ಕನ್ನಡ ಸುದ್ದಿ  /  Karnataka  /  7 Held For Attacking Forest Officials In Dakshina Kannada Says Cops

Dakshina Kannada: ಸೆರೆ ಹಿಡಿದ ಕಾಡಾನೆ ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ವಾಹನ ಮೇಲೆ ಕಲ್ಲು ತೂರಾಟ; 7 ಮಂದಿ ಬಂಧನ

ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆ ಹಿಡಿದು ದುಬಾರೆಗೆ ಸಾಗಿಸಲು ಮುಂದಾದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದ ಮೇಲೆ 7 ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಅರಣ್ಯಾಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ದಕ್ಷಿಣ ಕನ್ನಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅರಣ್ಯಾಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ದಕ್ಷಿಣ ಕನ್ನಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪುತ್ತೂರು (ದಕ್ಷಿಣ ಕನ್ನಡ): ಕಡಬದ ಇಚಿಲಂಪಾಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ ಆನೆಯನ್ನು ಸೆರೆ ಹಿಡಿದು ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರ ವಾಹನಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಗುರುವಾರ (ಫೆ.23) ಕಾಡಾನೆಯನ್ನು ಸೆರೆ ಹಿಡಿದು ಸಾಗಿಸುತ್ತಿದ್ದಾಗ ಗ್ರಾಮದ ಕೆಲವರು ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ವಾಹನಗಳನ್ನು ತಡೆದಿದ್ದಾರೆ. ಹಿಡಿದಿರುವ ಆನೆಯಲ್ಲಿ ಇಲ್ಲೇ ಇರಿಸಿ, ಉಳಿದ ಕಾಡಾನೆಗಳನ್ನೂ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಆಗ ಅರಣ್ಯ ಇಲಾಖೆ ಅಧಿಕಾರಿಗಳು ಇತರೆ ಆನೆಗಳನ್ನೂ ಸೆರೆಯುವುದಾಗಿ ಹೇಳಿದರೂ ಇದಕ್ಕೆ ಒಪ್ಪದ ಕೆಲವರು ವಾಗ್ವಾದಕ್ಕೆ ಇಳಿದ್ದಾರೆ. ಈ ವೇಳೆ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆ ವೇಳೆ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಂಬಾರು ಗ್ರಾಮದ ಕಮರಕಜ್ಜಿಮನೆ ಉಮೇಶ್, ರಾಜೇಶ್ ಕನ್ನಡ, ಜನಾರ್ದನ್ ರೈ, ಕೋಕಿಲ ನಂದ, ತೀರ್ಥಕುಮಾರ್, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತ ಆರೋಪಿಗಳು.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕಳೆದ ಸೋಮವಾರ ಕಾಡಾನೆಯೊಂದು ಹಾಲು ಸಹಕಾರ ಸಂಘದ ಉದ್ಯೋಗಿ ರಂಜಿತಾ (21) ಮತ್ತು ರಮೇಶ್ ರೈ (55) ಅವರ ಮೇಲೆ ದಾಳಿ ಕೊಂದಿತ್ತು.

ಪೇರಡ್ಕ ಹಾಲಿನ ಸೊಸೈಟಿಯಲ್ಲಿ ಕೆಲಸ ಮಾಡುತ್ತಿರುವ ರಂಜಿತಾ ಅವರು ಬೆಳಗ್ಗೆ 6.30ರ ಸುಮಾರಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮನೆಯ ಸಮೀಪ ಆನೆ ದಾಳಿ ನಡೆಸಿತ್ತು.

ಆನೆ ದಾಳಿ ಮಾಡಲು ಮುಂದಾಗುತ್ತಿದ್ದಾಗ ರಂಜಿತಾ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ಈಕೆಯ ರಕ್ಷಣೆಗೆ ಮುಂದಾದ ರಮೇಶ್ ರೈ ಅವರ ಮೇಲೂ ಆನೆ ದಾಳಿ ಮಾಡಿದೆ. ರೈ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾ ಅವರನ್ನು ನೆಲ್ಯಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರೈ ಶವವನ್ನು ಮರಣೋತ್ತರ ಪರೀಕ್ಷೆಗೆ ಬಿಡದೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ.ದಿನೇಶ್ ಕುಮಾರ್ ಭೇಟಿ ನೀಡಿ ಆನೆಗಳನ್ನು ಶೀಘ್ರ ಹಿಡಿಯುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಕೊಡಗಿನ ದುಬಾರೆ ಆನೆ ಶಿಬಿರದ ಆನೆಗಳಾದ ಅಭಿಮನ್ಯು ಹಾಗೂ ಇತರೆ ಮೂರು ಆನೆಗಳನ್ನು ಬಳಸಿಕೊಂಡು ಮಂಗಳವಾರ ಪುಂಡಾಟ ನಡೆಸಿದ್ದ ಕಾಡಾನೆಯನ್ನು ಸೆರೆ ಹಿಡಿದಿದ್ದರು.

ಎರಡು ದಿನಗಳ ಹುಡುಕಾಟದ ನಂತರ ಅರಣ್ಯಾಧಿಕಾರಿಗಳು ಗುರುವಾರ ಸುಮಾರು 15 ವರ್ಷ ವಯಸ್ಸಿನ ಪುಂಡಾನೆಯನ್ನು ಹಿಡಿದು ಪಳಗಿಸಲು ದುಬಾರೆಗೆ ಸ್ಥಳಾಂತರಕ್ಕೆ ಮುಂದಾಗಿದ್ದರು.

ಅಧಿಕಾರಿಗಳು ಇಲಾಖೆಯ ಆನೆಗಳನ್ನು ಟ್ರಕ್‌ಗಳಿಗೆ ತುಂಬಲು ಪ್ರಾರಂಭಿಸಿದಾಗ, ಕೆಲವು ಗ್ರಾಮಸ್ಥರು ಅವರನ್ನು ತಡೆದು, ಬೆಳೆಗಳನ್ನು ನಾಶಪಡಿಸುತ್ತಿರುವ ಪ್ರದೇಶದಲ್ಲಿನ ಎಲ್ಲಾ 4-5 ಆನೆಗಳನ್ನು ಹಿಡಿಯುವಂತೆ ಒತ್ತಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೆ ಹಿಡಿಯುವ ಕಾರ್ಯಾಚರಣೆ ಮುಗಿದಿಲ್ಲ, ತಾಲೂಕಿನ ಬೇರೆ ಕಡೆ ಕಾರ್ಯಾಚರಣೆ ನಡೆಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದಾಗ, ಗ್ರಾಮಸ್ಥರು ಆನೆಗಳನ್ನು ಹಿಡಿಯುವಂತೆ ಪಟ್ಟು ಹಿಡಿದ ನಂತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

IPL_Entry_Point