ಕನ್ನಡ ಸುದ್ದಿ  /  Karnataka  /  Anti Conversion Bill Presented In Legislative Council

Anti Conversion Bill: ಪರಿಷತ್‌ನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ; ಇಲ್ಲಿವೆ ಮುಖ್ಯಾಂಶಗಳು

ಕಳೆದ ಬಾರಿ ನಡೆದ ಬೆಳಗಾವಿ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆಯಾಗಿತ್ತು. ಅಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕವನ್ನು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್‌ನಲ್ಲಿ ಮಂಡಿಸಿದರು.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಇಂದು ಮಂಡಿಸಲಾಗಿದೆ. ಮತಾಂತರ ನಿಷೇಧ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವಿನ ಭಾರಿ ಚರ್ಚೆಗೂ ಮೇಲ್ಮನೆ ಸಾಕ್ಷಿಯಾಯಿತು. ಈ ವೇಳೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಕಳೆದ ಬಾರಿ ನಡೆದ ಬೆಳಗಾವಿ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆಯಾಗಿತ್ತು. ಅಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕವನ್ನು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್‌ನಲ್ಲಿ ಮಂಡಿಸಿದರು.

ವಿಧೇಯಕದ ಬಗ್ಗೆ ಮಾತನಾಡಿದ ಅವರು, ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತವಾಗಿ, ವಿವಿಧ ಆಮಿಷವೊಡ್ಡಿ ಮತಾಂತರ ನಡೆಯುತ್ತಿದೆ. ಹೀಗಾಗಿ ಇದು ಬಹಳ ಮಹತ್ವವಾದ ಕಾಯ್ದೆಯಾಗಿದೆ. ಹಿಂದಿನ ಎಲ್ಲ ಸರ್ಕಾರಗಳು ಇದರ ಬಗ್ಗೆ ಚಿಂತನೆ ನಡೆಸಿವೆ. ಸಂವಿಧಾನದ ವಿಧಿ 25ರ ಪ್ರಕಾರ ಅವರವರ ಧರ್ಮದಲ್ಲಿ ಬದುಕುವ ಹಕ್ಕು, ಧರ್ಮ ಪ್ರಚಾರದ ಹಕ್ಕು ನೀಡಿದೆ. ಕಳೆದ ಬಾರಿ ಈ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಮತಾಂತರ ಮಾಡುವ ವೇಳೆ ಸ್ವಇಚ್ಚೆಯಿಂದ ಮತಾಂತರಗೊಳ್ಳುವ ಬಗ್ಗೆ ಘೋಷಿಸಬೇಕು. ಮತಾಂತರ ಮಾಡುವವರು ಸಹ ವ್ಯಕ್ತಿಯ ಇಚ್ಚೆಯಂತೆ ಮತಾಂತರ ಮಾಡುತ್ತಿದ್ದೇವೆ ಎಂದು ಘೋಷಿಸಬೇಕು. ಈ ವೇಳೆ ಮತಾಂತರ ಆದವರು ಈ ಹಿಂದಿನ ತಮ್ಮ ಜಾತಿಯ ಎಲ್ಲ ಸೌಲಭ್ಯ ಕಳೆದುಕೊಳ್ಳುತ್ತಾರೆ ಎಂದು ಸಚಿವರು ವಿವರಿಸಿದರು.

ಈ ಕಾಯ್ದೆಯಲ್ಲಿ ಯಾರ ಧಾರ್ಮಿಕ ಸ್ವಾತಂತ್ರ್ಯವನ್ನೂ ಕಸಿಯುತ್ತಿಲ್ಲ. ಮತಾಂತರ ಆಗಲು ಯಾವುದೇ ನಿರ್ಬಂಧವೂ ಇಲ್ಲ. ಇಚ್ಛೆಯನ್ನು ಮುಕ್ತವಾಗಿ ಘೋಷಿಸಿ ಮತಾಂತರ ಆಗಬಹುದು. ಆದರೆ, ಆಮಿಷ‌, ಒತ್ತಡ ಹಾಗೂ ಬಲವಂತದಿಂದ ಮತಾಂತರ ಆಗಬಾರದು. ಯಾರೇ ಆದರೂ ಸ್ವಇಚ್ಛೆಯಿಂದ ಯಾವುದೇ ಧರ್ಮ ಸೇರುವ ಕುರಿತು ಪ್ರಕಟಿಸಬೇಕು. ಈ ಮನವಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲಿದೆ. ಮತಾಂತರ ಆದ ನಂತರ ಆ ವ್ಯಕ್ತಿ ಹಳೆ ಜಾತಿಯ ಎಲ್ಲಾ ಸವಲತ್ತು ಕಳೆದುಕೊಳ್ಳುತ್ತಾರೆ. ಇದೇ ವೇಳೆ ಹೊಸ ಧರ್ಮದ ಸವಲತ್ತು ಪಡೆಯುತ್ತಾನೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಮತಾಂತರ ವಿಧೇಯಕ ಸಂವಿಧಾನದ ಆಶಯಗಳ ಬಗ್ಗೆ ಇದೆ. ಇದು ಲೋಕಸಭೆಯಲ್ಲಿ ಚರ್ಚೆ ಆಗಬೇಕು ಎಂದರು.

ಮತಾಂತರ ನಿಷೇಧ ಕಾಯ್ದೆಯ ಮುಖ್ಯಾಂಶಗಳು ಹೀಗಿವೆ

-ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮುಂಚಿತವಾಗಿ ಫಾರ್ಮ್ 1ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಅವರೊಂದಿಗೆ ಮತಾಂತರ ಮಾಡಿಸುವ ವ್ಯಕ್ತಿ ಕೂಡಾ ಕೂಡ ಒಂದು ತಿಂಗಳ ಮೊದಲು ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು.

-ಮತಾಂತರವಾದ ಒಂದು ತಿಂಗಳ ಬಳಿಕ ಘೋಷಣಾಪತ್ರವನ್ನು ಭರ್ತಿ ಮಾಡಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು. ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ತನ್ನ ಗುರುತು ಘೋಷಿಸಬೇಕು. ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೋತ್ತರ ಪ್ರಕ್ರಿಯೆಯ ಸಂಪೂರ್ಣ ಘಟನಾವಳಿಗಳನ್ನು ದಾಖಲಿಸಬೇಕು.

-ಯಾವುದೇ ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸಬೇಕು. ತಕರಾರುಗಳಿದ್ದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಇಲಾಖೆಗಳಿಗೆ ಮಾಹಿತಿ ನೀಡಬೇಕು.

-ಇದಾದ ಬಳಿಕ ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡುತ್ತಾರೆ.

IPL_Entry_Point