ಉದ್ಯೋಗಿಗಳ ಸ್ವಂತ ಊರಿನ ಶಾಲೆಗಳ ಅಭಿವೃದ್ದಿಗೆ ಸಿಎಸ್ಆರ್ ಅನುದಾನ; ಬೆಂಗಳೂರಿನ ಕಂಪೆನಿಯೊಂದರ ಉತ್ತೇಜನ
ಪ್ರತೀ ಕಾರ್ಪೊರೇಟ್ ಸಂಸ್ಥೆಯೂ ಸಿಎಸ್ಆರ್ ನಿಧಿಯನ್ನು ಬಳಕೆ ಮಾಡುತ್ತವೆ. ಬೆಂಗಳೂರಿನ ಕಿವಾನಿ ಲ್ಯಾಬ್ವೇ ಇಂಡಿಯಾ ಪ್ರೈ.ಲಿ. ಸಂಸ್ಥೆ (Kewaunee Labway India Pvt Ltd) ಕೊಂಚ ಭಿನ್ನ. ತಮ್ಮ ಉದ್ಯೋಗಿಗಳು ಓದಿದ ಶಾಲೆಗಳಿಗೆ ನೆರವು ನೀಡುತ್ತದೆ.

ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಕೃಷ್ಣರಾಜನಗರ ತಾಲ್ಲೂಕಿನ ಗಡಿ ಭಾಗದಲ್ಲಿರುವ ಊರು ಮಾಚಬಾಯನಹಳ್ಳಿ. ಅಲ್ಲಿರುವ ಸರ್ಕಾರಿ ಶಾಲೆ ಹಳೆಯದ್ದಾಗಿತ್ತು. ಸೌಲಭ್ಯಗಳು ಇದ್ದರೂ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಮಕ್ಕಳಿಗೆ ಸೌಲಭ್ಯ ಸಿಕ್ಕರೆ ಖಂಡಿತ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಹಾಗೆಂದು ನೆರವು ನೀಡುವವರು ಯಾರು?. ಇದೇ ಶಾಲೆಯಲ್ಲಿ ದಶಕಗಳ ಹಿಂದೆ ಓದಿದ್ದ ಹಳೆಯ ವಿದ್ಯಾರ್ಥಿಗೂ ಶಾಲೆಯ ಬೇಡಿಕೆಗಳ ಅರಿವಿತ್ತು. ಇದಕ್ಕೆ ತಾನು ಕೆಲಸ ಮಾಡಿದ ಸಂಸ್ಥೆಯೊಂದರಲ್ಲಿ ಇದ್ದ ಅವಕಾಶವೊಂದನ್ನು ಬಳಸಿಕೊಂಡು ಸೌಲಭ್ಯವನ್ನು ಒದಗಿಸಿಯೇ ಬಿಟ್ಟರು. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಬದಲು ತಾನು ಓದಿದ ಶಾಲೆಗೆ ಹಳೆ ವಿದ್ಯಾರ್ಥಿಗಳು ನೆರವಾಗುತ್ತಿದ್ದಕ್ಕಿಂತ ಖುಷಿ ವಿಚಾರ ಏನಿದೆ. ಇದರ ಹಿಂದೆ ಇದ್ದುದು ಹಳೆಯ ವಿದ್ಯಾರ್ಥಿ ಕಂಪೆನೆಯಲ್ಲಿ ಉನ್ನತ ಹುದ್ದೆ ಪಡೆಯಲು ಶಿಕ್ಷಣ ನೀಡಿದ ಶಾಲೆ. ಆ ಕಂಪೆನಿ ತನ್ನೆಲ್ಲ ನೌಕರರಿಗೂ ನಿಮ್ಮೂರಿನ ಸರ್ಕಾರಿ ಶಾಲೆ ಅಭಿವೃದ್ದಿಪಡಿಸಲು ನೀಡಿರುವ ಸಿಎಸ್ಆರ್ ಅನುದಾನದ ನೀತಿ.
