ಬೆಂಗಳೂರು ಐಪಿಎಲ್ ಪಂದ್ಯದ ವೇಳೆ ಪುತ್ರಿಯೊಂದಿಗೆ ಅಸಭ್ಯ ವರ್ತನೆ; ದೂರು ದಾಖಲಿಸಿದ ಹಿರಿಯ ಐಪಿಎಸ್ ಅಧಿಕಾರಿ ಪತ್ನಿ
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯದ ವೇಳೆ ತಮ್ಮ ಪುತ್ರಿ, ಪುತ್ರನಿಗೆ ತೊಂದರೆ ನೀಡಿದ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ಕುಮಾರ್ ಪತ್ನಿ ದೂರು ದಾಖಲಿಸಿದ್ದಾರೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಇಬ್ಬರು ಅನಾಮಿಕ ವ್ಯಕ್ತಿಗಳು ತನ್ನ ಇಬ್ಬರು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ದೂರು ಸಲ್ಲಿಸಿದ್ದಾರೆ. ಮೇ 3 ರಂದು ಕ್ರೀಡಾಂಗಣದ ಡೈಮಂಡ್ ಬಾಕ್ಸ್ ನಲ್ಲಿ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದೆ.ದೂರುದಾರರಾದ ಐಪಿಎಸ್ ಅಧಿಕಾರಿಯ ಪತ್ನಿಯ ಪ್ರಕಾರ, ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಪುತ್ರ (22) ಮತ್ತು ಪುತ್ರಿ (26) ಯ ಮೇಲೆ ಅನುಚಿತವಾಗಿ ವರ್ತಿಸಿ ಪುತ್ರಿಯನ್ನು ಮುಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 351(1) (ಕ್ರಿಮಿನಲ್ ಉದ್ದೇಶ), 352 (ಉದ್ದೇಶ ಪೂರ್ವಕವಾಗಿ ಶಾಂತಿಯನ್ನು ಕದಡುವುದು), 75(1) (ಲೈಂಗಿಕ ದೌಜನ್ಯ), 79 (ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ವರ್ತಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮ್ಮ ಪುತ್ರ ಇಡೀ ಘಟನೆಯನ್ನು ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ. ಈ ರೀತಿ ಅಸಭ್ಯವಾಗಿ ವರ್ತಿಸಿರುವವರಲ್ಲಿ ಒಬ್ಬರು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಶೌಚಾಲಯದಲ್ಲಿ ರಹಸ್ಯ ವಿಡಿಯೋ ಮಾಡುತ್ತಿದ್ದ ಸ್ವೀಟ್ ಶಾಪ್ ನೌಕರನ ಸೆರೆ
ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಮೂಲಕ ಮಹಿಳೆಯರನ್ನು ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಸ್ವೀಟ್ ಹೌಸ್ ಆನಂದ್ ಸ್ವೀಟ್ಸ್ ನ ಹೌಸ್ ಕೀಪರ್ ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 25 ರಂದು ಈ ದೂರು ಕೇಳಿ ಬಂದಿದೆ. ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ ಕೋರಮಂಗಲ 60 ಅಡಿ ರಸ್ತೆಯ ಆನಂದ್ ಸ್ವೀಟ್ಸ್ಗೆ ರಾತ್ರಿ 8 ಗಂಟೆಗೆ ಹೋಗಿದ್ದು, ಅವರು ಅಲ್ಲಿನ ವಾಷ್ ರೂಂಗೆ ತೆರಳಿದ್ದಾರೆ.
ಶೌಚಾಲಯದ ಒಳ ಪ್ರವೇಶಿಸಿದಾಗ, ಅಲ್ಲಿನ ಫೈಬರ್ ಗ್ಲಾಸ್ ಹಿಂದೆ ಚಲನೆ ಕಂಡು ಬಂದಿದೆ. ಅನುಮಾನಗೊಂಡ ಇವರು ಹತ್ತಿರದಿಂದ ಪರಿಶೀಲಿಸಿದಾಗ ಮೊಬೈಲ್ ಫೋನ್ ಚಲಿಸುತ್ತಿರುತ್ತದೆ. ಹೊರಗಡೆಯಿಂದ ಮೊಬೈಲ್ ಹಿಡಿದು ವ್ಯಕ್ತಿಯೊಬ್ಬ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರು ಸ್ವೀಟ್ ಹೌಸ್ ಸಿಬ್ಬಂದಿ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಮುಂಭಾಗದ ಗೋಡೆ ಗಟ್ಟಿಯಾಗಿಲ್ಲದಿರುವುದು ಗಮನಕ್ಕೆ ಬಂತು. ಗೋಡೆಯ ಮೇಲ್ಭಾಗದಲ್ಲಿ ಫೈಬರ್ ಗ್ಲಾಸ್ ಫಲಕ ಮತ್ತು ಮುಖದ ಎತ್ತರಕ್ಕೆ ಮರದ ಹಲಗೆಗಳು ಇರುವುದನ್ನು ಗಮನಿಸಿದೆ. ಇದರಿಂದ ಅನುಮಾನ ಬಂತು ಎಂದು ಅವರು ಉಲ್ಲೇಖಿಸಿದ್ದಾರೆ.
ದೂರು ಆಧರಿಸಿ ಪೊಲೀಸರು ಅಲ್ಲಿನ ಹೌಸ್ ಕೀಪರ್ ವಿರುದ್ಧ ದೂರು ದಾಖಲಿಸಿದ್ದಾರೆ. ಸೆಕ್ಷೆನ್77 ರ ಅಡಿಯಲ್ಲಿ ಎಫ ಐಆರ್ ದಾಖಲಿಸಿದ್ದಾರೆ. ಈ ಮಹಿಳೆಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳು ಮಹಿಳಯರಿಗೆ ಹೇಗೆ ಅಸುರಕ್ಷಿತ ಎನ್ನುವುದನ್ನು ವಿವರಿಸಿದ್ದಾರೆ.
ಏಪ್ರಿಲ್ 25 ರಂದು ಆನಂದ್ ಸ್ವೀಟ್ಸ್ ಗೆ ಹೋಗಿದ್ದೆ. ಈ ಅಂಗಡಿ ನನಗೆ ಬಾಲ್ಯದಿಂದಲೂ ಚಿರಪರಿಚಿತ. ಅಲ್ಲಿ ನಡೆದಿದ್ದು ನಿಜಕ್ಕೂ ಭಯಾನಕ ಅನುಭವವಾಗಿತ್ತು.ಅಂಗಡಿ ಮಾಲೀಕರು ನಿಮ್ಮ ವ್ಯಾಪಾರ ನೋಡಿಕೊಂಡು ಹೋಗಿ ಎಂದೂ ಬೆದರಿಕೆ ಹಾಕಿದ್ದರು. ಆದರೆ ನಾನು ಬಗ್ಗಲಿಲ್ಲ. ಏಕೆಂದರೆ ಮೌನವಾಗಿದ್ದರೆ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ವಿವರಣೆ ನೀಡಿದ್ದಾರೆ.
ಆರೋಪಿಯು ಆರಂಭದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ. ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋಗಳನ್ನು ಡಿಲಿಟ್ ಮಾಡಿರುವುದಾಗಿ ಹೇಳಿ ಕ್ಷಮೆ ಯಾಚಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.
ವರದಿ: ಎಚ್.ಮಾರುತಿ, ಬೆಂಗಳೂರು