ಬೆಂಗಳೂರು ನಗರಕ್ಕೆ ಸದ್ಯವೇ ಬರಲಿದ್ದಾರೆ ಹೊಸ ಜೋಡಿ ಆಯುಕ್ತರು, ಬಿಬಿಎಂಪಿ- ನಗರ ಪೊಲೀಸ್ಗೆ ನೂತನ ಆಯುಕ್ತರು ಯಾರಾಗಬಹುದು
ಬೆಂಗಳೂರು ನಗರಕ್ಕೆ ಏಕಕಾಲಕ್ಕೆ ಹೊಸ ಆಯುಕ್ತರು ಬರಲಿದ್ದಾರೆ. ಅದೂ ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರ ಹುದ್ದೆಗಳಿಗೆ ಈಗಿರುವ ಅಧಿಕಾರಿಗಳು ಮಾಸಾಂತ್ಯಕ್ಕೆ ಬದಲಾಗುವ ನಿರೀಕ್ಷೆಯಿದೆ.

ಬೆಂಗಳೂರು: ಬೆಂಗಳೂರು ನಗರದ ಎರಡು ಪ್ರಮುಖ ಸಂಸ್ಥೆಗಳ ಆಯುಕ್ತರ ಹುದ್ದೆ ಹೊಸ ಆಯುಕ್ತರು ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಹೊಸ ಆಯುಕ್ತರನ್ನು ನೇಮಿಸಲು ಸರ್ಕಾರ ಯೋಚಿಸುತ್ತಿದೆ. ಸದ್ಯ ಬಿಬಿಎಂಪಿ ಆಯುಕ್ತರಾಗಿ ತುಷಾರ್ ಗಿರಿನಾಥ್ ಅವರು ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ಎರಡೂವರೆ ವರ್ಷದಿಂದ ಇರುವ ಅವರನ್ನು ಬದಲಿಸಬಹುದು. ಅದೇ ರೀತಿ ಎರಡು ವರ್ಷದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಬಿ.ದಯಾನಂದ ಅವರನ್ನು ಬದಲಿಸಿ ಇಲ್ಲಿಗೂ ಹೊಸ ಅಧಿಕಾರಿ ನಿಯೋಜಿಸಬಹುದು ಎನ್ನುವ ಚರ್ಚೆಗಳು ನಡೆದಿವೆ. ಈ ಮಾಸಾಂತ್ಯಕ್ಕೆ ಬದಲಾವಣೆ ಆಗುವ ಸಾಧ್ಯತೆಗಳಿದ್ದು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ವರ್ಗಾವಣೆ ಅಧಿಕೃತ ಆದೇಶಕ್ಕೆ ಕುತೂಹಲದಿಂದ ಕಾಯುತ್ತಿದ್ದಾರೆ.
ಬಿಬಿಎಂಪಿಗೆ ಯಾರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಹುದ್ದೆ ಪ್ರಮುಖವಾದದ್ದು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ಬಿಬಿಎಂಪಿಗೆ ಹಿರಿಯ ಐಎಎಸ್ ಅಧಿಕಾರಿಯನ್ನೇ ನಿಯೋಜಿಸಲಾಗುತ್ತದೆ.
ಸದ್ಯ ತುಷಾರ್ ಗಿರಿನಾಥ್ ಅವರು ಮೂರು ವರ್ಷದಿಂದ ಈ ಹುದ್ದೆಯಲ್ಲಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ನೇಮಕಗೊಂಡಿದ್ದ ಅವರು ಆನಂತರ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರಿದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಇವರನ್ನೇ ಮುಂದುವರೆಸಿದ್ದರು. ಈಗ ಅವರನ್ನು ಬದಲಾಯಿಸುವ ಇರಾದೆ ಸರ್ಕಾರಕ್ಕೆ ಇದೆ. ಈ ಕಾರಣದಿಂದ ಹೊಸ ಆಯುಕ್ತ ಹೆಸರು ಚಾಲ್ತಿಯಲ್ಲಿವೆ.
ಹಿರಿಯ ಐಎಎಸ್ ಅಧಿಕಾರಿ ಬಿಎಂಆರ್ಸಿಎಲ್ ಎಂಡಿಯಾಗಿರುವ ಎಂ.ಮಹೇಶ್ವರ ರಾವ್, ಸಮಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಬಿಬಿಎಂಪಿಯಲ್ಲಿಯೇ ವಿಶೇಷ ಆಯುಕ್ತರಾಗಿರುವ ಮುನೀಷ್ ಮೌದ್ಗಿಲ್ ಹೆಸರು ಕೇಳಿ ಬರುತ್ತಿದೆ. ಮೂವರಲ್ಲಿ ಒಬ್ಬರ ಹೆಸರು ಒಂದೆರಡು ದಿನದಲ್ಲಿ ಅಂತಿಮಗೊಳ್ಳಬಹುದು.
