ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಬಳಿಕ ವಿಜ್ಞಾನದಲ್ಲಿ ತೀರ್ಥಹಳ್ಳಿಯ ಆರ್ ದೀಕ್ಷಾ, ವಾಣಿಜ್ಯದಲ್ಲಿ ಪ್ರತೀಕ್ಷಾ ಕರ್ನಾಟಕ ಟಾಪರ್ಗಳು
ದ್ವಿತೀಯ ಪಿಯುಸಿ ಮರುಮೌಲ್ಯಮಾಪನದ ಬಳಿಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ರ್ಯಾಂಕ್ ಬದಲಾಗಿದೆ. ತೀರ್ಥಹಳ್ಳಿಯ ಆರ್ ದೀಕ್ಷಾ ವಿಜ್ಞಾನ ವಿಭಾಗದ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಟಾಪರ್ ಎಸ್. ದೀಪಶ್ರೀ ಜತೆಗೆ ಪ್ರಥಮ ಸ್ಥಾನ ಹಂಚಿಕೊಳ್ಳುವುದಕ್ಕೆ ಈಗ ಪಿ. ಪ್ರತೀಕ್ಷಾ ಅವರೂ ಸೇರಿಕೊಂಡಿದ್ದಾರೆ.

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಬಂದ ನಂತರ ಮರು ಮೌಲ್ಯಮಾಪನ ನಡೆದಿದ್ದು, ಅದರ ಫಲಿತಾಂಶ ಪ್ರಕಟವಾಗಿದೆ. ಮೌರುಮೌಲ್ಯಮಾಪನದ ನಂತರ ಬಂದ ಫಲಿತಾಂಶದಲ್ಲಿ ಹಲವು ಬದಲಾವಣೆಗಳಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ಆರ್. ದೀಕ್ಷಾ ಒಬ್ಬರೇ ಪ್ರಥಮ (600/600) ಸ್ಥಾನಕ್ಕೇರಿದ್ದಾರೆ. ಇದೇ ರೀತಿ, ವಾಣಿಜ್ಯ ವಿಭಾಗದಲ್ಲಿ ರಾಜಾಜಿನಗರದ ಎಎಸ್ಸಿ ಕಾಲೇಜಿನ ವಿದ್ಯಾರ್ಥಿನಿ ಪಿ. ಪ್ರತೀಕ್ಷಾ 599 ಅಂಕ ಪಡೆದು ಮತ್ತೊಬ್ಬ ಟಾಪರ್ ಎನಿಸಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಫಲಿತಾಂಶದ ಬಳಿಕ ಟಾಪರ್ಗಳ ಲಿಸ್ಟ್ನಲ್ಲಿ ಬದಲಾವಣೆ
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾದ ಬಳಿಕ ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ಆರ್. ದೀಕ್ಷಾ 600ಕ್ಕೆ 600 ಅಂಕ ಪಡೆದು ಪ್ರಥಮ ರ್ಯಾಂಕ್ಗೆ ಭಾಜನರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ದೀಕ್ಷಾ ಒಬ್ಬರೇ 600ಕ್ಕೆ 600 ಅಂಕ ಪಡೆದುಕೊಂಡಿರುವುದು.
ದ್ವಿತೀಯ ಪಿಯು ಮರು ಮೌಲ್ಯಮಾಪನದ ನಂತರ 600 ಅಂಕ ಬಂದದ್ದು ನೋಡಿ ಖುಷಿಯಾಗಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆದು ಪರಿಶೀಲಿಸಿದಾಗ, ರಸಾಯನ ಶಾಸ್ತ್ರದಲ್ಲಿ ಪ್ರಶ್ನೆಯೊಂದಕ್ಕೆ ಐದು ಅಂಕಗಳ ಬದಲು ನಾಲ್ಕು ಅಂಕ ಕೊಟ್ಟಿದ್ದರು. ಈಗ ಆ ಒಂದು ಅಂಕವೂ ಸಿಕ್ಕಿದೆ ಎಂದು ವಾಗ್ದೇವಿ ಕಾಲೇಜು ವಿದ್ಯಾರ್ಥಿನಿ ಆರ್. ದೀಕ್ಷಾ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತ ಸಂಭ್ರಮ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಏಪ್ರಿಲ್ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ, ವಿಜ್ಞಾನ ವಿಭಾಗದಲ್ಲಿ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ಮತ್ತು ಆರ್ ದೀಕ್ಷಾ ಇಬ್ಬರೂ ತಲಾ 599 ಅಂಕಗಳೊಂದಿಗೆ ಮೊದಲ ರ್ಯಾಂಕ್ ಹಂಚಿಕೊಂಡಿದ್ದರು. ಅಮೂಲ್ಯ ಕಾಮತ್ಗೆ ಈಗ ಎರಡನೇ ರ್ಯಾಂಕ್.
