ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಡಿಜಿಟಲ್‌ ಅರೆಸ್ಟ್‌; 1.20 ಕೋಟಿ ರೂ. ಕಳೆದುಕೊಂಡ ಇಂಜಿನಿಯರ್‌ ಮತ್ತು ವ್ಯವಸ್ಥಾಪಕ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಡಿಜಿಟಲ್‌ ಅರೆಸ್ಟ್‌; 1.20 ಕೋಟಿ ರೂ. ಕಳೆದುಕೊಂಡ ಇಂಜಿನಿಯರ್‌ ಮತ್ತು ವ್ಯವಸ್ಥಾಪಕ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಡಿಜಿಟಲ್‌ ಅರೆಸ್ಟ್‌; 1.20 ಕೋಟಿ ರೂ. ಕಳೆದುಕೊಂಡ ಇಂಜಿನಿಯರ್‌ ಮತ್ತು ವ್ಯವಸ್ಥಾಪಕ

ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಡಿಜಿಟಲ್‌ ಅರೆಸ್ಟ್‌ ಮೂಲಕ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ಸಂಸ್ಥೆ ವ್ಯವಸ್ಥಾಪಕರೊಬ್ಬರಿಗೆ ವಂಚಿಸಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಸೈಬರ್‌ ವಂಚನೆಯ ಎರಡು ಪ್ರಕರಣ ದಾಖಲಾಗಿವೆ.
ಬೆಂಗಳೂರಿನಲ್ಲಿ ಸೈಬರ್‌ ವಂಚನೆಯ ಎರಡು ಪ್ರಕರಣ ದಾಖಲಾಗಿವೆ.

