ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ

ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ

Alvas Virasat 2024: ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ.10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳ, ಕೃಷಿ, ಆಹಾರ ಮೇಳಗಳ ವಿವರವಾದ ವೇಳಾಪಟ್ಟಿ ಇಲ್ಲಿದೆ.

ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ವಿವರ. (ಸಾಂಕೇತಿಕ ಚಿತ್ರ)
ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ವಿವರ. (ಸಾಂಕೇತಿಕ ಚಿತ್ರ) (Dr Mohan Alva)

Alvas Virasat 2024: ಆಳ್ವಾಸ್ ಶಿಕ್ಷಣದ ಪ್ರತಿಷ್ಠಾನ ಆಯೋಜಿಸುವ 30ನೇ ವರ್ಷದ ’ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಜೊತೆಗೆ ಡಿ.10ರಿಂದ 15ರ ವರೆಗೆ ದಕ್ಷಿಣ ಕನ್ನಡದ ಮೂಡುಬಿದಿರೆ ಸಮೀಪ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಸಾರಥ್ಯದಲ್ಲಿ 30ನೇ ವರ್ಷದ ವಿರಾಸತ್ ಬಹಳ ಮಹತ್ವಪೂರ್ಣವಾಗಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವೈಶಿಷ್ಟ್ಯಪೂರ್ಣಗೊಳಿಸಲಾಗಿದೆ. ಸಾಂಸ್ಕೃತಿಕ ವೈಭವದ ಜೊತೆಗಿನ ಮೇಳಗಳು, ಕಲಿಕೆ ಹಾಗೂ ಜೀವನೋಲ್ಲಾಸದ ಸೆಲೆಗಳಾಗಿವೆ. ಈ ಬಾರಿ ಸಾಂಘಿಕ ಪ್ರದರ್ಶನಗಳಿಗೆ ಒತ್ತು ನೀಡಲಾಗಿದ್ದು, ವಿವಿಧತೆಯಲ್ಲಿ ಏಕತೆಯ ಅಭಿವ್ಯಕ್ತಿಯಾಗಲಿದೆ. ಡಿ.10ರಿಂದ ಡಿ.14ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇಳಗಳಿದ್ದರೆ, ಡಿ.15ರಂದು ಸಂಪೂರ್ಣವಾಗಿ ಮೇಳ ಹಾಗೂ ಪ್ರದರ್ಶನಗಳಿಗೆ ಮೀಸಲಿಡಲಾಗಿದೆ. ಪ್ರವೇಶ ಸಂಪೂರ್ಣ ಉಚಿತ.

ಆಳ್ವಾಸ್ ವಿರಾಸತ್ 2024; ಡಿ.10 ರಂದು ಉದ್ಘಾಟನೆ

ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಡಿ.10ರ ಮಂಗಳವಾರ ಸಂಜೆ 5.30ರಿಂದ 6.30ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಬಿಎಲ್ ಶಂಕರ್ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್, ಎಂ.ಜಿ.ಆರ್. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಕಾಯರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಬೆಂಗಳೂರು ಕೆ.ಎನಲ್.ಎನ್. ಎಂಜಿನಿಯರಿಂಗ್ ಆಡಳಿತ ನಿರ್ದೇಶಕ ಪ್ರಸನ್ನ ಕುಮಾರ್ ಶೆಟ್ಟಿ, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್‌ನ ಎಂ.ರವೀಂದ್ರನಾಥ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಜಯಶ್ರೀ ಅಮರನಾಥ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ಮೂಡುಬಿದಿರೆ ಬಿಮಲ್ ಕನ್‌ಸ್ಟ್ರಕ್ಷನ್ಸ್ ಪ್ರವೀಣ್ ಕುಮಾರ್ ಉಪಸ್ಥಿತರಿರುವರು.

