ಕಾವ್ಯಗಳ ಸುತ್ತಮುತ್ತ: ಅಕ್ಕಮಹಾದೇವಿಯನ್ನೂ ಕಾಡಿದ ಗಂಡಸರು; ಲೇಖಕ ಅರುಣ್ ಜೋಳದ ಕೂಡ್ಲಿಗಿ ಅಭಿಮತ
ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ಕವಿತೆ, ಕಾವ್ಯಗಳದ್ದೇ ಚರ್ಚೆ. ಹೆಣ್ಣಿನ ವರ್ಣನೆ ವಿಚಾರ ನಾನಾ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಲೇಖಕ ಅರುಣ್ ಜೋಳದ ಕೂಡ್ಲಿಗಿ ಅಕ್ಕಮಹಾದೇವಿಯನ್ನೂ ಕಾಡಿದ ಗಂಡಸರು ಎಂದು ವಚನ ಕಾಲದತ್ತ ಓದುಗರ ಗಮನಸೆಳೆದಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಫೇಸ್ಬುಕ್ನಲ್ಲಿ ಕವಿತೆ, ಕಾವ್ಯಗಳ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಆಯೋಜಿಸಿದ್ದ 'ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ವಿಡಿಯೋಗಳ ಪೈಕಿ ಕೆಲವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಕವಿತೆಗಳ ಗುಣಮಟ್ಟದ ಕುರಿತಾದ ಚರ್ಚೆ ಒಂದೆಡೆ, ಇನ್ನೊಂದೆಡೆ, ಕವಿತೆ, ಕಾವ್ಯಗಳಲ್ಲಿ ಹೆಣ್ಣಿನ ವರ್ಣನೆ, ಹೆಣ್ಣಿನ ಶೋಷಣೆ ಮುಂತಾದವು ಗಮನಸೆಳೆದಿದೆ. ಈ ಪೈಕಿ ಲೇಖಕ ಅರುಣ್ ಜೋಳದ ಕೂಡ್ಲಿಗಿ ಅವರ ಬರಹವೂ ಒಂದು. ಅವರು ಅಕ್ಕಮಹಾದೇವಿಯನ್ನೂ ಗಂಡಸರು ಕಾಡಿದ್ದರು ಎಂದು ಕೆಲವು ವಿಚಾರಗಳತ್ತ ಗಮನಸೆಳೆದಿದ್ದಾರೆ. ಅದು ಇಲ್ಲಿದೆ.
ಅಕ್ಕಮಹಾದೇವಿಯನ್ನೂ ಕಾಡಿದ ಗಂಡಸರು..
ಪುರುಷ ವಚನಕಾರರಲ್ಲೇ ಹೆಣ್ಣನ್ನು ಗಂಡಿನ ಆಧೀನ, ಗಂಡನ್ನು ಶಕ್ತಿಕುಂದಿಸುವ ಚಂಚಲೆ ಎಂತೆಲ್ಲಾ ಬರೆದಿದ್ದಾರೆ. ಹೇಮಗಲ್ಲ ಹಂಪ ಎಂಬ ಒಬ್ಬ ವಚನಕಾರನಿದ್ದಾನೆ, ಆತ ಹೆಣ್ಣಿನ ಮೊಲೆಗಳನ್ನು 'ಹೆಣ್ಣಿನ ಮುದ್ದು ಮುಖ' ಎಂದೇ ವ್ಯಂಗ್ಯವಾಡಿದ್ದಾನೆ. ಆತನ ಒಂದು ವಚನ ಹೀಗಿದೆ:
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ
ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ
ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು.
ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ
ಬಣ್ಣದ ಛಾಯೆಯೆಂದರಿಯರು ನೋಡಾ.
ಹೆಣ್ಣಿನ ಸೋಲ್ಮುಡಿ ತಮ್ಮ ಕಟ್ಟುವ ಪಾಶವೆಂದರಿಯದೆ
ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ
ಮೋಹವೆಂದರಿಯರು ನೋಡಾ.
ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ.
ಹೆಣ್ಣಿನ ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ.
ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ.
ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ.
ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ
ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ
ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
ಎಂದು ಬರೆಯುತ್ತಾರೆ. ಈ ಹೇಮಗಲ್ಲು ಹಂಪ ಎಂಬ ವಚನಕಾರನ ತಲೆಯಲ್ಲಿ ಹೆಣ್ಣಿನ ಬಗ್ಗೆ ಅದೆಷ್ಟು ಪೂರ್ವಾಗ್ರಹ ಅಡಗಿ ಕೂತಿದೆ ಲೆಕ್ಕಹಾಕಿ. ಇಂತಹ ಹೆಣ್ಣಿನ ಪೂರ್ವಾಗ್ರಹ ಪೀಡಿತ ವಚನಕಾರರನ್ನು ಕುರಿತೇ ಅಕ್ಕಮಹಾದೇವಿ ಹೀಗೆ ವಚನ ಕಟ್ಟಿದ್ದಾಳೆ..
ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ, ತೋಳು ಕಂದಿದವಳ
ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ ?
ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ,
ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ ? ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವಳಿದವಳನು.
ಹೀಗೆ ಮಾರ್ಮಿಕವಾಗಿ ಅಣ್ಣಗಳಿರಾ, ತಂದೆಗಳಿರಾ ಎನ್ನುತ್ತಲೇ..ಬೆಂಕಿಯಂತಹ ಪ್ರತಿರೋಧವನ್ನು ತಣ್ಣಗೆ ದಾಟಿಸಿದ್ದಾಳೆ ಅಕ್ಕ..
ಬರಹ: ಅರುಣ್ ಜೋಳದ ಕೂಡ್ಲಿಗಿ