Bangalore Crime:ಬೆಂಗಳೂರಿನ ಯುವತಿ ಪ್ರಬುದ್ದ ಕೊಲೆ ಪ್ರಕರಣ, ಸಿಐಡಿಗೆ ವಹಿಸಿ ಸಿಎಂ ಆದೇಶ
Murder case to CID ಬೆಂಗಳೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.

ಬೆಂಗಳೂರು: ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ದ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಹೋರಾಟಗಾರರು ಆಗಿರುವ ಕೆ.ಆರ್.ಸೌಮ್ಯ ಎಂಬುವವರು ತಮ್ಮ ಪುತ್ರಿ ಪ್ರಬುದ್ದ ಕೊಲೆ ವಿಚಾರದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಅದೆಷ್ಟೋ ಜನರ ಪರವಾಗಿ ಹೋರಾಟ ಮಾಡಿದ ನಾನೀಗ ನನ್ನ ಮಗಳ ಕೊಲೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಆಗುತ್ತಿಲ್ಲ. ಸುಬ್ರಹ್ಮಣ್ಯಪುರ ಪೊಲೀಸರು ನನಗೆ ನ್ಯಾಯ ಕೊಡುವ ಬದಲು ಆರೋಪಿಗಳೊಂದಿಗೆ ಸೇರಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಸಿಎಂ ಸಿಐಡಿ ತನಿಖೆ ವಹಿಸಿದ್ದಾರೆ.
ಮೇ 15 ರಂದು ಬೆಂಗಳೂರು ದಕ್ಷಿಣ ಡಿಸಿಪಿ ವ್ಯಾಪ್ತಿಯ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು.
ಮುಖ್ಯಮಂತ್ರಿಗಳು ಮನವಿ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಬುದ್ದ ಮರಣೋತ್ತರ ಪರೀಕ್ಷೆ ನಡೆದಾಗ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಹಾಗೆ ದೇಹವನ್ನು ಇರಿಸಿದ್ದು ಕಂಡು ಬಂದಿತ್ತು. ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿದ್ದರು. ಆದರೂ ಸೂಕ್ತ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆರೋಪಿಗಳನ್ನು ಬಂಧಿಸಿದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿ ಕಡೆಯವರು ಸುಬ್ರಹ್ಮಣ್ಯ ಪುರ ಠಾಣೆ ವ್ಯಾಪ್ತಿಯಲ್ಲಿಯೇ ಬಾರ್ ನಡೆಸಿಕೊಂಡು ಪೊಲೀಸರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ಧಾರೆ. ಈ ಪ್ರಕರಣದಲ್ಲಿ ಮಗಳನ್ನು ಕಳೆದುಕೊಂಡಿದ್ದೇನೆ.ನನಗೆ ಹಾಗೂ ನನ್ನ ತಾಯಿಗೂ ಜೀವ ಬೆದರಿಕೆಯಿದೆ. ಒಂಟಿ ಪೋಷಕಳಾದ ನನಗೆ ನ್ಯಾಯ ಕೊಡಿಸಿ ಎಂದು ಸೌಮ್ಯ ಮನವಿಯಲ್ಲಿ ವಿವರಿಸಿದ್ದರು.
