ಮೆಟ್ರೋ ನಿಲ್ದಾಣದಲ್ಲಿ ಸ್ವಯಂಸೇವಾ ಕ್ಯೂಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ; ತ್ವರಿತ ಮತ್ತು ಸುಲಭವಾಗಿ ಟಿಕೆಟ್ ಪಡೆಯಲು ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ಮೆಟ್ರೋ ನಿಲ್ದಾಣದಲ್ಲಿ ಸ್ವಯಂಸೇವಾ ಕ್ಯೂಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ; ತ್ವರಿತ ಮತ್ತು ಸುಲಭವಾಗಿ ಟಿಕೆಟ್ ಪಡೆಯಲು ಅವಕಾಶ

ಮೆಟ್ರೋ ನಿಲ್ದಾಣದಲ್ಲಿ ಸ್ವಯಂಸೇವಾ ಕ್ಯೂಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ; ತ್ವರಿತ ಮತ್ತು ಸುಲಭವಾಗಿ ಟಿಕೆಟ್ ಪಡೆಯಲು ಅವಕಾಶ

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕ್ಯೂಆರ್‌ ಕೋಡ್‌ ಸಹಿತ ಟಿಕೆಟ್‌ ಪಡೆಯುವ ವ್ಯವಸ್ಥೆಯನ್ನು ಮಾಡಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕ್ಯೂ ಆರ್‌ ಕೋಡ್‌ ಆಧರಿತ ಟಿಕೆಟ್‌ ವ್ಯವಸ್ಥೆ ಬಂದಿದೆ.
ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕ್ಯೂ ಆರ್‌ ಕೋಡ್‌ ಆಧರಿತ ಟಿಕೆಟ್‌ ವ್ಯವಸ್ಥೆ ಬಂದಿದೆ.

ಬೆಂಗಳೂರು: ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸದಾ ಮುಂಚೂಣಿಯಲ್ಲಿರುತ್ತದೆ. ಈ ಪ್ರಯತ್ನದ ಭಾಗವಾಗಿ, ಬಿಎಂಆರ್‌ಸಿಎಲ್ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ಯಾಣದಲ್ಲಿ 10 ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪಿಸಿದೆ. ಈ ಯಂತ್ರಗಳು QR- ಆಧಾರಿತ ಟಿಕೆಟ್‌ಗಳನ್ನು ತ್ವರಿತವಾಗಿ ಮತ್ತು ಸಂಪರ್ಕ ರಹಿತವಾಗಿ ವಿತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಾಂಪ್ರದಾಯಿಕ ಏಕ ಪ್ರಯಾಣ ಟೋಕನ್‌ ಗಳನ್ನು ಕ್ರಮೇಣ ಬದಲಾಯಿಸುತ್ತದೆ.ಸರಳವಾದ ಎರಡು-ಹಂತದ ಪ್ರಕ್ರಿಯೆಯೊಂದಿಗೆ, ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದಾಗಿದೆ.

1. ನೀವು ಪ್ರಯಾಣಿಸುವ ಸ್ಥಳ ಆಯ್ಕೆಮಾಡಿ:

ಪ್ರಯಾಣಿಕರು ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಪ್ರಯಾಣಿಸುವ ಜಾಗವನ್ನು ಆಯ್ಕೆ ಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಪ್ರಯಾಣ ದರವನ್ನು ಪರಿಶೀಲಿಸಬಹುದು.

2. ಪಾವತಿ ಮಾಡಿ:

ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್‌ ಗಳ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ನಂತರ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಪ್ರಕಟವಾಗುತ್ತದೆ.

ಈ ಕ್ಯೂಆರ್ ಟಿಕೆಟ್‌ ಗಳನ್ನು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬಳಸಬಹುದಾಗಿದೆ. ಪ್ರಯಾಣ ಮುಗಿಸಿದ ನಂತರ, ಪ್ರಯಾಣಿಕರು ಟಿಕೆಟ್‌ಗಳನ್ನು ನಿಗದಿತ ಕಸದ ಬುಟ್ಟಿಗಳಲ್ಲಿ ಹಾಕುವಂತೆ ಬಿಎಂಆರ್‌ ಸಿಎಲ್ ಮನವಿ ಮಾಡಿಕೊಂಡಿದೆ. ಇದು ಮೆಟ್ರೋ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ಪರಿಸರಸ್ನೇಹಿ ಕ್ರಮವೂ ಆಗಿರುತ್ತದೆ.

ಪ್ರಯಾಣಿಕರ ಅನುಭವವನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ಸ್ವಯಂ ಸೇವಾ ಟಿಕೆಟ್ ಯಂತ್ರಗಳ ಪರಿಚಯವು ನಮ್ಮ ಮೆಟ್ರೋ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಸುಗಮವಾಗಿ ಮತ್ತು ಆಧುನಿಕ ಪಾವತಿ ವಿಧಾನಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣಿಕರ ಅನುಕೂಲತೆ ಮತ್ತು ಸುಲಭ ಪ್ರವೇಶದತ್ತ ಇದು ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಈ ನೂತನ ವ್ಯವಸ್ಥೆಯಿಂದ ಪ್ರಯಾಣಿಕರ ಸಮಯಾವಕಾಶ ಉಳಿತಾಯವಾಗುತ್ತದೆ. ಟಿಕೆಟ್‌ ಖರೀದಿಸುವ ಧಾವಂತ ಇರುವುದಿಲ್ಲ. ಅದರಲ್ಲೂ ಐಟಿ ಬಿಟಿ ಉದ್ಯೋಗಿಗಳಿಗೆ ಇದು ವರದಾನವಾಗಿದೆ ಎಂದೇ ಹೇಳಬಹುದು. ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಇತರ ಮೆಟ್ರೋ ನಿಲ್ದಾಣಗಳಲ್ಲೂ ಸ್ಥಾಪಿಸಬೇಕು ಎಂಬ ಆಗ್ರಹ ಈಗಾಗಲೇ ಕೇಳಿ ಬರುತ್ತಿದೆ. ಈ ಸಂಬಂಧ ಇದುವರೆಗೂ ಬಿಎಂ ಆರ್‌ ಸಿಎಲ್‌ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಬೇಡಿಕೆ ಹೆಚ್ಚಿದರೆ ಸಹಜವಾಗಿಯೇ ಇತರ ನಿಲ್ದಾಣಗಳಲ್ಲಿ ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ.

ವರದಿ: ಎಚ್.ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.