ಕರ್ನಾಟಕದಲ್ಲಿ ಲಂಚವಿಲ್ಲದೆ 1,000 ಜನರಿಗೆ ಗ್ರಾಮ ಆಡಳಿತ ಹುದ್ದೆ, ಗ್ರಾಮ ಸೇವಕರೆಲ್ಲರಿಗೂ ಲ್ಯಾಪ್‌ಟಾಪ್‌ ವಿತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಲಂಚವಿಲ್ಲದೆ 1,000 ಜನರಿಗೆ ಗ್ರಾಮ ಆಡಳಿತ ಹುದ್ದೆ, ಗ್ರಾಮ ಸೇವಕರೆಲ್ಲರಿಗೂ ಲ್ಯಾಪ್‌ಟಾಪ್‌ ವಿತರಣೆ

ಕರ್ನಾಟಕದಲ್ಲಿ ಲಂಚವಿಲ್ಲದೆ 1,000 ಜನರಿಗೆ ಗ್ರಾಮ ಆಡಳಿತ ಹುದ್ದೆ, ಗ್ರಾಮ ಸೇವಕರೆಲ್ಲರಿಗೂ ಲ್ಯಾಪ್‌ಟಾಪ್‌ ವಿತರಣೆ

ಕರ್ನಾಟಕದಲ್ಲಿ ಗ್ರಾಮ ಹಂತದಲ್ಲಿ ಆಡಳಿತ ವ್ಯವಸ್ಥೆ ಬಲಪಡಿಸುವ ಪ್ರಯತ್ನ ನಡೆದಿದ್ದು, ಇದರ ಭಾಗವಾಗಿಯೇ ಗ್ರಾಮ ಆಡಳಿತಾಧಿಕಾರಿಗಳ ನೇಮಕ, ಲ್ಯಾಪ್‌ ಟಾಪ್‌ ವಿತರಣೆಯನ್ನು ಕಂದಾಯ ಇಲಾಖೆ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆ ಸಮಾರಂಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಲ್ಯಾಪ್‌ ಟಾಪ್‌ ವಿತರಿಸಿದರು.
ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆ ಸಮಾರಂಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಲ್ಯಾಪ್‌ ಟಾಪ್‌ ವಿತರಿಸಿದರು.

ಬೆಂಗಳೂರು: ಕರ್ನಾಟಕದ ರಾಜ್ಯದ ಇತಿಹಾಸದಲ್ಲೇ 1,000 ಜನ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಕ್ಕೆ ಒಂದೇ ಹಂತದಲ್ಲಿ ಆದೇಶ ಹೊರಡಿಸಿದ್ದು ಇದೇ ಮೊದಲು. ಅಲ್ಲದೆ, ಒಂದು ಪೈಸೆಯೂ ಲಂಚಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಒಂದೇ ಬಾರಿ ಅರ್ಜಿ ಕರೆದು, ಒಂದೇ ಬಾರಿ ಪರೀಕ್ಷೆ ನಡೆಸಿ ಮಧ್ಯವರ್ತಿಗಳ ಅವಕಾಶ ಇಲ್ಲದೆ ನೇಮಕಾತಿ ಮಾಡಲಾಗಿದೆ. ಈ ಹುದ್ದೆಗೆ 6,33,916 ಜನ ಅರ್ಜಿ ಸಲ್ಲಿಸಿದ್ದರು. ಭಾಗಶಃ ಕರ್ನಾಟಕ ಬೇರೆ ಯಾವುದೇ ನೇಮಕಾತಿಗೆ ಇಷ್ಟು ಅರ್ಜಿ ಬಂದಿಲ್ಲ. ಇಲ್ಲಿ ಕೆಲಸ ಗಿಟ್ಟಿಸಿದವರು ಎಷ್ಟು ಪುಣ್ಯವಂತರೆಂದರೆ ಅರ್ಜಿ ಸಲ್ಲಿಸಿದವರ ಪೈಕಿ ಶೇ. 0.0016 ಜನ ಮಾತ್ರ ಆಯ್ಕೆಯಾಗಿದ್ದಾರೆ. ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣಾ ಹಾಗೂ ಕಂದಾಯ ಇಲಾಖೆಯ ಎರಡು ವರ್ಷದ ʼಸಾಧನೆಯ ಹಾದಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ವಿಷಯವನ್ನು ತಿಳಿಸಿದರು.

