ಹೂವುಗಳಲ್ಲಿ ಅರಳಿದ್ದಾರೆ ಮಹರ್ಷಿ ವಾಲ್ಮೀಕಿ, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜು; ಇಂದು ಉದ್ಘಾಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೂವುಗಳಲ್ಲಿ ಅರಳಿದ್ದಾರೆ ಮಹರ್ಷಿ ವಾಲ್ಮೀಕಿ, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜು; ಇಂದು ಉದ್ಘಾಟನೆ

ಹೂವುಗಳಲ್ಲಿ ಅರಳಿದ್ದಾರೆ ಮಹರ್ಷಿ ವಾಲ್ಮೀಕಿ, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜು; ಇಂದು ಉದ್ಘಾಟನೆ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 2025 ರ ಗಣರಾಜ್ಯೋತ್ಸವ ಫಲಪ್ರದರ್ಶನ ಗುರುವಾರ ಆರಂಭವಾಗಲಿದ್ದು, ಹನ್ನೆರಡು ದಿನ ಇರಲಿದೆ. ಈ ಬಾರಿ ಮಹರ್ಷಿ ವಾಲ್ಮೀಕಿ ಅವರು ಪುಷ್ಪಗಳಲ್ಲಿ ಅರಳಿದ್ದಾರೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಗುರುವಾರ ಆರಂಭವಾಗಲಿದೆ.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಗುರುವಾರ ಆರಂಭವಾಗಲಿದೆ.

ಬೆಂಗಳೂರು: "ಆದಿಕವಿ ಮಹರ್ಷಿ ವಾಲ್ಮೀಕಿ" ಪರಿಕಲ್ಪನೆಯ ಗಣರಾಜ್ಯೋತ್ಸವದ 217ನೇ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ ಬಾಗ್‌ ಸಜ್ಜಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಲ್ಮೀಕ) ಮಾದರಿ ನಿರ್ಮಾಣ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ. ಮಹರ್ಷಿ ವಾಲ್ಮೀಕಿ ಎಂದರೆ ಎಲ್ಲರ ಚಿತ್ತದಲ್ಲಿ ಮೂಡುವ ಚಿತ್ರಣ ಹುತ್ತ. ಹುತ್ತ ಪದಕ್ಕೆ ಸಂಸ್ಕೃತದಲ್ಲಿ ವಲ್ಮೀಕ ಎನ್ನುತ್ತಾರೆ. ವಲ್ಮೀಕದಿಂದ ಹುಟ್ಟಿದವ ಅಥವಾ ಮೂಡಿದವ ವಾಲ್ಮೀಕಿ. ಮಹರ್ಷಿ ವಾಲ್ಮೀಕಿಯನ್ನು ಅವರ ದೃಢತಪಸ್ಸನ್ನು ಸಂಕೇತಿಸುವ ರೀತಿಯಲ್ಲಿ ಬೃಹತ್ ಹುತ್ತದ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಯ ಪೀಠ ಭಾಗ ಸುಮಾರು 10 ಅಡಿಗಳ ಎತ್ತರವಿದ್ದು, ಅದರ ಮೇಲೆ ಸುಮಾರು 14 ಅಡಿ ಅಗಲ, ಮತ್ತು 15 ಅಡಿ ಎತ್ತರದ ಹುತ್ತವನ್ನು ಫೈಬರ್ ಹಾಗೂ ಪೂರಕ ವಸ್ತುಗಳಿಂದ ನಿರ್ಮಿಸಲಾಗಿದೆ.

ಪೀಠಭಾಗವು 10 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯನ್ನು ಹೊಂದಿದ್ದು, ಪೀಠದ ಸುತ್ತಲಿನ 10 ಅಡಿ ಇಳಿಜಾರು ಪ್ರದೇಶವನ್ನು ವೃತ್ತಾಕಾರದ ಅಲೆಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ ಡಚ್ ಗುಲಾಬಿ ಹಾಗೂ ವಿವಿಧ ಬಣ್ಣಗಳ ಸೇವಂತಿಗೆ ಹೂಗಳನ್ನು ಬಳಸಿ ಆಕರ್ಷಕ ರೂಪವನ್ನು ನೀಡಲಾಗುತ್ತದೆ. ಒಂದು ಬಾರಿಗೆ 1.5 ಲಕ್ಷ ಡಚ್ ಗುಲಾಬಿ, 400 ಕಿ.ಗ್ರಾಂ ಪಿಂಕ್ ಗುಲಾಬಿ ಹಾಗೂ 300 ಕಿ.ಗ್ರಾಂ ಹೈದರಾಬಾದ್ ಸೇವಂತಿಗೆ ಹೂಗಳನ್ನುಬಳಸಲಾಗುತ್ತಿದೆ. ಒಟ್ಟು 2 ಬಾರಿ ಹೂಗಳನ್ನು ಬದಲಾಯಿಸಲಾಗುತ್ತದೆ.