ಈ ಹಿಂದೆ ಹುಬ್ಬಳ್ಳಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿರುವ ಮಣಿವಣ್ಣನ್ ಅವರನ್ನೇ ನೇಮಿಸಬಹುದು ಎಂದು ಮೂಲಗಳು ತಿಳಿಸಿವೆ.
ತುಷಾರ್ ಗಿರಿನಾಥ್ ಅವರು ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಬಹುದು. ಅದೇ ರೀತಿ ಸದ್ಯ ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಎಸ್.ಆರ್.ಉಮಾಶಂಕರ್ ಅವರು ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು. ಅವರ ಜಾಗಕ್ಕೆ ಎಸಿಎಸ್ ಗೌರವ್ ಗುಪ್ತ ಅವರು ನಿಯೋಜನೆಯಾಗಬಹುದು ಇಲ್ಲವೇ ತುಷಾರ್ಗಿರಿನಾಥ್ ಅವರಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬಹುದು ಎನ್ನಲಾಗುತ್ತಿದೆ.
ಪೊಲೀಸ್ ಆಯುಕ್ತರು ಯಾರಾಗಬಹುದು
ಇದೇ ರೀತಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಬಿ.ದಯಾನಂದ್ ಅವರನ್ನು ಬದಲಿಸಿ ಹೊಸ ಆಯುಕ್ತರನ್ನು ನೇಮಿಸುವ ಚರ್ಚೆಗಳು ನಡೆದಿವೆ.
ಸದ್ಯ ಪೊಲೀಸ್ ಮಹಾನಿರ್ದೇಶಕ( ಡಿಜಿಪಿ) ಅಲೋಕ್ ಮೋಹನ್ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು ಅಲ್ಲಿಗೆ ಹೊಸ ಡಿಜಿಪಿ ಬರಲಿದ್ದಾರೆ. ಒಂದು ಡಿಜಿಪಿ ಹುದ್ದೆ ಖಾಲಿ ಆಗುವುದರಿಂದ ಇಲ್ಲಿಗೆ ದಯಾನಂದ್ ಅವರಿಗೆ ಬಡ್ತಿ ಸಿಗಬಹುದು. ದಯಾನಂದ್ ಅವರು ಡಿಜಿಪಿ ಗೃಹರಕ್ಷಕ ದಳ ಇಲ್ಲವೇ ಇತರೆ ಹುದ್ದೆ ಪಡೆದರೆ ಇಲ್ಲಿಗೆ ಹೊಸ ಆಯುಕ್ತರನ್ನು ನೇಮಿಸಬಹುದು ಎನ್ನಲಾಗುತ್ತಿದೆ.
ದಯಾನಂದ್ ಅವರಿಗಿಂತ ಮತ್ತೊಬ್ಬ ಐಪಿಎಸ್ ಅಧಿಕಾರಿ ಅಲೋಕ್ಕುಮಾರ್ ಹಿರಿತನ ಹೊಂದಿದ್ದರೂ ಸಿದ್ದರಾಮಯ್ಯ ಸಹಿತ ಹಿರಿಯ ಹಂತದಲ್ಲಿ ಸದಾಭಿಪ್ರಾಯ ಹೊಂದಿಲ್ಲ. ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ಅವರನ್ನು ಬದಲಾಯಿಸಲಾಗಿತ್ತು.
ಆದರೆ ಬಿಜೆಪಿ ಸರ್ಕಾರದಲ್ಲಿ ಗುಪ್ತಚರ ವಿಭಾಗ ನೋಡಿಕೊಂಡಿದ್ದ ಕನ್ನಡಿಗರಾದ ದಯಾನಂದ್ ಅವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆ ದೊರೆತಿತ್ತು.
ಈಗ ಪೊಲೀಸ್ ಆಯುಕ್ತರ ಹುದ್ದೆಗೆ ಸದ್ಯ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿರುವ ಹೇಮಂತ್ ನಿಂಬಾಳ್ಕರ್ ಅವರ ಹೆಸರು ಪ್ರಬಲವಾಗಿ ಹೇಳಿ ಬರುತ್ತಿದೆ. ಸಿಎಂ ಜತೆಗೆ ಉತ್ತಮ ಸಂಬಂಧ ಹೊಂದಿರುವುದರಿಂದ ನಿಂಬಾಳ್ಕರ್ ಅವರಿಗೆ ಈ ಹುದ್ದೆ ಒಲಿಯಬಹುದು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.