ಕನ್ನಡ ಸುದ್ದಿ  /  Entertainment  /  Veerappan's Daughter As A Heroine; Vijayalakshmi Acting In 'Maveeran Pillai'

veerappan daughter: ನಾಯಕಿಯಾದ ವೀರಪ್ಪನ್​ ಮಗಳು; 'ಮಾವೀರನ್​ ಪಿಳ್ಳೈ' ಚಿತ್ರದಲ್ಲಿ ವಿಜಯಲಕ್ಷ್ಮೀ ನಟನೆ

ದಂತಚೋರ ವೀರಪ್ಪನ್‌ ಮಗಳು ವಿಜಯಲಕ್ಷ್ಮೀ ರಾಜಕೀಯದಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ತಿಳಿದಿದೆ. ಈಕೆ ಈಗ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ʼಮಾವೀರನ್‌ ಪಿಳ್ಳೈʼ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ʼಮಾವೀರನ್‌ ಪಿಳ್ಳೈʼ  ಚಿತ್ರದ ಹಾಡು ಬಿಡುಗಡೆ ಸಮಾರಂಭ
ʼಮಾವೀರನ್‌ ಪಿಳ್ಳೈʼ ಚಿತ್ರದ ಹಾಡು ಬಿಡುಗಡೆ ಸಮಾರಂಭ

ಕಾಡುಗಳ್ಳ ವೀರಪ್ಪನ್‌ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಒಂದು ಕಾಲದಲ್ಲಿ ಇಡೀ ದೇಶವನ್ನೇ ನಡುಗಿಸಿದ ಹೆಸರದು. ಇದೇ ವೀರಪ್ಪನ್‌ ಪುತ್ರಿ ವಿಜಯಲಕ್ಷ್ಮೀ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ʼಮಾವೀರನ್‌ ಪಿಳ್ಳೈʼ ಎಂಬ ಚಿತ್ರದಲ್ಲಿ ಈಕೆ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇತ್ತೀಚೆಗೆ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದವು.

ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಚೆನ್ನೈನ ಪ್ರಸಾದ್‌ ಲ್ಯಾಬ್​ನಲ್ಲಿ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವೀರಪ್ಪನ್​ ಪತ್ನಿ ಮುತ್ತುಲಕ್ಷ್ಮೀ, ಆಲ್​ ಪೀಪಲ್ಸ್​ ಪೊಲಿಟಿಕಲ್​ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ ರಾಜ ಮೊದಲಾದವರು ಭಾಗವಹಿಸಿದ್ದರು.

ʼಸಿನಿಮಾದಲ್ಲಿ ನಟಿಸುವ ಮೊದಲಿನಿಂದಲೂ ಇತ್ತುʼ

ಸಿನಿಮಾ ನಟನೆಯ ಬಗ್ಗೆ ಮಾತನಾಡಿದ ವಿಜಯಲಕ್ಷ್ಮೀ ʼನನಗೆ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆಯಿತ್ತು. ಆದರೆ ಅದಕ್ಕೆ ಈಗ ಕಾಲ ಕೂಡಿಬಂದು ಅವಕಾಶ ಸಿಕ್ಕಿದೆ. ಕುಡಿತದ ಪರಿಣಾಮದ ಮೇಲೆ ಬೆಳಕು ಚೆಲ್ಲುವ ಕಥೆ ಇದಾಗಿದೆ. ಪ್ರತಿ ಮನೆಯಲ್ಲೂ ಗಂಡಸರ ಕುಡಿತದ ಕಾರಣದಿಂದ ಹೆಣ್ಣುಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತಹ ಮಹಿಳೆಯರ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪಾತ್ರ ಇದಾಗಿದೆ. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆʼ ಎಂದಿದ್ದಾರೆ

'ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆʼ ಎನ್ನುತ್ತಾರೆ ನಿರ್ಮಾಪಕ ರಾಜ.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಪೇರರಸು ʼಸಿನಿಮಾ ಎಂದರೆ ಅದರಲ್ಲಿ ಯಾರು ನಟಿಸುತ್ತಾರೆ, ಯಾರು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬುದನ್ನು ಮುಖ್ಯವಾಗುವುದಿಲ್ಲ. ಸಿನಿಮಾದ ಎಂದರೆ ಕಥೆಯೇ ಜೀವಾಳʼ ಎಂದಿದ್ದಾರೆ.

ನಮ್ಮ ಮುಖ್ಯಮಂತ್ರಿಗಳ ಮಗನೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ವೀರಪ್ಪನ್‌ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ' ಎಂದು ವಿಜಯಲಕ್ಷ್ಮೀ ಅವರು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ನಿರ್ದೇಶಕ.

ಕುಡಿತದ ಬಗ್ಗೆ ಜಾಗೃತಿ ಅವಶ್ಯ

'ಇಂದು ದೊಡ್ಡವರಷ್ಟೇ ಅಲ್ಲ, ಚಿಕ್ಕ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ 'ಸಾರಾಯಂ ಅಭಯಂ' ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್​ಲೈನ್​ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್​ಲೈನ್​ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್​ ಬೇಕಿಲ್ಲ. ನೀಟ್​ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ' ಎಂದು ಪೇರರಸು ಆಗ್ರಹಿಸಿದರು.

ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್​ ಸಂಕಲನಕಾರರಾಗಿ ದುಡಿದಿದ್ದಾರೆ.

IPL_Entry_Point

ವಿಭಾಗ