Bangalore News: ಮಾನವ ಕಳ್ಳಸಾಗಣೆ ಆರೋಪ; ಸಿಸಿಬಿ ಪೊಲೀಸರಿಂದ ಭಿಕ್ಷಾಟನೆ ಮಾಡುತ್ತಿದ್ದ 45 ಮಕ್ಕಳ ರಕ್ಷಣೆ, ವಿಚಾರಣೆ ಮುಂದುವರಿಕೆ
ಮಕ್ಕಳನ್ನು ಮುಂದಿಟ್ಟುಕೊಂಡು ಹಲವರು ಭಿಕ್ಷೆ ಬೇಡುತ್ತಿದ್ದರು. ಈ ಮಕ್ಕಳ ಬಗ್ಗೆಯೂ ಅವರ ಬಳಿ ಸೂಕ್ತ ಮಾಹಿತಿ ಇರಲಿಲ್ಲ. ಆದ್ದರಿಂದ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ. (ವರದಿ: ಎಚ್ ಮಾರುತಿ)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ (Bangalore Crime) ಹಲವು ಸಿಗ್ನಲ್ಗಳಲ್ಲಿ ಮಹಿಳೆಯರು ಹಾಗೂ ವೃದ್ಧರು ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುವುದನ್ನ ಆಗಾಗ ನೋಡಿರುತ್ತೇವೆ. ಆದರೆ ಅಚ್ಚರಿ ವಿಷಯ ಏನೆಂದರೆ ಕೆಲವೊಂದು ಪ್ರಕರಣಗಳಲ್ಲಿ ಈ ಮಕ್ಕಳ ಬಗ್ಗೆ ಭಿಕ್ಷೆ ಬೇಡುವವರ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು. ಭಿಕ್ಷಾಟನೆ ಮಾಡುತ್ತಿದ್ದ 45 ಮಕ್ಕಳನ್ನು ಸಿಸಿಬಿ ಪೊಲೀಸರು ಗುರುವಾರ (ಏಪ್ರಿಲ್ 11) ರಕ್ಷಿಸಿದ್ದಾರೆ. ಭಿಕ್ಷಾಟನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದ ಆರೋಪದಡಿಯಲ್ಲಿ 40 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೆಲವು ಪ್ರಮುಖ ಸರ್ಕಲ್ಗಳು, ರಸ್ತೆಗಳು ಹಾಗೂ ರಂಜಾನ್ ಅಂಗವಾಗಿ ಕೆಲವು ಮಸೀದಿಗಳ ಆಸುಪಾಸು ಭಿಕ್ಷಾಟನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳನ್ನು ಮುಂದಿಟ್ಟುಕೊಂಡು ಹಲವರು ಭಿಕ್ಷೆ ಬೇಡುತ್ತಿದ್ದರು. ಈ ಮಕ್ಕಳ ಬಗ್ಗೆಯೂ ಅವರ ಬಳಿ ಸೂಕ್ತ ಮಾಹಿತಿ ಇರಲಿಲ್ಲ. ಆದ್ದರಿಂದ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಮತ್ತು ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದ 40 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಲ್ ಗರ್ಲ್ ಬೇಕಾದರೆ ಕರೆ ಮಾಡಿ ಎಂದು ಪತ್ನಿ ಮೊಬೈಲ್ ನಂಬರ್ ಕೊಟ್ಟ ಭೂಪ
ಪತ್ನಿಯೊಂದಿಗೆ ಜಗಳವಾಡಿಕೊಂಡು ದೂರವಾಗಿದ್ದ ಪತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪತ್ನಿಯನ್ನ ಕೆಟ್ಟದಾಗಿ ನಡೆಸಿಕೊಂಡಿರುವ ಘಟನೆ ಬೆಂಗಳೂರಿನ ನಂದಿನ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಆರೋಪಿ ಕಾಲ್ ಗರ್ಲ್ ಬೇಕಾದರೆ ಕರೆ ಮಾಡಿ ಎಂದು ಫೋಟೊ ಹಾಗೂ ಆಕೆಯ ಮೊಬೈಲ್ ನಂಬರ್ ಅನ್ನು ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನು ಗಮನಿಸಿದ ಮಹಿಳೆ ವಿದೇಶದಲ್ಲಿರುವ ತನ್ನ ಪತಿಯ ವಿರುದ್ಧ ಪೊಲೀಸರು ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಕೆಲ ಪೋರ್ನ್ ವೆಬ್ ಸೈಟ್ಗಳಲ್ಲಿಯೂ ತನ್ನ ನಂಬರ್ ನೀಡಿದ್ದಾನೆ. ಇದರಿಂದಾಗಿ ಪ್ರತಿದಿನ ಕರೆಗಳು, ವಾಟ್ಸಪ್ ಸಂದೇಶಗಳು ಬರುತ್ತಿವೆ. ಈ ಬೆಳವಣಿಗೆಗಳಿಂದ ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಹೀಗಾಗಿ ನನ್ನ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