ದೀಕ್ಷಾ ಅವರ ತಂದೆ ರಾಘವೇಂದ್ರ ಕಲ್ಕೂರ ಅವರು ಡೆಕ್ಕನ್ ಹೆರಾಲ್ಡ್ ಜತೆಗೆ ಮಾತನಾಡುತ್ತ, ಮಗಳಿಗೆ ಒಂದು ಅಂಕ ಸಿಕ್ಕಿ, ಫಸ್ಟ್ ರ್ಯಾಂಕ್ ಪಡೆದುಕೊಂಡಿರುವುದು ಖುಷಿ ತಂದಿದೆ ಎಂದು ಸಂಭ್ರಮಿಸಿದ್ದಾರೆ. ರಾಘವೇಂದ್ರ ಕಲ್ಕೂರ ಅವರು ಮೇರಗವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು. ದೀಕ್ಷಾ ಅವರ ತಾಯಿ ಉಷಾ ಕೂಡ ಶಿಕ್ಷಕಿ.
ವಾಣಿಜ್ಯ ವಿಭಾಗದಲ್ಲಿ ಈಗ ಇಬ್ಬರು ಟಾಪರ್ಗಳು - ಎಸ್. ದೀಪಶ್ರೀ, ಪಿ. ಪ್ರತೀಕ್ಷಾ
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾದ ಬಳಿಕ ವಾಣಿಜ್ಯ ವಿಭಾಗದ ರ್ಯಾಂಕ್ ಪಟ್ಟಿಯಲ್ಲೂ ಪರಿಷ್ಕರಣೆಯಾಗಿದೆ. ಟಾಪರ್ ಎಸ್. ದೀಪಶ್ರೀ ಜತೆಗೆ ಪ್ರಥಮ ಸ್ಥಾನ ಹಂಚಿಕೊಳ್ಳುವುದಕ್ಕೆ ಈಗ ಪಿ. ಪ್ರತೀಕ್ಷಾ ಅವರೂ ಸೇರಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಮರುಮೌಲ್ಯಮಾಪನದಲ್ಲಿ ಬೆಂಗಳೂರಿನ ರಾಜಾಜಿನಗರದ ಎಎಸ್ಸಿ ಕಾಲೇಜಿನ ವಿದ್ಯಾರ್ಥಿನಿ ಪಿ. ಪ್ರತೀಕ್ಷಾ 599 ಅಂಕ ಪಡೆದರು. ಆ ಮೂಲಕ ವಾಣಿಜ್ಯ ವಿಭಾಗದಲ್ಲಿ ಪ್ರತೀಕ್ಷಾ ಕೂಡ ಫಸ್ಟ್ ರ್ಯಾಂಕ್ ಪಡೆದುಕೊಂಡರು.
ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ ಮೊದಲ ವಾರ ಪ್ರಕಟವಾದಾಗ, ಮಂಗಳೂರು ಕೆನರಾ ಕಾಲೇಜಿನ ಎಸ್. ದೀಪಶ್ರೀ (599) ಮೊದಲ ರ್ಯಾಂಕ್ ಪಡೆದುಕೊಂಡಿದ್ದರು. ಪ್ರತೀಕ್ಷಾ 597 ಅಂಕ ಪಡೆದು ತೃತೀಯ ರ್ಯಾಂಕ್ ಪಡೆದಿದ್ದರು. ಪಿ. ಪ್ರತೀಕ್ಷಾ ಮರುಮೌಲ್ಯಮಾಪನಕ್ಕೆ ಹಾಕಿದ ಬಳಿಕ ಇಂಗ್ಲಿಷ್ ವಿಷಯದಲ್ಲಿ ಎರಡು ಅಂಕಗಳು ಸಿಕ್ಕಿದ್ದು, ಒಟ್ಟು ಅಂಕ 599 ಆಗಿದ್ದು ಮೊದಲ ರ್ಯಾಂಕ್ ಸಿಕ್ಕಿದೆ. ಬದಲಾದ ಸನ್ನಿವೇಶದಲ್ಲಿ ಹೆಬ್ಬಾಳ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಕೆ.ಮಂಜುನಾಥ ಹೆಬ್ಬಾರ್ ಮತ್ತು ಕೆ. ವಿ. ಪೂರ್ಣಾಂಬಾ ಅವರ ಪುತ್ರಿ ಕೆ. ಅಮೃತಾ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.