ಬೆಂಗಳೂರು ಕಬ್ಬನ್ ಪಾರ್ಕ್ ಭೇಟಿಗೆ ಹೊಸ ಮಾರ್ಗಸೂಚಿ; ಫೋಟೋ, ಆಹಾರ ವಿಹಾರ ವಿಚಾರದಲ್ಲಿ ಈ ಬದಲಾವಣೆ ಗಮನಿಸಿ
ಬೆಂಗಳೂರು ಕಬ್ಬನ್ ಪಾರ್ಕ್ ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಫೋಟೊ, ವಿಡಿಯೋ ಮಾಡಬಹುದೇ? ಆಹಾರ ಸೇವಿಸಬಹುದೇ? ಸಭೆ ನಡೆಸಬಹುದೇ ? ಏನು ಮಾಡಬೇಕು ಏನು ಮಾಡಬಾರದು ಇಲ್ಲಿದೆ ವಿವರವರದಿ: ಎಚ್.ಮಾರುತಿ.

ಬೆಂಗಳೂರು: ಉದ್ಯಾನ ನಗರ ಬೆಂಗಳೂರಿನ ಪ್ರಸಿದ್ದ ಉದ್ಯಾನವನ ಕಬ್ಬನ್ ಪಾರ್ಕ್. ಈ ಉದ್ಯಾನವನದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ವಾಕಿಂಗ್, ವಾಯು ವಿಹಾರದ ಜತೆಗೆ ಸಭೆ, ಚರ್ಚೆಗಳೂ ನಡೆಯುವುದುಂಟು. ಒಮ್ಮೊಮ್ಮೆ ಇಂತಹ ಚಟುವಟಿಕೆಗಳು ಅತಿರೇಕಕ್ಕೆ ಹೋಗುವುದೂ ಉಂಟು. ಅಕ್ರಮ ಚಟುವಟಿಕೆಗಳೂ ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕಬ್ಬನ್ ಪಾರ್ಕ್ ಒಳಗೆ ಏನು ಮಾಡಬೇಕು ಏನು ಮಾಡಬಾರದು ಎಂದು ಸೂಚನೆಗಳನ್ನು ಹೊರಡಿಸಿದೆ. ಕಬ್ಬನ್ ಪಾರ್ಕ್ ನಲ್ಲಿ ವಾಕಥಾನ್, ಮ್ಯಾರಥಾನ್, ಸರ್ಕಾರದ ಇಲಾಖೆಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು, ನೊಂದಾಯಿತ ಸಂಸ್ಥೆಗಳಿಂದ ಆರೋಗ್ಯ ತಪಾಸಣೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ 5.30 ರಿಂದ 9 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6 ಗಂಟೆಯವರೆಗೆ ವಾಯುವಿಹಾರ ನಡೆಸಬಹುದಾಗಿದೆ.
ಕೆಲವೊಮ್ಮೆ ಇಲ್ಲಿ ಮೀಟಿಂಗ್ ಗಳೂ ನಡೆಯುವುದುಂಟು. ಓದುಗರು, ಬರಹಗಾರರು, ಕಲಾವಿದರು ಸಭೆ ನಡೆಸುವುದಾದರೆ 20 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಬಿಎಸ್ಎನ್ಎಲ್ ಕಡೆಯ ಗಜಿಬೊದಿಂದ ಹೈಕೋರ್ಟ್ ಕಟ್ಟಡದವರೆಗೆ 15 ಎಕರೆ ಪ್ರದೇಶದಲ್ಲಿ ವೀಕ್ಷಕರು ವಾಣಿಜ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ. ಅಂದರೆ ಓದುವುದು, ಪೇಂಟಿಂಗ್, ಯೋಗ, ಮೆಡಿಟೇಷನ್ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಏನೇನು ಬದಲಾವಣೆ
ಒಂದು ವೇಳೆ ಇಂತಹ ಚಟುವಟಿಕೆಗಳಿಗೆ 20 ಕ್ಕಿಂತ ಹೆಚ್ಚು ಮಂದಿ ಸೇರುವುದಾದರೆ ಕಬ್ಬನ್ ಪಾರ್ಕ್ ಉಪ ನಿರ್ದೇಶಕರ ಅನುಮತಿ ಪಡೆಯಬೇಕಾಗುತ್ತದೆ. ಫೋಟೊಗಳನ್ನು ತಗೆದುಕೊಳ್ಳಲು ಅವಕಾಶ ಇದೆ ಆದರೆ ಶೂಟಿಂಗ್ ಅಥವಾ ರೀಲ್ಸ್ ಮಾಡುವಂತಿಲ್ಲ.
