ಮತ್ತೆ ಮುನ್ನೆಲೆಗೆ ಬಂತು ಅಂಧಕಾಸುರ ಸಂಹಾರ ವಿವಾದ; ಇಂದು ರಾತ್ರಿ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಮತ್ತೆ ಮುನ್ನೆಲೆಗೆ ಬಂತು ಅಂಧಕಾಸುರ ಸಂಹಾರ ವಿವಾದ; ಇಂದು ರಾತ್ರಿ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ

ಮತ್ತೆ ಮುನ್ನೆಲೆಗೆ ಬಂತು ಅಂಧಕಾಸುರ ಸಂಹಾರ ವಿವಾದ; ಇಂದು ರಾತ್ರಿ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ

Andhakasura Samhara: ಕಳೆದ ವರ್ಷ ದೊಡ್ಡ ಗಲಭೆ ಸೃಷ್ಟಿಸಿದ್ದ ಅಂಧಕಾಸುರ ಸಂಹಾರ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ರಾತ್ರಿ (ಜನವರಿ 12) ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ನೂತನ ಚಿತ್ರಪಟ (ಎಡಭಾಗ) ಮತ್ತು ಸಂಧಾನ ಸಭೆ (ಬಲಭಾಗ).
ನೂತನ ಚಿತ್ರಪಟ (ಎಡಭಾಗ) ಮತ್ತು ಸಂಧಾನ ಸಭೆ (ಬಲಭಾಗ).

ಮೈಸೂರು: ನಂಜನಗೂಡಿನಲ್ಲಿ ಇಂದು ರಾತ್ರಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಡೆಯುತ್ತಿದೆ. ಆದರೆ ಕಳೆದ ವರ್ಷ ಅಂಧಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಿದ್ದ ಕಾರಣ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಕಿಡಿಗೇಡಿಗಳು ನಂಜುಂಡೇಶ್ವರನ ವಿಗ್ರಹದ ಮೇಲೆ ಎಂಜಲು ನೀರು ಎರಚಿ ಅಪಮಾನಿಸಿದ್ದರು. ಇದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು. ಹೀಗಾಗಿ ಈ ಬಾರಿ ಯಾವುದೇ ಗೊಂದಲ ನಿರ್ಮಾಣವಾಗಂತೆ ಆಚರಣೆ ಮಾಡುವ ಸಲುವಾಗಿ ಇತ್ತೀಚೆಗೆ ತಾಲೂಕು ಆಡಳಿತದ ವತಿಯಿಂದ ಶಾಂತಿ ಸಭೆ ನಡೆಸಲಾಗಿತ್ತು. ಆದರೆ ಶಾಂತಿ ಸಂಧಾನ ವಿಫಲವಾಗಿತ್ತು.

ನಂಜುಂಡೇಶ್ವರನ ಭಕ್ತರು ಹಾಗೂ ಅಂಧಕಾಸುರ ಸಂಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಭಯ ತಂಡಗಳ ಮುಖಂಡರೊಂದಿಗೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್​ಪಿ ರಘು ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿತ್ತು. ಕಳೆದ ಬಾರಿ ನಂಜುಂಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿದ್ದ ಪರಿಣಾಮ ನಂಜನಗೂಡು ಉದ್ವಿಗ್ನಗೊಂಡು ಬಂದ್ ಸಹ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ನಡೆಯಬೇಕಾದ ಅಂಧಕಾಸುರ ಸಂಹಾರದ ಕುರಿತು ಶಾಂತಿ ಸಭೆ ನಡೆಸಲಾಗಿತ್ತು.

