ಬಡವರ ಅನ್ನಭಾಗ್ಯದ ಅಕ್ಕಿಯನ್ನು ಮಳೆಯಲ್ಲಿ ಒದ್ದೆ ಮಾಡುವ ಭ್ರಷ್ಟ ವ್ಯವಸ್ಥೆ; ಪತ್ರಕರ್ತ ರಾಜೀವ ಹೆಗಡೆ ಬರಹ
ಬಡವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಯೋಜನೆ ಅನ್ನಭಾಗ್ಯ. ಆದರೆ, ಅದನ್ನು ಅಂತಿಮ ಫಲಾನುಭವಿಗೆ ತಲುಪಿಸುವಲ್ಲಿ ಲೋಪಗಳಾಗುತ್ತಿದೆ. ಬಡವರ ‘ಅನ್ನಭಾಗ್ಯ’ ಅಕ್ಕಿಯನ್ನು ಮಳೆಯಲ್ಲಿ ಒದ್ದೆ ಮಾಡುವ ಭ್ರಷ್ಟ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಬಡವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಜಾರಿಯಾಗಿರುವ ಯೋಜನೆಯ ಫಲ ಅಂತಿಮ ಫಲಾನುಭವಿಗೆ ತಲುಪುವಾಗ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದರ ಪರಿಶೀಲನೆ ಆಗುತ್ತಿಲ್ಲ. ಇಂತಹ ಅನೇಕ ಲೋಪಗಳು ಯೋಜನೆಯಲ್ಲಿವೆ. ಅಂತಹ ಒಂದು ಲೋಪದ ಕಡೆಗೆ ವಿಶೇಷವಾಗಿ, ಬಡವರ ‘ಅನ್ನಭಾಗ್ಯ’ ಅಕ್ಕಿಯನ್ನು ಮಳೆಯಲ್ಲಿ ಒದ್ದೆ ಮಾಡುವ ಭ್ರಷ್ಟ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಕಡೆಗೆ ಪತ್ರಕರ್ತ ರಾಜೀವ ಹೆಗಡೆ ಗಮನಸೆಳೆದಿದ್ದಾರೆ.
ಬಡವರ ‘ಅನ್ನಭಾಗ್ಯ’ ಅಕ್ಕಿಯನ್ನು ಮಳೆಯಲ್ಲಿ ಒದ್ದೆ ಮಾಡುವ ಭ್ರಷ್ಟ ವ್ಯವಸ್ಥೆ
ʼಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆʼ ಎನ್ನುವ ಗಾದೆಯಿದೆ. ಇದನ್ನು ನಮ್ಮ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಪ್ಪದೇ ಅನ್ವಯಿಸಬೇಕು. ಬಡವರ ಹೊಟ್ಟೆ ತುಂಬಿಸಲು ಹೊರಟಿರುವ ಸರ್ಕಾರ ಅಕ್ಷರಶಃ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬಡವರ ಅಕ್ಕಿ ಹಾಳಾಗುತ್ತಿದೆ.
ಮೊನ್ನೆ ಊರಿನಿಂದ ಬರುವಾಗ ಶಿವಮೊಗ್ಗ-ಚಿತ್ರದುರ್ಗ ರಸ್ತೆಯಲ್ಲಿ ಒಂದು ಲಾರಿ ಕಾಣಿಸಿತು. ಆಕಾಶದಲ್ಲಿ ಕಾರ್ಮೋಡವಿದ್ದರೂ ಮುಚ್ಚದಿರುವುದನ್ನು ನೋಡಿ, ಇದು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಅಕ್ಕಿ-ಕಾಳಾಗಿರುತ್ತದೆ ಎನ್ನುವುದು ಖಾತ್ರಿಯಾಯಿತು. ಯಾವುದೋ ಖಾಸಗಿ ಸಂಸ್ಥೆಗೆ ಸೇರಿದ್ದ ಅಕ್ಕಿ-ಬೇಳೆಯಾಗಿದ್ದರೆ, ಖಂಡಿತವಾಗಿಯೂ ಮುಚ್ಚಿಗೆ ಮಾಡಿರುತ್ತಿದ್ದರು. ಲಾರಿ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ʼಅನ್ನಭಾಗ್ಯʼ ಯೋಜನೆಯ ಅಕ್ಕಿ ಎನ್ನುವುದು ಸ್ಪಷ್ಟವಾಯಿತು. ಆ ಲಾರಿಯನ್ನು ಹಿಂದೆ ಹಾಕಿ ಕೇವಲ ಅರ್ಧ ಕಿಲೋ ಮೀಟರ್ ಮುಂದೆ ಬರುವಷ್ಟರಲ್ಲಿ ಭಾರಿ ಮಳೆ ಸುರಿಯಿತು. ಆ ಮಳೆಗೆ ನೂರಾರು ಅಕ್ಕಿ ಚೀಲದೊಳಗೆ ನೀರು ಹೋಗಿರುತ್ತದೆ. ಅಲ್ಲಿಯೇ ಲಾರಿಯನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕು ಎನ್ನುವಷ್ಟು ಸಿಟ್ಟು ಬಂದಿತ್ತು. ಆದರೆ ಕಾರಿನೊಳಗೆ ಕುಟುಂಬ ಸದಸ್ಯರಿದ್ದರು ಹಾಗೂ ನಮ್ಮ ಆರೋಗ್ಯ ಕೂಡ ಸರಿ ಇರದ ಕಾರಣಕ್ಕೆ ಆ ಸಾಹಸಕ್ಕೆ ಕೈ ಹಾಕುವ ಪ್ರಯತ್ನ ಮಾಡಲಿಲ್ಲ.
