Bangalore Karaga 2025: ಏಪ್ರಿಲ್ 4ರಿಂದ 11 ದಿನಗಳ ಬೆಂಗಳೂರು ಕರಗ ಹಬ್ಬ, ದಿನಾಂಕ ನಿಗದಿ; ಈ ಬಾರಿ ಕರಗ ಹೊರುವವರು ಯಾರು
ಐತಿಹಾಸಿಕ ಬೆಂಗಳೂರು ಕರಗ, ತಿಗಳ ಸಮುದಾಯದ ಜಾನಪದ ಹಬ್ಬ. ವೈಜ್ಞಾನಿಕ ಯುಗದಲ್ಲೂಸಂಪ್ರದಾಯಬದ್ಧವಾಗಿ ಹನ್ನೊಂದು ದಿನ ಆಚರಿಸುವ ಕರಗದ ಆಚರಣೆ ಹೇಗಿರುತ್ತದೆ? ಕರಗ ಹೊರುವವರುಯಾರು? ಇಲ್ಲಿದೆ ವಿವರವರದಿ: ಎಚ್.ಮಾರುತಿ, ಬೆಂಗಳೂರು

ಕರಗ ಬೆಂಗಳೂರಿನ ಜಾನಪದ ಹಬ್ಬ. ಇಲ್ಲಿನ ಪುರಾತನ ಸಮುದಾಯಗಳಲ್ಲಿ ಒಂದಾದ ತಿಗಳ ಅಥವಾ ವಹ್ನಿಕುಲ ಸಮುದಾಯ ಕರಗವನ್ನು ಆಚರಿಸಿಕೊಂಡು ಬರುತ್ತಿದೆ. ಇವರು ದ್ರೌಪದಿ ಮತ್ತು ಪಾಂಡವರ ಅಗ್ರಜ ಧರ್ಮರಾಯನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ದ್ರೌಪದಿಯನ್ನು ತಮ್ಮ ಕುಲ ದೇವತೆ ಎಂದೂ ಭಾವಿಸಿರುವ ತಿಗಳ ಸಮುದಾಯ 800 ವರ್ಷಗಳ ಹಿಂದೆ ತಿಗಳರು ಧರ್ಮರಾಯಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದೆ.
ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಹಬ್ಬವೇ ಕರಗ. ಶತಮಾನಗಳಿಂದ ಕರಗವನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆಯ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು ಬಹಿರಂಗಪಡಿಸಿದರೆ ತಿಳಿದವರಿಗೆ ಮತ್ತು ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದೌಪದಿಯ ಹೆಸರಿನಲ್ಲಿ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನ ಕರಗದ ಕೇಂದ್ರಬಿಂದು. ವಿಶಾಲವಾದ ಮಂಟಪ ಈ ದೇವಸ್ಥಾನ ಆಕರ್ಷಣೆ. ಅಶ್ವತ್ಥಕಟ್ಟೆ ಮಂಟಪ, ಎರಡು ಉದ್ದನೆಯ ಕಂಬಗಳು, ದ್ರಾವಿಡ ಶೈಲಿಯ ಮೂರು ಗೋಪುರಗಳಿವೆ. ಗರ್ಭಗುಡಿಯಲ್ಲಿ ಧರ್ಮರಾಯಸ್ವಾಮಿ ಮತ್ತು ಶ್ರೀಕೃಷ್ಣನ ವಿಗ್ರಹಗಳಿವೆ. ಈ ವಿಗ್ರಹಗಳ ಎದುರಿನ ಪೀಠದ ಮೇಲೆ ಹಸಿಕರಗವನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಯುಗಾದಿ ನಂತರ ಹನ್ನೊಂದು ದಿನಗಳ ಹಬ್ಬವಾದ ಕರಗ ನಡೆಯುತ್ತದೆ. ದ್ವಾದಶಿಯಂದು ಆರತಿ ಸೇವೆ, ತ್ರಯೋದಶಿಯಂದು ಹಸಿಕರಗ, ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತದೆ.
ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಏಪ್ರಿಲ್ 4ರಿಂದ 14 ರವರೆಗೆ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಆಚರಣೆ ಸಂಬಂಧ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರಗ ಹೊರಲು ಈ ಬಾರಿಯೂ ಜ್ಞಾನೇಂದ್ರ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದು, ಕೊನೆಯ ಬಾರಿ ಕರಗ ಹೊರಲಿದ್ದಾರೆ.