ಅಂಧಕಾಸುರನ ನೂತನ ಚಿತ್ರ ಪ್ರದರ್ಶನ

ಕಳೆದ ಬಾರಿಯಂತೆ ಸಮಸ್ಯೆ ಆಗಬಾರದೆಂದು ಆಕ್ಷೇಪಾರ್ಹವಾದ ಅಂಧಕಾಸುರನ ಚಿತ್ರ ಬದಲಿಸಿ ರಾಜ್ಯ ಆಗಮ ಶಾಸ್ತ್ರ ಪಂಡಿತರ ಜೊತೆ ಚರ್ಚಿಸಿ ಶಿವ ಪುರಾಣದಲ್ಲಿ ಬರುವ ಅಂಧಕಾಸುರನ ವರ್ಣನೆಗೆ ತಕ್ಕಂತೆ ಚಿತ್ರ ರಚಿಸಲಾಗಿದೆ ಎಂದು ತಹಶೀಲ್ದಾರ್ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ನೂತನ ಚಿತ್ರಪಟವನ್ನು ಸಭೆಯಲ್ಲಿ ಪ್ರದರ್ಶಿಸಿದ್ದರು. ಇದಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ ಸೂಚಿಸಿದರು, ಇಲ್ಲಿಗೆ ವಿವಾದಕ್ಕೆ ತೆರೆ ಬಿದ್ದಿತು ಎನ್ನುವಷ್ಟರಲ್ಲಿ ದಲಿತ ಸಂಘರ್ಷ ಸಮಿತಿಯ ಮಲ್ಲಳ್ಳಿ ನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆಚರಣೆ ನಿಲ್ಲಿಸಲು ಕಾನೂನು ಹೋರಾಟ ಎಂದಿದ್ದ ನಾರಾಯಣ

ಇದೊಂದು ಮಾನವೀಯತೆ ಇಲ್ಲದ ಆಚರಣೆ, ಇದು ನಿಲ್ಲಬೇಕು. ಈ ಆಚರಣೆ ನಿಲ್ಲಿಸಬೇಕೆಂದು ನಾವು ಸರ್ಕಾರಕ್ಕೆ ಪತ್ರ ಬರೆದ್ದಿದ್ದೇವೆ. ಈ ಆಚರಣೆ ನಿಲ್ಲಿಸುವ ಕುರಿತು ಕಾನೂನು ಹೋರಾಟವನ್ನು ಮಾಡುತ್ತಿದ್ದೇವೆ. ಅಂಧಕಾಸುರನ ಚಿತ್ರವನ್ನು ಯಾರೂ ತುಳಿಯಬಾರದು ಹಾಗೂ ಅಂಧಕಾಸುರನ ಚಿತ್ರವನ್ನು ಚಿಕ್ಕದಾಗಿ ಬರೆದುಕೊಂಡು ಆಚರಣೆ ಮಾಡಿಕೊಳ್ಳಬೇಕು ಎಂದು ನಾರಾಯಣ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಒಪ್ಪದ ನಂಜುಂಡೇಶ್ವರನ ಭಕ್ತರು, ಮಹಿಷಾಸುರನ ಹೋಲುವ ಚಿತ್ರ ತೆಗೆಯುವುದು ನಮ್ಮ ಬೇಡಿಕೆಯಾಗಿತ್ತು. ದೇವಾಲಯದ ಆಡಳಿತ ಮಂಡಳಿ ಚಿತ್ರ ಬದಲಿಸಿ ಸಮಸ್ಯೆಗೆ ಪರಿಹಾರ ತಂದಿದೆ. ಆದರೆ ಈಗ ಅಂಧಕಾಸುರನ ಚಿತ್ರವನ್ನು ತುಳಿಯಬಾರದು ಚಿಕ್ಕದಾಗೆ ಚಿತ್ರ ಬರೆಯಬೇಕು, ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಾ ಬೇರೆ ವರಸೆ ತೆಗೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.

ಇದು ನಂಜನಗೂಡಿನಲ್ಲಿ ಶಾಂತಿ ಕದಡುವ ಹುನ್ನಾರ. ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಕೈಪಿಡಿಯಲ್ಲಿ ಇರುವಂತೆ ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೇಯೋ ಅದೇ ನಡೆಯಬೇಕು. ಇವರು ಹೇಳಿದಂತೆ ಬದಲಾವಣೆಗೆ ಒಪ್ಪಲು ಸಾಧ್ಯವಿಲ್ಲ. ಇದು ನಮ್ಮ ಧಾರ್ಮಿಕ ಆಚರಣೆ, ಇದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಇದೊಂದು ಸಂವಿಧಾನ ವಿರೋಧಿ ನಡೆ. ಈ ಕುರಿತು ಭಕ್ತರೆಲ್ಲರೂ ಸೇರಿ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲ್ಲಿದ್ದೇವೆ ಎಂದು ಯುವ ಬ್ರಿಗೇಡ್ ಸಂಘಟಕ ಚಂದ್ರಶೇಖರ್ ಹೇಳಿಕೆ ನೀಡಿದ್ದರು.

Whats_app_banner