ಬೆಂಗಳೂರಿನ ಸಮಾನ ಮನಸ್ಕ ಮೇಲುಕೋಟೆಗೆ ಮರುಜೀವದ ಸಂತಸ; ಇಂದು ಹಾಸಾಕೃ ಕುರಿತ ದ್ವಿಭಾಷಾ ಪುಸ್ತಕ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಸಮಾನ ಮನಸ್ಕ ಮೇಲುಕೋಟೆಗೆ ಮರುಜೀವದ ಸಂತಸ; ಇಂದು ಹಾಸಾಕೃ ಕುರಿತ ದ್ವಿಭಾಷಾ ಪುಸ್ತಕ ಬಿಡುಗಡೆ

ಬೆಂಗಳೂರಿನ ಸಮಾನ ಮನಸ್ಕ ಮೇಲುಕೋಟೆಗೆ ಮರುಜೀವದ ಸಂತಸ; ಇಂದು ಹಾಸಾಕೃ ಕುರಿತ ದ್ವಿಭಾಷಾ ಪುಸ್ತಕ ಬಿಡುಗಡೆ

ಬೆಂಗಳೂರು ಎಂಬ ಮಾಯಾನಗರಿ ಅದೆಷ್ಟೋ ಜನರ ದಟ್ಟ ಅನುಭವದ ನಗರಿಯೂ ಹೌದು. ಇದರಲ್ಲಿ ಮೇಲುಕೋಟೆ ಎಂಬ ವೇದಿಕೆಯೂ ಒಂದು. ಇದರಡಿಯೇ ಹಾಸಾಕೃ ಎಂಬ ಕುರಿತ ದ್ವಿಭಾಷಾ ಕೃತಿ ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಶನಿವಾರದಂದು ಹಾಸಾಕೃ ಕುರಿತ ಕೃತಿ ಬಿಡುಗಡೆ ಸಮಾರಂಭ
ಬೆಂಗಳೂರಿನಲ್ಲಿ ಶನಿವಾರದಂದು ಹಾಸಾಕೃ ಕುರಿತ ಕೃತಿ ಬಿಡುಗಡೆ ಸಮಾರಂಭ

ಖ್ಯಾತ ಚಿತ್ರಕಾರ ಗುಜ್ಜಾರ್‌ ಅವರ ಚಿತ್ರಗಳು ಓದುಗರೊಂದಿಗೆ ಮಾತನಾಡುತ್ತವೆ. ಇದೊಂದು ದ್ವಿಭಾಷಾ ಪುಸ್ತಕ. ಹಾಸಾಕೃ ಅವರ ಗೆಳೆಯರು ಇಂಗ್ಲೀಷ್‌ನಲ್ಲಿ ಅವರನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿ ವಿಶ್ಲೇಷಿಸಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಬಿಡುಗಡೆಯಾಗುತ್ತಿರುವ ʻಹಾಸಾಕೃʼ ಕೇವಲ ಹಾಸಾಕೃ ಅವರ ಕುರಿತ ಪುಸ್ತಕವಾಗದೆ, ಒಂದು ಕಾಲಕ್ಕೆ ಕನ್ನಡಿ ಹಿಡಿಯುತ್ತದೆ. ರಂಗಭೂಮಿಯ ಇತಿಹಾಸವನ್ನು ದಾಖಲಿಸುತ್ತಲೇ, ಇದುವರೆಗೆ ದಾಖಲಾಗದ ಹಲವು ಸಾಂಸ್ಕೃತಿಕ ಸಂಗತಿಗಳನ್ನು ಓದುಗರ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇದು ಒಂದು ರೀತಿಯ ಸಂಗ್ರಹಾರ್ಹ ಪುಸ್ತಕ ಎಂದು ಭಾವಿಸಬಹುದು.