ಹಿನ್ನೆಲೆ ಏನು?
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಹೋಗುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಆಕೆ ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ ತಿಮಿರಾಸುರನ ವಿರುದ್ದ ಹೋರಾಡಲು ವೀರಕುಮಾರರ ಪಡೆಯನ್ನು ಸೃಷ್ಟಿಸುತ್ತಾಳೆ. ಯುದ್ಧದಲ್ಲಿ ತಿಮಿರಾಸುರ ಅಸುನೀಗುತ್ತಾನೆ. ವೀರಕುಮಾರರು ದ್ರೌಪದಿಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಾರೆ. ಆಗ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದಾಗಿ ಭರವಸೆ ನೀಡುತ್ತಾಳೆ. ಹೀಗೆ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದನ್ನು ಆಚರಿಸುವ ಹಬ್ಬವೇ ಕರಗ.
ಹಸಿ ಕರಗ
ಚೈತ್ರಶುದ್ಧ ತ್ರಯೋದಶಿಯಂದು ಕರಗ ಹೊರುವ ಪೂಜಾರಿ, ಅರ್ಚಕರ ವಂಶಸ್ಥರು ಮತ್ತು ವೀರಕುಮಾರರು ಸಂಪಂಗಿ ಕೆರೆಯ ಬಳಿ ಮಧ್ಯರಾತ್ರಿ ಸೇರುತ್ತಾರೆ. ಈ ಕೆರೆಯು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿದೆ. ಈ ದಿನದ ಹಿಂದಿನ 7 ದಿನಗಳಿಂದ ಉಪವಾಸವಿದ್ದ ವೀರಕುಮಾರರು ತಮ್ಮ ಚೂಪಾದ ಕತ್ತಿಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುತ್ತಾರೆ. ಕರಗ ದೇವತೆಯ ಹೆಸರಿನಲ್ಲಿ ದೀಕ್ಷೆ ಪಡೆದುಕೊಂಡಿರುವ ವೀರಕುಮಾರರೇ ಕರಗದ ಅಂಗರಕ್ಷರು. ಇವರು ತಮ್ಮ ಕತ್ತಿಗಳಿಂದ ಎದೆಯನ್ನು ಗೀಚಿಕೊಳ್ಳುತ್ತಾರೆ. ಇವರು ಔಷಧಿಗೆ ಬದಲಾಗಿ ದೇವತೆಯ ಭಂಡಾರವನ್ನು ರಕ್ತ ಬಂದ ಸ್ಥಳಕ್ಕೆ ಹಚ್ಚುತ್ತಾರೆ. ನೂರಾರು ವೀರಕುಮಾರರು ಸೊಂಟದ ಸುತ್ತ ಕೆಂಪು ಪಟ್ಟಿಯನ್ನು ಕಟ್ಟಿಕೊಂಡು ಎದೆಯ ಸುತ್ತ ಬಿಳಿ ವಸ್ತ್ರ ಮತ್ತು ತಲೆಗೆ ಪೇಟವನ್ನು ಸುತ್ತಿಕೊಂಡಿರುತ್ತಾರೆ. ಇವರು ಕೈನಲ್ಲಿ ಕತ್ತಿ ಹಿಡಿದಿದ್ದರೂ ಇವರು ಶಾಂತಿದೂತರು.
