Intercaste marriage: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಪೋಷಕರಿಗೆ 6 ಲಕ್ಷ ದಂಡ; ಗ್ರಾಮದ 13 ಮುಖಂಡರ ವಿರುದ್ಧ ಕೇಸ್ ದಾಖಲು
ಪುತ್ರ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಪೋಷಕರಿಗೆ 6 ಲಕ್ಷ ದಂಡ ವಿಧಿಸಿ, ದಂಡ ಕಟ್ಟುವವರೆಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಚಾಮರಾಜನಗರ: ಅಂತರ್ಜಾತಿ ವಿವಾಹ ಆಗಿದ್ದ ಯುವಕನ ಪೋಷಕರಿಗೆ 6 ಲಕ್ಷ ದಂಡ ಹಾಕಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಗ್ರಾಮದ 13 ಮಂದಿ ಮುಖಂಡರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಸಮುದಾಯದ 13 ಮುಖಂಡರ ವಿರುದ್ಧ ಚಾಮರಾಜನಗರ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದು, ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಪೋಷಕರಿಗೆ ದಂಡ ವಿಧಿಸಿ, ದಂಡ ಕಟ್ಟುವವರೆಗೆ ಬಹಿಷ್ಕಾರ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕುಣಿಗಳ್ಳಿ ಗ್ರಾಮದ ಗೋವಿಂದರಾಜು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಸಮುದಾಯದ ಪ್ರಕಾಶ್ ಅವರ ಪುತ್ರಿ ಶ್ವೇತಾಳನ್ನು 5 ವರ್ಷದ ಹಿಂದೆ ಮದುವೆಯಾಗಿದ್ದ.
ಗೋವಿಂದರಾಜು ದಲಿತ ಯುವತಿಯನ್ನು ಮದುವೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ನಿಮ್ಮ ಪುತ್ರ ಅಂತರ್ಜಾತಿ ಮದುವೆಯಾಗಿದ್ದಾನೆ ಅಂತ ಗೋವಿಂದರಾಜು ಅವರ ತಂದೆ ವೆಂಕ ಶೆಟ್ಟಿ ಮತ್ತು ತಾಯಿ ಸಂಗಮ್ಮ ಅವರಿಗೆ 6 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದವರಾದ ಶ್ವೇತಾ ಅವರನ್ನು 2018ರ ಸೆಪ್ಟೆಂಬರ್ 18ರಂದು ಗೋವಿಂದರಾಜು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದು, ಮಳವಳ್ಳಿಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿಯಲ್ಲಿ ದಂಪತಿ ತಮ್ಮ ಹುಟ್ಟೂರಾದ ಕೊಳ್ಳೇಗಾಲದ ಕುಣಗಲ್ಲಿಗೆ ಬಂದಿದ್ದರು. ಶ್ವೇತಾ ದಲಿತ ಸಮುದಾಯಕ್ಕೆ ಸೇರಿದವರು ಎಂಬುದನ್ನು ನೆರೆಹೊರೆಯವರು ತಿಳಿದುಕೊಂಡು ಸಮಾಜದ ಮುಖಂಡರಿಗೆ ದೂರು ನೀಡಿದ್ದಾರೆ.
ಸಮುದಾಯದ ಹಿರಿಯರು ಫೆಬ್ರವರಿ 23 ರಂದು ಸಭೆ (ಪಂಚಾಯತ್) ಕರೆದು ನಿಮ್ಮ ಮಗ ಕೆಳ ಜಾತಿಯ ಯುವತಿಯನ್ನು ಮದುವೆಯಾಗುವ ಮೂಲಕ ಸಮುದಾಯದ ಗೌರವವನ್ನು ಹಾಳು ಮಾಡಿದ್ದಾರೆ. ಹೀಗಾಗಿ 3 ಲಕ್ಷ ರೂ. ದಂಡ ಕಟ್ಟಿ ಎಂದು ವೆಂಕಟ ಶೆಟ್ಟಿ ಮತ್ತು ಅವರ ಪತ್ನಿ ಹೇಳಿದ್ದಾರೆ.