ಬೆಂಗಳೂರು: ಸೈಬರ್‌ ವಂಚನೆಗೆ ಒಳಗಾಗಬೇಡಿ ಎಂದು ದಿನನಿತ್ಯ ಪೊಲೀಸ್‌, ಆರ್‌ಬಿಐ, ಮಾಧ್ಯಮಗಳ ಆದಿಯಾಗಿ ಎಲ್ಲರೂ ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಪದೇ ಪದೇ ವಂಚನೆಗೊಳಗಾಗುವ ಪ್ರಕರಣಗಳು ಹಚ್ಚುತ್ತಲೇ ಇವೆ. ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸುಶಿಕ್ಷಿತರೇ ಬಲಿಯಾಗುತ್ತಿರುವುದು ಮತ್ತೊಂದು ವಿಶೇಷ. ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ವಂಚಕರು ಬೆಂಗಳೂರಿನ ಖಾಸಗಿ ಕಂಪನಿಯ ಸಾಫ್ಟ್‌ವೇರ್ ಎಂಜಿನಿಯರ್‌ ವೊಬ್ಬರಿಗೆ ರೂ. 84 ಲಕ್ಷ ಮತ್ತು ಮತ್ತೊಬ್ಬರಿಗೆ 40 ಲಕ್ಷ ರೂ. ವಂಚಿಸಿರುವ ಎರಡು ಪ್ರಕರಣಗಳು ವರದಿಯಾಗಿವೆ.ಸೈಬರ್‌ ವಂಚಕರು ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ಖಾಸಗಿ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ ವೊಬ್ಬರಿಗೆ ರೂ. 84 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಅವರು ದೂರು ದಾಖಲಿಸಿದ್ದು, ವೈಟ್‌ ಫೀಲ್ಡ್‌ ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಈ ಮಹಿಳಾ ಇಂಜಿನಿಯರ್‌ ಗೆ ವಾಟ್ಸಾಪ್‌ ಕರೆ ಮಾಡಿದ ವ್ಯಕ್ತಿ, ತನ್ನನ್ನು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಂತರ ನಿಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಆದ್ದರಿಂದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರ ಪೊಲೀಸರು ಕರೆ ಮಾಡಲಿದ್ದು, ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಬೆದರಿಸಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಂತರ ಮುಂಬೈ ಪೊಲೀಸರ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿ ವಾಟ್ಸಾಪ್‌ ವಿಡಿಯೊ ಕರೆ ಮಾಡಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಜೆಟ್ ಏರ್‌ ವೇಸ್‌ನ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ತಮ್ಮ ಅಪಾರ ಪ್ರಮಾಣದ ಹಣ ವರ್ಗಾವಣೆಗೆ 300 ಬ್ಯಾಂಕ್ ಖಾತೆಗಳನ್ನು ಬಳಸಿದ್ದಾರೆ. ಇದರಲ್ಲಿ ನಿಮ್ಮ ಹೆಸರಿನಲ್ಲಿರುವ ಖಾತೆಗಳೂ ಇವೆ. ನಿಮ್ಮ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸದೆ ಅನ್ಯ ಮಾರ್ಗವಿಲ್ಲ ಎಂದು ಹೇಳಿ ಹೆದರಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ನಿಮ್ಮನ್ನು ಬಂಧಿಸಬಾರದು ಎನ್ನುವುದಾದರೆ ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ತಾಕೀತು ಮಾಡಿ ಮತ್ತೆ ಬೆದರಿಸಿದ್ದಾನೆ. ತನ್ನನ್ನು ಪೊಲೀಸರು ಬಂಧಿಸಬಹುದು ಎಂಬ ಭೀತಿಯಿಂದ ಸಂತ್ರಸ್ತೆಯು ವಂಚಕ ಕಳುಹಿಸಿದ್ದ ಐದು ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಸುಮಾರು ರೂ. 84 ಲಕ್ಷ ವರ್ಗಾವಣೆ ಮಾಡಿದ್ದಾರೆ. ಮತ್ತಷ್ಟು ಹಣವನ್ನು ನೀಡಲೇಬೇಕು ಎಂದು ಆಗ್ರಹಪಡಿಸಿದಾಗ ಅನುಮಾನಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಐಟಿಐ ಲೇ ಔಟ್‌ ನಿವಾಸಿಯೊಬ್ಬರಿಗೆ ನಿಮಗೆ ರೂ.5 ಕೋಟಿ ಲಾಭ ಬಂದಿದೆ ಎಂದು ಆ್ಯಪ್‌ ನಲ್ಲಿ ನಂಬಿಸಿ, ಸೈಬರ್‌ ವಂಚಕರು ರೂ. 39.95 ಲಕ್ಷ ಪಡೆದು ವಂಚಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿರುವ ಇವರು ಹಣ ಕಳೆದುಕೊಂಡಿದ್ದಾರೆ. ನಂತರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ವಾಟ್ಸಾಪ್‌ ನಲ್ಲಿ ಕಾಣಿಸಿಕೊಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್‌ ಲೋಡ್‌ ಮಾಡಿಕೊಂಡು ಹಂತ ಹಂತವಾಗಿ ಷೇರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹಣ ಹೂಡಿಕೆ ಮಾಡುತ್ತಾ ಬಂದಿದ್ದರು. ಫೆಬ್ರುವರಿ 24 ರಿಂದ ಏಪ್ರಿಲ್ 12ರ ಅವಧಿಯಲ್ಲಿ ಒಟ್ಟು 39.95 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ರೂ.5.19 ಕೋಟಿ ಲಾಭಾಂಶ ತೋರಿಸಿರುವಂತೆ ಸೃಷ್ಟಿ ಮಾಡಿದ್ದಾರೆ. ಆದರೆ, ಹಣ ಪಡೆಯಲು ದೂರುದಾರರಿಗೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ದೂರುದಾರ ಪ್ರಶ್ನಿಸಿದಾಗ ಆರೋಪಿಗಳು ಮೊಬೈಲ್‌ ಸಂಪರ್ಕವನ್ನು ಕಡಿತಗೊಳಿಸಿದ್ದರು. ಸತತವಾಗಿ ಪ್ರಯತ್ನಿಸಿದರೂ ವಂಚಕರು ಕರೆ ಸ್ವೀಕರಿಸಿರಲಿಲ್ಲ. ನಂತರ ಅನುಮಾನಗೊಂಡ ಅವರು ದೂರು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಎಚ್.ಮಾರುತಿ, ಬೆಂಗಳೂರು

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.