ಹಾಸಾಕೃ- ಪುಸ್ತಕದ ವಸ್ತುವಾದ ಕಥೆ

ಇಷ್ಟೆಲ್ಲ ಹೇಳಿದ ಮೇಲೂ, ಈ ಪುಸ್ತಕದ ಪ್ರಸ್ತುತೆ ಏನು? ಎಂಬ ಪ್ರಶ್ನೆ ಧುತ್ತೆಂದು ಯಾರ ಮುಂದಾದರೂ ಉದ್ಭವಿಸಿದರೆ ಅದಕ್ಕುತ್ತರ ಇಲ್ಲಿದೆ. ಎಂಭತ್ತು, ತೊಂಭತ್ತರ ದಶಕದಲ್ಲಿ ಮಲ್ಲೇಶ್ವರಂನಲ್ಲಿ ಒಂದು ಆಲದ ಮರವಿತ್ತು. (ಇಲ್ಲಿ ಆಲದ ಮರ ಒಂದು ಪ್ರತಿಮೆ) ಅದರ ಹೆಸರು ʼಮೇಲುಕೋಟೆʼ (ಆ ಸ್ಥಳದ ನಿಜನಾಮ ಕೂಡ). ಆ ಕಾಲದಲ್ಲಿ ಪತ್ರಕರ್ತರು, ಲೇಖಕರು, ರಂಗಕರ್ಮಿಗಳು, ಸಿನಿಮಾದವರು, ಸಮಾಜದ ಎಲ್ಲ ಸಂಗತಿಗಳ ಬಗ್ಗೆ ಆಸಕ್ತರಾಗಿದ್ದವರು, ನಾಳೆ ಬೆಳಿಗ್ಗೆ ಕ್ರಾಂತಿಯಾಗುತ್ತದೆ ಎಂದು ಭ್ರಮಿಸಿದ ಎಡಪಂಥೀಯರು, ಸಮಾಜವಾದಿಗಳು ಇತ್ಯಾದಿ,.. ಇತ್ಯಾದಿ ಮಂದಿಯ ಗೂಡು ಅದಾಗಿತ್ತು. ಅದು ಪತ್ರಕರ್ತರು, ರಂಗ ನಿರ್ದೇಶಕರು, ಸಿನಿಮಾ ನಟರೂ ಆಗಿದ್ದ, ಈಗಲೂ ಆಗಿರುವ ಎಂ.ಕೆ. ಶಂಕರ ಅವರ ಮನೆ. ಆಗಿದ್ದ ಮನೆ ಈಗ ಬದಲಾಗಿದೆ ಎನ್ನುವುದನ್ನು ಹೊರತುಪಡಿಸಿದರೆ ಸ್ಥಳ ಮಹಿಮೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದೆ ಸದಾ ತೆರದೆ ಇರುತ್ತಿದ್ದ ಬಾಗಿಲು ಆ ಮನೆಯದು. ಆದರೆ, ಅಂದು ಸೇರತ್ತಿದ್ದ ಮಂದಿ ತಮ್ಮತಮ್ಮ ಬದುಕನ್ನರಸಿ, ಬೆಂಗಳೂರಿನಿಂದ ಕಾಲ್ಕಿತ್ತಾಗ ಒಂದು ಶೂನ್ಯಭಾವ. ಆಗ ಶಂಕರ ʻ ಋತುವೂ ಬದಲಾಗುವುದು ʼನಾಟಕ ನಿರ್ದೇಶಿಸಿದ ನೆನಪು ಈಗಲೇ ಇದೆ. ಅಲ್ಲಿ ನಿರುದ್ದಿಶ್ಯವಾಗಿ ಸೇರಿ ಬದುಕನ್ನು ಸಂಭ್ರಮಿಸುತ್ತಿದ್ದ ಕೆಲವರು ಕಾಲನ ಕರೆಗೆ ಉತ್ತರಿಸಿದರು. ದೂರದೂರಿನಲ್ಲಿ ಇದ್ದ ಶಂಕರ ಮತ್ತೆ ಬದಲಾದ ಮೇಲುಕೋಟೆಗೆ ಬಂದಾಗ, ಉಳಿದವರಿಗೆ ಉಳಿದಿದ್ದು ಅಂದಿನ ಕಪಾಟಿನೊಳಗಿನ ನೆನಪುಗಳು. ಈ ವೇಳೆಗೆ ಶಂಕರ ಸಂಗೀತ, ಸಿನಿಮಾ, ಸಾಹಿತ್ಯ, ರಂಗಭೂಮಿ, ಮತ್ತು ಸಮಕಾಲೀನ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸುವ ʻಒಸಗೆʼಯನ್ನು ಹುಟ್ಟುಹಾಕಿದ್ದ. ಅದೊಂದು ಬಹುರೂಪಿ ಡಿಜಿಟಲ್‌ ಮಾಧ್ಯಮ ವೇದಿಕೆ. ಹಾಗಾಗಿ ಮೇಲುಕೋಟೆ ಈಗ ಮತ್ತೆ ಮೊದಲಿನಂತಾಗಿದೆ. ಇದರ ಒಂದು ಭಾಗವಾಗಿರುವವರ ಪೈಕಿ ಹಾಸಾಕೃ ಕೂಡ ಒಬ್ಬರು.