ಮಹರ್ಷಿ ವಾಲ್ಮೀಕಿ ಪ್ರತಿಮೆ ಹೀಗಿರಲಿದೆ

ಬೃಹತ್ ಹುತ್ತದ ಕಲಾಕೃತಿಯ ಮುಂಭಾಗದಲ್ಲಿ ಸುಮಾರು 10 ಅಡಿ ಎತ್ತರದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸುಮಾರು 6 ಅಡಿ ಪೀಠದ ಮೇಲೆ ಅನಾವರಣಗೊಳ್ಳಲಿದೆ. ಮಹರ್ಷಿ ವಾಲ್ಮೀಕಿಗಳು ರಾಮಾಯಣ ಕಾವ್ಯರಚನೆಯಲ್ಲಿ ನಿರತರಾಗಿರುವ ಭಂಗಿಯಲ್ಲಿ ಇರುವ ಪ್ರತಿಮೆ ಇದಾಗಿದೆ. ಇದನ್ನು ಯುವಕಲಾವಿದ ಮಹದೇವ ಅವರು ಈ ಕೃತಿಯ ಕರ್ತೃ ವಾಗಿದ್ದಾರೆ.

ಗಾಜಿನ ಮನೆಯ ಎಡಬದಿಯಲ್ಲಿ ನೇಪಾಳದ ಚಿತ್ವಾನ್ ಜಿಲ್ಲೆಯ, ಚಿತ್ವಾನ್ ನ್ಯಾಷನಲ್ ಪಾರ್ಕ್ ಉದ್ಯಾನದಲ್ಲಿ, ತಮಸಾ, ಸೋನಾ ಮತ್ತು ಗಂಡಕಿ ನದಿಗಳ ತ್ರಿವೇಣಿ ಸಂಗಮದಲ್ಲಿರುವ ವಾಲ್ಮೀಕಿ ಆಶ್ರಮದಲ್ಲಿರುವ ವಾಲ್ಮೀಕಿ ದೇವಾಲಯದ ಪುಷ್ಪಮಾದರಿ ಪ್ರದರ್ಶನಗೊಳ್ಳಲಿದೆ.

ಇದೇ ಆಶ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳು ನೆಲೆಸಿದ್ದರೆಂಬ ಪ್ರತೀತಿ ಇದೆ. ಸುಮಾರು ಹದಿನೈದು ಅಡಿ ಎತ್ತರದ ಈ ಪುಷ್ಪ ಕಲಾಕೃತಿಯ ಮುಂದೆ, ರಾಮಾಯಣ ರಚನೆಗೆ ಕಾರಣವಾದ, ಬೇಡ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಕೊಲ್ಲುವ, ಶೋಕಗೊಂಡ ವಾಲ್ಮೀಕಿ ಬಾಯಿಂದ 'ಮಾ ನಿಷಾದ ಎಂಬ ಶೋಕದ ಮಾತು ಬರುವ ಕಲ್ಪನೆಯಲ್ಲಿ ನಿರ್ಮಿಸಲಾಗಿದೆ. ಈ ಕಲಾಕೃತಿಯ ಸುತ್ತಲೂ ರಾಮಾಯಣದ ಆಯ್ದ ಪಾತ್ರಧಾರಿಗಳ ಮತ್ತು ಸನ್ನಿವೇಶಗಳ ಚಿತ್ರಕಲಾಕೃತಿಗಳನ್ನು ಸಂಕ್ಷಿಪ್ತ ವಿವರಗಳೊಂದಿಗೆ ಪ್ರದರ್ಶಿಸಲಾಗುವುದು.

ಬಗೆಬಗೆಯ ಹೂವುಗಳು

ವಾಲ್ಮೀಕಿ ಆಶ್ರಮದ ಪ್ರತಿರೂಪ ಒಟ್ಟು 14 ಅಡಿ ಅಗಲ ಮತ್ತು 24 ಆಡಿ ಎತ್ತರವನ್ನು ಹೊಂದಿರುತ್ತದೆ. ಈ ಪ್ರತಿರೂಪಕ್ಕೆ ಒಟ್ಟಾರೆ ಕೆಂಪು ಮತ್ತು ಹಳದಿ ಬಣ್ಣದ ಒಟ್ಟು ಒಂದು ಲಕ್ಷ ಗುಲಾಬಿ ಹೂಗಳನ್ನು ಹಾಗೂ ಶ್ವೇತ, ಪರ್ಪಲ್, ಹಳದಿ ಮತ್ತು ಚಾಕ್ಲೀಟ್ ವರ್ಣದ ಒಟ್ಟು 1.75 ಲಕ್ಷ ಆಕರ್ಷಕ ಕಲ್ಕತ್ತಾ ಮತ್ತು ಸಾಮಾನ್ಯ ಸೇವಂತಿಗೆ ಸೇರಿ ಒಂದು ಬಾರಿಗೆ 2.75 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ.