ಭವ್ಯ ಸಾಂಸ್ಕೃತಿಕ ಮೆರವಣಿಗೆ: ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 3000ಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

ರಥಾರತಿ: ರಾತ್ರಿ 8.30ರಿಂದ 9.30ರ ವರೆಗೆ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ, ಸರಸ್ವತಿ, ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.

ಆಳ್ವಾಸ್ ವಿರಾಸತ್ 2024; ಡಿ.11ರಂದು ಪ್ರಶಸ್ತಿ ಪ್ರದಾನ

ಸಂಜೆ 5.45ರಿಂದ 6.30ರ ವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. 6.35ರಿಂದ 7.30ರ ವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು.

ಬಳಿಕ ರಾತ್ರಿ 7.45ರಿಂದ 9ರ ವರೆಗೆ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9ರಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.

ಆಳ್ವಾಸ್ ವಿರಾಸತ್; ಡಿ.12 ರಂದು ಸಂಗೀತ ಲಹರಿ, ನೃತ್ಯ ವೈವಿಧ್ಯ

ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 8ರ ವೆರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರು ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರು ಸನಾತನ ನಾಟ್ಯಾಲಯ, ಕುಂದಾಪುರ ನೃತ್ಯ ವಸಂತ ನಾಟ್ಯಾಲಯ, ಮಂಗಳೂರು ಗಾನ ನೃತ್ಯ ಅಕಾಡೆಮಿ. ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರು ನೃತ್ಯ ವೈವಿಧ್ಯ ನಡೆಸಿಕೊಡುವರು. ರಾತ್ರಿ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

ಆಳ್ವಾಸ್ ವಿರಾಸತ್; ಡಿ.13 ರಂದು ತ್ರಿಪರ್ಣ ಪ್ರಸ್ತುತಿ

ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ’ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ 9ರ ವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ಪರ್‌ಫಾರ್ಮಿಂಗ್ ಆರ್ಟ್ಸ್ ’ನೃತ್ಯೋಲ್ಲಾಸ’ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.

ಆಳ್ವಾಸ್ ವಿರಾಸತ್; ಡಿ.14 ರಂದು ಸಂಗೀತ ರಸದೌತಣ

ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 9ರ ವರೆಗೆ ಚೆನ್ನೈ ಸ್ಟೆಕೇಟೋದ ಖ್ಯಾತ 25 ಕಲಾವಿದರಿಂದ ಭರ್ಜರಿ ’ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ.

ಆಳ್ವಾಸ್ ವಿರಾಸತ್; ಡಿ.15 ರಂದು ಪ್ರದರ್ಶನ ಮಾರಾಟ

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ.

ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತವೆ. 40 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೂ 15 ನಿಮಿಷ ಮೊದಲೇ ಆಸನ ಸ್ವೀಕರಿಸಬೇಕಾಗಿ ವಿನಂತಿ. ಮೂಡುಬಿದಿರೆಯ ಪ್ರಕೃತಿ ರಮಣೀಯ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿವೆ. ವಾಹನ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಟುಂಬ ಸಮೇತರಾಗಿ ಬಂದು ನೋಡಲೇಬೇಕಾದ ಅಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಹಾ ಮೇಳಗಳು- ಕೈಮಗ್ಗ ಸೀರೆಗಳ ಉತ್ಸವ

ಭಾರತದ 30 ಪ್ರದೇಶಾವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನ ಮಹಾಮೇಳಗಳಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೇಕಾರರಿಂದ ಗ್ರಾಹಕಕರಿಗೆ ನೇರ ಮರಾಟ ನಡೆಯಲಿದೆ. ಜಿಐ ಟ್ಯಾಗ್ ಹೊಂದಿರುವ ಮತ್ತು ಪ್ರಸಿದ್ಧಿ ಪಡೆದಿರುವ ಕೈಮಗ್ಗದ ಉತ್ಪನ್ನಗಳು ಉಡುಪಿ, ಇಳಕಲ್, ಕೋಲ್ಕತ್ತಾ, ತುಮ್ಮಿನಕಟ್ಟೆ, ವೆಂಕಟಗಿರಿ, ಕಾಶ್ಮೀರಿ, ಕಂಚೀವರಮಂ, ಮೈಸೂರು, ಕೊಳ್ಳೇಗಾಲ, ದಾವಣೆಗೆರೆ, ಚೆಟ್ಟಿನಾಡ್, ಕೇರಳ, ಹೈದ್ರಾಬಾದ್, ಮದ್ರಾಸ್‌ನ ಸೀರೆಗಳು ಮತ್ತು ಬಟ್ಟೆಗಳು ಮಾರಾಟಕ್ಕಿವೆ. ಈ ಉತ್ಸವವು ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ನೆರವೇರುತ್ತಿದೆ.