3 ಲಕ್ಷ ದಂಡ ನೀಡುವವರೆಗೆ ಈ ಕುಟುಂಬದೊಂದಿಗೆ ಎಲ್ಲಾ ಸಂಬಂಧ, ವ್ಯವಹಾರಗಳನ್ನು ಕಡಿದುಕೊಳ್ಳುವಂತೆ ಗ್ರಾಮದ ಮುಖಂಡರು, ಇತರ ಸಮುದಾಯದ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಗ್ರಾಮದ ವ್ಯಾಪಾರಿಗಳಿಗೆ ಕುಟುಂಬಕ್ಕೆ ಏನನ್ನೂ ಮಾರಾಟ ಮಾಡದಂತೆ, ಅವರೊಂದಿಗೆ ಮಾತನಾಡದಂತೆ ಸೂಚಿಸಿ ಮಾರ್ಚ್ 1 ರ ಮೊದಲು ದಂಡ ಕಟ್ಟಲು ಆದೇಶಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಡ ಕಟ್ಟಲಾಗದೆ ಕುಟುಂಬಸ್ಥರು ಕೊಳ್ಳೇಗಾಲ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ. ಇಷ್ಟಾದರೂ ಸುಮ್ಮನಾಗದ ಗ್ರಾಮದ ಮುಖಂಡರು, ಪೊಲೀಸರನ್ನು ಸಂಪರ್ಕಿಸಿದ್ದಕ್ಕಾಗಿ ಈ ಕುಟುಂಬಕ್ಕೆ 3 ಲಕ್ಷ ರೂಪಾಯಿ ಹೆಚ್ಚುವರಿ ದಂಡ ವಿಧಿಸಿದ್ದಾರೆ.
ನಾವು ಬಡ ಕುಟುಂಬದಿಂದ ಬಂದಿದ್ದು, ದಿನಗೂಲಿ ಕಾರ್ಮಿಕರು. 6 ಲಕ್ಷ ದಂಡ ಹೇಗೆ ಕಟ್ಟಬೇಕು. ಪೊಲೀಸರು ನಮಗೆ ನ್ಯಾಯ ಒದಗಿಸಬೇಕು ಎಂದು ಗೋವಿಂದರಾಜು ಮನವಿ ಮಾಡಿದ್ದಾರೆ.
ಮದುವೆಯಾದ ನಂತರ ಸಮುದಾಯದಿಂದ ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ 45 ಕಿಲೋಮೀಟರ್ ದೂರದಲ್ಲಿರುವ ಮಳವಳ್ಳಿಯಲ್ಲಿ ನೆಲೆಸಿದ್ದೇನೆ. ನಾನು ಜನವರಿಯಲ್ಲಿ ಮನೆಗೆ ಬಂದೆ. ನೆರೆಹೊರೆಯವರು ಸಮುದಾಯದ ಹಿರಿಯರಿಗೆ ದೂರು ನೀಡಿದರು. ನಾವು ದಿನಗೂಲಿ ಕಾರ್ಮಿಕರಾಗಿದ್ದು, 10,000 ರೂಪಾಯಿ ಕೂಡ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಕೂಡಲೇ ಘಟನೆಯ ಕುರಿತು ತನಿಖೆ ನಡೆಸುವಂತೆ ಯಳಂದೂರು ವೃತ್ತ ನಿರೀಕ್ಷಕರಿಗೆ ಸೂಚಿಸಿದ್ದೇನೆ. ಮಾರ್ಚ್ 5 ರಂದು ಕಚೇರಿಯಲ್ಲಿ ಸಭೆಗೆ ಹಾಜರಾಗುವಂತೆ ಗ್ರಾಮದ ಮುಖಂಡರಿಗೆ ಸೂಚಿಸಿದರೂ ಯಾರೂ ಬಂದಿಲ್ಲ ಎಂದು ಕೊಳ್ಳೇಗಾಲ ಉಪ ಎಸ್ಪಿ ಸೋಮೇಗೌಡ ತಿಳಿಸಿದ್ದಾರೆ.
ದೂರುದಾರರು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳ ತನಿಖೆಯಲ್ಲಿ ತಿಳಿದು ಬಂದಿದೆ. ದೂರಿನಲ್ಲಿ ಹೆಸರಿಸಲಾದ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೂ ಮಾಹಿತಿ ನೀಡಿದ್ದಾರೆ.
ಸಮಾಜದ ಮುಖಂಡರಾದ ವೆಂಕಟಶೆಟ್ಟಿ, ಮಹದೇವ, ಮೋಂಡ ಶೆಟ್ಟಿ ಕನ್ನಪ್ಪ, ನಂಜಶೆಟ್ಟಿ, ಮಹದೇವ ಶೆಟ್ಟಿ, ಸಿದ್ದೇಶ್ ಸೇರಿ ಆರು ಮಂದಿ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂವಿಧಾನವು ಎಲ್ಲಾ ಪ್ರಜೆಗಳಿಗೂ ಸಮಾನತೆಯ ಹಕ್ಕನ್ನು ನೀಡಿದೆ. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನೊಂದವರಿಗೆ ನ್ಯಾಯವನ್ನು ನೀಡಿಲು ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಪ್ರಕರಣ ದಾಖಲಾದ ನಂತರ ಗ್ರಾಮದ ಮುಖಂಡರೆಲ್ಲರೂ ತಲೆಮರೆಸಿಕೊಂಡಿದ್ದು, ಮಾಂಬಳ್ಳಿ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.