ಕಾಮನ್ ಸೆನ್ಸ್ ಇಲ್ಲದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು
ನಾವು ಮನೆಯಲ್ಲಿ ಪ್ರತಿ ದಿನ ಊಟಕ್ಕೆ ಬಳಸುವ ಅಕ್ಕಿಯನ್ನು ಒಂದು ಡಬ್ಬಾದಲ್ಲಿ ಹಾಕಿರುತ್ತೇವೆ. 'ಅದಕ್ಕೆ ಒಣ ಕೈ ಮಾತ್ರ ಹಾಕಿ, ಒದ್ದೆ ಕೈ ಹಾಕಿದರೆ ಅಕ್ಕಿ ಹಾಳಾಗುತ್ತದೆʼ ಎಂದು ಸಣ್ಣವರಿದ್ದಾಗಿನಿಂದಲೇ ಅಮ್ಮ ಬುದ್ಧಿವಾದ ಹೇಳುತ್ತಿದ್ದರು. ಏನಾದರೂ ಅಕ್ಕಿ ಡಬ್ಬಿಗೆ ಒದ್ದೆ ಕೈ ಹಾಕಿದರೆ ವಾರದೊಳಗೆ ಅದರಲ್ಲಿ ಸುರಬಿ ಆಗುತ್ತಿತ್ತು ಅಥವಾ ಅಕ್ಕಿಯು ಹಿಟ್ಟಿನಂತೆ ಪುಡಿಯಾಗಲು ಆರಂಭಿಸುತ್ತಿತ್ತು. ಈ ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಇಂತಹದೊಂದು ಕಾಮನ್ ಸೆನ್ಸ್ ಇರುತ್ತದೆ. ಆದರೆ ಪ್ರತಿ ವರ್ಷ ಸಾವಿರಾರು ಕೋಟಿ ಬೆಲೆ ಬಾಳುವ ಅಕ್ಕಿಯನ್ನು ಸಾಗಿಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾತ್ರ ಈ ಬಗ್ಗೆ ಲಕ್ಷ್ಯವೇ ಇಲ್ಲ.
ಅಂದ್ಹಾಗೆ ಇದೇನು ಮೊದಲ ಬಾರಿಯಲ್ಲ. ಒಂದೆರಡು ವರ್ಷದ ಹಿಂದೆ ಕಚೇರಿಯಿಂದ ಮನೆಗೆ ಬರುವಾಗ ಮಾರತಹಳ್ಳಿಯ ಬಳಿ, ಇದೇ ರೀತಿ ಲಾರಿ ಸಿಕ್ಕಿತ್ತು. ಕೂಡಲೇ ದೂರು ನೀಡಿದಾಗ, ಕ್ರಮವಹಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ನೀವು ಕೂಡ ಇಂತಹ ಅಕ್ಕಿಯ ಲಾರಿಯನ್ನು ಪ್ರತಿ ದಿನ ನೋಡುತ್ತಿರುತ್ತೀರಿ. ಈಗ ಈ ಘಟನೆ ಕುರಿತು ದೂರು ನೀಡಲು ಮುಂದಾದಾಗ ಸಹಾಯವಾಣಿ 1967, 1800 425 9339ರಿಂದ ಸೂಕ್ತ ಸ್ಪಂದನೆಯೇ ದೊರೆಯಲಿಲ್ಲ. ವೆಬ್ಸೈಟ್ನಲ್ಲಿ ದೂರು ನೀಡಲು ಹೋದರೆ, ಅದು ಕೆಲಸವನ್ನೇ ಮಾಡುತ್ತಿಲ್ಲ.
ಶಿವಮೊಗ್ಗದ ಲಾರಿಗೆ ಸಂಬಂಧಿಸಿ ವಾಹನ ಸಂಖ್ಯೆಯನ್ನು ಇಲ್ಲಿ ದಾಖಲಿಸುತ್ತಿದ್ದು , KA19 AA9796 ಆಗಿದೆ. ಗಾಡಿ ಸಂಖ್ಯೆಯನ್ನು ಗಮನಿಸಿದರೆ ದಕ್ಷಿಣ ಕನ್ನಡದ ಕಡೆಯಿಂದ ಬೇರೆ ಯಾವುದೋ ಜಿಲ್ಲೆಗೆ ಅಕ್ಕಿಯನ್ನು ಸಾಗಿಸುವಂತಿದೆ. ಅಂದರೆ ಮಳೆ ಬರುವ ಮುನ್ಸೂಚನೆ ಇರುವಾಗ 200-300 ಕಿ.ಮೀ ದೂರವನ್ನು ಈ ಲಾರಿ ಕ್ರಮಿಸುತ್ತಿದೆ. ನೂರಾರು ಅಕ್ಕಿ ಮೂಟೆಯಿರುವ ಈ ಲಾರಿಗೆ ಕನಿಷ್ಠ ಪ್ರಮಾಣದ ಮುಚ್ಚಿಗೆ ಕೂಡ ಮಾಡಲಾಗಿಲ್ಲ. ಒಂದು ಲಾರಿಯಲ್ಲಿ ಟನ್ಗಟ್ಟಲೇ ಅಕ್ಕಿ ಸಾಗಣೆ ಮಾಡಲಾಗುತ್ತದೆ. ಇದರ ಮೌಲ್ಯವು ಅರ್ಧ ಕೋಟಿಗೂ ಅಧಿಕವಾಗಬಹುದು. ಇಷ್ಟೊಂದು ಪ್ರಮಾಣದ ಅಕ್ಕಿಯನ್ನು ಈ ರೀತಿ ನಿರ್ಲಕ್ಷ್ಯದಿಂದ ತೆಗೆದುಕೊಂಡು ಹೋಗಲು ಅನುಮತಿ ನೀಡಿದ ಅಧಿಕಾರಿ ಹಾಗೂ ಆಡಳಿತ ವ್ಯವಸ್ಥೆಗೆ ನನ್ನದೊಂದು ಧಿಕ್ಕಾರ.
ಇಂತಹ ವ್ಯವಸ್ಥೆ ಬಗ್ಗೆ ಕಣ್ಮುಚ್ಚಿ ಕುಳಿತ ಅಧಿಕಾರಿ ಹಾಗೂ ಗುತ್ತಿಗೆದಾರನು ತನ್ನ ಮನೆಗೆ ಒಂದು ಮೂಟೆ ಅಕ್ಕಿಯನ್ನು ಒದ್ದೆ ಮಾಡಿಕೊಂಡು ತೆಗೆದುಕೊಂಡು ಹೋದರೆ ಹೆಂಡತಿ ಅಥವಾ ಅಮ್ಮಾ ಬಾಯಿಗೆ ಬಂದಂತೆ ಬೈಯುತ್ತಾರೆ. ವಾಸ್ತವದಲ್ಲಿ ಯಾವ ಅಧಿಕಾರಿ ಅಥವಾ ಗುತ್ತಿಗೆದಾರ ಮನೆಗೆ ಒಯ್ಯುವಾಗ ಇಂತಹ ನಿರ್ಲಕ್ಷ್ಯ ತೋರುವುದಿಲ್ಲ. ಆದರೆ ಈ ಬೇಜವಾಬ್ದಾರಿ ಆಡಳಿತ ವ್ಯವಸ್ಥೆಗೆ ಕಿವಿ ಹಿಂಡುವವರೇ ಇಲ್ಲದಂತಾಗಿದೆ.
ಕ್ರಿಮಿನಲ್ ಪ್ರಕರಣ ದಾಖಲಿಸಬೇಕು!
ಈಗಾಗಲೇ ಅದೆಷ್ಟೋ ಅನರ್ಹರಿಗೆ ʼಅನ್ನಭಾಗ್ಯʼ ಯೋಜನೆಯ ಅಕ್ಕಿ ತಲುಪುತ್ತಿದೆ. ಇನ್ನೊಂದೆಡೆ ಅಕ್ಕಿ ಹಂಚಿಕೆ ಸಂದರ್ಭದಲ್ಲಿ ಪ್ರತಿದಿನ ಟನ್ಗಟ್ಟಲೇ ಅಕ್ಕಿ ಕಾಳಸಂತೆಗೆ ಹೋಗುತ್ತಿದೆ. ಇದರ ಮಧ್ಯೆ ಅಧಿಕಾರಿಗಳ ಇಂತಹ ನಿರ್ಲಕ್ಷ್ಯದಿಂದ ಅದೆಷ್ಟು ಟನ್ ಅಕ್ಕಿ ಹಾಳಾಗುತ್ತಿದೆಯೋ ದೇವರೇ ಬಲ್ಲ. ಬಡವರಿಗೆ ಸೇರಬೇಕಾದ ಈ ಅಕ್ಕಿಯನ್ನು ನಾಶ ಮಾಡುತ್ತಿರುವ ಅಥವಾ ಹಸಿದವರಿಗೆ ಕಳಪೆ ಗುಣಮಟ್ಟದ ಅಕ್ಕಿಯನ್ನು ವಿತರಿಸುತ್ತಿರುವ ಈ ಆಡಳಿತ ವ್ಯವಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ʼಬಡವರಿಗೆ ಪುಕ್ಕಟೆ ಅಕ್ಕಿ ನೀಡುತ್ತಿದ್ದೇವೆʼ ಎನ್ನುವ ಹೇಳಿಕೆಗೆ ಬದ್ಧತೆ ಮುಗಿಯುವುದಿಲ್ಲ. ಈ ರೀತಿಯ ನಿರ್ಲಕ್ಷದಿಂದ ಅಕ್ಕಿ ಹಾಳಾಗುವುದರ ಜತೆಗೆ, ಸಂಪನ್ಮೂಲದ ದುರ್ಬಳಕೆ ಆಗುತ್ತದೆ. ಜತೆಗೆ ಹಸಿದವರ ಹೊಟ್ಟೆಯನ್ನು ಹಾಳು ಮಾಡುವ ಕೆಲಸ ಕೂಡ ಆಗುತ್ತದೆ.
ಹಸಿದ ಬಡವರಿಗೆ ಹಳಸಿದ ಅನ್ನ ಕೊಡುವ ಕಟುಕರು ಹಾಗೂ ಈ ಭ್ರಷ್ಟ ಅಧಿಕಾರಿಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಬಡವರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಇಂತಹ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಮಾನತು ಮಾಡಬೇಕು. ಇವರ ಕುಟುಂಬಕ್ಕೆ ಆ ಹಾಳು ಅಕ್ಕಿಯನ್ನು ಒಂದು ತಿಂಗಳು ಸೇವಿಸಲು ನೀಡಬೇಕು. ಹಾಗೆಯೇ ಮುಚ್ಚಿಗೆಯಿಲ್ಲದೇ ವರ್ಷದ ಯಾವುದೇ ದಿನಗಳಲ್ಲಿ ಅಕ್ಕಿ-ಕಾಳು-ಬೇಳೆ ಸಾಗಣೆ ಮಾಡಕೂಡದು ಎನ್ನುವ ಕಠಿಣ ಮಾರ್ಗಸೂಚಿಯನ್ನುಹೊರಡಿಸಬೇಕು. ಇಲ್ಲವಾದಲ್ಲಿ ಹಸಿದವರ ಅಕ್ಕಿಯ ಬೆಲೆ ಈ ಭ್ರಷ್ಟರಿಗೆ ಗೊತ್ತಾಗುವುದೇ ಇಲ್ಲ. ಅಂದ್ಹಾಗೆ ರಾಜ್ಯದಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣ ಹೀಗಾಗಬಹುದು ಎನ್ನುವ ಉಡಾಫೆ ಉತ್ತರ ಇಲಾಖೆಯಿಂದ ಬರಬಹುದು. ಆದರೆ ಇದು ಜನಸಾಮಾನ್ಯವಾಗಿ ಹಲವೆಡೆ ನಡೆಯುತ್ತಿದೆ. ಇದಲ್ಲದೇ ಒಂದು ಅಕ್ಕಿ ಮೂಟೆ ಹಾಳಾದರೂ ಈ ರಾಜ್ಯದ ಒಂದು ಬಡ ಕುಟುಂಬದ ಹೊಟ್ಟೆ ಮಾಸಿಕವಾಗಿ ತುಂಬುವುದನ್ನು ಕಿತ್ತುಕೊಂಡಂತಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಕಾಳಜಿ ಇತ್ತ ಕಡೆಯೂ ಇರಲಿ.