ಇಂಡಿಯನ್ ಆರ್ಟಿಸಾನ್ ಬಝಾರ್: ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಝಾರ್ ಈ ಬಾರಿಯ ವಿರಾಸತ್‌ನಲ್ಲಿ ನಡೆಯಲಿದೆ. ಭಾರತದಾದ್ಯಂತ ತಯಾರಾದ ವೈವಿಧ್ಯಮಯ ಕರಕುಶಲ ವಸ್ತುಗಳು, ಆಯಾರಾಜ್ಯಗಳ ಕರಕುಶಲ ಕರ್ಮಿಗಳಿಂದ ನೇರ ಮಾರಾಟ ನಡೆಯಲಿದೆ. ಬೆಂಗಳೂರು ಆರ್ಟ್ಸ ಮತ್ತು ಕ್ರಾಫ್ಟ್ ಮೇಳ ಹಾಗೂ ದೆಹಲಿಯ ಮೀನಾ ಬಝಾರ್ ಮೇಳಗಳಂತೆ ಈ ಮೇಳ ನಡೆಯಲಿದೆ.

ಆಳ್ವಾಸ್ ವಿರಾಸತ್; ಕೃಷಿ ಮೇಳ

ಕೃಷಿ ಕ್ಷೇತ್ರದ ಕುರಿತು ಯುವಜನತೆಯಲ್ಲಿ ಭರವಸೆಯ ಹೊಂಗಿರಣವನ್ನು ಮೂಡಿಸುವ ನಿಟ್ಟಿನಲ್ಲಿ ರೈತರು ಹಾಗೂ ಕೃಷಿ ಸಂಸ್ಕೃತಿಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಆಳ್ವಾಸ್, ವಿಶೇಷವಾಗಿ ’ಕೃಷಿ ಮೇಳ’ವನ್ನು ಆಯೋಜಿಸಿದೆ.

ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಇದು ಕೇವಲ ಪ್ರದರ್ಶನವಲ್ಲ, ಮಾರಾಟ ಮಳಿಗೆಗಳು, ಅನುಭವ ಪ್ರಾತ್ಯಕ್ಷಿಕೆಗಳೂ ಇರಲಿವೆ. ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ.

ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು ಈ ಬಾರಿಯ ವಿಶೇಷ ಆಕರ್ಷಣೆ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಮೊದಲು ಬಂದವರಿಗೆ ಮೊದಲ ಆದ್ಯತೆ. ರೈತರೇ ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣು ಪು?ಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಒಟ್ಟಾರೆ ಈ ಮಹಾಮೇಳದಲ್ಲಿ ೫೦೦ ರಿಂದ ೬೦೦ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಸ್ರೇಲ್ ತಂತ್ರಜ್ಞಾನ ಬಳಸಿ ಬೆಳೆದ ತರಕಾರಿ, ಹಣ್ಣು-ಹಂಪಲು, ಹೂವು- ಅಲಂಕಾರಿಕ ಗಿಡಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ.

