲಸದಿಂದ ಗಮನಸೆಳೆಯುತ್ತಾರೆ.

‘ಫೈರ್ ಫ್ಲೈ’ ಒಂದು ವಿಭಿನ್ನ ಸಿನಿಮಾ. ಇದನ್ನು ಮಾಮೂಲಿ ಕಮರ್ಷಿಯಲ್‍ ಚಿತ್ರಗಳ ಜೊತೆಗೆ ತಾಳೆ ಮಾಡುವ ಹಾಗಿಲ್ಲ. ಒಂದು ವಿಭಿನ್ನ ಶೈಲಿಯ ಸಿನಿಮಾ ನೋಡಬಯಸುವವರು ಖುಷಿಯಿಂದ ಚಿತ್ರ ನೋಡಬಹುದು.

ಫೈರ್ ಫ್ಲೈ ಸಿನಿಮಾ ಬಗ್ಗೆ

ಸಿನಿಮಾ: ಫೈರ್ ಫ್ಲೈ

ಜಾನರ್: ಫ್ಯಾಮಿಲಿ ಡ್ರಾಮಾ

ನಿರ್ದೇಶನ: ವಂಶಿ

ನಿರ್ಮಾಣ: ನಿವೇದಿತಾ ಶಿವರಾಜಕುಮಾರ್

ಸಂಗೀತ: ಚರಣ್‍ ರಾಜ್‍

ಛಾಯಾಗ್ರಹಣ: ಅಭಿಷೇಕ್‍ ಕಲ್ಲತ್ತಿ

ಸಿನಿಮಾದ ಅವಧಿ: 2 ಗಂಟೆ 13 ನಿಮಿಷ

ಎಚ್‍ಟಿ ಕನ್ನಡ ರೇಟಿಂಗ್‍: 3/5

ವಿಮರ್ಶೆ: ಚೇತನ್‌ ನಾಡಿಗೇರ್

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.