2023 ರಲ್ಲಿ ತೋಟಗಾರಿಕಾ ಇಲಾಖೆ ಕಬ್ಬನ್ ಪಾರ್ಕ್ ಆವರಣದಲ್ಲಿ ಫೋಟೊಗ್ರಫಿ ಮಾಡುವಂತಿಲ್ಲ ಎಂದು ಅದೇಶ ಹೊರಡಿಸಿತ್ತು. ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ಇದೀಗ ಹೊರಡಿಸಿರುವ ಮತ್ತೊಂದು ಆದೇಶದಲ್ಲಿ ವೀಕ್ಷಕರು ಮತ್ತು ಪ್ರವಾಸಿಗರು ಫೋನ್ ಅಥವಾ ಕ್ಯಾಮೆರಾದಲ್ಲಿ ಫೋಟೊಗ್ರಫಿ ಮಾಡಬಹುದು ಎಂದು ತಿಳಿಸಿದೆ. ಆದರೆ ಪ್ರೀ ವೆಡ್ಡಿಂಗ್ ಶೂಟಿಂಗ್, ಬೇಬಿ ಫೋಟೊ ಶೂಟಿಂಗ್, ಮಾಡೆಲ್ಲಿಂಗ್ ರೀಲ್ಸ್ ಅಥವಾ ಯಾವುದೇ ರೀತಿಯ ವಾಣಿಜ್ಯ ಉದ್ದೇಶದ ವಿಡಿಯೋಗ್ರಫಿಗೆ ನಿಷೇಧ ಹೇರಲಾಗಿದೆ.
ಪ್ರಕೃತಿ, ಗಿಡ ಮರ, ವೈಲ್ಡ್ ಲೈಫ್ ಫೋಟೊಗ್ರಫಿ ಮಾಡಬೇಕಾದರೆ ತೋಟಗಾರಿಕಾಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಸೈಕ್ಲಿಂಗ್, ಸ್ಕೇಟಿಂಗ್ ಕುರಿತು ಯಾವುದೇ ರೀತಿಯ ತರಬೇತಿ ನೀಡಲು ಅವಕಾಶ ಇಲ್ಲ. ಪ್ರಕೃತಿಗೆ ಹಾನಿಯುಂಟು ಮಾಡುವ ಬೆಲೂನ್, ಗಾಳಿಪಟ, ಫ್ರಿಸ್ಬೀ ಗಳನ್ನು ಬಳಸಿ ಆಟವಾಡುವಂತಿಲ್ಲ.
ಈ ಹಿಂದಿನ ಆದೇಶ ಅನ್ವಯ ಕಬ್ಬನ್ ಪಾರ್ಕ್ ಒಳಗೆ ಆಹಾರ ಸೇವನೆ ಮಾಡಲು ಅವಕಾಶ ಇಲ್ಲ.ಕಂಡ ಕಂಡಲ್ಲಿ ಉಗಿಯುವುದು ಇಲ್ಲಿನ ಅತಿ ದೊಡ್ಡ ಸಮಸ್ಯೆಯಾಗಿದ್ದು ಹಾಗಯೇ ಮುಂದುವರೆದಿದೆ.
ಬೀಳಲಿದೆ ದಂಡ
ಇಲ್ಲಿಗೆ ದಿನನಿತ್ಯ ಭೇಟಿ ನೀಡುವವರು ಸರ್ಕಾರದ ನಿರ್ಧಾರಗಳಿಗೆ ಬೆಂಬಲ ಕೊಡುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿದರೆ ರೂ. 500 ದಂಡ ವಿಧಿಸುವುದಾಗಿ ಇಲಾಖೆ ತಿಳಿಸಿದೆ. ತಪ್ಪನ್ನು ಪುನರಾವರ್ತಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ನೀತಿ ನಿಯಮಗಳು ಮಾರ್ಗಸೂಚಿಗಳನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾರ್ಕ್ ಒಳಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ನಿಯಮಗಳು ಉಲ್ಲಂಘನೆಯಾಗುವುದನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಬೇಕು ಎಂದು ಇಲ್ಲಿ ಪ್ರತಿದಿನ ವಾಯು ವಿಹಾರ ನಡೆಸುವ ಮೋಹನ್ ಹೇಳುತ್ತಾರೆ.
ಈ ನಿಯಮಗಳು ಕೇವಲ ಕಬ್ಬನ್ ಪಾರ್ಕ್ ಗೆ ಮಾತ್ರ ಸೀಮಿತವಾಗಿಲ್ಲ. ಒಂದೆರಡು ವಾರಗಳಲ್ಲಿ ಇದೇ ಮಾರ್ಗಸೂಚಿಗಳನ್ನು ಲಾಲ್ ಬಾಗ್ ಗೂ ವಿಸ್ತರಿಸುವುದಾಗಿ ತೋಟಗಾರಿಕಾ ಇಲಾಖೆ ಜಂಟಿ ಆಯುಕ್ತ ಎಂ. ಜಗದೀಶ್ ವಿವರ ಕೊಡುತ್ತಾರೆ.
ವರದಿ: ಎಚ್.ಮಾರುತಿ. ಬೆಂಗಳೂರು