ನಡುರಾತ್ರಿಯ ನಂತರ ಹಸಿಕರಗವನ್ನು ಸಿದ್ದಪಡಿಸಲಾಗುತ್ತದೆ. ಗೋಪುರದ ಆಕಾರದಲ್ಲಿ ಕರಗವನ್ನು ಕೆಂಪು ವಸ್ತ್ರದಿಂದ ಅಲಂಕರಿಸಿ ಸೇವಂತಿಗೆ ಹೂಗಳಿಂದ ಸಿಂಗರಿಸಿ ಹರಿಸಿನ ಕುಂಕುಮವನ್ನು ಹಚ್ಚಲಾಗುತ್ತದೆ. ಇದೇ ಸಮಯಕ್ಕೆ ಕರಗದ ಪೂಜಾರಿಯನ್ನು ಸೇವಂತಿಗೆ ಹೂಗಳಿಂದ ಸಿಂಗರಿಸಲಾಗುತ್ತದೆ. ವೀರಕುಮಾರರು ಗೋವಿಂದಾ ಗೋವಿಂದಾ ಎಂದು ಭಜಿಸುತ್ತಿರುತಾರೆ. ಇದನ್ನು ಅಲಗು ಸೇವೆ ಎಂದು ಕರೆಯಲಾಗುತ್ತದೆ. ರಾತ್ರಿಯಿಡೀ ಮೆರವಣಿಗೆ ನಡೆದು ಸೂರ್ಯಾಸ್ತವಾದ ನಂತರ ದೇವಸ್ಥಾನ ತಲುಪುತ್ತದೆ.
ಹೂವಿನ ಕರಗ
ಹುಣ್ಣಿಮೆಯಂದು ಸಂಜೆ ಪೂಜಾರಿ ಹೆಣ್ಣಿನ ವೇಷ ಧರಿಸಿ ಸೀರೆಯುಟ್ಟು, ಕೈಗಳಿಗೆ ಬಳೆ ತೊಟ್ಟುಕೊಳ್ಳುತ್ತಾರೆ. ಮತ್ತೆ ರಾತ್ರಿ ಸಂಪಂಗಿ ಕೆರೆಯ ಬಳಿ ಎಲ್ಲರೂ ಸೇರುತ್ತಾರೆ. ಪೂಜಾರಿಯು ಅಚ್ಚಮಲ್ಲಿಗೆ, ಜಡೆಕುಚ್ಚು, ಹೂವಿನ ಹಾರ ಹರಿಶಿನ ಬಣ್ಣದ ಸೀರೆಯುಟ್ಟು ಒಡವೆಗಳನ್ನು ಧರಿಸಿ ಮಧುಮಗಳಂತೆ ಸಿದ್ದವಾಗುತ್ತಾರೆ. ವೀರಕುಮಾರರಿಂದ ಪೂಜೆಯಾದ ನಂತರ ಕರಗ ಹೊರುವ ಪೂಜಾರಿಯ ಮುಖದಲ್ಲಿ ಆದಿಶಕ್ತಿ ಅವಾಹನೆಗೊಳ್ಳುತ್ತಾಳೆ. ಗಂಟೆಯ ಸದ್ದಿನೊಂದಿಗೆ ಇವರು ಗರ್ಭಗುಡಿ ಪ್ರವೇಶಿಸುತ್ತಾರೆ. ಕರಗವನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸಲಾಗಿರುತ್ತದೆ. ಮಹಾಮಂಗಳಾರತಿ ನಂತರ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಸೇರಿರುತ್ತಾರೆ. ಅರಳೆಪೇಟೆಯ ಮಸ್ತಾನ್ ಸಾಹೇಬ ದರ್ಗಾದಲ್ಲಿಯೂ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕರಗವು ಸೂರ್ಯೋದಯಕ್ಕೂ ಮುನ್ನ ದೇವಸ್ಥಾನವನ್ನು ಸೇರಬೇಕಾಗಿದ್ದು, 6 ಗಂಟೆಗೂ ಮುನ್ನ ದೇವಾಲಯ ತಲುಪುತ್ತದೆ. ನಂತರ ಜಾತಿ ಮತಧರ್ಮಗಳ ಭೇದವಿಲ್ಲದೆ ಪೂಜೆ ನಡೆಯುತ್ತದೆ.
ಕಳೆದ ವರ್ಷ ಏಪ್ರಿಲ್ 15ರಿಂದ 23 ರವರೆಗೆ ಕರಗ ನಡೆದಿತ್ತು. ಕರಗದ ಆರಂಭದ ದಿನ ರಥೋತ್ಸವ ಧ್ವಜಾರೋಹಣ, ನಂತರ ನಾಲ್ಕು ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ ನಡೆಯುತ್ತದೆ. ಆರನೇ ದಿನ ಹಸಿ ಕರಗ, ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ ನಡೆಯಲಿದೆ.
ವರದಿ: ಎಚ್.ಮಾರುತಿ, ಬೆಂಗಳೂರು