ಇದೊಂದು ದಾಖಲೆ. ಈ ಹಿಂದೆ ಪಿಯುಸಿ ಅಂಕದ ಆಧಾರದಲ್ಲಿ ಆಯಾ ಜಿಲ್ಲೆಯಲ್ಲಿ ಸೀಮಿತ ಸ್ಥಾನಗಳಿಗೆ ನೇಮಕಾತಿ ಆಗುತ್ತಿತ್ತು. ಆದರೆ, ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪಾರದರ್ಶಕತೆ ಇಲ್ಲ ಎಂಬ ದೂರು ಇತ್ತು. ಹೀಗಾಗಿ ನಮ್ಮ ಸರ್ಕಾರ ಬಂದ ಮೇಲೆ ಇಡೀ ರಾಜ್ಯದಲ್ಲಿ ಒಂದೇ ಬಾರಿ ಪಾರದರ್ಶಕವಾಗಿ ನೇಮಕವಾಗಬೇಕು, ಎಲ್ಲ ಜಿಲ್ಲೆಯವರಿಗೂ ಸಮಾನ ಸವಕಾಶ ಸಿಗಬೇಕು ಎಂಬ ದೃಷ್ಟಿಯಲ್ಲಿ ಕ್ರಮವಹಿಸಲಾಗಿತ್ತು ಎನ್ನುವುದು ಸಚಿವರ ವಿವರಣೆ.

“ಗ್ರಾಮ ಆಡಳಿತ ಅಧಿಕಾರಿ ಕೆಲಸಕ್ಕೆ ಶಿಫಾರಸು ಮಾಡುವಂತೆ ಏಳೆಂಟು ಜನ ನನ್ನ ಬಳಿಯೂ ಬಂದಿದ್ದರು. ಆದರೆ, ನಾನೇ ಮನಸ್ಸು ಮಾಡಿದರೂ ಶಿಫಾರಸು ಮಾಡಲು ಸಾಧ್ಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಯಾವ ಅಕ್ರಮ ಚಟುವಟಿಕೆಗಳಿಗೂ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲಸ ಗಿಟ್ಟಿಸಿದವರು ಹುದ್ದೆಗಾಗಿ ಒಂದು ಪೈಸೆಯಾದರೂ ಯಾರಿಗಾದರೂ ಲಂಚ ಕೊಟ್ಟಿದ್ದೀರ . ಇದೇ ಕಾರಣಕ್ಕೆ ಈ ಬಗ್ಗೆ ಈವರೆಗೆ ಒಂದೂ ತಕರಾರು ಬಂದಿಲ್ಲ. ಒಂದು ಪೈಸೆಯೂ ಲಂಚ ಇಲ್ಲದೆ ಹುದ್ದೆ ನೀಡಿದ್ದೇವೆ ಎಂದು ಹೇಳಲು ನನಗೂ ಸಂತೋಷವಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು

ಈ ಕಾರ್ಯಕ್ರಮವನ್ನು ಸ್ಥಳದ ಅಭಾವದ ನೆಪವೊಡ್ಡೆ ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳು ಸೂಚಿಸಿದರು. ಆದರೆ, ನಾನು ಈ ಸಿಎಂ ಅವರ ಕೈಯಿಂದಲೇ ಎಲ್ಲಾ ಅಧಿಕಾರಿಗಳಿಗೂ ವಿಧಾನಸೌಧದಲ್ಲೇ ಆದೇಶ ಪ್ರತಿ ನೀಡಬೇಕು ಎಂದು ಹೇಳಿ ಸಿದ್ದರಾಮಯ್ಯನವರನ್ನು ಒಪ್ಪಿಸಿದೆ. ಮೊದಲ ಬಾರಿಗೆ ಸಾವಿರ ಜನ ಸರ್ಕಾರಿ ಸೇವೆಗೆ ಕಾಲಿಡುತ್ತಿದ್ದಾರೆ. ಅವರು ಮೊದಲ ಸಲ ವಿಧಾನಸೌಧಕ್ಕೆ ಕಾಲಿಟ್ಟರೆ ಅವರಿಗೆ ವಿಧಾನಸೌಧ ಕಟ್ಟಿದ ಆಶಯ ಅರ್ಥವಾಗುತ್ತೆ, ಆಗಲಾದರೂ ಅವರು ಜನಪರ ಕೆಲಸ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ” ಎಂದರು ಕೃಷ್ಣಬೈರೇಗೌಡ.

ನೂತನವಾಗಿ ಆಯ್ಕೆಯಾಗಿರುವ ಅಧಿಕಾರಿಗಳಿಗೂ ಕಿವಿಮಾತು ಹೇಳಿದ ಅವರು, “ವಿಧಾನಸೌಧದಲ್ಲಿ ಆದೇಶ ಪ್ರತಿ ಸ್ವೀಕರಿಸುತ್ತಿರುವ ಹೊಸ ಉದ್ಯೋಗಿಗಳಿಗೂ ಈ ಸಂದರ್ಭದಲ್ಲಿ ಅರಿವು ಇರಬೇಕು ಎಂಬ ಕಾರಣಕ್ಕೆ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ನೀಡಲಾಗುತ್ತಿದೆ. ಬಹುತೇಕರು ಸರ್ಕಾರಿ ಕೆಲಸ ಗಿಟ್ಟಿಸಿದ ಕುಟುಂಬದ ಮೊದಲಿಗರಾಗಿದ್ದಾರೆ. ಈ ಹುದ್ದೆಗೆ ನೀವು ಋಣ ತೀರಿಸಬೇಕು ಎಂತಿದ್ದರೆ ಜನರ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಈ ಋಣ ತೀರಿಸಿ” ಎಂದು ಕಿವಿ ಮಾತು ಹೇಳಿದರು.

ಸಿದ್ದರಾಮಯ್ಯ ಸಲಹೆ

ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9834 ಒಟ್ಟು ಗ್ರಾಮ ಆಡಳಿತಾಧಿಕಾರಿಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಅಲ್ಲೇ ಇದ್ದು ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮಗಳಲ್ಲಿಯೇ ವಾಸ ಮಾಡುವುದು ಉತ್ತಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

4000 ಜನರಿಗೆ ಲ್ಯಾಪ್‌ಟಾಪ್ ವಿತರಣೆ

ಕಾರ್ಯಕ್ರಮದಲ್ಲಿ ನಾಲ್ಕು ಸಾವಿರ ಜನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ (ಕ್ರೋಮ್ ಬುಕ್) ವಿತರಿಸಲಾಯಿತು.

ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, “ದಿನ ಬೆಳಗಾದರೆ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಗಳಿಗೆ ಟಪಾಲು ಕೊಡೋದು ತಗೋಳೋದೆ ಅವರಿಗೆ ಕೆಲಸವಾಗಿದೆ. ಕೆಲಸ ಮಾಡೋದು ಬಿಟ್ಟು ಓಡಾಡೋದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ಈ ಟಪಾಲು ವ್ಯವಸ್ಥೆ 200 ವರ್ಷಗಳಷ್ಟು ಹಳೆಯದು. ಈ ವ್ಯವಸ್ಥೆಗೆ ಏನಾದ್ರೂ ಅರ್ಥ ಇದೆಯಾ? ಇದು ಎಷ್ಟಯ ಅನಗತ್ಯ ಹೊರೆ. ಈ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟ್ಯಾಪ್” ನೀಡಲಾಗುತ್ತಿದೆ ಎಂದು ತಿಳಿಸಿದರು.

ಟಪಾಲು ವ್ಯವಸ್ಥೆಯಿಂದ ಕೆಲಸ ಸಾಕಷ್ಟು ವಿಳಂಬವಾಗುತ್ತಿದೆ. ಪರಿಣಾಮ ಅರ್ಜಿ ನೀಡಿದ ಜನ ಆಕಾಶ ಭೂಮಿ ನೋಡುವಂತಾಗಿದೆ. ಅಧಿಕಾರಿಗಳು ಕೆಲಸ ಮಾಡಿಲ್ಲ ಅಂದ್ರೆ ಕಚೇರಿಗೆ ಅಲೆಯುವ ಜನರಿಗೂ ಸಂಕಷ್ಟ. ಎಲ್ಲದಕ್ಕೂ ಸಂಪೂರ್ಣ ವಿರಾಮ ಹಾಕುವ ಉದ್ದೇಶದಿಂದ ಎಲ್ಲಾ ಕೆಲಸವೂ ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕು ಎಂದು ವಿಎ ಯಿಂದ ಸಚಿವರ ವರೆಗೆ ಎಲ್ಲಾ ಫೈಲು ದಾಖಲೆ ಡಿಜಿಟಲ್ ರೂಪದಲ್ಲೇ ಕೆಲಸ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು 4000 ಲ್ಯಾಪ್ಟ್ಯಾಪ್ ಕೇಳಿದ್ದೆವು. ಆದರೆ, ಕ್ಯಾಬಿನೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ನವರು 6,000 ಲ್ಯಾಪ್ಟಾಪ್ ಗಳಿಗೆ ಅನುಮೋದನೆ ನೀಡಿದ್ದಾರೆ. 20025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ವಿಎ ಗಳಿಗೆ ಲ್ಯಾಪ್ಟಾಪ್ ನೀಡಲಾಗುವುದು. ಎಲ್ಲಾ ಕಡತ ವಿಲೇವಾರಿಯನ್ನೂ ಆನ್ಲೈನ್ಗೆ ತಂದು ಪಾರದರ್ಶಕವಾಗಿ ಕೆಲಸ ಆಗುವಂತೆ ಹಾಗೂ ಕೆಲಸದ ವಿಳಂಭ ಸೇರಿದಂತೆ ದಾಖಲೆಗಳು ಕಳೆದುಹೋಗದಂತೆ ನೋಡಿಕೊಳ್ಳುವುದು ಡಿಜಿಟಲೀಕರಣದ ಉದ್ದೇಶ ಎಂದರು ಕೃಷ್ಣಬೈರೇಗೌಡ.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್, ಕಂದಾಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಉಪಸ್ಥಿತರಿದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.