ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ʻಶ್ಯಾಮ್ಚಿ ಆಯಿʼ ಚಿತ್ರದ ನಟ ಮಾಧವ್‌ ವಾಝೆ ನಿಧನ
ಕನ್ನಡ ಸುದ್ದಿ  /  ಮನರಂಜನೆ  /  ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ʻಶ್ಯಾಮ್ಚಿ ಆಯಿʼ ಚಿತ್ರದ ನಟ ಮಾಧವ್‌ ವಾಝೆ ನಿಧನ

ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ʻಶ್ಯಾಮ್ಚಿ ಆಯಿʼ ಚಿತ್ರದ ನಟ ಮಾಧವ್‌ ವಾಝೆ ನಿಧನ

ಮರಾಠಿ ನಟ, ನಾಟಕಕಾರ, ರಂಗಕರ್ಮಿ ಮಾಧವ್‌ ವಾಝೆ ಇತ್ತೀಚೆಗೆ (ಮೇ 7) ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾಗಿದ್ದಾರೆ. 1953ರ ‘ಶ್ಯಾಮ್ಚಿ ಆಯಿ’ ಚಿತ್ರದಲ್ಲಿ ಬಾಲ ಶ್ಯಾಮ್‌ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು ಮಾಧವ್.

ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ʻಶ್ಯಾಮ್ಚಿ ಆಯಿʼ ಚಿತ್ರದ ನಟ ಮಾಧವ್‌ ವಾಝೆ ನಿಧನ
ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ʻಶ್ಯಾಮ್ಚಿ ಆಯಿʼ ಚಿತ್ರದ ನಟ ಮಾಧವ್‌ ವಾಝೆ ನಿಧನ

ಮರಾಠಿಯ ಆಚಾರ್ಯ ಅತ್ರೆ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಶ್ಯಾಮಚಿ ಆಯಿ' ಚಿತ್ರದಲ್ಲಿ ಬಾಲಕ ಶ್ಯಾಮ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಧವ್ ವಾಜೆ ಇತ್ತೀಚೆಗೆ (ಮೇ 7) ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಪುತ್ರ, ನಿರ್ದೇಶಕ ಅಮಿತ್‌ ವಾಜೆ ಇದ್ದಾರೆ. ಮೃತರ ಅಂತ್ಯಕ್ರಿಯೆ ಇತ್ತೀಚೆಗೆ ಪುಣೆಯಲ್ಲಿ ನೆರವೇರಿಸಲಾಗಿದೆ.

ಮಾಧವ್ ವಾಝೆ 1953ರ ‘ಶ್ಯಾಮ್ಚಿ ಆಯಿ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆ ಚಿತ್ರದಲ್ಲಿ ಮಾಧವ್ ಅವರ ಬಾಲಕ ಶ್ಯಾಮ್ ಪಾತ್ರ ಬಹಳ ಜನಪ್ರಿಯವಾಗಿತ್ತು. ಅದಾದ ಬಳಿಕ 2009ರಲ್ಲಿ ತೆರೆಗೆ ಬಂದ '3 ಈಡಿಯಟ್ಸ್' ಚಿತ್ರದಲ್ಲಿ ನಟಿಸಿದರು. ಆದರೆ ಸಿನಿಮಾಗಳಿಗಿಂತ ಹೆಚ್ಚು ರಂಗಭೂಮಿಯಲ್ಲಿಯೇ ಮಾಧವ್ ಸಕ್ರಿಯರಾಗಿದ್ದರು.

ನಾಟಕದ ಶಿಕ್ಷಕ, ನಾಟಕ ನಿರ್ದೇಶನದ ಜತೆಗೆ ನಾಟಕ ವಿಮರ್ಶಕರಾಗಿಯೂ ಮಾಧವ್‌ ವಾಝೆ ಗುರುತಿಸಿಕೊಂಡಿದ್ದಾರೆ. ಕಲಾ ಅಕಾಡೆಮಿ (ಗೋವಾ) ನಾಟಕ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದರು. ದೇಶ ವಿದೇಶಗಳಲ್ಲಿ ನಡೆದ ರಾಷ್ಟ್ರೀಯ ರಂಗಭೂಮಿ ಸಂಘದ ಸಮಾವೇಶಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಅವರು ಮಂಡಿಸಿದ್ದಾರೆ.

ಮಾಧವ್ ವಾಝೆ ಅವರ ವೃತ್ತಿಜೀವನ

ಮಾಧವ್ ವಾಝೆ 1939ರ ಅಕ್ಟೋಬರ್ 21ರಂದು ಜನಿಸಿದರು. ನಟನಾಗಿ ಗುರುತಿಸಿಕೊಂಡರೂ, ಬರಹಗಾರ ಮತ್ತು ನಿರ್ದೇಶಕರಾಗಿ ಹೆಚ್ಚು ಜನಪ್ರಿಯರಾದರು. 'ಶ್ಯಾಮ್ಚಿ ಆಯಿ', 'ವಾಹಿನಿಚಿ ಬಾಂಗ್ಡಿಯಾ', '3 ಈಡಿಯಟ್ಸ್', 'ಡಿಯರ್ ಜಿಂದಗಿ', 'ಛಪಡ್ ಫಡ್ ಕೆ' ಮುಂತಾದ ಹಲವು ಹಿಂದಿ-ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ಪುಣೆಯ ನೌರೋಸ್ಜಿ ವಾಡಿಯಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಅವರು ಕೆಲಸ ಮಾಡಿದ್ದಾರೆ. 2012ರಲ್ಲಿ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ಎಂಬ ಮರಾಠಿ ನಾಟಕವನ್ನು ಮಾಧವ್‌ ನಿರ್ದೇಶಿಸಿದ್ದರು.

ಮಾಧವ್ ವಾಜೆ ನಟಿಸಿದ ಸಿನಿಮಾಗಳು

  • ಡಿಯರ್ ಜಿಂದಗಿ (ಹಿಂದಿ ಚಲನಚಿತ್ರ, 2016)
  • ತ್ರೀ ಈಡಿಯಟ್ಸ್ (ಹಿಂದಿ ಚಲನಚಿತ್ರ, 2009)
  • ಶ್ಯಾಮ್ಸ್ ಮದರ್ (ಬಾಲ್ನಟ್, 1953)

ಮಾಧವ್ ವಾಜೆ ಅವರ ಪುಸ್ತಕಗಳು

  • ಪ್ರಾಯೋಗಿಕ ರಂಗಭೂಮಿ - ಮೂರು ಸಂಚಿಕೆಗಳು
  • ರಂಗಮುದ್ರ
  • ಶ್ಯಾಮ್‌ಚಿ ತಾಯಿ ಆಚಾರ್ಯ ಅತ್ರೆ ಆಣಿ ಮಿ
  • ನಂದನವನ
  • ಸಮಾನಾಂತರ ರಂಗಮಂದಿರ

ಅರಸಿ ಬಂದ ಪ್ರಶಸ್ತಿಗಳು

  • ರಂಗಮುದ್ರ (ಅನೇಕ ರಂಗಭೂಮಿ ಕಲಾವಿದರ ಜೀವನ ಚರಿತ್ರೆ) ಪುಸ್ತಕಕ್ಕೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಲಭಿಸಿದೆ.
  • ಪ್ರಾಯೋಗಿಕ ರಂಗಭೂಮಿ - ಮೂರು ಸಂಚಿಕೆಗಳು ಪುಸ್ತಕಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ
  • ಶ್ಯಾಮ್‌ಚಿ ತಾಯಿ ಆಚಾರ್ಯ ಅತ್ರೆ ಆಣಿ ಮಿ - ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಶಸ್ತಿ
  • ಮಹಾರಾಷ್ಟ್ರ ಸಾಹಿತ್ಯ ಪರಿಷತ್ತು, ಪುಣೆ
  • ನಗರ ವಚನ ಮಂದಿರ, ಪುಣೆ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.