ಕನ್ನಡ ಸುದ್ದಿ  /  Karnataka  /  Arabian Sea Cyclone Biparjoy Weather Forecast Fishermen Alert Imd Mangaluru Udupi Uttara Kannada News In Kannada Uks

Arabian Sea cyclone: ವಾಯುಭಾರ ಕುಸಿತ ಅರಬ್ಬೀ ಸಮುದ್ರದಲ್ಲಿ ಅಲೆಗಳು ಏಳುವ ಭೀತಿ, ಮೀನುಗಾರರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Arabian Sea cyclone: ಇಂದಿನಿಂದ ನಾಲ್ಕು ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮಳೆಯಾಗಲಿದೆ. ಸುಮಾರು 55 ಕಿ.ಮೀ. ಪ್ರತಿಗಂಟೆಯ ವೇಗದೊಂದಿಗೆ ಬಲವಾದ ಗಾಳಿ ಸಮುದ್ರತೀರದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೀನುಗಾರರನ್ನು ಎಚ್ಚರಿಸಿದೆ.

ಮಳೆ ಮುನ್ಸೂಚನೆ (ಸಾಂಕೇತಿಕ ಚಿತ್ರ)
ಮಳೆ ಮುನ್ಸೂಚನೆ (ಸಾಂಕೇತಿಕ ಚಿತ್ರ) (ANI / L. Anantha Krishnan )

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ರಣಬಿಸಿಲಿನೊಂದಿಗೆ ಉರಿಸೆಖೆ. ಆದರೆ ಬುಧವಾರದಿಂದ ಹಾಗಿರುವುದಿಲ್ಲ ಎನ್ನುತ್ತದೆ ಹವಾಮಾನ ಇಲಾಖೆ.

ಸುಮಾರು 55 ಕಿ.ಮೀ. ಪ್ರತಿಗಂಟೆಯ ವೇಗದೊಂದಿಗೆ ಬಲವಾದ ಗಾಳಿ ಸಮುದ್ರತೀರದಲ್ಲಿ ಬೀಸಲಿದ್ದು, ಮಳೆಯೂ ಆಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರಿಗೆ ಎಚ್ಚರಿಕೆಯನ್ನೂ ನೀಡಿದೆ.

ಜೂನ್ 6ರಿಂದ 9ರವರೆಗೆ, ಅಂದರೆ ನಾಲ್ಕು ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ದ ಹಿನ್ನೆಲೆಯಲ್ಲಿ ಮಳೆಯಾಗಲಿದೆ ಎಂಬ ಎಚ್ಚರಿಕೆ ನೀಡಿದೆ. ಜೂನ್ 6ರಂದು 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದರೆ, 7ರಿಂದ 9ರವರೆಗೆ ಗಂಟೆಗೆ 65 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಆದಾಗ್ಯೂ ಇದು ಮುನ್ಸೂಚನೆ ಮಾತ್ರವಾಗಿದ್ದು, ಬದಲಾವಣೆ ಇದ್ದೇ ಇರುತ್ತದೆ. ಆದರೆ ಮೀನುಗಾರರು ಈ ದಿನಗಳಲ್ಲಿ ಕಡಲಿಗೆ ಇಳಿಯದಂತೆ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಇದರಿಂದಾಗಿ ಸಮುದ್ರದ ಅಲೆಗಳು ಜಾಸ್ತಿ ಇರುವ ಸಂಭವನೀಯತೆಯೂ ಇದ್ದು, ಸಮುದ್ರವಿಹಾರಿಗಳು ಸಂಚರಿಸದೇ ಇರುವುದು ಒಳಿತು. ವೇಗವಾದ ಅಲೆಗಳು ಅಪ್ಪಳಿಸುವ ಸಾಧ್ಯತೆಯನ್ನು ಇಲಾಖೆ ನೀಡಿದೆ.

ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ, ಮುರುಡೇಶ್ವರ, ಕುಮಟಾ, ತದಡಿ, ಬೇಲಕೇರಿ (ಆವರ್ಸಾ)ದಲ್ಲಿರುವ ಬಂದರು ಪ್ರದೇಶಗಳಿಗೂ ಈಗಾಗೇ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ.

ಮುಂಗಾರು ವಿಳಂಬ ಸಾಧ್ಯತೆ

ಹವಾಮಾನ ಇಲಾಖೆ ನೀಡಿದ ಸೂಚನೆ ಪ್ರಕಾರ, ವಾಯುಭಾರ ಕುಸಿತದಿಂದಾಗಿ ಮಳೆಯಾಗಬಹುದು ಎಂದಿದೆ. ಆದರೆ ಮುಂಗಾರು ಪ್ರವೇಶ ಜೂನ್ 7ಕ್ಕೆ ಆಗಬಹುದು ಎಂದಿದ್ದನ್ನು ಮುಂದೆ ಹೋಗಿದೆ. ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ. 4ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು.

ಆದರೆ ಸದ್ಯದ ಪರಿಸ್ಥಿತಿ ಪ್ರಕಾರ ಮತ್ತೂ 4-5 ದಿನ ತಡವಾಗುವ ಸಾಧ್ಯತೆ ಇದೆ. ಬಹುತೇಕ ನಾಲ್ಕು ವರ್ಷದ ಬಳಿಕ ಮುಂಗಾರು ಆಗಮನ ಮತ್ತೆ ವಿಳಂಬವಾಗುತ್ತಿದೆ. 2019ರಲ್ಲಿ ಒಂದು ವಾರ ತಡವಾಗಿ ಅಂದರೆ ಜೂ. 8ರಂದು ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಿತ್ತು. ಇದರಿಂದಾಗಿ ದೇಶದ ವಿವಿಧೆಡೆ ಮಳೆ ತಲುಪುವಲ್ಲಿಯೂ ವಿಳಂಬವಾಗಿತ್ತು.

ಕೇರಳ ಪ್ರವೇಶಿಸುವ ಮುಂಗಾರು ಸಾಮಾನ್ಯವಾಗಿ ಒಂದು ಆಥವಾ ಎರಡು ದಿನದಲ್ಲಿ ರಾಜ್ಯ ಕರಾವಳಿಗೆ ತಲುಪುವುದು ವಾಡಿಕೆ. ಆದರೆ ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಕರಾವಳಿ ಕರ್ನಾಟಕಕ್ಕೆ ಪ್ರವೇಶಿಸಬೇಕಿದ್ದ ಮುಂಗಾರಿಗೆ ತಡೆಯಾಯಿತು. ಇದರಿಂದ ಆರು ದಿನ ವಿಳಂಬವಾಗಿ ಅಂದರೆ ಜೂ. 14ರಂದು ಕರಾವಳಿಗೆ ಪ್ರವೇಶ ಮಾಡಿತ್ತು.

ಇದೀಗ ಅದೇ ಸ್ಥಿತಿ ರಿಪೀಟ್ ಆಗಿದೆ. ಕೇರಳದಲ್ಲೇ ಮುಂಗಾರು ವಿಳಂಬವಾಗಿ ಆರಂಭಗೊಳ್ಳುವ ಸಾಧ್ಯತೆಗಳಿವೆ. ಈಗ ವಾಯುಭಾರ ಕುಸಿತ ಮತ್ತು ಕಡಲಲ್ಲಿ ಚಂಡಮಾರುತ ಏಳುವ ಭೀತಿಯಿಂದಾಗಿ ಮಳೆಯಾದರೂ ಅದು ಮುಂಗಾರು ಮಳೆಯಲ್ಲ. ಈ ಬಾರಿಯೂ ಮುಂಗಾರು ಪ್ರವೇಶ ವಿಳಂಬವಾಗಬಹುದು. ಆದರೆ ಈ ಬಾರಿ ಭರ್ಜರಿ ಮಳೆಯಾಗಲಿದೆ ಎನ್ನಲಾಗುತ್ತಿದೆ.

(ವರದಿ- ಹರೀಶ್‌ ಮಾಂಬಾಡಿ, ಮಂಗಳೂರು)

IPL_Entry_Point