ಇದು ಮಾಚಬಾಯನಹಳ್ಳಿ ಶಾಲೆಯೊಂದರ ಕಥೆಯಲ್ಲ. ಹಾವೇರಿ, ತುಮಕೂರು ಸಹಿತ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ಶಾಲೆಗಳ ಅಭಿವೃದ್ದಿ ಚಟುವಟಿಕೆಗಳು ನಡೆದಿವೆ. ಇಲ್ಲಿಯೂ ಕೆಲಸ ಮಾಡಿರುವುದು ಹಳೆಯ ವಿದ್ಯಾರ್ಥಿಯ ಪ್ರೀತಿ ಹಾಗೂ ಕಂಪೆನಿಯ ನೌಕರ ಸ್ನೇಹಿ ನೀತಿ.
ಅದು ಬೆಂಗಳೂರಿನಲ್ಲಿರುವ ಕಂಪೆನಿ. ಕಿವಾನಿ ಲ್ಯಾಬ್ವೇ ಇಂಡಿಯಾ ಪ್ರೈ.ಲಿ.( Kewaunee Labway India Pvt Ltd ) ಎನ್ನುವ ಸಂಸ್ಥೆ ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲೂ ಶಾಖೆ ಹೊಂದಿದೆ. ಬಹುರಾಷ್ಟ್ರೀಯ ಕಂಪೆನಿಯ ಕಿವಾನಿ ಲ್ಯಾಬ್ವೇ ಇಂಡಿಯಾ ಬೆಂಗಳೂರು ಶಾಖೆ ಕೂಡ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಜತೆಗೆ ಬೇರೆ ಬೇರೆ ರಾಜ್ಯದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿವಾನಿ ಲ್ಯಾಬ್ ವೇ ಇಂಡಿಯಾ ಕೆಲವು ವರ್ಷಗಳಿಂದ ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ( CSR)ಯನ್ನು ಬಳಸುವ ರೀತಿ ವಿಭಿನ್ನವಾಗಿದೆ. ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ನಿಧಿಯನ್ನು ಬಳಸಲು ಅವಕಾಶ ಕೊಟ್ಟಿದೆ. ಆಯಾ ನೌಕರರು ತಾವು ಓದಿದ ಶಾಲೆ ಅಭಿವೃದ್ದಿಗೆ ಅನುದಾನ ನೀಡುತ್ತದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಪರಿಕರ, ಶೈಕ್ಷಣಿಕ ಸೌಲಭ್ಯ ನೀಡಲು ಒದಗಿಸುತ್ತದೆ.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮಾಚಬಾಯನಹಳ್ಳಿಯ ಸಂದೀಪ್ ಸರಿಯಾರಿ ಮುವತ್ತು ವರ್ಷದ ಹಿಂದೆ ತನ್ನ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ಪಕ್ಕದಲ್ಲಿರುವ ಮುಳ್ಳೂರು ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿ ಮುಂದೆ ಕುಶಾಲನಗರದಲ್ಲಿ ಎಂಜಿನಿರಿಂಗ್ ಪದವಿ ಪಡೆದಿದ್ದರು. ಮೆಕಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ಸಂದೀಪ್ ಅವರು ಸದ್ಯ ಕಿವಾನಿ ಲ್ಯಾಬ್ವೇ ಕಂಪನಿ ಉದ್ಯೋಗಿ. ಅಲ್ಲಿ ನೌಕರರಿಗೆ ಸಿಎಸ್ಆರ್ ನಿಧಿ ಬಳಸುವ ನೀತಿ ರೂಪಿಸಿದೆ. ಇದರ ಅರಿವಿದ್ದ ಸಂದೀಪ್ ತಮ್ಮೂರ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂದು ಯೋಚಿಸಿದರು. ಶುದ್ದ ಕುಡಿಯುವ ನೀರಿನ ಘಟಕ, ಅಡುಗೆ ಮನೆ ನವೀಕರಣ, ಕಂಪ್ಯೂಟರ್, ಪ್ರೊಜೆಕ್ಟರ್ ಹಾಗೂ ಯು.ಪಿ.ಎಸ್ ಅಳವಡಿಕೆ ನಿರ್ಮಿಸಲು ಮುಂದಾದರು. ಶೌಚಾಲಯದ ಜತೆಗೆ ನೀರಿನ ವ್ಯವಸ್ಥೆ ಮಾಡಿದರು. ಇದಕ್ಕಾಗಿ ಸಂಸ್ಥೆ ತನ್ನ ನೌಕರನ ಪರವಾಗಿ ಶಾಲೆಗೆ ವೆಚ್ಚ ಮಾಡಿದ್ದು ಸುಮಾರು ಆರು ಲಕ್ಷ ರೂ. ಕೆಲ ದಿನಗಳ ಹಿಂದೆ ಶಾಲೆಯಲ್ಲಿ ಕಾರ್ಯಕ್ರಮ ನಡೆದು ಸೌಲಭ್ಯವನ್ನು ಹಸ್ತಾಂತರಿಸಲಾಯಿತು. ಕಿವಾನಿ ಲ್ಯಾಬ್ವೇ ಕಂಪನಿಯ ಎಂ.ಡಿ.ಸತ್ಯಮೂರ್ತಿ,ಮಾನವ ಸಂಪನ್ಮೂಲ ಅಧಿಕಾರಿ ರಾಜಣ್ಣ, ಹಳೇ ವಿದ್ಯಾರ್ಥಿ ಸಂದೀಪ್ ಅವರನ್ನು ಆತ್ಮೀಯವಾಗಿ ಗ್ರಾಮಸ್ಥರು ಸನ್ಮಾನಿಸಿದರು.
ಶಿಕ್ಷಣ ಇಲಾಖೆಯವರ ಸಹಕಾರ, ಊರವರ ಅಭಿಮಾನ, ಮಕ್ಕಳು ಹಾಗೂ ಪೋಷಕರ ಖುಷಿಯಿಂದಾಗಿ ಇದೇ ರೀತಿ ತಾವು ಓದಿದ ಮುಳ್ಳೂರು ಪ್ರೌಢಶಾಲೆಗೂ ಸೈನ್ಸ್ ಲ್ಯಾಬ್, ಕ್ರೀಡಾಸಾಮಗ್ರಿ, ಡಿಜಿಟಲ್ ಬೋರ್ಡ್ ಅಳವಡಿಸಿಕೊಡುವುದಾಗಿಯೂ ಸಂದೀಪ್ ಹೇಳಿದರು.
ಇದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೂಲಕ ಹಾವೇರಿ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅವರ ಹುಟ್ಟೂರ ಶಾಲೆಗಳ ಅಭಿವೃದ್ದಿಗೆ ನೆರವು ನೀಡಲಾಗಿದೆ. ಒಂದು ಶಾಲೆಯಲ್ಲಂತೂ ಮಕ್ಕಳ ಸಂಖ್ಯೆ ಬಹುತೇಕ ಕ್ಷೀಣಿಸಿ ಹೋಗಿತ್ತು. ಸೌಲಭ್ಯ ದೊರೆತ ನಂತರ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ.
ಎಲ್ಲ ಕಂಪೆನಿಗಳು ಸಿಎಸ್ಆರ್ ನಿಧಿ ಬಳಸಿದರೂ ಈ ರೀತಿ ಉದ್ಯೋಗಿಗಳ ಊರಿಗೆ ಹಾಗೂ ಓದಿದ ಶಾಲೆಗೆ ನೆರವು ನೀಡುವುದು ಕಡಿಮೆ. ನಮ್ಮಲ್ಲಿ ಇಂತಹ ಅವಕಾಶ ನೀಡಿದ್ದು ಅದನ್ನು ಮೊದಲ ಹಂತವಾಗಿ ಬಳಸಿಕೊಂಡಿದ್ದೇನೆ. ಪ್ರೌಢಶಾಲೆಗೂ ನೆರವು ನೀಡುವುದಾಗಿ ಕಂಪೆನಿ ಹಿರಿಯರು ಹೇಳಿದ್ದಾರೆ. ಇದಕ್ಕಿಂತ ಒಬ್ಬ ಹಳೆಯ ವಿದ್ಯಾರ್ಥಿಗೆ ಖುಷಿ ವಿಚಾರ ಏನಿದೆ ಎಂದರು ಸಂದೀಪ್.