ಕರ್ನಾಟಕದ ಖ್ಯಾತ ಕೃಷಿ ವಿಜ್ಞಾನಿ, ಐಸಿಎಆರ್ ಮಾಜಿ ಮಹಾನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಸಾವು
ಕರ್ನಾಟಕದ ಖ್ಯಾತ ಕೃಷಿ ವಿಜ್ಞಾನಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಪ್ರಧಾನ ನಿರ್ದೇಶಕರಾಗಿದ್ದ ಎಸ್. ಅಯ್ಯಪ್ಪನ್ (ಸುಬ್ಬಣ್ಣ ಅಯ್ಯಪ್ಪನ್) ನಿಗೂಢವಾಗಿ ಮೃತಪಟ್ಟಿದ್ದಾರೆ. ಇವರ ಮೃತದೇಹ ಶ್ರೀರಂಗಪಟ್ಟಣ ಕಾವೇರಿ ನದಿಯಲ್ಲಿ ಪತ್ತೆಯಾಗಿತ್ತು.

ಕರ್ನಾಟಕದ ಖ್ಯಾತ ಕೃಷಿ ವಿಜ್ಞಾನಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಪ್ರಧಾನ ನಿರ್ದೇಶಕರಾಗಿದ್ದ ಎಸ್. ಅಯ್ಯಪ್ಪನ್ (ಸುಬ್ಬಣ್ಣ ಅಯ್ಯಪ್ಪನ್) ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಇವರ ನಿಧನದ ಕುರಿತು ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. "ಶ್ರೀರಂಗಪಟ್ಟಣ ಕಾವೇರಿ ನದಿಯಲ್ಲಿ ಅವರ ಮೃತದೇಹ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು" ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ, ವಿಶೇಷವಾಗಿ ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಿಭಾಗದಲ್ಲಿ ಇವರು ಸಾಕಷ್ಟು ಕೆಲಸ ಮಾಡಿದ್ದರು. ಇವರು 2010ರ ಜನವರಿಯಿಂದ 2016ರ ಫೆಬ್ರವರಿಯವರೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾನಿರ್ದೇಶಕರಾಗಿದ್ದರು ಮತ್ತು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (ಡಿಎಆರ್ಇ) ಸರ್ಕಾರದ ಕಾರ್ಯದರ್ಶಿಯಾಗಿದ್ದರು. ಮಣಿಪುರದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ನೀಲಿ ಕ್ರಾಂತಿ ಅಂದರೆ ಬ್ಲೂ ರೆವಲ್ಯೂಷನ್ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಐಸಿಎಆರ್ನ ಮುಖ್ಯಸ್ಥರಾದ ಮೊದಲ ಕೃಷಿಯೇತರ ವಿಜ್ಞಾನಿಯಾಗಿದ್ದರು.
ಇವರ ನಿಧನಕ್ಕೆ ಅವರ ಆಪ್ತರು, ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. "ಕೆಎಸ್ಟಿಎ ಮಾಜಿ ಅಧ್ಯಕ್ಷ ಮತ್ತು ಐಸಿಎಆರ್ನ ಮಹಾನಿರ್ದೇಶಕ ಪದ್ಮಶ್ರೀ ಪ್ರೊ. ಎಸ್. ಅಯ್ಯಪ್ಪನ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರು ಅಸಾಧಾರಣ ವಿಜ್ಞಾನಿ, ದಾರ್ಶನಿಕ ನಾಯಕ ಮತ್ತು ಅದ್ಭುತ ಮಾನವವಾದಿಯಾಗಿದ್ದರು. ಅವರು ಭಾರತೀಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ, ವಿಶೇಷವಾಗಿ ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ನೀಡಿದ ಕೊಡುಗೆಗಳು ನಿಜವಾಗಿಯೂ ಅಮೋಘವಾಗಿದೆ. ಕೆಎಸ್ಟಿಎ ಅಧ್ಯಕ್ಷರಾಗಿ ಅವರು ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಅಪಾರ ಕೊಡುಗೆ ನೀಡಿದ್ದಾರೆ. ಅವರ ಪರಂಪರೆಯು ಪೀಳಿಗೆಯ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಇಡೀ ವೈಜ್ಞಾನಿಕ ಸಮುದಾಯಕ್ಕೆ ಹೃತ್ಪೂರ್ವಕ ಸಂತಾಪಗಳು" ಎಂದು ವಿಜ್ಞಾನಿ ಸುಕನ್ಯಾ ಸೊನಗಹಳ್ಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಬ್ಬಣ್ಣ ಅಯ್ಯಪ್ಪನ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಮತ್ತು ಮಂಗಳೂರಿನ ಮೀನುಗಾರಿಕೆ ಕಾಲೇಜಿನಿಂದ ಮೀನು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೀನುಗಾರಿಕೆ, ಲಿಮ್ನಾಲಜಿ ಮತ್ತು ಜಲ ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು. ಅಯ್ಯಪ್ಪನ್ 1978ರಲ್ಲಿ ಬ್ಯಾರಕ್ಪೋರ್ನ ಕೇಂದ್ರೀಯ ಒಳನಾಡಿನ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಐಸಿಎಆರ್ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1996ರಲ್ಲಿ ಅವರನ್ನು ಭುವನೇಶ್ವರದ ಸಿಐಎಫ್ಎ ನಿರ್ದೇಶಕರಾಗಿದ್ದರು. ಮುಂಬೈ (ಡೀಮ್ಡ್ ವಿಶ್ವವಿದ್ಯಾಲಯ) ಸಿಐಎಫ್ಇ ನಿರ್ದೇಶಕರಾಗಿದ್ದರು. 2002ರಲ್ಲಿ ಐಸಿಎಆರ್ನ ಪ್ರಧಾನ ಕಚೇರಿಗೆ ಉಪ ಮಹಾನಿರ್ದೇಶಕರಾಗಿ (ಮೀನುಗಾರಿಕೆ) ನೇಮಕಗೊಂಡರು. ಎಂಟು ವರ್ಷಗಳ ಬಳಿಕ ಡಿಎಆರ್ಡಿಇ ಕಾರ್ಯದರ್ಶಿ ಮತ್ತು ಐಸಿಎಆರ್ನ ಮಹಾನಿರ್ದೇಶಕರಾದರು. ಇವರು ರಾಷ್ಟ್ರೀಯ ಮಾನ್ಯತೆ ಮಂಡಳಿ ಎನ್ಎಬಿಎಲ್ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.