ಆಳ್ವಾಸ್ ವಿರಾಸತ್; ಆಹಾರ ಮೇಳ

ಈ ಬಾರಿಯ ಆಳ್ವಾಸ್ ವಿರಾಸತ್‌ನಲ್ಲಿ ಆಹಾರ ಮೇಳದಲ್ಲಿ ಹೊಟ್ಟೆಗೆ ಹಿಟ್ಟು ಮಾತ್ರವಲ್ಲ, ಕಣ್ಣಿಗೆ ಸೌಂದರ್ಯ, ನಾಸಿಕಕ್ಕೆ ಕಂಪು, ಬಾಯಲ್ಲಿ ನೀರೂರಿಸುವ ರುಚಿಗಳಿವೆ. ತುಳುನಾಡಿನ ಪರಂಪರೆಯಿಂದ ಹಿಡಿದು, ಅಪ್ಪಟ ದೇಸೀಯ ತಿನಿಸು, ಇಂದಿನ ಫಾಸ್ಟ್‌ಫುಡ್ ವರೆಗಿನ ಆಹಾರ ವೈವಿಧ್ಯಗಳು ಲಭ್ಯ. ನಾಲಗೆಯಲ್ಲಿ ಖಾರ, ಹುಳಿ, ಉಪ್ಪು, ಸಿಹಿ...ಗಳ ಸಂಗಮ. ವಿಭಿನ್ನ ಆಹಾರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.

ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಅಂತಹ ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್‌ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟ ದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.

ಫಲಪುಷ್ಪ ಮೇಳ: ಫಲ ಹಾಗೂ ಪುಷ್ಪ ಮೇಳವು ನಮ್ಮ ಸಂಸ್ಕೃತಿಯಲ್ಲಿ ಆತಿಥ್ಯ ಹಾಗೂ ಗೌರವದ ದ್ಯೋತಕ. ಆದರೆ, ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೂ, ತರಕಾರಿ, ಹಣ್ಣು ಹಂಪಲುಗಳ ಕೃಷಿ ಕೊಂಚ ವಿರಳವಾಗಿದೆ. ಅದಕ್ಕಾಗಿ ತರಹೇವಾರಿ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ-ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ.

ಕೇವಲ ಹೂ-ಹಣ್ಣು ಮಾತ್ರವಲ್ಲ, ಅವುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲಿವೆ. ಬಾಲಾದಿವೃದ್ಧರಾಗಿ ಎಲ್ಲರೂ ಬಂದು ಆನಂದಿಸಬಹುದು. ಹೆಣ್ಣು ಮಕ್ಕಳಿಗೆ ಈ ಮೇಳ ಸ್ಪಲ್ಪ ಹೆಚ್ಚು ಖುಷಿ ನೀಡಲಿದೆ. ಇದನ್ನು ಕುಟುಂಬ ಸಮೇತ ಬಂದು ನೋಡಬೇಕು. ನಮ್ಮ ಸೌಂದರ್ಯ ಪ್ರಜ್ಞೆ ಹಾಗೂ ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ.

ಲಲಿತಾಕಲಾ ಮೇಳ: ವಿರಾಸತ್‌ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಬಣ್ಣ- ಕುಂಚದ ಮೂಲಕ ರಂಗು ಮೂಡಿಸುವ, ಬಣ್ಣದಾಟದಲ್ಲೇ ಸಂದೇಶ ರವಾನಿಸುವ ಕಲಾವಿದರ ಕೌಶಲ ಹಾಗೂ ಸೃಜನಶೀಲತೆಯೇ ಈ ಕಲಾಕೃತಿಗಳು. ದೇಶ-ವಿದೇಶ ವಿಖ್ಯಾತ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಛಾಯಾಚಿತ್ರಗಳ ಪ್ರದರ್ಶನ: ಒಂದು ಛಾಯಾಚಿತ್ರ ಸಾವಿರ ಶಬ್ದಗಳಿವೆ ಸಮ ಎಂಬುದು ಉಕ್ತಿ. ಸೃಜನಶೀಲತೆಯಿಂದ ಸೆರೆ ಹಿಡಿದ ಬಣ್ಣ-ಬೆಳಕು-ನೆರಳಿನ ಚಿತ್ತಾರವು ನೈಜತೆಗೂ ಸಾಕ್ಷಿ. ಅಂತಹ ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳು, ಬುಡಕಟ್ಟು ಸಮುದಾಯಗಳನ್ನು ಪ್ರತಿಬಿಭಿಸುವ 600 ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ.