ಈ ಅಕ್ಕಿ ಪರೀಕ್ಷಿಸಿ!
ನನಗಿರುವ ಮಾಹಿತಿಯಂತೆ ʼಅನ್ನಭಾಗ್ಯʼ ಯೋಜನೆಯ ಅಕ್ಕಿಗೆ ಹುಳ ಬೀಳಬಾರದು ಎನ್ನುವ ಕಾರಣಕ್ಕೆ Malathion ಅಥವಾ Fenitrothion ಎನ್ನುವ ರಾಸಾಯನಿಕವನ್ನು ಬಳಸುತ್ತಾರೆ. ಅದೇ ಕಾರಣದಿಂದ ಆ ಅಕ್ಕಿಗೆ ವಿಭಿನ್ನವಾದ ವಾಸನೆ ಇರುತ್ತದೆ. ಮೇಲೆ ಹೇಳಿದ ಬೇಜವಾಬ್ದಾರಿಯಿಂದ ಅಕ್ಕಿಯನ್ನು ರಕ್ಷಿಸಲು ಈ ರಾಸಾಯನಿಕವನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ. ಒಂದೊಮ್ಮೆ ಇದರ ಪ್ರಮಾಣ ಹೆಚ್ಚಾದರೆ, ವಾಂತಿ, ಭೇದಿ, ಉಸಿರಾಟದ ಸಮಸ್ಯೆ ಆಗಬಹುದು. ತೀರಾ ಗಂಭೀರ ಪ್ರಕರಣಗಳಲ್ಲಿ ನರ ದೌರ್ಬಲ್ಯ ಹಾಗೂ ಕೋಮಾದಂಥ ಪ್ರಕರಣ ಕೂಡ ಆಗಬಹುದು. ಈಗಾಗಲೇ ನಮ್ಮ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಒಂದಿಷ್ಟು ಆಹಾರಗಳಲ್ಲಿನ ಕಲಬೆರಕೆ ಬಗ್ಗೆ ಅಭಿಯಾನ ನಡೆಸಿ, ಪರೀಕ್ಷೆ ಮಾಡುತ್ತಿದೆ. ʼಅನ್ನಭಾಗ್ಯʼದ ಅಕ್ಕಿಯನ್ನು ಪರಿಶೀಲಿಸಿ ವರದಿ ನೀಡಿದ್ದರೆ ಒಳ್ಳೆಯದಿತ್ತು.
ಕೊನೆಯದಾಗಿ: ಬಡವರ ಪರ ಕಾಳಜಿಯೆಂದರೆ ಒಂದಿಷ್ಟು ಅಕ್ಕಿ, ದುಡ್ಡನ್ನು ಭಿಕ್ಷುಕರಿಗೆ ಕೊಟ್ಟಂತೆ ಎಸೆಯುವುದಲ್ಲ. ಬದಲಾಗಿ ಅರ್ಹ ಬಡವರಿಗೆ ಸೂಕ್ತ ರೀತಿಯಲ್ಲಿ ತಲುಪಿಸುವುದು ಕೂಡ, ಅಧಿಕಾರದ ಚುಕ್ಕಾಣಿ ಹಿಡಿದವರ ಜವಾಬ್ದಾರಿಯಾಗಿರುತ್ತದೆ. ಈ ರೀತಿ ಅವ್ಯವಸ್ಥೆಯಿಂದ ಬಡವರಿಗೆ ಸೂಕ್ತ ಸೌಕರ್ಯ ದೊರೆಯುವುದಿಲ್ಲ. ಇನ್ನೊಂದೆಡೆ ನಮ್ಮ ತೆರಿಗೆ ಹಣವು ಕಣ್ಮುಂದೆ ಹಾಳಾಗುತ್ತಿರುವುದನ್ನು ನೋಡಿ ಮೈಯೆಲ್ಲ ಉರಿಯುತ್ತದೆ.
| ಬರಹ: ರಾಜೀವ ಹೆಗಡೆ, ಪತ್ರಕರ್ತ, ಬೆಂಗಳೂರು