ಬೋಧಿ ವೃಕ್ಷದಡಿ ಹುಟ್ಟಿದ ಪುಸ್ತಕ

ಈ ಮೇಲುಕೋಟೆ ಎನ್ನುವ ಬೋಧಿ ಅಥವ ಧೂಮಲೀಲೆಯ ಕಾರಣಕ್ಕಾಗಿ ಬೂದಿ ವೃಕ್ಷ ಜೀವಂತವಾದಾಗ ಅಗಲಿದ ಗೆಳೆಯ ಎಂ. ರಮೇಶನ ಪದ್ಯಗಳ ಸಂಕಲನ ʻPatented Nirvana ́ ವನ್ನು ನಾವು ಗೆಳೆಯರೇ ನಮ್ಮ ಗೆಳೆಯ ಬಿ ಸುರೇಶನ ʻನಾಕುತಂತಿ ʼ ಪ್ರಕಾಶನದಿಂದ ಪ್ರಕಟಿಸಿದೆವು.

ಅದೇ ಹಾದಿಯಲ್ಲಿ ನಚ್ಚಿ ಅಗಲಿದಾಗ ಅವನ ಕುರಿತ ʻಚಕ್ರವರ್ತಿಯಾಗದ ನಚ್ಚಿʼ ಸಂಪಾದಿಸಿದೆವು. ಈ ನಡುವೆ ʻಒಸಗೆʼಗಾಗಿ ʻದ ಪ್ಯಾಸೇಜ್ ಟು ಇಂಡಿಯಾʼ ದ ಹಸನ್‌ ಪಾತ್ರ ಕುರಿತು ಹಾಸಾಕೃ ಅವರನ್ನು ಸಂದರ್ಶಿಸಲಾಗಿತ್ತು. ಆ ಸಂದರ್ಶನ ಒಂದು ರೀತಿಯಲ್ಲಿ ಹಾಸಾಕೃ ಅವರ ಬದುಕಿನ ದಾಖಲೆಯೂ ಆಗ ತೊಡಗಿತು.

ಕೆಲವು ಕಾಲದ ನಂತರ ಈ ಸಂದರ್ಶನಕ್ಕಾಗಿ ಮಾಡಿಕೊಂಡ ತಯಾರಿಯ ಟಿಪ್ಪಣಿಗಳನ್ನು ಗಮನಿಸಿದಾಗ ಅದು ಹಾಸಾಕೃ ಅವರನ್ನು ಕುರಿತಾದ ಪುಟ್ಟದಾದರೂ ಒಂದು ಘನವಾದ ಪುಸ್ತಕವಾಗಬಹುದೇ? ಎಂಬ ಆಲೋಚನೆಯೊಂದು ಗುಂಗಿಹುಳುವಿನಂತೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅಥವಾ ಹೀಗೊಂದು ಆಲೋಚನೆ ಬಂತು ಎಂದು ಹೇಳಬಹುದು. ಹೀಗೆ ಅದದ್ದು ʻಹಾಸಾಕೃʼ ಎಂಬ ಪುಸ್ತಕ. ಹಾಸಾಕೃ ಎಂದರೆ ಹಾಸ್ಯವಿಲ್ಲದ ಸಾರವಿಲ್ಲದ ಕೃತಿಗಳನ್ನು ರಚಿಸುವವನು ಎಂದರ್ಥ” ಎಂದು ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುವ ಹಾಸಾಕೃ ಅವರನ್ನು ಕುರಿತು ಪುಸ್ತಕ ಮಾಡುತ್ತೇವೆ ಎಂದಾಗ ಸುತರಾಂ ಒಪ್ಪಿಲಿಲ್ಲ. ಅವರನ್ನು ಒಪ್ಪಿಸುವುದರಲ್ಲಿ ಅವರ ಗೆಳೆಯರಿಗೆ ಕುರಿ-ಕೋಣ ಬಿದ್ದುಹೋಯಿತು. ಕಡೆಗೆ ಹಿಂಸೆ ತಾಳಲಾರದೆ “ಏನಾದ್ರೂ ಮಾಡಿಕೊಳ್ಳಿ” ಎಂದಾಗಲೇ ನಿರಾಳವಾದದ್ದು. ಪುಸ್ತಕ ಬಿಡುಗಡೆಗೆ ಅವರನ್ನು ಒಪ್ಪಿಸಲಿಕ್ಕೂ ಅಷ್ಟೇ ಕಷ್ಟವಾಯಿತು ಎಂದು ಬೇರೆಯಾಗಿ ಹೇಳಬೇಕಿಲ್ಲ.

ಈ ಪುಸ್ತಕ ಇಂದು ಬಿಡುಗಡೆಯಾಗುತ್ತಿರುವುದಕ್ಕೆ ಕಾರಣಕರ್ತರು, ಎನ್.‌ ವಿದ್ಯಾಶಂಕರ್‌, ಎಂ.ಕೆ. ಶಂಕರ, ಎನ್.‌ ಕೆ. ಮೋಹನರಾಮ್‌, ಕೊಂಡಜ್ಜಿ ಮೋಹನ, ಮಾಧವ ಪ್ರಸಾದ್‌ ಮತ್ತು ನಿರುದ್ದಿಶ್ಯವಾಗಿ ಹಾಸಾಕೃ ಅವರ ಬಹುಕಾಲದ ಗೆಳೆಯ ಈ ಲೇಖಕ. ಒಟ್ಟಾರೆಯಾಗಿ ʻಹಾಸಾಕೃʼ ಒಂದು ಕಾಲಕ್ಕೆ ಹಿಡಿದ ಕನ್ನಡಿ ಎಂಬ ಭಾವ. ಪುಸ್ತಕ ಶನಿವಾರ ಓದುಗರ ಕೈ ಸೇರಲಿದೆ.

ಬರಹ: ಮುರಳೀಧರ ಖಜಾನೆ, ಲೇಖಕರು. ಬೆಂಗಳೂರು

ಬೆಂಗಳೂರಿನಲ್ಲಿ ನಡೆಯುವ ಹಾಸಾಕೃ ಕುರಿತ ಪುಸ್ತಕ ಬಿಡುಗಡೆ ಆಹ್ವಾನ ಪತ್ರಿಕೆ
ಬೆಂಗಳೂರಿನಲ್ಲಿ ನಡೆಯುವ ಹಾಸಾಕೃ ಕುರಿತ ಪುಸ್ತಕ ಬಿಡುಗಡೆ ಆಹ್ವಾನ ಪತ್ರಿಕೆ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.