ಕಲಾಕೃತಿಗಳ ಪ್ರದರ್ಶನ: ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದಲ್ಲಿ ವಿಶೇ? ಕಲಾಕೃತಿಗಳ ಬೃಹತ್ ಪ್ರದರ್ಶನ ಇರಲಿವೆ. ಇವು ಬಾಲಾದಿವೃದ್ಧರಾಗಿ ಎಲ್ಲರನ್ನು ಸೆಳೆಯಲಿದೆ. ನೈಜ ರೂಪವೇ ಅವತರಿಸಿದ ಸ್ವರೂಪದಲ್ಲಿ ಈ ಕಲಾಕೃತಿಗಳು ಕಂಗೊಳಿಸಲಿವೆ. ಇವುಗಳು ಒಂದು ರೀತಿಯ ಸೆಲ್ಫಿ ಕೇಂದ್ರಗಳೂ ಹೌದು.

ಆಳ್ವಾಸ್ ವಿರಾಸತ್; ರಾಜ್ಯಮಟ್ಟದ ಸ್ಕೌಟ್ಸ್-ಗೈಡ್ಸ್, ರೋವರ್ಸ್- ರೇಂಜರ್ಸ್ ಸಾಂಸ್ಕೃತಿಕ ಉತ್ಸವ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ಶಿಬಿರ ಆಯೋಜಿಸಿದೆ. ದಿನವೊಂದಕ್ಕೆ ಆರು ವಿವಿಧ ಚಟುವಟಿಕೆಗಳ ಮೂಲಕ ಈ ಶಿಬಿರವು 5 ದಿನಗಳ ಕಾಲ ನಡೆಯಲಿದ್ದು ಶಿಬಿರಾರ್ಥಿಗಳಿಗೆ ದೇಶಪ್ರೇಮ-ದೇಶಿಯತೆ, ದೇಶೀಯ ಕಲೆಗಳ ಅನಾವರಣ, ಪರಿಸರ ಪ್ರಜ್ಞೆ, ಸಾಹಸ ಕ್ರೀಡೆಗಳು, ಸೌಹಾರ್ದತೆ ಸಾಮರಸ್ಯ ಬದುಕಿನ ತಿಳಿವಳಿಕೆ, ಸೌಂದರ್ಯ ಪ್ರಜ್ಞೆ, ಕೃಷಿಯ ಬದುಕು, ಕರಕುಶಲಗಳ ತಿಳುವಳಿಕೆ, ದೇಶೀಯ ಆಹಾರ ಪದಾರ್ಥಗಳ ಪರಿಚಯ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆಯ ಪ್ರಾತ್ಯಕ್ಷಿಕೆಗಳ ಕಲಿಕೆ, ಮನೋರಂಜನೆಗಳು, ಯೋಗ, ಪ್ರಾಣಾಯಾಮ ತರಬೇತಿಗಳು, ಸೇವಾ ಮನೋಭಾವನೆ ಮೊದಲಾದ ವಿಚಾರಗಳಲ್ಲಿ ಅರ್ಥಪೂರ್ಣ ತರಬೇತಿ ನೀಡಲಾಗುವುದು. ಭಾಗವಹಿಸುವ ಶಿಬಿರಾರ್ಥಿಗಳು ದಿನಾಂಕ ಡಿ.9 ರಂದು ಸಂಜೆ 5 ಗಂಟೆಯ ಒಳಗಾಗಿ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನ, ಸ್ವರಾಜ್ಯ ಮೈದಾನ, ಮೂಡುಬಿದಿರೆ ಇಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

Whats_app_banner