ನಷ್ಟಭರ್ತಿಗೆ ಮುಂದಾದ ಬಿಬಿಎಂಪಿ; ಏಳು ವರ್ಷಗಳ ನಿಷೇಧದ ನಂತರ ಹೋರ್ಡಿಂಗ್ ಚಾಲ್ತಿಗೆ ತರಲು ಬಿಬಿಎಂಪಿ ಚಿಂತನೆ
ಜಾಹೀರಾತು ಆದಾಯದ ಅನುಪಸ್ಥಿತಿಯಿಂದಾಗಿ ನಾವು ಗಮನಾರ್ಹ ನಷ್ಟವನ್ನು ಅನುಭವಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಸುಮಾರು 7 ವರ್ಷಗಳ ಹಿಂದೆ ನಿಷೇಧಿಸಿರುವ ಎತ್ತರದ ಹೋರ್ಡಿಂಗ್ ಅನ್ನು ಮತ್ತೆ ಚಾಲ್ತಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಆದಾಯ ನಷ್ಟಕ್ಕೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಲಿಕೆ ಈಗ ವಾಣಿಜ್ಯ ಜಾಹೀರಾತುಗಳ ಮೂಲಕ ನಷ್ಟ ಭರ್ತಿಗೆ ನಿರ್ಧರಿಸಿದ್ದು, ಮತ್ತೆ ಅವಕಾಶ ನೀಡಲು ಕಾನೂನು ಕ್ರಮಕ್ಕೆ ಮುಂದಾಗಿದೆ. 2018ರ ಬೈಲಾಗಳ ಚೌಕಟ್ಟಿನ ಅಡಿಯಲ್ಲಿ ವಾಣಿಜ್ಯ ಜಾಹೀರಾತಗಳ ನಿಷೇಧ ಹಿಂಪಡೆಯಲು ಚಿಂತಿಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ. ಆದರೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
2024ರಲ್ಲಿ ರಾಜ್ಯ ಸರ್ಕಾರ ಪರಿಚಯಿಸಿದ ಹೊಸ ಜಾಹೀರಾತು ನೀತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ನ ತೀರ್ಪು ಇನ್ನೂ ಬರಬೇಕಿದೆ. ನಾಗರಿಕ ಸಂಸ್ಥೆಯೂ ನ್ಯಾಯಾಲಯದ ಮಹತ್ವದ ತೀರ್ಪಿಗಾಗಿ ಕಾಯುತ್ತಿದೆ. ಆದರೆ ಅದಕ್ಕೂ ಮುನ್ನವೇ ಬಿಬಿಎಂಪಿ ಈ ನಿರ್ಧಾರವನ್ನು ಕೈಗೊಂಡಿದೆ. ನ್ಯಾಯಾಲಯವು ಈ ನೀತಿ ಯಾವಾಗ ತೆರವುಗೊಳಿಸುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹೊರಾಂಗಣ ಜಾಹೀರಾತುಗಳಿಂದ ಅಂದಾಜು 750 ಕೋಟಿ ರೂ.ಗಳ ವಾರ್ಷಿಕ ಆದಾಯ ಪಡೆಯಲು ಹಳೆಯ ಬೈಲಾದ ಅನುಸಾರ ಅವಲಂಬಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.
ಜಾಹೀರಾತು ಆಧಾರಿತ ಆದಾಯದ ಇಲ್ಲದೆ ಪಾಲಿಕೆಯ ಖಜಾನೆಗೆ ನಷ್ಟವಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ 'ಪ್ರಜಾವಾಣಿ'ಗೆ ದೃಢಪಡಿಸಿದ್ದಾರೆ. ‘ಜಾಹೀರಾತು ಆದಾಯದ ಅನುಪಸ್ಥಿತಿಯಿಂದಾಗಿ ನಾವು ಗಮನಾರ್ಹ ನಷ್ಟವನ್ನು ಅನುಭವಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಬಿಬಿಎಂಪಿ 500 ಕೋಟಿ ರೂ.ಗಳ ಜಾಹೀರಾತು ಆದಾಯ ಅಂದಾಜಿಸಿತ್ತು. ಆದರೆ 2024ರ ನೀತಿಯನ್ನು ಆರ್ಥಿಕ ವರ್ಷದ ಅರ್ಧದಲ್ಲೇ ಅನುಮೋದಿಸಿದ ಕಾರಣ ಮತ್ತು ಈಗ ನಡೆಯುತ್ತಿರುವ ದಾವೆಗಳಿಂದಾಗಿ ಸ್ಥಗಿತಗೊಂಡಿದ್ದರಿಂದ ತೀವ್ರ ನಷ್ಟವಾಗಿದೆ.
ಫ್ಲೆಕ್ಸ್ ಬಿದ್ದು ಸಾರ್ವಜನಿಕರಿಗೆ ಗಾಯ
ಇತ್ತೀಚೆಗೆ ವಿಜಯನಗರ ಶಾಸಕ ಎಂ ಕೃಷ್ಣಪ್ಪ, ಅವರ ಪುತ್ರ, ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರ ಜನ್ಮದಿನದ ಆಚರಣೆಗೆ ಹಾಕಲಾಗಿದ್ದ ಫ್ಲೆಕ್ಸ್ ಬ್ಯಾನರ್ ಬೆಂಗಳೂರಿನಲ್ಲಿ ಮಳೆ ಮತ್ತು ಬಲವಾದ ಗಾಳಿಗೆ ಬಿದ್ದು ಸಾರ್ವಜನಿಕರು ಗಾಯಗೊಂಡಿದ್ದರು. ಬ್ಯಾಟರಾಯನಪುರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಸ್ಥಳೀಯ ಸಂಚಾರ ಪೊಲೀಸರ ಪ್ರಕಾರ, ನಾಲ್ಕು ಜನರು ಬಾಧಿತರಾಗಿದ್ದಾರೆ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ಯಾನರ್ ಕಾರಿನ ಮೇಲೆ ಬಿದ್ದು, ವಾಹನಕ್ಕೆ ಹಾನಿಯಾಗಿದೆ ಮತ್ತು ಸಂಚಾರದಲ್ಲಿ ಸ್ವಲ್ಪ ಅಡಚಣೆಗೆ ಕಾರಣವಾಗಿತ್ತು.
ಏತನ್ಮಧ್ಯೆ, ನಗರದಾದ್ಯಂತ ರಾಜಕೀಯ ನಾಯಕರ ಬ್ಯಾನರ್ಗಳು ಅನಿಯಂತ್ರಿತ ಪ್ರಸರಣದ ಬಗ್ಗೆ ನಾಗರಿಕರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳ ವೈಫಲ್ಯವನ್ನು ಅನೇಕರು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಅನಿರೀಕ್ಷಿತ ಹವಾಮಾನದಲ್ಲಿ ಇಂತಹ ಅಕ್ರಮ ಹೋರ್ಡಿಂಗ್ಗಳಿಂದ ಉಂಟಾಗುವ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಿಡಿಕಾರಿದ್ದಾರೆ. ಹೀಗಿದ್ದರೂ ಬಿಬಿಎಂಪಿ ಸಾರ್ವಜನಿಕರು ಕೇಳಿಯೂ ಕೇಳದಂತೆ ಸುಮ್ಮನಿರುವುದು ಅಚ್ಚರಿ ಮೂಡಿಸಿದೆ.