ಗಾಜಿನ ಮನೆಯ ಕೇಂದ್ರಭಾಗದ ಹಿಂಬದಿಗೆ ರಾಮಾಯಣದ ಪಂಚವಟಿಯನ್ನು ಬಿಂಬಿಸುವ 3ಡಿ ಕಲಾಕೃತಿ ಹಾಗೂ ರಾಮಾಯಣದ ಸಾಂದರ್ಭಿಕ ಚಿತ್ರಕಲಾ ಕೃತಿಗಳ ಅನಾವರಣ ಮಾಡಲಾಗುತ್ತಿದೆ.

ಗಾಜಿನ ಮನೆಯ ಕೇಂದ್ರಭಾಗದ ಹಿಂದಿನ ಅಂಕಣದಲ್ಲಿ ವಾಲ್ಮೀಕಿ ಪರಂಪರೆಯನ್ನು ಬಿಂಬಿಸುವ ರಾಮಾಯಣದ ನಂತರದ ಕವಿಗಳ ಕಲಾಕೃತಿಗಳು ಹಾಗೂ ಗಾಜಿನ ಮನೆಯ ಕೇಂದ್ರಭಾಗದ ಬಲಬದಿಯ ಅಂಕಣದಲ್ಲಿ ವಿಶೇಷ ಕುಠೀರ ವಿನ್ಯಾಸದ ವರ್ಟಿಕಲ್ ಗಾರ್ಡನ್ ಮಾದರಿ ಮತ್ತು ವಾಲ್ಮೀಕಿ ರಾಮಾಯಣ ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತಿದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ ಪ್ರದರ್ಶನವಾಗುವ ಬೃಹತ್ ಹುತ್ತದ ಕಲಾಕೃತಿಯ ನಾಲ್ಕು ಮೂಲೆಗಳಲ್ಲಿ ಸುಮಾರು ಮೂರು ಅಡಿ ಎತ್ತರದ ಗಾಜಿನ ಮನೆಯ ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನವನ್ನು ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಶ್ರೀ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಕೈಗೊಳ್ಳಲಿದೆ. ಎಲ್.ಇ.ಡಿ. ಸ್ಟೀನ್‌ಗಳನ್ನು ಬಳಸಿ ಲಾಲ್‌ಬಾಗ್ ಆಯ್ದ ಹತ್ತು ಜಾಗಗಳಲ್ಲಿ ಮಹರ್ಷಿ ವಾಲ್ಮೀಕಿ ಬದುಕು ಸಾಧನೆ ಮತ್ತು ಸಂದೇಶಗಳ ಜೊತೆಯಲ್ಲಿ ರಾಮಾಯಣದ ಮಹಾಕಾವ್ಯದ ಹೆಗ್ಗಳಿಕೆಯನ್ನು ಸಾರುವ ವಿಡಿಯೋ ತುಣುಕುಗಳು, ಚಿತ್ರಗಳು, ಫಲಪುಷ್ಪ ಪ್ರದರ್ಶನದ ಆವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿವೆ.

ಇಂದು ಚಾಲನೆ

2025ರ ಜನವರಿ 16 ಗುರುವಾರ, ಬೆಳಿಗ್ಗೆ 10 ಗಂಟೆಗೆ, ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉದ್ಘಾಟಿಸಲಿದ್ದಾರೆ. ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದಾರೆ.

ಲಾಲ್‌ಬಾಗ್‌ನ ಎಲ್ಲಾ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಹಾಗೂ ನಗದು ಮೂಲಕ ಪ್ರವೇಶ ಟಿಕೆಟ್‌ಗಳನ್ನು ಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವೇಶ ಟಿಕೆಟ್‌ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಲಾಲ್‌ಬಾಗ್‌ನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನೀಡಲಾಗುತ್ತದೆ. ಗಾಜಿನ ಮನೆಯ ಪ್ರವೇಶವು ರಾತ್ರಿ 7.00 ಗಂಟೆಯವರೆಗೆ ಮಾತ್ರವಿರುತ್ತದೆ.

ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner