ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

ವೇತನ ಬಿಡುಗಡೆಯೂ ಸೇರಿದಂತೆ ತಮ್ಮ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 108 ಆಂಬುಲೆನ್ಸ್ ನೌಕರರರು ಸೋಮವಾರ ರಾತ್ರಿಯಿಂದಲೇ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಸೋಮವಾರದಿಂದ ಅಂಬುಲೆನ್ಸ್‌ ನೌಕರರ ಮುಷ್ಕರ ಆರಂಭವಾಗಲಿದೆ.
ಸೋಮವಾರದಿಂದ ಅಂಬುಲೆನ್ಸ್‌ ನೌಕರರ ಮುಷ್ಕರ ಆರಂಭವಾಗಲಿದೆ.

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸೋಮವಾರ ರಾತ್ರಿ 8 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಈ ಆರೋಗ್ಯ ಕವಚ ಯೋಜನೆಯನ್ನು ಜಿವಿಕೆ-ಇಎಂಆರ್‌ಐ ಸಂಸ್ಥೆ ನಿರ್ವಹಿಸುತ್ತಿದ್ದು ಸುಮಾರು 2,500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿವಿಕೆ ಸಂಸ್ಥೆ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ನಿಗದಿಪಡಿಸಿದ ವೇತನದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಅರ್ಧದಷ್ಟು ವೇತನ ಮಾತ್ರ ನೀಡಲಾಗಿದ್ದು, ಕಳೆದ ಮೂರು ತಿಂಗಳಿಂದ ವೇತನ ಪಾವತಿಸಿಲ್ಲ. ಮತ್ತೊಂದು ಕಡೆ ವೇತನವನ್ನು ಕಡಿತಗೊಳಿಸಲಾಗಿದೆ ಎಂದು 108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಎಚ್. ಪರಮಶಿವ ಆರೋಪಿಸಿದ್ದಾರೆ.

ಸಿಬ್ಬಂದಿಯ ಹಿತದೃಷ್ಟಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯವಾಗಿದೆ. ಆದ್ದರಿಂದ ಸೋಮವಾರ ರಾತ್ರಿಯಿಂದ ನೌಕರರು ಕರ್ತವ್ಯ ನಿಭಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ಸರ್ಕಾರ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಕಿ ವೇತನ ಪಾವತಿ ಕುರಿತು ಚರ್ಚಿಸಿ ಕ್ರಮ ಕೈಗೊಂಡಲ್ಲಿ ಮುಷ್ಕರದಿಂದ ಹಿಂದೆ ಸರಿಯುವುದಾಗಿ 108 ನೌಕರರ ಸಂಘದ ಮತ್ತೊಬ್ಬ ಉಪಾಧ್ಯಕ್ಷ ದಯಾನಂದ್ ಹೇಳಿದ್ದಾರೆ.

ಕಾಲ ಕಾಲಕ್ಕೆ ಸಂಬಳ ನೀಡದಿರುವುದರಿಂದ ನೌಕರರು ಮತ್ತು ಅವರ ಕುಟುಂಬ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಸರ್ಕಾರವನ್ನು ಎಚ್ಚರಿಸಲು ಮುಷ್ಕರ ಅನಿವಾರ್ಯ ಎಂದು ಹೇಳಿದ್ದಾರೆ. ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಆದರೆ ಆಂಬುಲೆನ್ಸ್‌ಗಳನ್ನು ರಸ್ತೆಗಿಳಿಸುವುದಿಲ್ಲ. ಶನಿವಾರ ರಾತ್ರಿಯಿಂದಲೇ ಸಿಬ್ಬಂದಿಯು ನಿರ್ವಹಿಸಿದ ಪ್ರಕರಣಗಳ ಮಾಹಿತಿಯನ್ನು ನೀಡುವುದನ್ನು ಸ್ಥಗಿತಗೊಳಿಸಿದ್ದೇವೆ.

ಸೋಮವಾರ ರಾತ್ರಿಯವರೆಗೆ ಸರ್ಕಾರಕ್ಕೆ ಕಾಲಾವಕಾಶವಿದ್ದು ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು 108 ನೌಕರರ ಸಂಘ ಆಗ್ರಹಪಡಿಸಿದೆ.

ವೇತನ ಹೆಚ್ಚಳ, ಉದ್ಯೋಗ ಭದ್ರತೆ, ವಜಾಗೊಂಡ ನೌಕರರ ಮರುನೇಮಕ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆಯೂ ಮುಷ್ಕರವನ್ನು ಆಂಬುಲೆನ್ಸ್‌ ನೌಕರರು ನಡೆಸಿದ್ದರು. ಆಗ ಭರವಸೆ ನೀಡಲಾಗಿತ್ತು. ಈಗ ಮತ್ತೆ ಮುಷ್ಕರ ಆರಂಭಿಸಲಾಗುತ್ತಿದೆ.

ವರದಿ: ಎಚ್.ಮಾರುತಿ. ಬೆಂಗಳೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner