ಕನ್ನಡ ಸುದ್ದಿ  /  Karnataka  /  Attendance Shortage 27 Thousand Students Miss Sslc Exams In Karnataka

SSLC Exam: ಹಾಜರಾತಿ ಕೊರತೆ; ಎಸ್ಎಸ್ಎಲ್ಸಿ ಪರೀಕ್ಷೆಯಿಂದ ವಂಚಿತರಾದ 27 ಸಾವಿರ ವಿದ್ಯಾರ್ಥಿಗಳು!

ಇಂದಿನಿಂದ ಆರಂಭವಾಗುತ್ತಿರುವ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬರೋಬ್ಬರಿ 27 ಸಾವಿರ ವಿದ್ಯಾರ್ಥಿಗಳು ಬರೆಯುತ್ತಿಲ್ಲ. ಇದಕ್ಕೆ ಕಾರಣ ಹಾಜರಾತಿ ಕೊರತೆ. ಅಟೆಂಡೆನ್ಸ್ ಶಾರ್ಟೇಜ್ ನಿಂದ ಈ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿಲ್ಲ.

ಕಡಿಮೆ ಹಾಜರಾತಿಯಿಂದಾಗಿ 27 ಸಾವಿರ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿಲ್ಲ (ಫೋಟೋ-ಹೆಚ್ ಟಿ ಫೈಲ್)
ಕಡಿಮೆ ಹಾಜರಾತಿಯಿಂದಾಗಿ 27 ಸಾವಿರ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿಲ್ಲ (ಫೋಟೋ-ಹೆಚ್ ಟಿ ಫೈಲ್)

ಬೆಂಗಳೂರು: ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ ಅಂತಲೇ ಹೇಳಲಾಗುವ ಎಸ್ಎಸ್ಎಲ್ ಸಿ ಪರೀಕ್ಷೆ ಇಂದಿನಿಂದ (ಮಾಚ್ 31, ಶುಕ್ರವಾರ) ಆರಂಭವಾಗುತ್ತಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯುತ್ತವೆ. ಆದರೆ ಹಾಜರಾತಿ ಕೊರತೆಯಿಂದ ಸುಮಾರು 27 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ.

ಆರಂಭದಿಂದಲೂ ಸ್ಪಷ್ಟ ಸೂಚನೆಗಳಿದ್ದರೂ, 26,900 ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಲು ವಿಫಲರಾಗಿದ್ದಾರೆ. ಇದರ ಜೊತೆಗೆ ಶೇ. 5 ರಷ್ಟು ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳಿಂದಾಗಿ ತರಗತಿಗಳನ್ನು ತಪ್ಪಿಸಿಕೊಂಡಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಮಾರ್ಚ್/ಏಪ್ರಿಲ್ 2024 ರಲ್ಲಿ ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಹಾಜರಾಗಲು ಅವಕಾಶವಿರುವುದರಿಂದ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ರಾಜ್ಯಾದ್ಯಂತ 3,307 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 8.89 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಿಸಿಕ್ಯಾಮರಾ ಕಣ್ಗಾವಲು ಸೇರಿದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಿಎಂ ಬೊಮ್ಮಾಯಿ

ಇಂದಿನಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದಿನಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಯಾವುದೇ ರೀತಿಯ ಆತಂಕ ಹಾಗೂ ಗೊಂದಲಕ್ಕೆ ಒಳಗಾಗದೇ, ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ, ಸಮಾಧಾನ ಚಿತ್ತದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಕೂಡ ಎಸ್ಎಸ್ಎಲ್​​ಸಿ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಒದಗಿಸಿದೆ. ಇಂದಿನಿಂದ ಏಪ್ರಿಲ್ 15 ರವರೆಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗಲು ಮತ್ತು ಹಿಂದಿರುಗಲು ಬಿಎಂಟಿಸಿ ಸಾಮಾನ್ಯ ಸೇವೆಗಳ ಬಸ್ ಗಳಲ್ಲಿ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

ಹಾಲ್​ ಟಿಕೆಟ್​ ಇಲ್ಲದಿದ್ದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಟ್ರಿಪ್ ಕಾರ್ಯಾಚರಣೆ ಇರಲಿದೆ. ಹೆಚ್ಚುವರಿ ಟ್ರಿಪ್ ಅಗತ್ಯತೆ ಕಂಡುಬಂದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ

ಇಂದು ಬೆಳಗ್ಗೆ 10.30ಕ್ಕೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಇಂಗ್ಲಿಷ್‌ (ಎನ್‌ಸಿಇಆರ್‌ಟಿ) , ಸಂಸ್ಕೃತ ಪ್ರಥಮ ಭಾಷಾ ಪರೀಕ್ಷೆಗಳು ಆರಂಭವಾಗಲಿವೆ.

ಏಪ್ರಿಲ್‌ 1 ಮತ್ತು 2 ಕ್ರಮವಾಗಿ ಶನಿವಾರ ಮತ್ತು ಭಾನುವಾರವಾಗಿದ್ದು, ಪರೀಕ್ಷೆ ಇರುವುದಿಲ್ಲ. ಸೋಮವಾರ ಏಪ್ರಿಲ್‌ 4ರಂದು ಕೋರ್‌ ಸಬ್ಜೆಕ್ಟ್‌ ಗಣಿತ, ಸಮಾಜಶಾಸ್ತ್ರ ಪರೀಕ್ಷೆ ಇರುತ್ತದೆ. ಮಂಗಳವಾರ ಮಹಾವೀರ ಜಯಂತಿ ಸಾರ್ವತ್ರಿಕ ರಜೆ ಇರುತ್ತದೆ. ಬುಧವಾರ ಪರೀಕ್ಷೆ ಇರುವುದಿಲ್ಲ. ಗುರುವಾರ ಅಂದರೆ, ಏಪ್ರಿಲ್‌ 6 ರಂದು ದ್ವಿತೀಯ ಭಾಷೆ ಇಂಗ್ಲಿಷ್‌, ಕನ್ನಡ ಪರೀಕ್ಷೆಗಳು ಇರುತ್ತವೆ.

ಶುಕ್ರವಾರ ರಜೆ ಇರುತ್ತದೆ. ಶನಿವಾರ ಅಂದರೆ, ಏಪ್ರಿಲ್‌ 8ರಂದು ಕೋರ್‌ ಸಬ್ಜೆಕ್ಟ್‌ಗಳಾದ ಎಲಿಮೆಂಟ್‌ ಆಫ್‌ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಪ್ರೋಗ್ರಾಮಿಂಗ್‌, ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ ಇತ್ಯಾದಿ ಪರೀಕ್ಷೆಗಳು ನಡೆಯಲಿವೆ.

ಏಪ್ರಿಲ್‌ ಹತ್ತರಂದು ಕೋರ್‌ ಸಬ್ಜೆಕ್ಟ್‌ ಸೈನ್ಸ್‌ ಪರೀಕ್ಷೆ ನಡೆಯಲಿದೆ. ಅದೇ ದಿನ ಪೊಲಿಟಿಕಲ್‌ ಸೈನ್ಸ್‌/ ಹಿಂದೂಸ್ತಾನ್‌ ಮ್ಯೂಸಿಕ್‌/ ಕರ್ನಾಟಕ ಮ್ಯೂಸಿಕ್‌ ಪರೀಕ್ಷೆಗಳೂ ನಡೆಯಲಿವೆ.

ಏಪ್ರಿಲ್‌ ಹನ್ನೆರಡರಂದು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡವರಿಗೆ ಹಿಂದಿ/ ಕನ್ನಡ/ ಇಂಗ್ಲಿಷ್‌/ ಅರಾಬಿಕ್‌/ ಪರ್ಷಿನ್‌/ ಉರ್ದು/ ಸಂಸ್ಕೃತ/ ಕೊಂಕಣಿ/ ತುಳು ಪರೀಕ್ಷೆಗಳು ನಡೆಯಲಿವೆ. ಅದೇ ದಿನ ಎನ್‌ಎಸ್‌ಒಎಫ್‌ ಎಗ್ಸಾಂಗಳಾದ ಇನ್‌ಫಾರ್ಮೆಷನ್‌ ಟೆಕ್ನಾಲಜಿ/ ರಿಟೇಲ್‌/ಆಟೋಮೊಬೈಲ್‌/ ಹೆಲ್ತ್‌ಕೇರ್‌ / ಬ್ಯೂಟಿ ಆಂಡ್‌ ವೆಲ್‌ನೆಸ್‌ ಪರೀಕ್ಷೆಗಳೂ ನಡೆಯಲಿವೆ. ಏಪ್ರಿಲ್‌ 15ರಂದು ಕೋರ್‌ ಸಬ್ಜೆಕ್ಟ್‌ ಸೋಷಿಯಲ್‌ ಸೈನ್ಸ್‌ ಪರೀಕ್ಷೆ ನಡೆಯಲಿದೆ.

IPL_Entry_Point

ವಿಭಾಗ