Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Karnataka Weather Updates ಹಲವು ದಿನಗಳಿಂದ ಬಿಸಿಲ ವಾತಾವರಣ. ಈಗ ಬೆಂಗಳೂರು, ಮೈಸೂರು ಸಹಿತ ಹಲವು ಕಡೆಗಳಲ್ಲಿ ಭಾರೀ ಮಳೆ. ಬುಧವಾರ ಸಂಜೆಯೂ ಮಳೆ ತಂದ ಖುಷಿ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನುಗ್ಗಿತ್ತು.
ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನುಗ್ಗಿತ್ತು.

ಬೆಂಗಳೂರು: ನಿರೀಕ್ಷೆಯಂತೆ ಸೋಮವಾರ ಸಂಜೆ ಸುರಿದ ಮಳೆಯಿಂದ ಬೆಂಗಳೂರು ತಂಪಾದ ವಾತಾವರಣ ಅನುಭವಿಸಿತು. ಉದ್ಯಾನ ನಗರಿಯ ಬಹುತೇಕ ಭಾಗಗಳಲ್ಲಿ ವರುಣನ ಕೃಪೆಯಿಂದ ಧಾರಾಕಾರ ಮಳೆ ಬಂದ ಕಾರಣ ನಾಗರೀಕರ ಖುಷಿಗೆ ಪಾರವೇ ಇರಲಿಲ್ಲ. ಸಂಜೆ ಐದರ ವೇಳೆಗೆ ಗುಡುಗು ಸಿಡಿಲಿನೊಂದಿಗೆ ಆರಂಭವಾದ ಮಳೆ ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಕಚೇರಿ ಮುಗಿಸಿ ಮನೆಗಳತ್ತ ಹೊರಟಿದ್ದ ನೌಕರರು ಮಳೆಯ ಕಾರಣಕ್ಕೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಬೇಕಾಯಿತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕೆಲವು ಕಡೆ ರಸ್ತೆಗಳು ಮತ್ತು ಅಂಡರ್ ಪಾಸ್ ಗಳು ಜಲಾವೃತವಾಗಿದ್ದವು. ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸತತ ಐದು ತಿಂಗಳಿಂದ ಮಳೆ ಇಲ್ಲದೆ ನೀರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ನೂರಾರು ಮಂದಿ ಮಳೆಯ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದರು.

ವಿಧಾನಸೌಧ ಯಲಹಂಕ, ರಿಚ್‌ಮಂಡ್‌ಟೌನ್ ಶಾಂತಿ ನಗರ, ಬ್ರಿಗೇಡ್ ರಸ್ತೆ, ಹೊಸೂರು ರಸ್ತೆ, ಎಂ.ಜಿ ರಸ್ತೆ, ಕೆ.ಆರ್ ಮಾರ್ಕೆಟ್, ರಾಜರಾಜೇಶ್ವರಿ ನಗರ, ಕೆಂಗೇರಿ, ಗುಟ್ಟಹಳ್ಳಿ, ಕಾರ್ಪೊರೇಷನ್ ಸರ್ಕಲ್, ರಾಮಮೂರ್ತಿ ನಗರ, ಕೆ ಆರ್ ಪುರ, ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ರಾಜಾಜಿನಗರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಇಂದು ಸುರಿದ ಮಳೆಗೆ ವಿಶೇಷವಾಗಿ ಮಕ್ಕಳು ಸಂಭ್ರಮಿಸುತ್ತಿದ್ದರು. ಮಳೆಯಲ್ಲೇ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

ಸಂಚಾರ ಸಲಹೆ

ಬೆಂಗಳೂರಿನ ಹಲವೆಡೆ ಭಾರೀ ಮಳೆಯಿಂದ ರಸ್ತೆಯಲ್ಲಿಯೇ ನೀರು ಭಾರೀ ಪ್ರಮಾಣದಲ್ಲಿ ಹರಿಯಿತು. ಇದರಿಂದ ಸಂಚಾರಕ್ಕೂ ವ್ಯತ್ಯಯವಾಯಿತು. ಸಂಜೆ ನಂತರ ಕಚೇರಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದವರೂ ಮಳೆಗೆ ಸಿಲುಕಿದರು. ಈ ಕಾರಣದಿಂದ ಬೆಂಗಳೂರು ಸಂಚಾರ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೂಲಕ ಸೂಚನೆಗಳನ್ನು ನೀಡಿದರು.

ನಾಯಂಡಹಳ್ಳಿಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರ ವಿರುತ್ತದೆ, ದಯಮಾಡಿ ಸಹಕರಿಸಿ ಎನ್ನುವ ಮಾಹಿತಿಯನ್ನು ಹಾಕಿದರು.

ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರು ದಿನ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 9ರಂದು ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉಳಿದಂತೆ ತುಮಕೂರು, ವಿಜಯನಗರ, ಚಾಮರಾಜನಗರ, ಮೈಸೂರು, ಹಾಸನ, ಕೋಲಾರ, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ, ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿಯಲ್ಲಿ 4 ಸೆಂ.ಮೀ,ಕೊಡಗು ಜಿಲ್ಲೆಯ ಹಾರಂಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರದಲ್ಲಿ 3 ಸೆಂ.ಮೀ. ಮಳೆಯಾದ ವರದಿಯಾಗಿದೆ.

ವರದಿ: ಎಚ್. ಮಾರುತಿ, ಬೆಂಗಳೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner