Bakrid 2025: ಬಕ್ರೀದ್ ವೇಳೆ ಗೋವು, ಒಂಟೆ ವಧೆ ಮಾಡಬೇಡಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆಗೆ ಪೊಲೀಸರಿಗೆ ಸೂಚನೆ
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಯಾರೂ ಕೂಡ ಗೋವು ಹಾಗೂ ಒಂಟೆಗಳನ್ನು ವಧೆ ಮಾಡದಂತೆ ಸೂಚನೆ ನೀಡಲಾಗಿದೆ. ಪೊಲೀಸ್ಗ ತಪಾಸಣೆಯೂ ಚೆಕ್ಪೋಸ್ಟ್ಗಳಲ್ಲಿ ನಡೆಯಲಿದೆ.

ಮಂಡ್ಯ: ಬಕ್ರೀದ್ ಹಬ್ಬದ ಆಚರಣೆಯ ಸಮಯದಲ್ಲಿ ದೊಡ್ಡ ಪ್ರಾಣಿಗಳಾದ ಗೋವುಗಳು ಹಾಗೂ ಒಂಟೆಗಳನ್ನು ವಧೆ ಮಾಡುವ ಸಾಧ್ಯತೆ ಇರುತ್ತದೆ ದೊಡ್ಡ ಪ್ರಾಣಿಗಳಾದ ಗೋವು ಹಾಗೂ ಒಂಟೆ ವಧೆ ಕಾನೂನು ಬಾಹಿರ ಚಟುವಟಿಕೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ರಾಮನಗರ ಮದ್ದೂರು ಗಡಿ ಭಾಗದಲ್ಲಿ ಹಾಗೂ ನಾಗಮಂಗಲ ಕೆ ಆರ್ ಪೇಟೆ ಗಡಿಭಾಗದಲ್ಲಿ ಅಕ್ರಮ ಪ್ರಾಣಿ ಸಾಗಾಣಿಕೆ ನಡೆಯಬಹುದಾಗಿದ್ದು, ಇದರ ಕುರಿತು ನಿಗಾ ವಹಿಸಿ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಸಿಬಂದಿಗಳನ್ನು ನಿಯೋಜಿಸಿ ತಪಾಸಣೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ದೊಡ್ಡ ಪ್ರಾಣಿಗಳಾದ ಒಂಟೆ ಹಸು ಇತ್ಯಾದಿ ಪ್ರಾಣಿಗಳ ಬಲಿ ಕೊಡದಿರುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರಿದ್ ಹಬ್ಬದ ದಿನದಂದು ಪಶುಪಾಲನ ಇಲಾಖೆ ಅರಣ್ಯ ಇಲಾಖೆ ಸಾರಿಗೆ ಇಲಾಖೆ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಪ್ರಾಣಿ ಬಲಿ ತಡೆಗಟ್ಟುವ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಮದ್ದೂರು ತಾಲೂಕಿನ ಭೂತಗೆರೆಯಲ್ಲಿ ಸರ್ಕಾರಿ ಘೋಷಾಲೆಯು ಪ್ರಾರಂಭಗೊಂಡಿದ್ದು ಅಕ್ರಮ ಸಾಗಾಣಿಕೆ ಗೋವುಗಳನ್ನು ಸದರಿ ಘೋಶಾಲೆಗೆ ಬಿಡಬಹುದಾಗಿದೆ, ಜಾನುವಾರುಗಳ ಸಾಗಾಣಿಕೆ ಮಾಡಲು ಇಲಾಖೆಯಿಂದ ಸಾಗಾಣಿಕೆ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಸದರಿ ಪ್ರಮಾಣ ಪತ್ರವನ್ನು ಸಾಗಾಣಿಕೆ ಸಂದರ್ಭದಲ್ಲಿ ಸಾಗಾಣಿಕೆದಾರರು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.
ಸಾತನೂರಿನ ಆದಿಚುಂಚನಗಿರಿ ಗೋಶಾಲೆ, ಆದಿಚುಂಚನಗಿರಿ ಕ್ಷೇತ್ರದ ಆದಿಚುಂಚನಗಿರಿ ಗೋಶಾಲೆ, ದೊಡ್ಡ ಬ್ಯಾಡರಹಳ್ಳಿಯ ಧ್ಯಾನ್ ಫೌಂಡೇಶನ್ ಕೊರಕ್ಷಾ ಟ್ರಸ್ಟ್, (ಚೈತ್ರ ಗೋಶಾಲೆ), ಕೆರೆತೊಣ್ಣುರಿನ ಯತಿರಾಜ ಸೇವಾ ಟ್ರಸ್ಟ್, ಅರಕನಹಳ್ಳಿಯ ಕೃಷ್ಣ ಗಿರಿ ಗೋಶಾಲೆ ಟ್ರಸ್ಟ್, ಹೊಸಗಾವಿಯ ಗಣೇಶ ದೇಶಿ ಗೋಶಾಲೆ ಟ್ರಸ್ಟ್ ಗಳ 2025-26 ನೇ ಸಾಲಿನಲ್ಲಿ ಸರ್ಕಾರದಿಂದ ಸಹಾಯಧನ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಶುವೈದ್ಯಾಧಿಕಾರಿ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.