ಭಿಕ್ಷೆ ಬೇಡುವಂಥ ಸ್ಥಿತಿ ಬಂದಿದೆ..; ʻಯುದ್ಧಕಾಂಡʼ ಚಿತ್ರದ ಬಗ್ಗೆ ನೋವು ತೋಡಿಕೊಂಡ ಅಜಯ್‌ ರಾವ್
ಕನ್ನಡ ಸುದ್ದಿ  /  ಮನರಂಜನೆ  /  ಭಿಕ್ಷೆ ಬೇಡುವಂಥ ಸ್ಥಿತಿ ಬಂದಿದೆ..; ʻಯುದ್ಧಕಾಂಡʼ ಚಿತ್ರದ ಬಗ್ಗೆ ನೋವು ತೋಡಿಕೊಂಡ ಅಜಯ್‌ ರಾವ್

ಭಿಕ್ಷೆ ಬೇಡುವಂಥ ಸ್ಥಿತಿ ಬಂದಿದೆ..; ʻಯುದ್ಧಕಾಂಡʼ ಚಿತ್ರದ ಬಗ್ಗೆ ನೋವು ತೋಡಿಕೊಂಡ ಅಜಯ್‌ ರಾವ್

ಯುದ್ಧಕಾಂಡ ಸಿನಿಮಾ ಬಗ್ಗೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯವಾಗುತ್ತಿದೆ ಎಂದು ನಟ ಅಜಯ್‌ ರಾವ್‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ, ಬೇಸರ ಹೊರಹಾಕಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾ ಪ್ರಸಾರಕ್ಕೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಭಿಕ್ಷೆ ಬೇಡುವಂಥ ಸ್ಥಿತಿ ಬಂದಿದೆ..; ʻಯುದ್ಧಕಾಂಡʼ ಚಿತ್ರದ ಬಗ್ಗೆ ನೋವು ತೋಡಿಕೊಂಡ ಅಜಯ್‌ ರಾವ್
ಭಿಕ್ಷೆ ಬೇಡುವಂಥ ಸ್ಥಿತಿ ಬಂದಿದೆ..; ʻಯುದ್ಧಕಾಂಡʼ ಚಿತ್ರದ ಬಗ್ಗೆ ನೋವು ತೋಡಿಕೊಂಡ ಅಜಯ್‌ ರಾವ್

ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾ ಯುದ್ಧಕಾಂಡ. ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಕರ್ನಾಟಕದ ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಅತ್ಯಾಚಾರ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಜಯ್‌ ರಾವ್‌ ನಾಯಕನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಇಂತಿಪ್ಪ ಸಿನಿಮಾ ಇದೀಗ ಇನ್ನೇನು 25ನೇ ದಿನದತ್ತ ಸಾಗುತ್ತಿದೆ. ಈ ನಡುವೆ ಇದೇ ಸಿನಿಮಾಕ್ಕೆ ಮ್ಲಟಿಫ್ಲೆಕ್ಸ್‌ ಕಡೆಯಿಂದ ಅನ್ಯಾಯವಾಗುತ್ತಿದೆ ಎಂದು ಸ್ವತಃ ಅಜಯ್‌ ರಾವ್‌ ಆರೋಪ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಬಗ್ಗೆ ಸಾಕಷ್ಟು ಹೊಸ ತಂಡಗಳು, ಮಲ್ಟಿಫ್ಲೆಕ್ಸ್‌ ನಡೆಯ ಬಗ್ಗೆ ಕಿಡಿ ಕಾರಿದ ಉದಾಹರಣೆಗಳಿವೆ. ವಾಣಿಜ್ಯ ಮಂಡಳಿ ವಿರುದ್ಧವೂ ಧ್ವನಿ ಎತ್ತಿದ್ದೂ ಉಂಟು. ಆದರೆ, ಯಾವುದೂ ಫಲಪ್ರದ ಅಥವಾ ಕನ್ನಡ ಸಿನಿಮಾಗಳಿಗೆ ಅನುಕೂಲ ಆಗಿಲ್ಲ. ಇದೀಗ ಇಂಥದ್ದೇ ಸ್ಥಿತಿ, ಇತ್ತೀಚೆಗಷ್ಟೇ ಶುರುವಾದ ʻಯುದ್ಧಕಾಂಡʼ ಸಿನಿಮಾಕ್ಕೂ ಒಂದೊದಗಿದೆ. ಅಂದರೆ, ಮಲ್ಟಿಫ್ಲೆಕ್ಸ್‌ ನೀತಿಯಿಂದಾಗಿ, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅಜಯ್‌ ರಾವ್‌, ಬೇಸರ ಹೊರಹಾಕಿದ್ದಾರೆ. ಆ ವಿಡಿಯೋದಲ್ಲಿ ಏನಿದೆ? ಮುಂದೆ ಓದಿ.

ʻಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ..ʼ

"ಮೊದಲನೆಯದಾಗಿ ಯುದ್ಧಕಾಂಡ ಸಿನಿಮಾಗೆ ಅದ್ಭುತವಾದ ಪ್ರಶಂಸೆ, ಮೆಚ್ಚುಗೆ, ಅಪ್ಪುಗೆ ಕೊಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಆದರೆ, ಒಂದು ಎಚ್ಚರಿಕೆ ಬಂದಂತಹ ವಿಚಾರದಲ್ಲಿ ಬೇಸರಗೊಂಡು ಈ ವಿಡಿಯೋ ಮಾಡುತ್ತಿದ್ದೇನೆ. ಅದೇನು ಅಂದರೆ, ನಮ್ಮ ಕರ್ನಾಟಕದಲ್ಲಿ, ಅದೂ ಬೆಂಗಳೂರಿನಲ್ಲಿ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಒಳ್ಳೆಯ ಶೋ ಟೈಮಿಂಗ್ಸ್ ಕೊಡಿ ಅಂತ ಭಿಕ್ಷೆ ಬೇಡುವಂತಹದ್ದು, ಹಾಗೂ ಅದನ್ನು ಕೊಡದೇ ಇರುವಂತಹದ್ದು ಮುಂಚೆಯಿಂದಲೂ ಬಂದಿರುವಂತಹ ಸಂಪ್ರದಾಯ"

"ಯುದ್ಧಕಾಂಡ ಸಿನಿಮಾಕ್ಕೂ ಸಾಕಷ್ಟು ಅನಾನುಕೂಲವಾದ ಶೋ ಟೈಮಿಂಗ್ಸ್ ಕೊಟ್ಟರೂ ಸಹ, ತಾವೆಲ್ಲರೂ ಬಂದು ಆ ಸಿನಿಮಾವನ್ನು ನೋಡಿ ಯಶಸ್ಸು ಕೊಟ್ಟಿದ್ದೀರಿ. ಈಗ ವರ್ಡ್ ಆಫ್ ಮೌತ್ ಮೂಲಕ ನಮ್ಮ ಸಿನಿಮಾ ಬಗ್ಗೆ ಸ್ಪ್ರೆಡ್ ಆಗುವ ಸಮಯದಲ್ಲಿ ಮಲ್ಟಿಪ್ಲೆಕ್ಸ್ ಕಡೆಯಿಂದ ಒಂದು ಎಚ್ಚರಿಕೆ ಬಂದಿದೆ. ಅದೇನೆಂದರೆ, ಅದೇ ಗುರುವಾರದಿಂದ ನಮ್ಮ ಕರ್ನಾಟಕದಲ್ಲಿ ಬಹುಬೇಡಿಕೆಯಲ್ಲಿ ಇರುವಂತಹ ಪರಭಾಷೆಯ ಸಿನಿಮಾಗಳು ಬರುತ್ತಿರುವುದರಿಂದ ನಮ್ಮ ಯುದ್ಧಕಾಂಡ ಸಿನಿಮಾದ ಶೋಗಳಿಗೆ ಕಡಿವಾಣ ಹಾಕಬೇಕಾಗುತ್ತೆ. ಅಲ್ಲಿಲ್ಲಿ ಶೋಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ ಅಂತ ಹೇಳ್ತಾಯಿದ್ದಾರೆ."

"ಮಲ್ಟಿಫ್ಲೆಕ್ಸ್‌ನವರು ಕೊಡುವಂತಹ ಶೋಗಳು, ಶೋ ಟೈಮಿಂಗ್ಸ್ ಅನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವಂಥ ಕಾಲದಲ್ಲಿ ಇನ್ನೂ ನಾವಿದ್ದೇವೆ. ಇದಕ್ಕೆ ಪರಿಹಾರವೇನು? ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡಪರ ಹೋರಾಟದ ಸಂಘಟನೆಗಳು ನನ್ನ ಈ ಪ್ರಶ್ನೆಗೆ ಕೈ ಜೋಡಿಸಿ, ಉತ್ತರ ಹಾಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ವಿಚಾರ ಮಾಡಬೇಕು ಎಂದು ಕಳಕಳಿಯ ಮನವಿ" ಎಂದು ಅಜಯ್‌ ರಾವ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿದ್ದಾರೆ.

ಈ ವರೆಗೂ ಯುದ್ಧಕಾಂಡದ ಗಳಿಕೆ ಎಷ್ಟು?

ಸಿನಿಮಾಗಳ ಬಾಕ್ಸ್‌ ಆಫೀಸ್‌ ಲೆಕ್ಕಾಚಾರ ನೀಡುವ sacnilk ವೆಬ್‌ ತಾಣದ ಪ್ರಕಾರ ಯುದ್ಧಕಾಂಡ ಸಿನಿಮಾ ವಿಶ್ವದಾದ್ಯಂತ ಈ ವರೆಗೂ 4 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಎಂದು ವರದಿ ಮಾಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಇತ್ತ ಬಾಯಿ ಮಾತಿನ ಪ್ರಚಾರ ಪಡೆದು, ಮುಂದಡಿ ಇಡುತ್ತಿರುವಾಗಲೇ ಯುದ್ಧಕಾಂಡ ಚಿತ್ರಕ್ಕೆ ವಿಘ್ನ ಎದುರಾಗಿದೆ. ಅಂದಹಾಗೆ, ‘ಯುದ್ಧಕಾಂಡ’ ಚಿತ್ರದಲ್ಲಿ ಅಜಯ್‍ ರಾವ್‍, ಸುಪ್ರಿತಾ ಸತ್ಯನಾರಾಯಣ್‍, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದು, ಪವನ್‍ ಭಟ್‍ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಶರ್ಮ ಛಾಯಾಗ್ರಹಣ, ಹೇಮಂತ್ ಜೋಯಿಸ್, ಕೆ ಬಿ ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ʻಯುದ್ಧಕಾಂಡʼ ಚಿತ್ರಕ್ಕಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.